ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, October 28, 2012

Prashnopanishad in Kannada-Prashna-III (04-07)


ದೇಹವನ್ನು ಪ್ರವೇಶಿಸುವ ಪ್ರಾಣದೇವರು ತಮ್ಮನ್ನು ತಾವು ಎಷ್ಟು ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ ಮತ್ತು ಆ ವಿಭಾಗದ ಉದ್ದೇಶವೇನು, ಯಾವಯಾವ ವಿಭಾಗದಲ್ಲಿ ಏನೇನು ಕ್ರಿಯೆ ನಡೆಯುತ್ತದೆ ಎನ್ನುವುದನ್ನು ಪಿಪ್ಪಲಾದರು ‘ಒಂದು ದೇಶದ ಆಡಳಿತದ’ ಉದಾಹರಣೆಯೊಂದಿಗೆ ವಿವರಿಸುತ್ತಾರೆ.      

ಯಥಾ ಸಮ್ರಾಡೇವಾಧಿಕೃತಾನ್ ವಿನಿಯುಙಕ್ತೇ   ಏತಾನ್ ಗ್ರಾಮಾನಧಿತಿಷ್ಠಸ್ವೇತಾನ್ ಗ್ರಾಮಾನಧಿತಿಷ್ಠಸ್ವೇತಿ ಏವಮೇವೈಷ ಪ್ರಾಣ ಇತರಾನ್ ಪ್ರಾಣಾನ್ ಪೃಥಕ್ ಪೃಥಗೇವ ಸನ್ನಿಧತ್ತೇ

ಇಲ್ಲಿ ಪಿಪ್ಪಲಾದರು “ಒಬ್ಬ ಚಕ್ರವರ್ತಿ ತನ್ನ ದೇಶದಲ್ಲಿ ವಿವಿಧ ಆಡಳಿತಾಧಿಕಾರಿಗಳನ್ನು ನೇಮಿಸಿ ಹೇಗೆ ಸಮಸ್ತವಾಗಿ ಆಡಳಿತ ನಿರ್ವಹಣೆ ಮಾಡುತ್ತಾನೋ, ಹಾಗೆ ಪ್ರಾಣದೇವರು ದೇಹದಲ್ಲಿ ಕಾರ್ಯನಿರ್ವಹಿಸುತ್ತಾರೆ” ಎಂದಿದ್ದಾರೆ. ಈ ಮಾತು ನಮಗೆ ಅರ್ಥವಾಗಬೇಕಾದರೆ ನಾವು ನಮ್ಮ ಹಿಂದಿನ ದೇಶಾಡಳಿತ ಕ್ರಮವನ್ನು ತಿಳಿದಿರಬೇಕು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಂದು ದೇಶದ ಆಡಳಿತವನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದನ್ನು ಬಹಳ ಸುಂದರವಾಗಿ ವಿವರಿಸಲಾಗಿದೆ. ಹಿಂದೆ ಒಂದು ಗ್ರಾಮವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತಿದ್ದರು. ಈ ನಾಲ್ಕು ವಿಭಾಗದಲ್ಲಿ ಒಂದು ಅಂಶ ಜನವಸತಿಗೆ, ಒಂದು ಅಂಶ ಬೇಸಾಯಕ್ಕೆ, ಒಂದು ಅಂಶ ಹುಲ್ಲುಗಾವಲು ಮತ್ತು ಉಳಿದ ಒಂದು ಅಂಶ ಕಾಡು-ಹೀಗೆ ಅಭಿವೃದ್ಧಿಪಡಿಸುತ್ತಿದ್ದರು. ಇಲ್ಲಿ ಪ್ರತಿಯೊಂದು ಗ್ರಾಮವೂ ತಮಗೆ ಬೇಕಾದ ಆಹಾರ ಬೆಳೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗುತ್ತಿತ್ತು. ಇಂತಹ ಹತ್ತು ಗ್ರಾಮಗಳ(ತಾಲೋಕು) ಆಡಳಿತವನ್ನು ನಿರ್ವಹಿಸಲು ದೇಶದ ಚಕ್ರವರ್ತಿ ಒಬ್ಬ ಸಮರ್ಥ ವ್ಯಕ್ತಿಯನ್ನು ನಿಯಮಿಸುತ್ತಿದ್ದ. ಈ ಆಡಳಿತಾಧಿಕಾರಿಯನ್ನು ‘ದಶಪ’ ಎಂದು ಕರೆಯುತ್ತಿದ್ದರು. ಆತನಿಗೆ ಈ ಹತ್ತು ಗ್ರಾಮದ ಒಟ್ಟು ಕಂದಾಯದ ಹತ್ತನೇ ಒಂದು ಭಾಗವನ್ನು ಸಂಬಳವಾಗಿ ಕೊಡುತ್ತಿದ್ದರು. ದಶಪನ ನಂತರ ‘ವಿಂಶತಪ’. ಈತ ಇಬ್ಬರು ದಶಪರ ಮೇಲಾಧಿಕಾರಿ(ಜಿಲ್ಲಾಧಿಕಾರಿ). ಈತನ ನಂತರ ‘ಶತಪ’. ಈತನ ಆಡಳಿತ ವ್ಯಾಪ್ತಿ ನೂರು ಗ್ರಾಮಗಳು. ಇದನ್ನು ಒಂದು ರಾಜ್ಯ ಎನ್ನಬಹುದು(ರಾಜ್ಯಪಾಲ). ಚಕ್ರವರ್ತಿಯಾದವನು ಈ ಎಲ್ಲಾ ಅಧಿಕಾರಿಗಳ ನೆರವು ಪಡೆದು ದೇಶದ ಪೂರ್ಣಾಡಳಿತವನ್ನು ನಡೆಸುತ್ತಿದ್ದ. ಇದೇ ರೀತಿ ಇಲ್ಲಿ ನಾವು ನಮ್ಮ ದೇಹವನ್ನು ಒಂದು ದೇಶ ಎಂದುಕೊಂಡರೆ ದೇಹದ ಬೇರೆಬೇರೆ ಭಾಗಗಳೇ ತಾಲೋಕು, ಜಿಲ್ಲೆ ಮತ್ತು ರಾಜ್ಯಗಳು. ಅದಕ್ಕೆ ಬೇರೆ ಬೇರೆ ಅಧಿಕಾರಿಗಳು. ಆ ಎಲ್ಲಾ ಅಧಿಕಾರಿಗಳ ಮೂಲಕ ದೇಹದ ನಿಯಂತ್ರಣ ಮಾಡುವ ಚಕ್ರವರ್ತಿ ಪ್ರಾಣದೇವರು. ಪ್ರಾಣದೇವರ ರಾಜ್ಯಪಾಲರು- ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ.  ಇವರನ್ನು 'ಅವಾಂತರ ಪ್ರಾಣರು' ಎನ್ನುತ್ತಾರೆ. ಭಗವಂತನ ಸಾಕ್ಷಾತ್ ಪುತ್ರನಾದ ‘ಪ್ರಾಣ’ ಅವಾಂತರ ಪ್ರಾಣರನ್ನು ದೇಹದ ಬೇರೆಬೇರೆ ವಿಭಾಗದ ಆಡಳಿತ ನಡೆಸಲು ಕಳುಹಿಸುತ್ತಾನೆ. ಇಲ್ಲಿ ಒಂದು ವಿಶೇಷವೇನೆಂದರೆ ಒಬ್ಬ ಚಕ್ರವರ್ತಿಯಂತೆ ಪ್ರಾಣ ಮತ್ತು ಭಗವಂತ ಒಂದು ಕಡೆ ನೆಲಸಿ ಆಡಳಿತ ನಿರ್ವಹಿಸುವುದಿಲ್ಲ. ಬದಲಾಗಿ ಅವರು ಅವಾಂತರ ಅಧಿಕಾರಿಗಳ ಅಂತರ್ಯಾಮಿಯಾಗಿ ಸೇರಿ ಶಕ್ತಿಪಾತ ಮಾಡಿ ಕಾರ್ಯನಿರ್ವಹಣೆ ಮಾಡಿಸುತ್ತಾರೆ.

ಪಾಯೂಪಸ್ಥೇಽಪಾನಂ ಚಕ್ಷುಃಶ್ರೋತ್ರೇ ಮುಖನಾಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರತಿಷ್ಠತೇ ಮಧ್ಯೇ ತು ಸಮಾನಃ  ಏಷ ಹ್ಯೇತದ್ಧ್ರುತಮನ್ನಂ ಸಮಂ ನಯತಿ ತಸ್ಮಾದೇತಾಃ ಸಪ್ತಾರ್ಚಿಷೋ ಭವಂತಿ ಹೃದಿ ಹ್ಯೇಷ ಆತ್ಮಾ  

 ಇಲ್ಲಿ ಪಿಪ್ಪಲಾದರು ಪ್ರತಿಯೊಬ್ಬ ಅವಾಂತರ ಪ್ರಾಣರ ಆಡಳಿತ ವ್ಯಾಪ್ತಿಯನ್ನು ವಿವರಿಸಿದ್ದಾರೆ.  ನಮ್ಮ ದೇಹದ ಒಳಗೆ ಪ್ರತಿಯೊಂದು ಕ್ರಿಯೆಯನ್ನು ನಿರಂತರವಾಗಿ ಒಂದು ವ್ಯವಸ್ಥಿತ ರೀತಿಯಲ್ಲಿ ಪ್ರಾಣದೇವರು ತನ್ನ ಐದು ರೂಪಗಳಿಂದ ನಡೆಸುತ್ತಿದ್ದಾರೆ. ಮೊದಲನೆಯದಾಗಿ ದೇಹದ ಕೆಳಭಾಗ. ಈ ಭಾಗದ ಅಧಿಕಾರ ವ್ಯಾಪ್ತಿ ಅಪಾನನಿಗೆ ಸೇರಿದೆ. ಈತ ನಮ್ಮ ಪಾಯು(ಮಲ ವಿಸರ್ಜನೆ) ಮತ್ತು ಉಪಸ್ಥ(ಮೂತ್ರ ಮತ್ತು ಸಂತಾನ ಕ್ರಿಯೆ)ದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಾನೆ. ಎರಡನೆಯದಾಗಿ ದೇಹದ ಮೇಲ್ಭಾಗ. ನಮ್ಮ ಕಣ್ಣು, ಕಿವಿ, ಬಾಯಿ, ಉಸಿರು. ಈ ಕ್ರಿಯೆಯನ್ನು ಸ್ವಯಂ ಪ್ರಾಣ ದೇವರು ನಿರ್ವಹಿಸುತ್ತಾರೆ. ಅವರು ನಮಗೆ ಕಣ್ಣಿನಿಂದ ನೋಡಿಸುತ್ತಾರೆ, ಕಿವಿಯಿಂದ ಕೇಳಿಸುತ್ತಾರೆ, ಬಾಯಿಯಿಂದ ಮಾತನಾಡಿಸುತ್ತಾರೆ, ಮೂಗಿನಿಂದ ಉಸಿರಾಡಿಸಿ ಬದುಕಿಸುತ್ತಾರೆ. ಮೂರನೆಯದು ದೇಹದ ಮಧ್ಯಭಾಗ. ನಾವು ಸೇವಿಸುವ ಆಹಾರವನ್ನು ಜೀರ್ಣಗೊಳಿಸಿ, ಅದರಿಂದ ಬೇಡವಾದ ಸ್ಥೂಲಭಾಗವನ್ನು ವಿಭಾಗಿಸಿ, ದೇಹಕ್ಕೆ ಬೇಕಾದ ಆಹಾರದ ಅಂಶವನ್ನು ದೇಹದ ವಿವಿಧ ಭಾಗಕ್ಕೆ ತಲುಪಿಸಿ, ಶಕ್ತಿಯನ್ನು ನೀಡುವ ಕ್ರಿಯೆಯನ್ನು- ದೇಹದ ಮಧ್ಯಭಾಗದಲ್ಲಿ ಕುಳಿತ ‘ಸಮಾನ’ ನಾಮಕ ಪ್ರಾಣ ನಿರ್ವಹಿಸುತ್ತಾನೆ. [ಇದಕ್ಕಾಗಿ ಊಟ ಮಾಡುವ ಮೊದಲು ಪ್ರಾಣನಿಗೆ ಮತ್ತು ಪ್ರಾಣನ ಅಂತರ್ಯಾಮಿ ಭಗವಂತನಿಗೆ ಆಹುತಿ ಕೊಟ್ಟು ಊಟ ಮಾಡುವುದು ಪದ್ಧತಿ]. ಇಲ್ಲಿ ದೇಹದ ಮಧ್ಯಭಾಗ ಎಂದರೆ   ನಾಭಿಯಿಂದ ಹೃದಯದ ತನಕದ ಭಾಗ. ಶಾಸ್ತ್ರದಲ್ಲಿ ಹೊಟ್ಟೆಯನ್ನೂ ಕೂಡಾ ಮಧ್ಯಭಾಗ ಎನ್ನುತ್ತಾರೆ. ದೇಹದ ಮಧ್ಯಭಾಗದ ಕೇಂದ್ರಬಿಂದು ಹೃದಯ. ಇದು ದೇಹದಲ್ಲಿ ಭಗವಂತನ ಪ್ರತಿಬಿಂಬವಾಗಿರುವ ಜೀವನಿರುವ ಸ್ಥಾನ. ಬಿಂಬವಿರುವಲ್ಲೇ ಪ್ರತಿಬಿಂಬವಿರುವುದು ಸಾಧ್ಯ. ಆದ್ದರಿಂದ ಇದು ದೇಹದಲ್ಲಿ ಬಿಂಬರೂಪಿ ಭಗವಂತನಿರುವ ಸ್ಥಾನ ಕೂಡಾ ಹೌದು. ನಮಗೆ ತಿಳಿದಂತೆ ಪ್ರಾಣದೇವರು ಭಗವಂತನ ನಿತ್ಯಸಂಗಾತಿ. ಅವರು ಎಂದೂ ಭಗವಂತನನ್ನು ಬಿಟ್ಟಿರಲಾರರು. ಹಾಗಾಗಿ ಹೃತ್ಕಮಲದಲ್ಲಿ ಜೀವ-ಪ್ರಾಣ ಮತ್ತು ಬಿಂಬರೂಪಿ ಭಗವಂತ ಜೊತೆಯಾಗಿ ನೆಲೆಸಿರುತ್ತಾರೆ.
ಜೀವ ಅನ್ನುವುದು ಅತಿಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ  ಜೀವ  ಅತಿಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಲ್ಲೇ ಭಗವಂತ ಮತ್ತು ಪ್ರಾಣ ಜೀವನನ್ನು ಧರಿಸಿ ನೆಲೆಸಿರುತ್ತಾರೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ: “ಪದ್ಮಕೋಶ-ಪ್ರತೀಕಾಶಗ್ಂ ಹೃದಯಂಚಾಪ್ಯಧೋಮುಖಮ್”  ಕೆಳಮುಖವಾಗಿರುವ ಕೆಂದಾವರೆಯ ಮೊಗ್ಗಿನಂತಿರುವ ಶಕ್ತಿ ಕೇಂದ್ರದಲ್ಲಿರುವ ಅತ್ಯಂತ ಸೂಕ್ಷ್ಮ ನೆಲೆಮನೆಯಲ್ಲಿ ಜೀವನನ್ನು ಪ್ರಾಣಾಂತರ್ಗತ ಭಗವಂತ ಧರಿಸಿ ನಿಂತಿದ್ದಾನೆ. ದೇಹದ ಸಮಸ್ತ ಚಟುವಟಿಕೆಗಳೂ ನಡೆಯುವುದು ಈ ಶಕ್ತಿ ಕೇಂದ್ರದಿಂದ.
ದೇಹದ ಮಧ್ಯಭಾಗದಲ್ಲಿ ನೆಲೆಸಿರುವ ‘ಸಮಾನ’ ನಾಮಕ ಅವಾಂತರ ಪ್ರಾಣನ ಅಂತರ್ಯಾಮಿಯಾಗಿ ಪ್ರಾಣದೇವರು ನಾವು ಆಹುತಿ ರೂಪದಲ್ಲಿ ಸೇವಿಸುವ ಆಹಾರವನ್ನು ಸಮನಾಗಿ(ಸಮಮ್-ನಯತಿ) ದೇಹದ ಆಯಾ ಭಾಗಗಳಿಗೆ ತಲುಪಿಸುತ್ತಾರೆ. ದೇಹದಲ್ಲಿ ಆಹಾರ ವಿತರಣೆ ಮಾಡುವ ‘ಸಮಾನ’ ನಾಮಕ ಪ್ರಾಣನಿಂದಾಗಿ ನಮಗೆ ಏಳು ಬಗೆಯ ಅರಿವು(ಜ್ಞಾನ) ಮೂಡುತ್ತದೆ. ಕಣ್ಣಿನಿಂದ ರೂಪದ ಅರಿವು, ಕಿವಿಯಿಂದ ಶಬ್ದದ ಅರಿವು, ಮೂಗಿನಿಂದ ಗಂಧದ ಅರಿವು, ನಾಲಿಗೆಯಿಂದ ರಸದ ಅರಿವು, ಚರ್ಮದಿಂದ ಸ್ಪರ್ಶದ ಅರಿವು, ಮನಸ್ಸಿನಲ್ಲಿ ಬಯಕೆ, ಬುದ್ಧಿಯಿಂದ ಬೇಕು ಬೇಡಗಳ ತೀರ್ಮಾನ-ಇವೇ ಆ ಏಳು ಬಗೆಯ ಬೆಳಕುಗಳು. ಹೀಗೆ  ಎಲ್ಲಾ ಇಂದ್ರಿಯಗಳಿಗೆ ಶಕ್ತಿ ಆಧಾನ ಮಾಡಿ, ಜ್ಞಾನಪೂರ್ಣವಾದ  ಸಮಸ್ತ ಚಟುವಟಿಕೆಗಳನ್ನು ಹೃದಯದಲ್ಲಿ ನೆಲಸಿರುವ ‘ಸಮಾನ’ ನಿರ್ವಹಿಸುತ್ತಾನೆ.      

ಅತ್ರೈತದೇಕಶತಂ ನಾಡೀನಾಂ ತಾಸಾಂ ಶತಂಶತಮೇಕೈಕಸ್ಯಾಂ ದ್ವಾಸಪ್ತತಿಂದ್ವಾಸಪ್ತತಿಮ್ ಪ್ರತಿಶಾಖಾನಾಡೀಸಹಸ್ರಾಣಿ ಭವಂತ್ಯಾಸು ವ್ಯಾನಶ್ಚರತಿ  

ಪ್ರಾಣ, ಅಪಾನ ಮತ್ತು ಸಮಾನರ ಕಾರ್ಯವ್ಯಾಪ್ತಿಯನ್ನು ವಿವರಿಸಿದ ಪಿಪ್ಪಲಾದರು ಇಲ್ಲಿ ‘ವ್ಯಾನ’ ನ ಕಾರ್ಯವ್ಯಾಪ್ತಿಯನ್ನು ವಿವರಿಸುತ್ತಾರೆ. ಇದೊಂದು ಅಪೂರ್ವವಾದ ವಿಷಯ. ಈ ವಿಷಯ ಅಧ್ಯಾತ್ಮ ಶಾಸ್ತ್ರದಲ್ಲಿ ಇನ್ನೆಲ್ಲಿಯೂ ಕಾಣಸಿಗುವುದಿಲ್ಲ. ನಮ್ಮ ಹೃದಯದ ಕೇಂದ್ರ ಭಾಗದಿಂದ  ೧೦೧ ನಾಡಿಗಳು ಕವಲೊಡೆದಿವೆ. [ಐವತ್ತು ಎಡ ಭಾಗದಲ್ಲಿ, ಐವತ್ತು ಬಲಭಾಗದಲ್ಲಿ ಮತ್ತು ನಡುವೆ ಸುಷುಮ್ನಾ ನಾಡಿ]. ಇಲ್ಲಿರುವ ಪ್ರತಿಯೊಂದು ನಾಡಿಗಳಿಗೂ ೧೦೦ ಉಪನಾಡಿಗಳಿವೆ. ಹಾಗಾಗಿ ಒಟ್ಟು ೧೦,೧೦೦ ಉಪನಾಡಿಗಳು. ಪ್ರತಿಯೊಂದು ಉಪನಾಡಿಗಳಿಗೂ ಕೂಡಾ ೭೨,೦೦೦ ಪ್ರತಿನಾಡಿಗಳಿವೆ. ಆದ್ದರಿಂದ ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆ: ೭೨ ಕೋಟಿ ೭೨ ಲಕ್ಷ! ಇದು ಇಂದಿನ ವೈದ್ಯಶಾಸ್ತ್ರಕ್ಕೆ ತಿಳಿಯದ ವಿಚಾರ. ಏಕೆಂದರೆ ಇದರಲ್ಲಿ ಕಣ್ಣಿಗೆ ಕಾಣುವ ಮತ್ತು ಕಾಣದ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಸಂಪರ್ಕಗಳು ಸೇರಿವೆ.  ಈ ಎಲ್ಲಾ ನಾಡಿಗಳಲ್ಲಿ, ಕಾಲಿನ ಬೆರಳಿನಿಂದ ಹಿಡಿದು, ತಲೆಕೂದಲಿನ ತನಕ  ‘ವ್ಯಾನ’ ಬೇರೆ ಬೇರೆ ಶಕ್ತಿಯನ್ನು ಹರಿಸುತ್ತಾನೆ. ನಮ್ಮ ದೇಹದಲ್ಲಿ ವ್ಯಾನ ಶಕ್ತಿ ದೇಹದ ಎಲ್ಲಾ ಭಾಗದಲ್ಲಿ ಹರಿಯುತ್ತಿದ್ದರೆ ಆಗ ದೇಹ ಗಟ್ಟಿಮುಟ್ಟಾಗಿರುತ್ತದೆ. ಎಲ್ಲಿ ವ್ಯಾನ ಶಕ್ತಿ ಕಡಿಮೆಯಾಯಿತೋ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ದೇಹದಲ್ಲಿನ ಪ್ರತಿನಾಡಿಯಲ್ಲೂ ವಿಶೇಷ ಶಕ್ತಿಯನ್ನು ತುಂಬುವ ವಿಶಿಷ್ಟವಾದ ಕಾರ್ಯವನ್ನು ವ್ಯಾನ ನಾಮಕ ವಾಯುವಿನ ಅಂತರ್ಯಾಮಿಯಾಗಿ ಕುಳಿತು ಪ್ರಾಣದೇವರು ಮಾಡಿಸುತ್ತಿರುತ್ತಾರೆ.

ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ ನಯತಿ ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಮ್  

ಕಂಠದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ ವಿಶುದ್ಧಿಚಕ್ರದ ಮೂಲಕ ನಮಗೆ ಕನಸಿನ ಅನುಭವವನ್ನು ಕೊಡುವವನು ಉದಾನ. ಜೀವನನ್ನು ದೇಹದ ಯಾವುದಾದರೊಂದು ನಾಡಿಯ ಮೂಲಕ ಹೊರ ಕರೆದುಕೊಂಡು ಹೋಗಿ, ಜೀವ ಸೇರಬೇಕಾದ ಲೋಕಕ್ಕೆ ಸೇರಿಸುವವನೂ ಅವನೇ.  ಜೀವ ದೇಹದಿಂದ ಯಾವುದೇ ಭಾಗದಿಂದ ಕೂಡಾ ಹೊರ ಹೋಗಬಹುದು. ಕೇವಲ ನವದ್ವಾರದಲ್ಲಷ್ಟೇ ಅಲ್ಲ ರೋಮಕೂಪದಲ್ಲಿ ಕೂಡಾ ಜೀವ ಹೊರ ಹೋಗಬಹುದು. ಸಾಮಾನ್ಯವಾಗಿ ಪುಣ್ಯ ಮಾಡಿದ ಜೀವ ದೇಹದ ಊರ್ಧ್ವಭಾಗದಿಂದ ಹೊರ ಹೋಗುತ್ತದೆ. ಇಂತಹ ಜೀವರನ್ನು  ಉದಾನ ಸುಖವನ್ನು ಅನುಭವಿಸುವ ಸ್ವರ್ಗದಂತಹ ಪುಣ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಪಾಪ ಮಾಡಿದ ಜೀವ ದೇಹದ ಸೊಂಟದ ಕೆಳಗಿನ ಭಾಗದಿಂದ ಹೊರ ಹೋಗುತ್ತದೆ. ಅಂತಹ ಜೀವರನ್ನು ಪ್ರಾಣದೇವರು ದುಃಖವನ್ನು ಅನುಭವಿಸುವ ನರಕಾದಿ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಪುಣ್ಯ-ಪಾಪಗಳೆರಡೂ ಸಮನಾಗಿದ್ದಾಗ ಅಂತಹ ಜೀವ ನೇರವಾಗಿ ಮನುಷ್ಯ ಲೋಕದಲ್ಲಿ ಹುಟ್ಟುತ್ತದೆ. ಕೆಲವೊಮ್ಮೆ ಪ್ರಸವಕಾಲದಲ್ಲಿ  ಜೀವ ದೇಹವನ್ನು ಬಿಟ್ಟು ಹೋಗುವುದುಂಟು. ಅಂತಹ ಸಮಯದಲ್ಲಿ  ನೇರ ಮನುಷ್ಯಲೋಕದಲ್ಲಿ ಹುಟ್ಟಬೇಕಾದ ಜೀವ ಆ ದೇಹವನ್ನು ಪ್ರವೇಶಿಸಿ ಹುಟ್ಟಬಹುದು. ಇದು ಅತ್ಯಂತ ವಿರಳ. ಆದರೆ ಈ ರೀತಿ ಜೀವ ಇನ್ನೊಂದು ಶರೀರವನ್ನು ತಕ್ಷಣ ಪ್ರವೇಶಿಸಿದರೆ ಆಗ ಆ ಜೀವನಿಗೆ ತನ್ನ ಹಿಂದಿನ ಜನ್ಮದ ಸ್ಮರಣೆ ಇರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಗರ್ಭದಲ್ಲಿರುವ ಒಂಬತ್ತು ತಿಂಗಳಿನಿಂದ ಹಿಡಿದು, ಹುಟ್ಟಿ ಸಾಯುವ ತನಕ, ಸತ್ತ ನಂತರ ಲೋಕಾಂತರ ಹೋಗಿ ಮತ್ತೆ ಹುಟ್ಟುವ ತನಕ, ಪ್ರತಿಯೊಂದು ಜೀವರ ಕ್ರಿಯೆ ಪಂಚಪ್ರಾಣರ ಅಧೀನವಾಗಿ ನಡೆಯುತ್ತಿರುತ್ತದೆ. ಈ ಪ್ರಾಣತತ್ತ್ವವನ್ನು ತಿಳಿದರೆ ಪ್ರಪಂಚದ ರಹಸ್ಯವನ್ನು ತಿಳಿದಂತೆ. 

Saturday, October 27, 2012

Prashnopanishad in Kannada-Prashna-III (01-03)


ಅಥ ತೃತೀಯಃ ಪ್ರಶ್ನಃ

ಅಥ ಹೈನಂ ಕೌಸಲ್ಯ ಆಶ್ವಲಾಯನಃ ಪಪ್ರಚ್ಛ   ಭಗವನ್ ಕುತ ಏಷ ಪ್ರಾಣೋ ಜಾಯತೇ ಕಥಮಾಯಾತಿ ಅಸ್ಮಿನ್ ಶರೀರೇ ಆತ್ಮಾನಂ  ವಾ ಪ್ರವಿಭಜ್ಯ ಕಥಂ ಪ್ರತಿಷ್ಠತೇ ಕೇನೋತ್ಕ್ರಮತೇ ಕಥಂ ಬಾಹ್ಯಮಭಿ ಧತೇ ಕಥಮಧ್ಯಾತ್ಮಮಿತಿ  

ಎರಡು ಪ್ರಶ್ನೆಗಳ ವಿವರಣೆಯನ್ನು ಪಿಪ್ಪಲಾದರಿಂದ ಕೇಳಿ ತಿಳಿದ ಮೇಲೆ, ಮೂರನೇ ಋಷಿ ಕೌಸಲ್ಯ ಆಶ್ವಲಾಯನರು ತನ್ನ ಪ್ರಶ್ನೆಯನ್ನು ಗುರುಗಳ ಮುಂದಿಡುತ್ತಾರೆ. ಅವರು ಕೇಳುತ್ತಾರೆ: “ ಯಾವ ಕಾರಣಕ್ಕೋಸ್ಕರ ಪ್ರಾಣತತ್ತ್ವದ ಆವಿರ್ಭಾವವಾಯಿತು ಮತ್ತು ಅದು ಯಾರಿಂದಾಯಿತು” ಎಂದು. ಹಿಂದೆ ಎಲ್ಲವೂ ಪ್ರಜಾಪತಿ ನಾಮಕ ಭಗವಂತನಿಂದ ಸೃಷ್ಟಿಯಾಯಿತು ಎನ್ನುವ ವಿವರಣೆಯನ್ನು ಪಿಪ್ಪಲಾದರು ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಆಶ್ವಲಾಯನರು ವಿಶೇಷವಾಗಿ ಪ್ರಾಣತತ್ವದ ಬಗೆ ಮತ್ತು ಅದರ ಆವಿರ್ಭಾವದ ಹಿನ್ನೆಲೆಯನ್ನು ಪಿಪ್ಪಲಾದರಲ್ಲಿ  ಪ್ರಶ್ನಿಸುತ್ತಿದ್ದಾರೆ. “ಪ್ರಾಣದೇವರು ಹೇಗೆ ನಮ್ಮ ದೇಹವನ್ನು ಪ್ರವೇಶ ಮಾಡುತ್ತಾರೆ ಮತ್ತು ದೇಹದಲ್ಲಿ ಅನೇಕ ರೂಪಗಳಿಂದ ಏನನ್ನು ನಿಯಂತ್ರಣ ಮಾಡುತ್ತಾರೆ ಎನ್ನುವುದನ್ನು ಆಶ್ವಲಾಯನರು ಪಿಪ್ಪಲಾದರಿಂದ ತಿಳಿಯಬಯಸುತ್ತಾರೆ. ನಮಗೆ ತಿಳಿದಂತೆ ಪ್ರಾಣದೇವರು ನಮ್ಮೊಳಗೆ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎನ್ನುವ ಐದು ರೂಪಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ದೇಹ ಪ್ರವೇಶಿಸಿ ತನ್ನನ್ನೇ ತಾನು ಐದು ವಿಭಾಗ ಮಾಡಿಕೊಂಡು ಅವರು ನಿರ್ವಹಿಸುವ ಚಟುವಟಿಕೆಗಳೇನು ಎನ್ನುವುದು  ಇಲ್ಲಿರುವ ಪ್ರಶ್ನೆ.
ಪ್ರಾಣದೇವರು ಕೇವಲ ಪಿಂಡಾಂಡದಲ್ಲಷ್ಟೇ ಅಲ್ಲ, ಬ್ರಹ್ಮಾಂಡದಲ್ಲೂ ತುಂಬಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ದೇಹ ಪ್ರವೇಶಿಸಿ ಜೀವ ತುಂಬುವ ಅವರು, ದೇಹವನ್ನು ಬಿಟ್ಟು ಯಾರ ಜೊತೆಗೆ ಹೊರಟು ಹೋಗುತ್ತಾರೆ ಮತ್ತು ಏಕೆ ಹೊರಟು ಹೋಗುತ್ತಾರೆ? ಹೊರಗೆ ಪಂಚಭೂತಗಳಲ್ಲಿ ತುಂಬಿರುವ ಪ್ರಾಣದೇವರ ಚಟುವಟಿಕೆಗಳೇನು-ಎನ್ನುವ ಬಹಳ ಮಹತ್ವವಾದ ಪ್ರಶ್ನೆಯನ್ನು ಆಶ್ವಲಾಯನರು ಪಿಪ್ಪಲಾದರ ಮುಂದಿಡುತ್ತಾರೆ.
ಪ್ರಶ್ನೆಯಿಂದಲೇ ತಿಳಿಯುವಂತೆ ಈ ಅಧ್ಯಾಯ ಪೂರ್ಣವಾಗಿ ಪ್ರಾಣದೇವರ ಮಹಿಮೆಯನ್ನು ಹೇಳುವ ಅಧ್ಯಾಯ. ಬನ್ನಿ,  ಆಶ್ವಲಾಯನರ ಪ್ರಶ್ನೆಗೆ ಪಿಪ್ಪಲಾದರ ಉತ್ತರವನ್ನು ಭಗವಂತನ ಕೃಪೆ ಬೇಡಿ ಆಲಿಸೋಣ.

ತಸ್ಮೈ ಸ ಹೋವಾಚ ಅತಿಪ್ರಶ್ನಾನ್ ಪೃಚ್ಛಸಿ ಬ್ರಹ್ಮಿಷ್ಠೋಽಸೀತಿ ತಸ್ಮಾತ್ ತೇಽಹಂ ಬ್ರವೀಮಿ

ಪಿಪ್ಪಲಾದರಿಗೆ ಆಶ್ವಲಾಯನರ ಪ್ರಶ್ನೆಯನ್ನು ಕೇಳಿ ಬಹಳ ಸಂತೋಷವಾಯಿತು. ಏಕೆಂದರೆ ಇದು ಪಂಚಭೂತಗಳಲ್ಲಿ ಮತ್ತು ದೇಹದಲ್ಲಿ ವಾಯುದೇವರ ಚಟುವಟಿಕೆ ಏನು ಎಂದು ತಿಳಿಯಬಯಸಿ ಕೇಳಿದ ಪ್ರಶ್ನೆ. ಸಾಮಾನ್ಯರಿಗೆ ಇಂತಹ ಪ್ರಶ್ನೆ ಕೇಳಲು ಸಾಧ್ಯವಿಲ್ಲ. ಇಂತಹ ಪ್ರಶ್ನೆಯನ್ನು ಕೇವಲ ವೇದಾಧ್ಯಯನ ಮಾಡಿದ ಜ್ಞಾನಿಯಷ್ಟೇ ಕೇಳಬಲ್ಲರು. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ದೇಹಶಾಸ್ತ್ರ, ಮನಃಶಾಸ್ತ್ರ ಮತ್ತು ಭೌತಶಾಸ್ತ್ರ ಪೂರ್ಣ ತಿಳಿದಿರಬೇಕು. ಪಿಪ್ಪಲಾದರು ಹೇಳುತ್ತಾರೆ: “ನೀನು ವೇದಾಧ್ಯನ ಮಾಡಿ ಅನೇಕ ಸತ್ಯವನ್ನು ತಿಳಿದಿರುವುದರಿಂದ, ಒಬ್ಬ ಸಾಮಾನ್ಯನಿಗೆ ಹೊಳೆಯದ ಅಪೂರ್ವವಾದ ಈ ಪ್ರಶ್ನೆಯನ್ನು ಕೇಳಿದ್ದೀಯ. ನನಗೆ ಬಹಳ ಸಂತೋಷವಾಯಿತು” ಎಂದು.  ಪ್ರಪಂಚದ ಎಲ್ಲಾ ಜಿಜ್ಞಾಸುಗಳು ತಿಳಿಯಬೇಕಾದ, ಇಡೀ ಮಾನವ ಜನಾಂಗಕ್ಕೆ  ಉಪಕಾರವಾಗುವ, ಅತ್ಯಮೂಲ್ಯವಾದ ವಿಷಯದ ಮೇಲೆ ಕೇಳಿರುವ ಈ ಪ್ರಶ್ನೆ ‘ಅತಿಪ್ರಶ್ನೆ’ ಎಂದು ಪಿಪ್ಪಲಾದರು  ಶಿಷ್ಯನ ಪ್ರಶ್ನೆಯನ್ನು  ಪ್ರಶಂಸಿಸುತ್ತಾರೆ.  

ಆತ್ಮತ  ಏಷ ಪ್ರಾಣೋ ಜಾಯತೇ   ಯಥೈಷಾ ಪುರುಷೇ ಛಾಯ ಏತಸ್ಮಿನ್ನೇತದಾತತಮ್ ಮನೋಕೃತೇನಾಯಾತ್ಯಸ್ಮಿನ್ ಶರೀರೇ

ಪಿಪ್ಪಲಾದರು ಹೇಳುತ್ತಾರೆ: “ಮುಖ್ಯಪ್ರಾಣ ಆತ್ಮನಿಂದ ಹುಟ್ಟಿದ” ಎಂದು.  ಇಲ್ಲಿ ‘ಆತ್ಮ’ ಎಂದರೆ ಪರಮಾತ್ಮ. ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ  ಅದೇ ಆತ್ಮತತ್ತ್ವ.  ಉಪನಿಷತ್ತಿನಲ್ಲಿ ಹೇಳುವಂತೆ: ಆತ್ಮಾ ವಾ ಅರೇ ದೃಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿಧಿಧ್ಯಾಸಿತ್ವ್ಯಃ ಬೃಹದಾರಣ್ಯಕ-೪-೫-೬ ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಂಚಥಾ ಮುಂಡಕ ಉಪನಿಷತ್-೨-೨-೫  ಮನುಷ್ಯ ತಿಳಿಯಬೇಕಾದ ಸತ್ಯಗಳಲ್ಲಿ ಮೂಲಭೂತವಾದ ಸತ್ಯ ಎಂದರೆ ಆತ್ಮನನ್ನು ತಿಳಿಯುವುದು. ಆತ್ಮಾ ಎನ್ನುವುದಕ್ಕೆ  ಪ್ರಾಚೀನ ವೈದಿಕ ಸಾಹಿತ್ಯದಲ್ಲಿ ಅಂತರ್ಯಾಮಿ, ಸ್ವಾಮಿ ಎನ್ನುವ ಅರ್ಥವಿದೆ. ಎಲ್ಲರೊಳಗೂ ತುಂಬಿ ಎಲ್ಲವನ್ನೂ ನಿಯಂತ್ರಿಸುವ ಪರಶಕ್ತಿ ಆತ್ಮ. ಭಾಗವತದಲ್ಲಿ ಹೇಳುವಂತೆ:  ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ  ಭಾಗವತ-೧-೨-೧೧ ದೇವರನ್ನು  ಬ್ರಹ್ಮ, ಆತ್ಮಾ, ಪರಮಾತ್ಮ, ಭಗವಂತ, ಇತ್ಯಾದಿಯಾಗಿ ಕರೆಯುತ್ತಾರೆ. ಹೀಗಾಗಿ ಪಿಪ್ಪಲಾದರು ಇಲ್ಲಿ ಭಗವದ್ ವಾಚಕವಾದ ‘ಆತ್ಮ’ ಶಬ್ದವನ್ನು ಬಳಸಿದ್ದಾರೆ. ಎಲ್ಲರ ಅಂತರ್ಯಾಮಿ, ಎಲ್ಲರ ನಿಯಾಮಕ ಭಗವಂತ ಆತ್ಮಃ.
ನಮಗೆ ತಿಳಿದಂತೆ ಎಲ್ಲವೂ ಆ ಭಗವಂತನಿಂದ ಹುಟ್ಟಿದೆ. ಹೀಗಿರುವಾಗ ಇಲ್ಲಿ ‘ಪ್ರಾಣ ಭಗವಂತನಿಂದ ಹುಟ್ಟಿದ’ ಎನ್ನುವಲ್ಲಿನ ವಿಶೇಷತೆ ಏನು-ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಲ್ಲಿ ಒಂದು ವಿಶೇಷವಿದೆ. ಇತರ ದೇವತೆಗಳಿಗೆ ಒಂದು ಕಲ್ಪದಲ್ಲಿ ಅನೇಕ ಹುಟ್ಟಿದೆ. ಆದರೆ ಬ್ರಹ್ಮ-ವಾಯು ಎಲ್ಲಾ ದೇವತೆಗಳಿಗಿಂತ ಮೊದಲು ಭಗವತನಿಂದ ಸೃಷ್ಟಿಯಾಗುವ ತತ್ತ್ವ. ಇವರಿಗೆ ಪುನಃ ಯಾರಿಂದಲೂ ಮರು ಸೃಷ್ಟಿ ಇಲ್ಲ. ಭಗವಂತನಿಂದ ಸಾಕ್ಷಾತ್ ಹುಟ್ಟುವುದರಿಂದ ಮತ್ತು ಕಲ್ಪಾಂತದ ತನಕ ಮರು ಹುಟ್ಟು ಇಲ್ಲವಾದ್ದರಿಂದ ಪ್ರಾಣದೇವರನ್ನು ಭಗವಂತನ ಸಾಕ್ಷಾತ್ ಪುತ್ರ ಎನ್ನುತ್ತಾರೆ. ಹೇಗೆ ನಮ್ಮ ನೆರಳು ನಮ್ಮನ್ನು ಸದಾ ಬಿಡದೆ ಅನುಸರಿಸುತ್ತದೋ ಹಾಗೆ ಇಡೀ ವಿಶ್ವ ಭಗವಂತನನ್ನು ಆಶ್ರಯಿಸಿದೆ. ಇದೇ ರೀತಿ ಲಕ್ಷ್ಮೀ-ನಾರಾಯಣ ಮತ್ತು ಬ್ರಹ್ಮದೇವರನ್ನು ಬಿಟ್ಟರೆ, ಇತರ ಸಮಸ್ತ ವಿಶ್ವವೂ ನೆರಳಿನಂತೆ ಪ್ರಾಣದೇವರನ್ನು ಆಶ್ರಯಿಸಿಕೊಂಡಿದೆ. ಹೀಗೆ ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣದೇವರು ಭಗವಂತನ ಆದೇಶದಂತೆ ಪ್ರತಿಯೊಂದು ಜೀವದ ಜೀವಕಲಾಭಿಮಾನಿಯಾಗಿ ಸಮಸ್ತ ಜೀವರ ಒಳಗೆ ಪ್ರವೇಶಿಸಿ ನೆಲೆಸಿದ್ದಾರೆ ಮತ್ತು ನಮ್ಮ ಒಳಗೂ ಹೊರಗೂ ನಿಂತು ನಮ್ಮನ್ನು ರಕ್ಷಿಸಿ ನಡೆಸುತ್ತಿದ್ದಾರೆ.    

Saturday, October 20, 2012

Prashnopanishad in Kannada-Prashna-II (12-13)



ಯಾ ತೇ ತನೂರ್ವಾಚಿ ಪ್ರತಿಷ್ಠಿತಾ ಯಾ ಶ್ರೋತ್ರೇ ಯಾ ಚ ಚಕ್ಷುಷಿ
ಯಾ ಚ ಮನಸಿ ಸಂತತಾ ಶಿವಾಂ ತಾಂ ಕುರೂ ಮೋತ್ಕ್ರಮೀಃ   ೧೨

ಈ ವಿಶೇಷವಾದ ಚರ್ಚೆಯಲ್ಲಿ ಪಾಲ್ಗೊಂಡ ಪ್ರಮುಖ ದೇವತೆಗಳಾದ ಅಗ್ನಿ(ವಾಗ್ದೇವತೆ), ಇಂದ್ರ, ಗರುಡ, ಶೇಷ, ರುದ್ರ(ಮನೋಭಿಮಾನಿಗಳು), ಸೂರ್ಯ(ಕಣ್ಣಿನ ಅಭಿಮಾನಿ) ಮತ್ತು ಚಂದ್ರ(ಕಿವಿಯ ಅಭಿಮಾನಿ) ಈಗ ಹೇಳುತ್ತಾರೆ: “ಅಗ್ನಿಯಲ್ಲಿ ಕೂತು ನುಡಿಸುವವನು ನೀನು. ಆದ್ದರಿಂದ ವಾಗೇಂದ್ರಿಯದಲ್ಲಿರುವ ನಿನ್ನ ರೂಪವನ್ನು ದೇಹದಿಂದ ಹೊರಕಳುಹಿಸಬೇಡ. ಕಿವಿಯಲ್ಲಿ ನಿನ್ನ ಪ್ರಾಣಶಕ್ತಿ ಇದೆ, ಕಣ್ಣಿನಲ್ಲಿ ನಿನ್ನ ಸನ್ನಿಧಾನವಿದೆ. ನೀನಿಲ್ಲದೆ ಸೂರ್ಯ ಚಂದ್ರರು ಏನೂ ಮಾಡಲು ಸಾಧ್ಯವಿಲ್ಲ. ಮನಸ್ಸನ್ನು ನಿಯಂತ್ರಿಸುವ ನಿನ್ನ ರೂಪವನ್ನು ಮನಸ್ಸಿನಲ್ಲಿ ಇರಗೊಡು. ಎಲ್ಲಾ ದೇವತೆಗಳ ಒಳಗಿದ್ದು ಸಮಸ್ತ ಇಂದ್ರಿಯಗಳ ವ್ಯಾಪಾರವನ್ನು ನಿಯಂತ್ರಿಸಿ ಈ ಜಗತ್ತಿಗೆ ಬೆಳಕು ನೀಡುವವನು ನೀನು. ನಿನ್ನ ಮಾಂಗಲಿಕವಾದ ದೃಷ್ಟಿ ಎಲ್ಲಾ ಇಂದ್ರಿಯಗಳ ಮೇಲಿರಲಿ. ಇದರಿಂದ ಕಣ್ಣು ಒಳ್ಳೆಯದನ್ನು ನೋಡಲಿ, ಕಿವಿ ಒಳ್ಳೆಯದನ್ನು ಕೇಳಲಿ, ಬಾಯಿ ಒಳ್ಳೆಯದನ್ನು ನುಡಿಯಲಿ, ಮನಸ್ಸು ಒಳ್ಳೆಯದನ್ನು ಗ್ರಹಿಸಲಿ. ಎಲ್ಲವೂ ಮಾಂಗಲಿಕವಾಗಿ ಒಳ್ಳೆಯ ಅನುಭವ ಬರುವಂತೆ ಮಾಡು. ದಯವಿಟ್ಟು ಈ ದೇಹದಿಂದ ನೀನು ಹೊರ ಹೋಗಬೇಡ. ನಮ್ಮೊಳಗೆ ಕೂತು ನಮ್ಮನ್ನು ನಡೆಸು” ಎಂದು ದೇವತೆಗಳು ಪ್ರಾಣದೇವರನ್ನು ಪ್ರಾರ್ಥಿಸುತ್ತಾರೆ.
ಈ ಮೇಲಿನ ಎಂಟು ಮಂತ್ರಗಳಲ್ಲಿ ಬಂದಿರುವ ಮಳೆ, ಸುಡುವುದು, ಉಸಿರಾಡಿಸುವುದು, ಗರ್ಭರಕ್ಷಣೆ, ಇತ್ಯಾದಿ ಕ್ರಿಯೆಗಳು ಮತ್ತು ಸೂರ್ಯ, ಚಂದ್ರ, ಅಗ್ನಿ, ವಹ್ನಿ, ಪರ್ಜನ್ಯ, ಪ್ರಜಾಪತಿ ಇತ್ಯಾದಿ ಶಬ್ದಗಳು ಮೂಲತಃ ಭಗವಂತನನ್ನು ಹೇಳುತ್ತವೆ. ಭಗವಂತನ ಆನಂತರ ಇವು ವಾಯುದೇವರನ್ನು ಹೇಳುತ್ತವೆ. ಇದು ನೇರವಾಗಿ ವಾಯುದೇವರ ಮುಂದೆ ದೇವತೆಗಳು ಮಾಡಿದ ಶ್ಲೋಕವಾದ್ದರಿಂದ  ಇದು ವಾಯುಸ್ತುತಿ. ಆದರೆ ಇದು ವಿಷ್ಣುಸ್ತೋತ್ರವೂ ಹೌದು ಎನ್ನುವುದಕ್ಕೆ ಮುಂದಿನ ಮಂತ್ರದಲ್ಲಿ ನಮಗೆ ಖಚಿತವಾದ ಮಾಹಿತಿ ದೊರೆಯುತ್ತದೆ. ಅಲ್ಲಿ ದೇವತೆಗಳು ಪ್ರಾಣನ ಅಂತರ್ಗತ ನಾರಾಯಣನನ್ನೂ ಕೂಡಾ ಸ್ತೋತ್ರ ಮಾಡಿದ್ದಾರೆ ಎನ್ನುವುದು ಖಚಿತವಾಗಿ ತಿಳಿಯುತ್ತದೆ.      

ಪ್ರಾಣಸ್ಯೇತದ್ ವಶೇ ಸರ್ವಂ ತ್ರಿದಿವೇ ಯತ್ ಪ್ರತಿಷ್ಠಿತಂ
ಮಾತೇವ ಪುತ್ರಾನ್ ರಕ್ಷಸ್ವ  ಶ್ರೀಶ್ಚ ಪ್ರಜ್ಞಾಂ ಚ ವಿಧೇಹಿ ನ ಇತಿ   ೧೩

ದೇವತೆಗಳು ಹೇಳುತ್ತಾರೆ: “ಓ ಪ್ರಾಣದೇವನೇ, ಸರ್ವ ಜಗತ್ ಚೇಷ್ಠಕನಾದ ನಿನ್ನ ವಶದಲ್ಲಿ ಎಲ್ಲವೂ ಇದೆ” ಎಂದು. ಇಲ್ಲಿ ತ್ರಿದಿವ ಎನ್ನುವ ಪದ ಬಳಕೆಯಾಗಿದೆ. ತ್ರಿದಿವ ಎಂದರೆ ಮೇಲಿನ ಸ್ವರ್ಗಲೋಕ ಮತ್ತು ಅದರಿಂದಾಚೆಗೆ ಸತ್ಯಲೋಕದ ತನಕ ಇರುವ ಎಲ್ಲಾ ಲೋಕಗಳು[ಮೇಲಿನ ಏಳು ಲೋಕಗಳು: ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯಲೋಕ] ಪ್ರಾಣದೇವರಿರುವ ಸ್ಥಾನ ಸತ್ಯಲೋಕ. ಇದು ಅತ್ಯಂತ ಉನ್ನತವಾಗಿರುವ ‘ತ್ರಿದಿವ’. ಇಲ್ಲಿಯ ತನಕ ಇರುವ ಸಮಸ್ತವೂ ಪ್ರಾಣ ದೇವರ ಅಧೀನವಾಗಿದೆ.
ಜಡಕ್ಕೆ ರೂಪಕೊಡುವವರು ಪ್ರಾಣದೇವರು. ಜೀವಕ್ಕೆ ಉಸಿರುಕೊಟ್ಟು ಬದುಕಿಸಿ ರಕ್ಷಣೆ ಮಾಡುವವರು ಪ್ರಾಣದೇವರು. ಆದ್ದರಿಂದ ಎಲ್ಲವೂ ಪ್ರಾಣದೇವರ ವಶ. ಸಮಸ್ತ ದೇವತೆಗಳೂ ಪ್ರಾಣದೇವರ ಅಧೀನವಾಗಿ, ಅವರ ನಿಯತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. “ನೀನು ನಿಯಮಿಸಿದ ಕೆಲಸವನ್ನು ನಿನ್ನ ಆಜ್ಞಾನುಸಾರ ನೀನು ಕೊಟ್ಟ ಶಕ್ತಿಯಿಂದ ನಾವು ಮಾಡುತ್ತೇವೆ” ಎನ್ನುತ್ತಾರೆ ದೇವತೆಗಳು. ಇದು ಭಗವಂತನ ಮತ್ತು ಪ್ರಾಣದೇವರ ಶಕ್ತಿ ವಿಶೇಷ.
ಕೊನೆಯದಾಗಿ ದೇವತೆಗಳು ಹೇಳುತ್ತಾರೆ: “ಮಾತೇವ ಪುತ್ರಾನ್ ರಕ್ಷಸ್ವ  ಶ್ರೀಶ್ಚ ಪ್ರಜ್ಞಾಂ ಚ ವಿಧೇಹಿ ನಃ” ಎಂದು. ಇಲ್ಲಿ ನಮಗೆ ಈ ವಾಯುಸ್ತುತಿ ಕೇವಲ ವಾಯುಸ್ತುತಿಯಷ್ಟೇ ಅಲ್ಲ ಹರಿಸ್ತುತಿ ಕೂಡಾ ಹೌದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ದೇವತೆಗಳು ಕೊನೆಯದಾಗಿ “ಓ ಶ್ರೀದೇವಿಯೇ” ಎಂದು ತಾಯಿಯನ್ನು ಸಂಬೋಧಿಸಿದ್ದಾರೆ. ನಮಗೆ ತಿಳಿದಂತೆ ‘ಶ್ರೀ’  ಅಂದರೆ ಲಕ್ಷ್ಮಿ. ಇನ್ನೊಂದು ಅರ್ಥದಲ್ಲಿ ‘ಶಂ’ ಎಂದರೆ ಆನಂದಸ್ವರೂಪನಾಗಿರುವ ಪ್ರಾಣದೇವರು. ಅವನಲ್ಲಿ ರಮಿಸುವವಳು ಶ್ರೀಃ. ಅಂದರೆ ಪ್ರಾಣದೇವರ ಮಡದಿ ಭಾರತೀದೇವಿ. [ಭಾರತೀದೇವಿಯನ್ನೂ ಕೂಡಾ ಶ್ರೀ ಎಂದು ಕರೆಯುತ್ತಾರೆ ಎನ್ನುವುದು ನಮಗೆ ಪಾಂಡವರ ಸ್ವರ್ಗಾರೋಹಣದ ನಂತರ ಬರುವ ಕಥೆಯಲ್ಲಿ ತಿಳಿಯುತ್ತದೆ. ಅಲ್ಲಿ ಧರ್ಮರಾಯ ಭಾರತೀದೇವಿಯನ್ನು ದ್ರೌಪದಿ ಎಂದು ತಪ್ಪಾಗಿ ತಿಳಿದಾಗ ಆತನಿಗೆ ಭಾರತೀದೇವಿಯ ಪರಿಚಯ ಮಾಡುವಾಗ ‘ಶ್ರೀಃ’ ಎಂದು ಪರಿಚಿಸುವುದನ್ನು ಕಾಣುತ್ತೇವೆ]
ದೇವತೆಗಳು ತಮ್ಮ ಸ್ತುತಿಯನ್ನು ಲಕ್ಷ್ಮೀ-ಭಾರತಿಯರ ಸ್ತುತಿಯೊಂದಿಗೆ ಉಪಸಂಹಾರ ಮಾಡುತ್ತಾ ಹೇಳುತ್ತಾರೆ: “ ಓ ಶ್ರೀದೇವಿಯೇ[ಓ ಲಕ್ಷ್ಮೀ ದೇವಿಯೇ, ಓ ಭಾರತೀ ದೇವಿಯೇ] ನೀನು ನಮ್ಮನ್ನು ರಕ್ಷಿಸು. ನಾವು ನಿನ್ನ ಮಕ್ಕಳು. ಮಕ್ಕಳು ತಪ್ಪು ಮಾಡಿದಾಗ ತಾಯಿ ಹೇಗೆ ಕ್ಷಮಿಸುತ್ತಾಳೋ ಹಾಗೆ ನಮ್ಮ ತಪ್ಪನ್ನು ಕ್ಷಮಿಸಿ ನಮ್ಮನ್ನು ಸಲಹು” ಎಂದು. “ನಾವು ನಿನ್ನಲ್ಲಿ ಬೇಡುವುದು ಒಂದನ್ನೇ. ನಮಗೆ ಒಳ್ಳೆಯ ಬುದ್ಧಿಕೊಡು ಎಂದು. ಶ್ರೇಷ್ಠವಾದ ಜ್ಞಾನ, ಜ್ಞಾನದಿಂದ ಪ್ರಾಣ ಮತ್ತು ಭಗವಂತನ ಎಚ್ಚರ, ಅದರಿಂದ ಭಗವಂತನ ನಿಯತಿಗೆ ತಕ್ಕನಾಗಿ ನಮ್ಮ ಕರ್ಮ ನಿರ್ವಹಣೆ ಮಾಡುವ ಶಕ್ತಿಯನ್ನು ನಮಗೆ ಕೊಡು” ಎಂದು ದೇವತೆಗಳು ಬೇಡುತ್ತಾರೆ.
ಇಲ್ಲಿಗೆ ದೇವತೆಗಳು ಪ್ರಾಣದೇವರ ಮುಂದೆ ಹಾಡಿದ  ಒಂಬತ್ತು ಮಂತ್ರಗಳ ಅಪೂರ್ವವಾದ  ಈ ವೈದಿಕ ಹರಿ-ವಾಯುಸ್ತುತಿಯ ಜೊತೆಗೆ  ಎರಡನೇ ಪ್ರಶ್ನೆ/ಅಧ್ಯಾಯ ಮುಕ್ತಾಯವಾಯಿತು(ಇತಿ).

ಇತಿ ಷಟ್ ಪ್ರಶ್ನೋಪನಿಷದಿ ದ್ವಿತೀಯಃ ಪ್ರಶ್ನಃ ॥

ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಎರಡನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

*******

Thursday, October 18, 2012

Prashnopanishad in Kannada-Prashna-II (10-11)

ಯದಾ ತ್ವಮಭಿವರ್ಷಸ್ಯಥೇಮಾಃ ಪ್ರಾಣ ತೇ ಪ್ರಜಾಃ
ಆನಂದರೂಪಾಸ್ತಿಷ್ಠಂತಿ ಕಾಮಾಯಾನ್ನಂ ಭವಿಷ್ಯತೀತಿ   ೧೦
                                 
ಇಳೆಗೆ ಮಳೆ ತರಿಸುವವನು ಪರ್ಜನ್ಯ. ಆತನ ನಿಯಾಮಕ ಇಂದ್ರ. ಆದರೆ ಇಂದ್ರನ ನಿಯಾಮಕ ಮುಖ್ಯಪ್ರಾಣ. ಬಾಹ್ಯವಾಗಿ ನೋಡಿದರೆ ಸೂರ್ಯನ ಬಿಸಿಲಿನಿಂದ ನೀರು ಆವಿಯಾಗಿ ಮೋಡವಾಗುತ್ತದೆ. [ಇದನ್ನು ಮೇಘದೂತದಲ್ಲಿ ಹೀಗೆ ಹೇಳಿದ್ದಾರೆ : ಧೂಮಜ್ಯೋತಿಃಸಲಿಲಮರುತಾಂ ಸನ್ನಿಪಾತಃ ಕ್ವ ಮೇಘಃ]. ಮೋಡ ಮತ್ತು ಗಾಳಿಯ ಸಂಘರ್ಷದಿಂದ ಮಳೆಯಾಗುತ್ತದೆ. ಹಾಗಾಗಿ ಮಳೆಯಾಗುವುದು ವಾಯುದೇವರಿಂದ. ಇಲ್ಲಿ ದೇವತೆಗಳು ಹೇಳುತ್ತಾರೆ:  “ನೀನು ಮಳೆ ಬರಿಸಿದಾಗ ಲೋಕದ ಜನ(ಜೀವಜಾತಗಳು) ಸಂತೋಷದಿಂದ ಕುಣಿದಾಡುತ್ತಾರೆ” ಎಂದು. ಏಕೆಂದರೆ ಮಳೆ ಬಂದರೆ ಬೆಳೆ, ಆಹಾರ ಸಮೃದ್ಧಿ. ಹಾಗಾಗಿ ಜೀವನಕ್ಕೆ ಮುಖ್ಯವಾಗಿ ಬೇಕಾದ ಆಹಾರ ಸಿಗುವುದು ಮಳೆಯಿಂದ. ಆ ಮಳೆಯನ್ನು ಕೊಡುವವನು ಇಂದ್ರನ ಅಂತರ್ಗತ, ಸೂರ್ಯನ ಅಂತರ್ಗತ ವಾಯುದೇವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇಂದ್ರಿಯಗಳಲ್ಲಿರುವವರು, ಭೌತಿಕ ಪ್ರಪಂಚದಲ್ಲಿದ್ದು ಸಲಹುವವರು ಭಗವಂತ ಮತ್ತು  ಪ್ರಾಣದೇವರು.   

ವ್ರಾತ್ಯಸ್ತ್ವಂ ಪ್ರಾಣೈಕರ್ಷರತ್ತಾ ವಿಶ್ವಸ್ಯ ಸತ್ಪತಿಃ
ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ   ೧೧

ಇಲ್ಲಿ ‘ವ್ರಾತ್ಯಸ್ತ್ವಂ’ ಎನ್ನುವ ಪದ ಬಳಕೆಯಾಗಿದೆ. ನಾವು ಮೊದಲು ಈ ಪದದ ಅರ್ಥ ತಿಳಿದುಕೊಳ್ಳಬೇಕು. ಅಥರ್ವವೇದದಲ್ಲಿ ವ್ರಾತ್ಯಕಾಂಡ ಎನ್ನುವ ಒಂದು ಭಾಗ ಕೂಡಾ ಇದೆ. ಸಂಸ್ಕೃತದಲ್ಲಿ ವ್ರಾತ್ಯ ಎಂದರೆ ಆಚಾರಹೀನ ಎನ್ನುವ ಅರ್ಥವಿದೆ. ನೇಮ-ನಿಷ್ಠೆ ಇಲ್ಲದೆ ದಾರಿತಪ್ಪಿದ ವ್ಯಕ್ತಿ ‘ವ್ರಾತ್ಯ’. ಆದರೆ ಈ ಪದಕ್ಕೆ ಒಂದು ವಿಶೇಷ ಅರ್ಥವಿದೆ ಮತ್ತು ಆ ಅರ್ಥದಲ್ಲಿ ಇದನ್ನು ವೇದದಲ್ಲಿ ಬಳಸಿದ್ದಾರೆ. ‘ವ್ರಾತ’ ಎಂದರೆ ಸಮುದಾಯ. ಇಂದ್ರಿಯಾಭಿಮಾನಿ ದೇವತೆಗಳ ಸಮುದಾಯ, ಜೀವಜಾತಗಳ ಸಮುದಾಯ, ಚರಾಚರ ಪ್ರಪಂಚದ ಸಮುದಾಯ. ಅಂತಹ ವ್ರಾತದ ನಿಯಾಮಕ ‘ವ್ರಾತ್ಯ’. ಇಲ್ಲಿ ದೇವತೆಗಳು ಹೇಳುತ್ತಾರೆ: “ ನೀನು ವ್ರಾತ್ಯಸ್ತ್ವಂ ಪ್ರಾಣಃ” ಎಂದು. ಅಂದರೆ  “ಸಮಸ್ತ ಜೀವಸಮುದಾಯದ ನಿಯಾಮಕ ಶಕ್ತಿ ನೀನು” ಎಂದರ್ಥ. ಮುಂದುವರಿದು ದೇವತೆಗಳು ಹೇಳುತ್ತಾರೆ: “ನೀನು ಏಕಋಷಿಃ” ಎಂದು. ಏಕಋಷಿಃ ಎಂದರೆ ಜ್ಞಾನಿಗಳಲ್ಲಿ ಮುಖ್ಯ ಎಂದರ್ಥ. ಇನ್ನು ಅಥರ್ವ ಋಷಿಗಳು ಬಳಸುವ ಅಗ್ನಿಗೆ ‘ಏಕಋಷಿ’ ಎಂದೂ ಕರೆಯುತ್ತಾರೆ. “ಅಥರ್ವವೇದಿಗಳು ಆರಾಧನೆ ಮಾಡತಕ್ಕಂತಹ ಏಕಋಷಿ ಎನ್ನುವ ಅಗ್ನಿಯ ಒಳಗಿದ್ದು  ಆರಾಧ್ಯನಾಗುವವನು ನೀನು” ಎಂದು ದೇವತೆಗಳು ಪ್ರಾಣದೇವರನ್ನು ಸ್ತುತಿಸುತ್ತಾರೆ.
“ಎಲ್ಲವನ್ನು ರಕ್ಷಣೆ ಮಾಡುವವನು, ಹಾಗೇ  ಪ್ರಳಯಕಾಲದಲ್ಲಿ ಇಡೀ ವಿಶ್ವವನ್ನು ಸಂಹಾರಮಾಡಿ ಕಬಳಿಸಿ ನಿಲ್ಲುವ ನೀನು ಸತ್ಪತಿ” ಎಂದು ದೇವತೆಗಳು ವಾಯುದೇವರನ್ನು ಸ್ತುತಿಸುತ್ತಾರೆ.  ಸತ್ಪತಿ ಎನ್ನುವಲ್ಲಿ ‘ಸತ್’ ಎಂದರೆ ಜ್ಞಾನಿ, ಸಾತ್ವಿಕ. ಪ್ರಾಣದೇವರು ಅತಿಶಯ ಸಾತ್ವಿಕಮೂರ್ತಿ. ಸಾತ್ವಿಕರ, ಜ್ಞಾನಿಗಳ ಮತ್ತು ಎಲ್ಲರ ಸ್ವಾಮಿ ಪ್ರಾಣದೇವರು ಮತ್ತು ಆ ಭಗವಂತ ಸತ್ಪತಿಃ. 
ಭಗವಂತನ ಮತ್ತು ಪ್ರಾಣದೇವರ ಮುಂದೆ ತಮ್ಮ ಅಸ್ತಿತ್ವದ ಮಹತ್ವವೇನು ಎನ್ನುವುದನ್ನು  ವಿವರಿಸುತ್ತಾ ದೇವತೆಗಳು ಹೇಳುತ್ತಾರೆ: “ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ” ಎಂದು.    ಅಂದರೆ “ ಸರ್ವ ಜೀವಗಳಲ್ಲಿ ಮೊದಲ ಜೀವನಾದ ನಿನಗೆ ನಾವು ಆಹಾರವನ್ನು ತಂದುಕೊಡುವ ಸೇವಕರು” ಎಂದರ್ಥ. ದೇವತೆಗಳು ಹೇಳುತ್ತಾರೆ “ ಓ ಮಾತರಿಶ್ವನೇ, ನೀನು ಸಮಸ್ತ ದೇವತಾಗಣಗಳ ತಂದೆ” ಎಂದು. [ಇಲ್ಲಿ ಮಾತರಿಶ್ವನ್ ಎಂದು ಹೇಳುವ ಬದಲು ಕೇವಲ ಮಾತರಿಶ್ವ ಎಂದು ಹೇಳಿದ್ದಾರೆ. ಇದು ಭಾಷಾಶಾಸ್ತ್ರ. ಒಂದೇ ಅಕ್ಷರ ಒಟ್ಟಿಗೆ ಎರಡು ಬಾರಿ ಬಂದಾಗ ಅಲ್ಲಿ ಒಂದನ್ನು ಲೋಪ ಮಾಡಬಹುದು.  ಹಾಗಾಗಿ ಮಾತರಿಶ್ವನ್ ನಃ ಎನ್ನುವುದನ್ನು ಇಲ್ಲಿ ‘ಮಾತರಿಶ್ವ ನಃ’ ಎಂದಿದ್ದಾರೆ.] ಮಾತರಿಶ್ವ ಎನ್ನುವ ಹೆಸರು ಕೇವಲ ಪ್ರಾಣದೇವರಿಗೆ ಮಾತ್ರ ಇರುವುದು. ‘ಮಾತರಿ+ಶ್ವ’  ಎಂದರೆ: ಆಕಾಶ(ಮಾತೃ)ದಲ್ಲಿ  ಸಂಚರಿಸುವವ(ಗಾಳಿ) ಎಂದರ್ಥ. ಮಾತೃ ಎಂದರೆ ನಿರ್ಮಾತೃ. ಈ ಜಗತ್ತನ್ನು ನಿರ್ಮಾಣ ಮಾಡಿದ ಭಗವಂತನಲ್ಲಿ ಸದಾ ಸಂಚರಿಸುತ್ತಿರುವ ಪ್ರಾಣದೇವರು ಮಾತರಿಶ್ವ. ಮಾತೃ ಎಂದರೆ ತಾಯಿ. ತಾಯಿಯ ಗರ್ಭದಲ್ಲಿ ಚಲಿಸಿ ಅಲ್ಲಿ ಬೆಳೆಯುತ್ತಿರುವ ಮಗುವನ್ನು ಪಾಲಿಸುವವ ಮಾತರಿಶ್ವ.  ಮಾತೃ ಎಂದರೆ ‘ಮಾತು’. ಋಗ್ವೇದ, ಯಜುರ್ವೇದ, ಸಾಮವೇದಗಳೇ ಮೊದಲ ಮಾತು. ಸದಾ ವೇದಗಳಲ್ಲಿ ಚಲಿಸುವವ, ಸದಾ ವೇದಾರ್ಥ ಚಿಂತನದಲ್ಲಿ ತೊಡಗಿದವ ಮಾತರಿಶ್ವ. ಹೀಗೆ ನಾನಾ ಬಗೆಯಿಂದ ಪ್ರಾಣದೇವರ ಕ್ರಿಯೆಗಳನ್ನು ಹೇಳುವ ಅಪೂರ್ವವಾದ ಶಬ್ದ ‘ಮಾತರಿಶ್ವ’. ಆದ್ದರಿಂದ ದೇವತೆಗಳು ಹೇಳುತ್ತಾರೆ: “ಓ ಮಾತರಿಶ್ವನೇ, ನೀನು ನಮಗೆಲ್ಲಾ ತಂದೆ. ತಾಯಿಯ ಗರ್ಭದಲ್ಲಿದ್ದು ಅದನ್ನು ಬೆಳೆಸುವವನು ನೀನು, ವೇದಗಳ ನಿಜವಾದ ಅರ್ಥವನ್ನು ಬಲ್ಲವನು ನೀನು, ವೇದಾರ್ಥಭೂತನಾದ ಭಗವಂತನನ್ನು ತಿಳಿದವನು ನೀನು, ಎಲ್ಲರಿಗೂ ಉಸಿರು ನೀಡುತ್ತಾ ಆಕಾಶದಲ್ಲಿ ಚಲಿಸುವವನು ನೀನು” ಎಂದು.

Wednesday, October 17, 2012

Prashnopanishad in Kannada-Prashna-II (08-09)


ದೇವಾನಾಮಸಿ ವಹ್ನಿತಮಃ ಪಿತೃಣಾಂ ಪ್ರಥಮಾ ಸ್ವಧಾ
ಋಷೀಣಾಂ ಚರಿತಂ ಸತ್ಯಮಥರ್ವಾಂಗಿರಸಾಮಸಿ  

ಹಿಂದಿನ ಮಂತ್ರದಲ್ಲಿ ಅಗ್ನಿ ಶಬ್ದದಲ್ಲಿ ಪ್ರಾಣನನ್ನು ಸಮನ್ವಯ ಮಾಡಿರುವುದನ್ನು ನೋಡಿದ್ದೇವೆ. ಇಲ್ಲಿ  ವಹ್ನಿ ಎನ್ನುವ ಶಬ್ದದಲ್ಲಿ ಪ್ರಾಣನನ್ನು ಸಮನ್ವಯ ಮಾಡಿ ಸ್ತುತಿಸುವುದನ್ನು ಕಾಣುತ್ತೇವೆ. ‘ಅಗ್ನಿ’ ಎಂದರೆ ಚಲನೆ ಇಲ್ಲದ ವಸ್ತುವಿಗೆ ಚಲನೆ ಕೊಡುವಂತಹದ್ದು. ‘ವಹ್ನಿ’ ಎಂದರೆ ಕೊಂಡೊಯ್ಯುವಂತಹದ್ದು. ಈ ಎರಡು ಶಬ್ದಗಳ ನಿರ್ವಚನದ ಅರ್ಥ ಬೇರೆಬೇರೆ. ನಾವು ಯಜ್ಞದಲ್ಲಿ ಯಾವ ದೇವತೆಯ ಮಂತ್ರವನ್ನು ಜಪಿಸಿ ಆಹುತಿ ಕೊಡುತ್ತೇವೋ ಅದನ್ನು ಆ ದೇವತೆಗೆ ಮುಟ್ಟಿಸುವವನು ‘ವಹ್ನಿ’. ಹಾಗಾಗಿ ನಾವು ಕೊಟ್ಟ ಆಹುತಿಯನ್ನು ದೇವತೆಗಳಿಗೆ ತಲುಪಿಸುವವನು ಎನ್ನುವ ಅರ್ಥದಲ್ಲಿ ಬೆಂಕಿಯನ್ನು ವಹ್ನಿ ಎನ್ನುತ್ತಾರೆ. ನಾವು ಮಾಡುವ ಸಮಸ್ತ ಕರ್ಮವನ್ನು ಭಗವಂತನಿಗೆ/ದೇವತೆಗಳಿಗೆ ಕೊಂಡುಹೋಗಿ ಮುಟ್ಟಿಸುವವರು ಮೂಲತಃ ಪ್ರಾಣದೇವರು. ಆದ್ದರಿಂದ “ನೀನು ವಹ್ನಿತಮಃ” ಎಂದು ದೇವತೆಗಳು ಪ್ರಾಣನನ್ನು ಸ್ತುತಿಸುತ್ತಾರೆ. ಕೇವಲ ದೇವತೆಗಳಿಗೆ ಆಹುತಿ ತಲುಪಿಸುವುದಷ್ಟೇ ಅಲ್ಲ, “ಪಿತೃಪತಿಗಳ ಒಳಗಿದ್ದು ಪಿತೃಗಳಿಗೆ ಕವ್ಯವನ್ನು ಸಲ್ಲಿಸುವ ‘ಪ್ರಥಮಾ ಸ್ವಧಾ’ ನೀನು” ಎನ್ನುತ್ತಾರೆ ದೇವತೆಗಳು.
[ನಾವು ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಾಗ ಸ್ವಾಹಾ ಎಂದೂ ಹಾಗೂ ಪಿತೃಗಳಿಗೆ ಕವ್ಯವನ್ನು ಅರ್ಪಿಸುವಾಗ ಸ್ವಧಾ ಎಂದು  ಹೇಳಿ ಅರ್ಪಿಸುತ್ತೇವೆ. ಇದು ಒಂದು ರೀತಿ ಅವರ ವಿಳಾಸವಿದ್ದಂತೆ. ಆದ್ದರಿಂದ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಾಗ ಸ್ವಧಾ ಎಂದಾಗಲಿ, ಪಿತೃಗಳಿಗೆ ಅರ್ಪಿಸುವಾಗ ಸ್ವಾಹಾ ಎಂದು ಹೇಳಿ ಅರ್ಪಿಸುವುದು ತಪ್ಪು. ಹಾಗೆ ಹೇಳಿ ಅರ್ಪಿಸಿದರೆ ಅದು ತಲುಪಬೇಕಾದವರಿಗೆ ತಲುಪದೇ ದಾನವರ ಪಾಲಾಗಬಹುದು. ಈ ಮಂತ್ರದಲ್ಲಿ ‘ಸ್ವಧಾ’ ಎನ್ನುವ ಪದ ವಿಶೇಷ ಅರ್ಥದಲ್ಲಿ ಬಳಕೆಯಾಗಿದೆ. ಯಮ-ಸೋಮ-ಕವ್ಯವಾಹ ಇವರು ಪಿತೃಪತಿಗಳು. ಇವರು ನಾವು ಅರ್ಪಿಸಿದ ಕವ್ಯವನ್ನು ಇತರ ಪಿತೃದೇವತೆಗಳಿಗೆ ತಲುಪಿಸುವ ಪಿತೃಪತಿಗಳಾದ್ದರಿಂದ ಇವರನ್ನು ಸ್ವಧಾ ಎಂದೂ ಕರೆಯುತ್ತಾರೆ. ಆದರೆ ಪಿತೃಪತಿಗಳಿಗೂ ಮೊದಲಿಗನಾಗಿ ಅವರೊಳಗಿದ್ದು ಆ ಕೆಲಸವನ್ನು ಮಾಡುವ ನೀನು ‘ಪ್ರಥಮಾ ಸ್ವಧಾ’ ಎಂದು ಇಲ್ಲಿ ದೇವತೆಗಳು ಸ್ತುತಿಸಿದ್ದಾರೆ.]
ಋಷಿಗಳ ಬದುಕು, ಜೀವನ, ಸಾತ್ವಿಕವಾಗಿ ಭಗವಂತನನ್ನು ಒಲಿಸಿಕೊಳ್ಳುವುದಕ್ಕಾಗಿ ಅವರು ಮಾಡುವ ಅನುಷ್ಠಾನ, ಅವರಲ್ಲಿರುವ ಪ್ರಾಮಾಣಿಕತೆ, ಭಗವಂತನ ಬಗೆಗಿರುವ ಕಳಕಳಿ ಇವೆಲ್ಲವನ್ನೂ “ಋಷಿಗಳ ಒಳಗಿದ್ದು ನಡೆಸುವವನು ನೀನು” ಎನ್ನುತ್ತಾರೆ ದೇವತೆಗಳು. [ಇಲ್ಲಿ ವಿಶೇಷವಾಗಿ ಅಥರ್ವ ಮತ್ತು ಅಂಗಿರಸ ಋಷಿಗಳನ್ನು ಹೆಸರಿಸಲಾಗಿದೆ. ಚತುರ್ಮುಖನಿಂದ ವೇದವನ್ನು ಉಪದೇಶ ಪಡೆದವನು ಅಥರ್ವ. ಅವರ ನಂತರ ಈ ಪರಂಪರೆಯನ್ನು ಬೆಳೆಸಿಕೊಂಡು ಬಂದವರು ಅಂಗಿರಸರು].

ಇಂದ್ರಸ್ತ್ವಂ ಪ್ರಾಣ ತೇಜಸಾ ರುದ್ರೋಽಸಿ ಪರಿರಕ್ಷಿತಾ
ತ್ವಮಂತರಿಕ್ಷೇ ಚರಸಿ ಸೂರ್ಯಸ್ತ್ವಂ ಜ್ಯೋತಿಷಾಂ ಪತಿಃ  

ಮುಂದುವರಿದು ದೇವತೆಗಳು ಹೇಳುತ್ತಾರೆ: “ನೀನು ಇಂದ್ರಸ್ತ್ವಂ” ಎಂದು. ಇಂದ್ರ ದೇವತೆಗಳ ರಾಜ. ‘ಇಂದ್ರ’ ಎಂದರೆ ಸರ್ವಸಮರ್ಥ. ನಿಜವಾದ ಸರ್ವಸಮರ್ಥ ಭಗವಂತನೊಬ್ಬನೆ. ಭಗವಂತನ ನಂತರ ಸರ್ವಸಮರ್ಥ ಪ್ರಾಣದೇವರು. “ಎಲ್ಲಾ ಜೀವಜಾತಗಳಲ್ಲಿ ಸರ್ವಸಮರ್ಥನಾದ ನಿರ್ವಾಹಕ, ಒಡೆಯ, ದೇವತೆಗಳಿಗೂ ಒಡೆಯ ನೀನು. ಏಕೆಂದರೆ ಇಂದ್ರನನ್ನು ನಿಯಂತ್ರಿಸುವ ತೇಜಸ್ಸು ನಿನ್ನದು. ನಿನ್ನ ತೇಜಸ್ಸಿನಿಂದ ಇಂದ್ರ ಇಂದ್ರನಾಗಿದ್ದಾನೆ. ನೀನೇ ಇಂದ್ರ ಹಾಗೂ ನಿನಗೂ ಇಂದ್ರ ಆ ಭಗವಂತ” ಎಂದು ದೇವತೆಗಳು ಪ್ರಾಣನನ್ನು ಸ್ತುತಿಸುತ್ತಾರೆ.
ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯವನ್ನು ಕೊಟ್ಟು ನಮ್ಮನ್ನು ರಕ್ಷಣೆ ಮಾಡುವವ ರುದ್ರ. ಶಿವನಿಲ್ಲದ ದೇಹ ಶವ. ಆದರೆ “ಆ ರುದ್ರಶಕ್ತಿಯ ಒಳಗಿದ್ದು ಎಲ್ಲವನ್ನೂ ಮಾಡುವ ರುದ್ರ ಶಬ್ದವಾಚ್ಯ ನೀನೇ” ಎನ್ನುತ್ತಾರೆ ದೇವತೆಗಳು. ನಮ್ಮೊಳಗೆ ರಕ್ತ, ಗಾಳಿ, ಆಹಾರ  ಸಂಚಾರಕ್ಕೆ ಬೇಕಾದ ಅಂತರಿಕ್ಷ(space, ಆಕಾಶ/ಅವಕಾಶ)ವಿದೆ. “ಆ ಅಂತರಿಕ್ಷವನ್ನು ನಿಯಂತ್ರಿಸಿ, ಶುದ್ಧಿಗೊಳಿಸಿ ನಮಗೆ ಬದುಕು ಕೊಡುವವನು ನೀನು. ಅಷ್ಟೇ ಅಲ್ಲ, ದೇಹದ ಹೊರಗಿರುವ ಆಕಾಶದಲ್ಲಿ ಗಾಳಿಯಾಗಿ ತುಂಬಿ ನಮಗೆ ಉಸಿರು ಕೊಡುವವನು ನೀನು” ಎಂದು ದೇವತೆಗಳು ಸ್ತೋತ್ರ ಮಾಡುತ್ತಾರೆ.
ಹಿಂದೆ ಸೂರ್ಯನ ಅಂತರ್ಯಾಮಿಯಾಗಿ ಪ್ರಾಣನನ್ನು ಹೇಳಿರುವುದನ್ನು ನೋಡಿದ್ದೇವೆ. ಇಲ್ಲಿ  ಅದನ್ನು ವಿವರಿಸುತ್ತಾ ಹೇಳುತ್ತಾರೆ: “ಸೂರ್ಯನ ಒಳಗಿರುವ ನಿಜವಾದ ಸೂರ್ಯ ನೀನು” ಎಂದು. ಏಕೆಂದರೆ ‘ಸೂರ್ಯ’ ಎಂದರೆ ಸೂರಿಗಳಿಗೆ ಗೋಚರವಾಗುವವನು ಎಂದರ್ಥ. ಸೂರಿಗಳು ಎಂದರೆ ಜ್ಞಾನಿಗಳು. ಜ್ಞಾನಿಗಳಿಗೆ ಗೋಚರವಾಗುವವರು ಪ್ರಾಣ ಮತ್ತು ಭಗವಂತ. ಸೂರ್ಯನೊಳಗೆ ಶಿವನಿದ್ದಾನೆ-ಅವನೂ ಸೂರ್ಯ; ಶಿವನೊಳಗೆ ಮುಖ್ಯಪ್ರಾಣನಿದ್ದಾನೆ-ಅವನೂ ಸೂರ್ಯ;   ಮುಖ್ಯಪ್ರಾಣನಲ್ಲಿ ಭಗವಂತನಿದ್ದಾನೆ ಅವನೂ ಸೂರ್ಯ(ಸೂರ್ಯನಾರಾಯಣ). ಹೀಗೆ “ಬೆಳಕುಗಳಲ್ಲೆಲ್ಲಾ ದೊಡ್ಡ ಬೆಳಕು ನೀನು” ಎಂದು ದೇವತೆಗಳು ಪ್ರಾಣ ದೇವರನ್ನು ಮತ್ತು ಭಗವಂತನನ್ನು ಸ್ತುತಿಸುತ್ತಾರೆ. 

Sunday, October 14, 2012

Prashnopanishad in Kannada-Prashna-II (05-07)


ಇಲ್ಲಿ ಮೊದಲ ಎರಡು ಮಂತ್ರವನ್ನು ಪರೋಕ್ಷವಾಗಿ ಹೇಳಿದರೆ ಉಳಿದ ಏಳು ಮಂತ್ರಗಳಲ್ಲಿ ನೇರ ಸಂಬೋಧನೆ ಇದೆ. ಬನ್ನಿ ದೇವತೆಗಳು ಮಾಡಿದ ಈ ಶ್ರೇಷ್ಠವಾದ ಹರಿವಾಯು ಸ್ತುತಿಯನ್ನು ಪಿಪ್ಪಲಾದರ ಬಾಯಿಂದ ಕೇಳೋಣ:

ಏಷೋಽಗ್ನಿಸ್ತಪತ್ಯೇಷ ಸೂರ್ಯ ಏಷ ಪರ್ಜನ್ಯೋ ಮಘವಾನೇಷ ವಾಯುಃ
ಏಷ ಪೃಥಿವೀ ರಯಿರ್ದೇವಃ ಸದಸಚ್ಚಾಮೃತಂ ಚ ಯತ್  

ಅಗ್ನಿಯೊಳಗಿದ್ದು  ಅಗ್ನಿ ನಾಮಕನಾಗಿರುವವನು, ಸೂರ್ಯನೊಳಗಿದ್ದು ಸೂರ್ಯ ನಾಮಕನಾಗಿರುವವನು, ಮೋಡದೊಳಗಿದ್ದು ಮಳೆ ಸುರಿಸುವವನು, ಇಂದ್ರನೊಳಗಿದ್ದು ಮೂರು ಲೋಕಗಳ ರಕ್ಷಣೆ ಮಾಡುವವನು, ವಾಯುದೇವರೊಳಗಿದ್ದು ಜಗತ್ತನ್ನು ಉಸಿರಾಡಿಸುವವನು, ಭೂಮಿಯೊಳಗಿದ್ದು ಸಮಸ್ತ ಭೂಲೋಕವನ್ನು ಧಾರಣೆ ಮಾಡಿದವನು, ಭಾರತೀದೇವಿಯೊಳಗಿದ್ದು ಸಮಸ್ತ ವಾಕ್ ನಿಯಂತ್ರಕ ಮತ್ತು ಸಮಸ್ತ ಚರಾಚರಾತ್ಮಕ ಪ್ರಪಂಚವನ್ನು ಧಾರಣೆ ಮಾಡಿದವನು ‘ಅವನು’.[ಇಲ್ಲಿ ‘ಅವನು ಎಂದರೆ ಮೊದಲು ಭಗವಂತ ನಂತರ ಮುಖ್ಯಪ್ರಾಣ-ಈ ಎರಡೂ ಅರ್ಥದಲ್ಲಿ ಈ ಮಂತ್ರವನ್ನು ನೋಡಬಹುದು ಎನ್ನುವುದು ಮುಂದೆ ಬರುವ ಮಂತ್ರಗಳಿಂದ ತಿಳಿಯುತ್ತದೆ].  

ಅರಾ ಇವ ರಥನಾಭೌ ಪ್ರಾಣೇ ಸರ್ವಂ ಪ್ರತಿಷ್ಠಿತಂ
ಋಚೋ ಯಜೂಂ ̐ಷಿ ಸಾಮಾನಿ ಯಜ್ಞಃ ಕ್ಷತ್ರಂ ಬ್ರಹ್ಮ ಚ  

ಯಾವ ರೀತಿ ರಥದ ಚಕ್ರದ ನಾಭಿ(Axle) ಇಡೀ ರಥವನ್ನು ಧಾರಣೆ ಮಾಡಿದೆಯೋ ಹಾಗೇ ಭಗವಂತ ಮತ್ತು ಪ್ರಾಣದೇವರು ಈ ವಿಶ್ವವೆಂಬ ರಥದ ಚಕ್ರದ ನಾಭಿ ರೂಪದಲ್ಲಿ ವಿಶ್ವಧಾರಕರಾಗಿದ್ದಾರೆ. ಇವರು ಕೇವಲ ರೂಪಾತ್ಮಕ ಜಗತ್ತಿನ ಧಾರಕರಷ್ಟೇ ಅಲ್ಲ, ನಾಮಾತ್ಮಕ ಪ್ರಪಂಚದ ಧಾರಕ ಶಕ್ತಿ ಕೂಡಾ ಇವರೇ. [ಗದ್ಯ, ಪದ್ಯ ಮತ್ತು ಗಾನ ರೂಪದ ಮೂರು ವೇದಗಳನ್ನು ಧಾರಣೆ ಮಾಡಿದವನು ಆ ಭಗವಂತ. ಸಮಸ್ತ ವೇದದ ಸಮಸ್ತ ಶಬ್ದವೂ ಆ ಭಗವಂತನನ್ನು ಹೇಳುತ್ತದೆ ಎನ್ನುವುದನ್ನು ನಾವಿಲ್ಲಿ ತಿಳಿದಿರಬೇಕು] ನಾವು ಮಾಡುವ ಯಜ್ಞ[ಸಮಸ್ತ ಕರ್ಮ] ಭಗವಂತನ ಅಧೀನ. ಸಮಾಜದ ರಕ್ಷಕರು, ಸಮಾಜಕ್ಕೆ ಜ್ಞಾನವನ್ನು ಕೊಟ್ಟು ಜ್ಞಾನದಿಂದ ಸಮಾಜವನ್ನು ಶ್ರೀಮಂತಗೊಳಿಸುವವರು ಮತ್ತು  ಎಲ್ಲರೂ ಆ ಭಗವಂತನ ಮತ್ತು ಭಗವಂತನ ನಂತರ ಪ್ರಾಣದೇವರ ಅಧೀನ.    

ಪ್ರಜಾಪತಿಶ್ಚರಸಿ ಗರ್ಭೇ ತ್ವಮೇವ ಪ್ರತಿಜಾಯಸೇ
ತುಭ್ಯಂ ಪ್ರಾಣ ಪ್ರಜಾಸ್ತ್ವಿಮಾ ಯತ್ ಪ್ರಣೈಃ ಪ್ರತಿತಿಷ್ಠಸಿ  

“ಪ್ರಜಾಪತಿಯಾಗಿ ಗರ್ಭದ ಒಳಗಿರುವ ಪ್ರಜೆಯನ್ನು ರಕ್ಷಣೆ ಮಾಡುವವನು ‘ನೀನು’ [ಇಲ್ಲಿ ನೇರವಾಗಿ ‘ನೀನು’ ಎಂದು ಪ್ರಾಣ ದೇವರನ್ನು ದೇವತೆಗಳು ಸ್ತುತಿಸುವುದನ್ನು ನಾವು ಗಮನಿಸಬೇಕು. ಹಿಂದೆ ಪ್ರಜಾಪತಿ ಎಂದರೆ ಭಗವಂತ ಎನ್ನುವುದನ್ನು ನೋಡಿದ್ದೇವೆ. ಭಗವಂತನ ನಂತರ ಪ್ರಜಾಪತಿ: ಬ್ರಹ್ಮ-ವಾಯು] ಹುಟ್ಟಲಿರುವ ಸಂತಾನದ ಪಾಲಕನಾಗಿ, ಗರ್ಭದಲ್ಲಿ ನಿಂತು ಆ ಜೀವಕ್ಕೆ ಒಂದು ಸುಂದರ ರೂಪವನ್ನು ಕೊಡುವ ಶಿಲ್ಪಿ ನೀನು,  ಗರ್ಭದಲ್ಲಿರುವ ಮಗುವಿನೊಂದಿಗೆ ಹುಟ್ಟುವವನು ನೀನು, ಹುಟ್ಟಿದ ಮಗುವನ್ನು ಆ ಮಗುವಿನ ಪೂರ್ಣ ಆಯಸ್ಸಿನ ತನಕ ಅಂತರ್ಯಾಮಿಯಾಗಿ ರಕ್ಷಿಸುವವನು ನೀನು. [ವಯಸ್ಸಾದಂತೆ ಇತರ ದೇವತೆಗಳು ಜೀವನನ್ನು ಬಿಟ್ಟುಹೋಗಬಹುದು. ಆದರೆ ಪ್ರಾಣದೇವರು ಮತ್ತು ಭಗವಂತ ಕೊನೇ ಕ್ಷಣದ ತನಕ ಜೀವನೊಂದಿಗಿದ್ದು ರಕ್ಷಣೆ ಮಾಡುತ್ತಾರೆ]. ಹಾಗಾಗಿ ಸಮಸ್ತ ಜೀವಜಾತವೂ ನಿನ್ನ ಅಧೀನ. ಸಮಸ್ತ ಇಂದ್ರಿಯಾಭಿಮಾನಿ ದೇವತೆಗಳ ಮಧ್ಯದಲ್ಲಿ  ನಿಂತು ಎಲ್ಲವನ್ನು ಪಾಲಿಸುವವನು ನೀನು” ಎಂದು ದೇವತೆಗಳು ಪ್ರಾಣದೇವರನ್ನು [ಮತ್ತು ಭಗವಂತನನ್ನು] ಸ್ತುತಿಸುತ್ತಾರೆ.   

Sunday, October 7, 2012

Prashnopanishad in Kannada-Prashna-II (03-04)


ತಾನ್ ವರಿಷ್ಠಃ ಪ್ರಾಣ ಉವಾಚ   ಮಾ ಮೋಹಮಾಪದ್ಯಥ ಅಹಮೇವೈತತ್ ಪಂಚಧಾಽಽತ್ಮಾನಂ ಪ್ರವಿಭಜ್ಯೈತದ್ಬಾಣಮವಷ್ಟಭ್ಯ ವಿಧಾರಯಾಮೀತಿ ತೇಽಶ್ರದ್ದಧಾನಾ ಬಭೂವುಃ  

ದೇವತೆಗಳ ಚರ್ಚೆಯನ್ನು ಕೇಳಿಸಿಕೊಂಡ ದೇವತಾ ಸಮುದಾಯದಲ್ಲಿ ವರಿಷ್ಠನಾದ ಪ್ರಾಣದೇವರು ಹೇಳುತ್ತಾರೆ: “ಏಕೆ ಸುಮ್ಮನೆ ವ್ಯರ್ಥ ಚರ್ಚೆ ಮಾಡುತ್ತೀರಾ? ಈ ದೇಹಕ್ಕೆ ಜ್ಞಾನಶಕ್ತಿ, ಕ್ರಿಯಾಶಕ್ತಿ ಕೊಟ್ಟು ಅದು ಕುಸಿಯದಂತೆ ಧರಿಸಿದವರು ನೀವಲ್ಲ ನಾನೇ. ನಿಮ್ಮ ಕಣ್ಣಮುಂದೆ ಕಾಣುವ ನನ್ನ ಐದು ರೂಪಗಳಿಂದ ಈ ಶರೀರವನ್ನು ಪ್ರವೇಶಮಾಡಿ, ಅದನ್ನು ನಾನು ಧರಿಸಿದ್ದೇನೆ ಹಾಗೂ ನೀವು ನನಗೆ ಅಧೀನರಾಗಿದ್ದೀರಿ” ಎನ್ನುತ್ತಾರೆ. ಪ್ರಾಣದೇವರ ಈ ಮಾತಿಗೆ  ದೇವತೆಗಳು ವಿಶ್ವಾಸ ತೋರುವುದಿಲ್ಲ.

ಸೋಽಭಿಮಾನಾದೂರ್ಧ್ವಮುತ್ಕ್ರಾಮತ ಇವ ತಸ್ಮಿನ್ನುತ್ಕ್ರಾಮತ್ಯಥೇತರೇ ಸರ್ವ ಏವೋತ್ಕ್ರಾಮಂತೇ ತಸ್ಮಿಂಶ್ಚ ಪ್ರತಿಷ್ಠಮಾನೇ ಸರ್ವ ಏವ ಪ್ರತಿಷ್ಠಂತೇ ತದ್ಯಥಾ ಮಕ್ಷಿಕಾ ಮಧುಕರರಾಜಾನಮುತ್ಕ್ರಾಮಂತಂ ಸರ್ವ ಏವೋತ್ಕ್ರಮಂತೇ ತಸ್ಮಿಂಷ್ಚ  ಪ್ರತಿಷ್ಠಮಾನೇ ಸರ್ವಾ ಏವ ಪ್ರತಿಷ್ಠಂತ ಏವಂ ವಾಙ್ಮನಷ್ಚಕ್ಷುಃ ಶ್ರೋತ್ರಂ ಚ ತೇ ಪ್ರೀತಾಃ ಪ್ರಾಣಂ ಸ್ತುನ್ವಂತಿ  

ಪ್ರಾಣದೇವರು ಹೇಳುತ್ತಾರೆ: “ನಮ್ಮಲ್ಲಿ ಒಬ್ಬೊಬ್ಬರಾಗಿ ಈ ದೇಹದಿಂದ ಹೊರ ಹೋಗೋಣ. ಯಾರು ಹೊರ ಹೋದಾಗ ಈ ದೇಹ ಬಿದ್ದು ಹೋಗುತ್ತದೋ ಅವರು ನಿಜವಾದ ಧಾರಕ” ಎಂದು ಹೇಳಿ ದೇಹದಿಂದ ಆಚೆ ಹೊರಟವರಂತೆ ಪ್ರಾಣದೇವರು ಏಳುತ್ತಾರೆ. ಆಗ ಅಲ್ಲಿ ಇತರ ದೇವತೆಗಳಿಗೆ ನಿಲ್ಲಲು ಸಾಧ್ಯವಾಗುವುದಿಲ್ಲ.  ಅದೇ ರೀತಿ ದೇಹ ಪ್ರವೇಶ ಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಇತರ ದೇವತೆಗಳನ್ನು ದೇಹ ಪ್ರವೇಶಿಸುವಂತೆ ಹೇಳುತ್ತಾರೆ ಪ್ರಾಣ ದೇವರು. ಆದರೆ ಎಲ್ಲಾ ದೇವತೆಗಳು ಪ್ರವೇಶಿಸಿದರೂ ಕೂಡಾ ಪ್ರಾಣದೇವರ ಪ್ರವೇಶದ ತನಕ ಅಲ್ಲಿ ಯಾವುದೇ ಚಟುವಟಿಕೆ ಅವರಿಂದ ಸಾಧ್ಯವಾಗಲಿಲ್ಲ. ಆಗ ದೇವತೆಗಳಿಗೆ ಪ್ರಾಣದೇವರ ಪ್ರಾಮುಖ್ಯತೆ ಮನವರಿಕೆಯಾಗುತ್ತದೆ. ಅವರನ್ನು ತಮ್ಮೆಲ್ಲರ ಮುಖಂಡ ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಪ್ರಾಣದೇವರ ಮಹತ್ವವನ್ನು ಇಲ್ಲಿ ಪಿಪ್ಪಲಾದರು ಒಂದು ಅಪೂರ್ವವಾದ ಪ್ರಕೃತಿಯ ದೃಷ್ಟಾಂತದೊಂದಿಗೆ ವಿವರಿಸಿದ್ದಾರೆ. ಒಂದು ಜೇನುಗೂಡು. ಅಲ್ಲಿ ಒಂದು ರಾಣಿಹುಳ ರಾಜನಂತೆ ಕಾರ್ಯಭಾರ ಮಾಡುತ್ತಿರುತ್ತದೆ. ಎಲ್ಲಾ ಜೇನುಹುಳಗಳ ಚಲನವಲನ, ನಿಯಂತ್ರಣ ಆ ಪ್ರಧಾನ ರಾಣಿಹುಳದಲ್ಲಿರುತ್ತದೆ. ಒಂದು ವೇಳೆ ಈ ರಾಣಿಹುಳ ಗೂಡನ್ನು ಬಿಟ್ಟು ಹೊರಟರೆ ಇತರ ಎಲ್ಲಾ ಹುಳಗಳು ಅದನ್ನು ಹಿಂಬಾಲಿಸುತ್ತವೆ. ನಮ್ಮ ದೇಹ ಒಂದು ಜೇನುಗೂಡಿನಂತೆ. ಇಲ್ಲಿ ಪ್ರಾಣದೇವರು ಮಧುಕರ ರಾಜನಂತೆ. ಇತರ ದೇವತೆಗಳು ಜೇನು ಹುಳಗಳಂತೆ. ನಮ್ಮ ದೇಹದಲ್ಲಿ ಭಗವಂತನನ್ನು ಬಿಟ್ಟರೆ ಎರಡನೇ ಸರ್ವಾಧಿಕ, ಸರ್ವೋತ್ಕೃಷ್ಟ ಶಕ್ತಿ ಪ್ರಾಣದೇವರು.  ಅವರ ಅಧೀನವಾಗಿ ಇತರ ಇಂದ್ರಿಯಾಭಿಮಾನಿ ದೇವತೆಗಳಿರುತ್ತಾರೆ. ಈ ವಿವರಣೆಯನ್ನು ಕೇಳಿದ ಎಲ್ಲಾ ದೇವತೆಗಳಿಗೂ ಬಹಳ ಸಂತೋಷವಾಯಿತು. ಅವರು ಪ್ರಾಣದೇವರನ್ನು ಸ್ತೋತ್ರ ಮಾಡಿದರು.
ಈ ಅಧ್ಯಾಯದಲ್ಲಿ ಬರುವ ಮುಂದಿನ ಒಂಬತ್ತು ಮಂತ್ರಗಳು ದೇವತೆಗಳು ಮಾಡಿದ ಪ್ರಾಣಸ್ತುತಿ. ಇದನ್ನು ತ್ರಿವಿಕ್ರಮಪಂಡಿತರ ವಾಯುಸ್ತುತಿಯೊಂದಿಗೆ ನಿತ್ಯ ಪಠಿಸಿದರೆ   ಅದೊಂದು ಅದ್ಭುತ ಅನುಷ್ಠಾನ. ಪುರುಷಸೂಕ್ತ ಭಗವಂತನಿಗೆ ಹೇಗೆ ಅತ್ಯಂತ ಪ್ರಿಯವೋ ಹಾಗೇ ಪ್ರಾಣದೇವರ ಉಪಾಸನೆಯಲ್ಲಿ ವಾಯುಸ್ತುತಿ ಅತ್ಯಂತ ಶ್ರೇಷ್ಠ. ಇಲ್ಲಿ ಕೇವಲ ವಾಯುಸ್ತುತಿ ಮಾತ್ರವಲ್ಲ ಹರಿಸ್ತುತಿಯೂ ಇದೆ. ಆದ್ದರಿಂದ ಇದು ನಿಜವಾದ ಹರಿವಾಯುಸ್ತುತಿ. [ತ್ರಿವಿಕ್ರಮ ಪಂಡಿತರು ಹರಿಸ್ತುತಿ ಮತ್ತು ವಾಯುಸ್ತುತಿಯನ್ನು  ಬೇರೆ ಬೇರೆಯಾಗಿ ಬರೆದಿರುವುದರಿಂದ ಅವರು ಬರೆದಿರುವ ವಾಯುಸ್ತುತಿಯನ್ನು ಹರಿವಾಯು ಸ್ತುತಿ ಎಂದು ಕರೆಯುವುದು ಅಷ್ಟು ಪ್ರಸ್ತುತವಲ್ಲ. ಅವರು ವಿಷ್ಣುಸ್ತುತಿ ಬೇರೆಯಾಗಿ ಬರೆದಿರುವುದರಿಂದ ವಾಯುಸ್ತುತಿ ರಚನೆ ವಿಷ್ಣುಪರ ಅನುಸಂಧಾನದಿಂದ ಬರೆದಿಲ್ಲ ಎನ್ನುವುದು ತಿಳಿಯುತ್ತದೆ. ಆದರೆ ಇಲ್ಲಿ ಬರುವ ಒಂಬತ್ತು ಮಂತ್ರಗಳ ಪ್ರಾಣಸ್ತುತಿ- ವಿಷ್ಣು ಮತ್ತು ವಾಯುಪರವಾಗಿರುವ ವೈದಿಕ ಸ್ತುತಿ]     

Tuesday, October 2, 2012

Prashnopanishad in Kannada-Prashna-II (01-02)


ಎರಡನೇ ಪ್ರಶ್ನೆ

ಅಥ ಹೈನಂ ಭಾರ್ಗವೋ ವೈದರ್ಭಿಃ ಪಪ್ರಚ್ಛ   ಭಗವನ್ ಕತ್ಯೇವ ದೇವಾಃ ಪ್ರಚಾಂ ವಿಧಾರಯಂತೇ, ಕತರ ಏತತ್ ಪ್ರಕಶಯಂತೇ, ಕಃ ಪುನರೇಷಾಂ ವರಿಷ್ಠ ಇತಿ

 ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗದ ವಿಶ್ಲೇಷಣೆ ಮಾಡಿ ಇಡೀ ಸೃಷ್ಟಿಯ ಬಿತ್ತರವನ್ನು ವಿವರಿಸಿದ ಪಿಪ್ಪಲಾದರಲ್ಲಿ ಎರಡನೇ ಶಿಷ್ಯ ಭಾರ್ಗವ ವೈದರ್ಭಿಃ ತನ್ನ ಪ್ರಶ್ನೆಯನ್ನು ಕೇಳುತ್ತಾನೆ. ಆತ ಕೇಳುತ್ತಾನೆ:  “ಈ ದೇಹ ಕುಸಿದು ಬೀಳದಂತೆ, ತ್ರಾಣ ಕೊಟ್ಟು, ನಡೆಸುವವರು ಯಾರು? ಕ್ರಿಯೆ ಮತ್ತು ಜ್ಞಾನ ಕೊಡುವ ದೇವತೆಗಳು ಯಾರು?  ಈ ದೇಹವನ್ನು ಧಾರಣೆ ಮಾಡಿ ಜ್ಞಾನ ಕೊಡುವ ದೇವತೆಗಳಲ್ಲಿ ಶ್ರೇಷ್ಠ ಯಾರು? ಭಗವಂತನ ನಂತರದ ಸರ್ವ ಶ್ರೇಷ್ಠ ದೇವತೆ ಯಾರು?” ಇದು  ಭಾರ್ಗವ ವೈದರ್ಭಿಃ ಪ್ರಶ್ನೆ.

ತಸ್ಮೈ ಸ ಹೋವಾಚಾಕಾಶೋ ಹ ವಾ ಏಷ ದೇವೋ ವಾಯುರಗ್ನಿರಾಪಃ ಪೃಥಿವೀ ವಾಙ್ಮನಶ್ಚಕ್ಷುಃ ಶ್ರೋತ್ರಂ ಚ   ತೇ ಪ್ರಕಾಶ್ಯಾಭಿವದಂತಿ ವಯಮೇತದ್ಬಾಣಮವಷ್ಟಭ್ಯ ವಿಧಾರಯಾಮಃ  

ಹಿಂದೆ ಸೃಷ್ಟಿಯ ಬಗ್ಗೆ ಪಿಪ್ಪಲಾದರು ಕೊಟ್ಟ ಉತ್ತರ ಎಷ್ಟು ವಿಸ್ಮಯಕರವೋ ಅಷ್ಟೇ ವಿಸ್ಮಯಕರವಾದುದು ಈ ಧಾರಣೆ, ಕ್ರಿಯೆ ಮತ್ತು ಜ್ಞಾನಶಕ್ತಿ ಕೊಡುವ ದೇವತೆಗಳ ವಿವರಣೆ. ಏಕೆ ವಿಸ್ಮಯ ಎಂದರೆ ನಮಗೆ ಗೊತ್ತಿರುವ ಸಂಗತಿಗಳಲ್ಲಿ ಅನೇಕ ಗೊತ್ತಿಲ್ಲದ ಸಂಗತಿಗಳು ಸೇರಿವೆ. ನಾವು ಸಾಮಾನ್ಯವಾಗಿ ಕೇವಲ ಸ್ಥೂಲ ವಿಚಾರಗಳನ್ನಷ್ಟೇ  ತಿಳಿದಿರುತ್ತೇವೆ. ಅದರ ಹಿಂದಿನ ಸೂಕ್ಷ್ಮ ವಿವರಣೆ ನಮಗೆ ತಿಳಿದಿರುವುದಿಲ್ಲ. ಅಂತಹ ಸೂಕ್ಷ್ಮ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳುವ ಪಿಪ್ಪಲಾದರ ಈ ವಿವರಣೆ ಒಂದು ವಿಸ್ಮಯಕಾರಿ ವಿವರಣೆ.
ಪಿಪ್ಪಲಾದರು ಹೇಳುತ್ತಾರೆ: “ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ ನಮ್ಮ ದೇಹದಲ್ಲಿ ನೆಲೆಸಿದ್ದಾರೆ” ಎಂದು. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ. ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ  ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ ಮನುಷ್ಯ ಜೀವಂತವಾಗಿರುವ ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ ವಿಘ್ನನಾಶ. ಇದು ಸರ್ವ ಶಾಸ್ತ್ರಗಳಲ್ಲೂ ಪ್ರಸಿದ್ಧವಾದ ವಿಷಯ.
ಆಕಾಶ ದೇವತೆಯ ಸೃಷ್ಟಿಯ ನಂತರ ಆ ಆಕಾಶದಲ್ಲಿ ಗಾಳಿ ಹುಟ್ಟಿತು. ಅಂದರೆ ಗಾಳಿಯ ಅಭಿಮಾನಿ ದೇವತೆಯ ಸೃಷ್ಟಿಯಾಯಿತು. ಈತ ಪ್ರಧಾನವಾಯುವಿನ ಮಗನಾದ ಭೂತವಾಯು. ಈತನನ್ನು ಮರೀಚಿ ಎಂದೂ ಕರೆಯುತ್ತಾರೆ[ಈ ಕುರಿತ ವಿವರಣೆ ಗೀತೆಯಲ್ಲಿ ಬರುತ್ತದೆ. ಅ-೧೦ ಶ್ಲೋಕ-೨೧]. ಮರೀಚಿಯ ನಂತರ ಅಗ್ನಿಯ ಜನನ. ಪ್ರಧಾನ ಅಗ್ನಿಯ ಮಗ ‘ಪಾವಕ’ ಎನ್ನುವವನು ಇಲ್ಲಿ ಅಗ್ನಿದೇವತೆ. ನಂತರ ನೀರಿನ ದೇವತೆ ಬುಧ,  ಪ್ರಥಿವೀದೇವತೆ ‘ಶನಿ’. ಹೀಗೆ  ಗಣಪತಿ, ಮರೀಚಿ, ಪಾವಕ, ಬುಧ ಮತ್ತು ಶನಿ ಇವರು ಪಂಚಭೂತಗಳ ದೇವತೆಗಳಾಗಿ ಸೃಷ್ಟಿಯಾದರು. ನಮ್ಮ ದೇಹ ಕೂಡಾ ಪಂಚಭೂತಗಳಿಂದಾಗಿದೆ. ಈ ಪಂಚದೇವತೆಗಳು ನಮ್ಮ ದೇಹ ಧಾರಣೆ ಮಾಡಿ ನಮಗೆ ಕ್ರಿಯಾಶಕ್ತಿ ಕೊಡುತ್ತಾರೆ. 
ನಮಗೆ ಜ್ಞಾನ ಕೊಡುವ ಶಕ್ತಿ ಯಾವುದೆಂದರೆ ‘ವಾಙ್ಮನ’. ನಮಗೆ ಜ್ಞಾನ ಹುಟ್ಟುವುದು ಶಬ್ದದ ಮೂಲಕ. ಮಾತಿಲ್ಲದೆ ಯಾವುದೇ ಅರಿವು ಬರುವುದಿಲ್ಲ. ಮಾತು ಅನ್ನುವುದು ಜ್ಯೋತಿ. ಇದರ ಜೊತೆಗೆ ಕಿವಿ, ಕಣ್ಣು ಹಾಗೂ ಎಲ್ಲವನ್ನೂ ಗ್ರಹಣ ಮಾಡುವ ಮನಸ್ಸು. ಹೀಗೆ ಮನಸ್ಸು, ಮಾತು, ಕಣ್ಣು, ಕಿವಿ, ಇವು ನಮ್ಮ ದೇಹದಲ್ಲಿ ನಮಗೆ ಜ್ಞಾನದ ವಿಕಾಸವನ್ನು ಕೊಡತಕ್ಕಂತವು. ನೋಡಿ-ಕಲಿಯುವುದು, ಕೇಳಿ-ತಿಳಿಯುವುದು. ಹೇಳಿದ್ದನ್ನು, ಕೇಳಿದ್ದನ್ನು, ನೋಡಿದ್ದನ್ನು ಗ್ರಹಿಸುವುದು ಮನಸ್ಸು. ಈ ನಾಲ್ಕು ಇಂದ್ರಿಯಗಳು ಇಲ್ಲದಿದ್ದರೆ ಮನುಷ್ಯನ ಜ್ಞಾನ ಬೆಳವಣಿಗೆ ಆಗುವುದೇ ಇಲ್ಲ. ಇಲ್ಲಿ ಮಾತಿನ ದೇವತೆ ಅಗ್ನಿ, ಕಣ್ಣಿನ ದೇವತೆ ಸೂರ್ಯ, ಕಿವಿಯ ದೇವತೆ ಚಂದ್ರ. ಎಲ್ಲವನ್ನೂ ಗ್ರಹಣ ಮಾಡುವ ಮನಸ್ಸಿನ ದೇವತೆ ಗರುಡ-ಶೇಷ-ರುದ್ರರು. ವಿಶೇಷವಾಗಿ ಶಿವಶಕ್ತಿ. ರುದ್ರ ದೇವರ ಅನುಗ್ರಹ ಇಲ್ಲದೆ ಯಾವುದೇ ಅರಿವು ಬೆಳೆಯದು.  ಹೀಗೆ ಪಂಚಭೂತಗಳ ದೇವತೆಗಳಿಂದ ದೇಹ ಧಾರಣೆಯಾದರೆ, ಈ ನಾಲ್ಕು ದೇವತೆಗಳಿಂದ ಅರಿವು ಬೆಳೆಯುತ್ತದೆ. ಇಷ್ಟು ವಿವರಣೆ ನೀಡಿದ ಪಿಪ್ಪಲಾದರು ಮುಂದೆ ದೇವತೆಗಳ ಒಂದು ಕಥೆಯನ್ನು ಹೇಳುತ್ತಾರೆ.
ಒಮ್ಮೆ ಬೆಳಕು ನೀಡುವ ದೇವತೆಗಳಲ್ಲಿ [ಕಣ್ಣಿನ, ಕಿವಿಯ, ಬಾಯಿಯ ಮತ್ತು ಮನಸ್ಸಿನ ಅಭಿಮಾನಿ ದೇವತೆಗಳಲ್ಲಿ] ಒಂದು ಚರ್ಚೆ ಆರಂಭವಾಯಿತಂತೆ. [ಇದು ಒಂದು ಅಪೂರ್ವ ಜ್ಞಾನವನ್ನು ನಮಗೆ ತಿಳಿಸುವುದಕ್ಕೋಸ್ಕರ ದೇವತೆಗಳು ಆಡಿದ ಒಂದು ನಾಟಕ]. ಇಲ್ಲಿ ಪ್ರತಿಯೊಬ್ಬ ದೇವತೆಯೂ ‘ದೇಹಧಾರಣೆಯಲ್ಲಿ ತಮ್ಮ ಪಾತ್ರ ಮುಖ್ಯ ಎಂದು ಸಮರ್ಥಿಸಿ ಕೊಳ್ಳುತ್ತಿದ್ದರಂತೆ. ಕಣ್ಣಿನ ದೇವತೆ ಸೂರ್ಯ “ನಾನಿಲ್ಲದೆ ಜೀವನಿಗೆ ಬದುಕೇ ಇಲ್ಲ” ಎಂದರೆ ಕಿವಿಯ ದೇವತೆ ಚಂದ್ರ “ಕಣ್ಣಿಗಿಂತ ಕಿವಿ ಮುಖ್ಯ ಆದ್ದರಿಂದ ನಾನು ಶ್ರೇಷ್ಠ” ಎಂದನಂತೆ. ಇದಕ್ಕೆ ಬಾಯಿಯ ದೇವತೆ “ಮಾತೇ ಮುಖ್ಯ, ಮಾತಿಲ್ಲದೆ ಏನೂ ಇಲ್ಲ ಹಾಗಾಗಿ ನಾನು ಮುಖ್ಯ” ಎಂದನಂತೆ. ಆಗ  ಮನಸ್ಸಿನ ದೇವತೆ:  “ನೋಡುವುದು, ಕೇಳುವುದು ಮಾತನಾಡುವುದು ಎಲ್ಲಕ್ಕಿಂತ ಮುಖ್ಯ ಗ್ರಹಣ ಮಾಡುವ ಮನಸ್ಸು. ಆದ್ದರಿಂದ ಎಲ್ಲವುದಕ್ಕಿಂತ ಮುಖ್ಯ ನಾನು” ಎಂದನಂತೆ. ಹೀಗೆ ಎಲ್ಲಾ ದೇವತೆಗಳು  ತಾವೇ ಮುಖ್ಯ ಎಂದು ಪ್ರಾಣ ದೇವರ ಮುಂದೆ ನಿಂತು ಚರ್ಚಿಸಿದರಂತೆ. ಎಲ್ಲರೂ “ಈ ಬಾಣವನ್ನು  ಧರಿಸಿದವನು ನಾನು” ಎನ್ನುವ ಅಭಿಪ್ರಾಯವನ್ನು ಮುಂದಿಟ್ಟರಂತೆ.  [ಇಲ್ಲಿ ಬಾಣ ಎನ್ನುವ ಪದ ಬಳಕೆಯಾಗಿದೆ. ಪ್ರಾಚೀನ ಸಂಸ್ಕೃತದಲ್ಲಿ ಬಾಣ ಎಂದರೆ ಶರೀರ. ಬಾ= ಬಯಕೆ/ಕಾಮನೆ; ಅಣ=ಈಡೇರಿಸುವ ಸಾಧನ. ನಮ್ಮ ಬಯಕೆಗಳನ್ನು ನಾವು ನಮ್ಮ ದೇಹದ ಮೂಲಕ ಈಡೇರಿಸಿಕೊಳ್ಳುತ್ತೇವೆ. ಆದ್ದರಿಂದ ದೇಹವನ್ನು ಬಾಣ ಎಂದು ಕರೆಯುತ್ತಾರೆ].