ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, August 31, 2012

Prashnopanishad in Kannada-Prashna-I (11)


ಪಂಚಪಾದಂ ಪಿತರಂ ದ್ವಾದಶಾಕೃತಿಂ ದಿವ ಆಹುಃ ಪರೇ ಅರ್ಧೇ ಪುರೀಷಿಣಮ್
ಅಥೇಮೇ ಅನ್ಯ ಉಪರೇ ವಿಚಕ್ಷಣಂ ಸಪ್ತಚಕ್ರೇ ಷಡರ ಆಹುರರ್ಪಿತಮಿತಿ   ೧೧

ಈ ಮಂತ್ರ ಋಗ್ವೇದದಲ್ಲಿ ಬಂದಿದೆ. (೧.೧೬೪.೧೨).  ಋಗ್ವೇದದಲ್ಲಿ ‘ಅಸ್ಯ ವಾಮಸ್ಯ ಸೂಕ್ತ’ ಎಂದಿದೆ[೧.೧೬೪]. ಅಲ್ಲಿ ಐವತ್ತೆರಡು ಮಂತ್ರಗಳಿವೆ. ಎಲ್ಲವೂ ಒಗಟಿನಂತಿರುವ ಮಂತ್ರಗಳು. ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಆ ಐವತ್ತೆರಡು ಮಂತ್ರಗಳಲ್ಲಿ ಒಂದನ್ನು ಪಿಪ್ಪಲಾದರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮಂತ್ರದ ಮೇಲ್ನೋಟದ ಅರ್ಥ ಹೀಗಿದೆ: ಐದು ಕಾಲಿನ ತಂದೆಯೊಬ್ಬನಿದ್ದಾನೆ. ಅವನಿಗೆ ಹನ್ನೆರಡು ರೂಪಗಳು. ಅವನು ಸ್ವರ್ಗಲೋಕದ ಆಚೆಗಿನ ಬಂಗಲೆಯಲ್ಲಿ ಪುಷ್ಕಳ ಭೋಜನ ಮಾಡುತ್ತಿದ್ದಾನೆ/ ಆನಂದವಾಗಿದ್ದಾನೆ/ ಆರಾಮವಾಗಿದ್ದಾನೆ/ನೀರು ಸುರಿಸುತ್ತಿದ್ದಾನೆ. ಕೆಲವು ಬೇರೆ ಜನರಿದ್ದಾರೆ. ಅವರು ಹೇಳುತ್ತಾರೆ: “ಆತ ಭಾರೀ ಬುದ್ಧಿವಂತ, ಆತ ಆ ಬಂಗಲೆಯಲ್ಲಿರುವುದಲ್ಲ, ಆತ ಏಳು ಚಕ್ರಗಳ, ಆರು ಅರಗಿಲ ಶರೀರದಲ್ಲಿದ್ದಾನೆ” ಎಂದು. 
ಇದು ಪೂರ್ಣ ಒಗಟಿನ ರೂಪದಲ್ಲಿರುವ ಮಂತ್ರ. ಈ ಮಂತ್ರ ಸೂರ್ಯನನ್ನು, ಪ್ರಾಣದೇವರನ್ನು ಮತ್ತು ಭಗವಂತನನ್ನು ಹೇಳುತ್ತದೆ. ಇಲ್ಲಿ ಒಂದೊಂದಾಗಿ ಈ ವಿವರವನ್ನು ಹುಡುಕಬೇಕು.
ಈ ಮಂತ್ರವನ್ನು ಸೂರ್ಯನ ಪರ ನೋಡಿದಾಗ:  “ಪಂಚಪಾದಂ ಪಿತರಂ”   ಎನ್ನುವಲ್ಲಿ ‘ಪಂಚ’ ಎನ್ನುವ ಪದ  'ವ್ಯಾಪಿಸಿಕೊಂಡಿರುವ' ಎನ್ನುವ ಅರ್ಥವನ್ನು ಕೊಡುತ್ತದೆ[ಉದಾ: ಪಂಚಾಸ್ಯ=ವಿಸ್ತಾರವಾದ ಮೋರೆಯುಳ್ಳದ್ದು=ಸಿಂಹ]. ಸೂರ್ಯನ ಕಿರಣಗಳು ವಿಸ್ತಾರವಾಗಿ ಭೂಮಂಡಲದಲ್ಲಿ ತುಂಬಿದೆ. ಇನ್ನು ‘ಪಂಚ’ ಎಂದರೆ ಐದು ಎನ್ನುವ ಅರ್ಥದಲ್ಲಿ ನೋಡಿದರೆ: ಸೂರ್ಯನನ್ನು ಉಪಾಸನೆಯಲ್ಲಿ ಐದು ದಿಕ್ಕುಗಳಲ್ಲಿ [ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಊರ್ಧ್ವ] ಹೇಳುತ್ತಾರೆ. ಹೀಗೆ ಐದು ಕಡೆ ವಿಶಿಷ್ಟವಾದ ಐದು ಕಿರಣಗಳುಳ್ಳವ ಮತ್ತು ಎಲ್ಲಾ ಕಡೆ ವಿಸ್ತೃತವಾದ ಕಿರಣಗಳುಳ್ಳವ ಸೂರ್ಯ. ಇಲ್ಲಿ ಪಿತರಂ ಎನ್ನುವಲ್ಲಿ ‘ತಪ’ ಎನ್ನುವ ಪದ ಅಡಗಿದೆ. ಅಂದರೆ ಸುಡುವವ ಎಂದರ್ಥ. ಕಿರಣಗಳನ್ನು ಎಲ್ಲಾ ಕಡೆ ಹಬ್ಬಿಸಿ “ದ್ವಾದಶಾಕೃತಿಂ” – ಹನ್ನೆರಡು ತಿಂಗಳು ಪಂಚಋತುಗಳ[ವಸಂತ, ಗ್ರೀಷ್ಮ, ವರ್ಷಾ, ಶರತ್, ಹೇಮಂತಶಿಶಿರ(ಹೇಮಂತ ಮತ್ತು ಶಿಶಿರವನ್ನು ಚಳಿಗಾಲವೆಂದು ಒಂದೇ ಋತುವಾಗಿ ಪರಿಗಣಿಸುವುದು ವೈದಿಕ ಸಂಪ್ರದಾಯ-‘ಪಂಚರ್ತವಃ’ )]  ನಿಯಾಮಕನಾಗಿ ಸೂರ್ಯ ಆಕಾಶದ[ದಿವು] ನಡು ನೆತ್ತಿಯಲ್ಲಿ ನೆಲೆಸಿದ್ದಾನೆ. ಆದರೆ ತಿಳಿದವರು ಹೇಳುತ್ತಾರೆ: ಆತ ನಮ್ಮ ಶರೀರದಲ್ಲೇ, ನಮ್ಮ ಕಣ್ಣಿನಲ್ಲಿ ನೆಲೆಸಿದ್ದಾನೆ ಎಂದು.[ಚಕ್ಷೋಃ ಸೂರ್ಯೋ ಅಜಾಯತ-ಪುರುಷಸೂಕ್ತ. ಭಗವಂತನ ಕಣ್ಣಿನಿಂದ ಹುಟ್ಟಿದ ಸೂರ್ಯ ನಮ್ಮ ಕಣ್ಣಿನ ಅಭಿಮಾನಿ ದೇವತೆ]. ಎಂತಹ ಶರೀರ ಎಂದರೆ - ಏಳು ಚಕ್ರಗಳ, ಆರು ಅರಗಿಲ ಶರೀರ. [ಈ ಶರೀರದ ವಿವರಣೆಯನ್ನು ಮುಂದೆ ನೋಡೋಣ].
ಇದೇ ಮಂತ್ರವನ್ನು ಪ್ರಾಣದೇವರ ಪರ ನೋಡಿದಾಗ: “ಪಂಚಪಾದಂ ಪಿತರಂ”  ಜಗತ್ತಿನ ತಂದೆಯಾದ ಮುಖ್ಯಪ್ರಾಣದೇವರು ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎನ್ನುವ ಐದು ರೂಪಗಳಲ್ಲಿ ಈ ಜಗತ್ತಿನಲ್ಲಿ ತುಂಬಿದ್ದಾರೆ. ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಮನಸ್ಸು ಮತ್ತು ಬುದ್ಧಿ ಈ ಹನ್ನೆರಡು[ದ್ವಾದಶಾಕೃತಿಂ] ಇಂದ್ರಿಯಗಳ ನಿಯಾಮಕ ಪ್ರಾಣ. ಇಂತಹ ಪ್ರಾಣದೇವರು ತಮ್ಮ ಪುರವಾದ ಸತ್ಯ ಲೋಕದಲ್ಲಿ ಭಾರತಿಯ(ದಿವು) ಬಲಬದಿಯಲ್ಲಿದ್ದಾರೆ. ಆದರೆ ತಿಳಿದವರು ಹೇಳುವಂತೆ ಜೀವ ಕಲಾಭಿಮಾನಿಯಾದ ಪ್ರಾಣದೇವರು ನಮ್ಮ ಶರೀರದಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದಾರೆ.
ಈ ಮಂತ್ರವನ್ನು ಭಗವಂತನ ಪರ ನೋಡಿದಾಗ: ಸೂರ್ಯನೊಳಗೆ ಪಂಚರೂಪದಲ್ಲಿದ್ದು, ಪಂಚರೂಪದಿಂದ, ಪಂಚಋತು ನಿಯಾಮಕನಾಗಿ ಭಗವಂತನಿದ್ದಾನೆ. ಪಂಚಪ್ರಾಣರಲ್ಲಿ ಭಗವಂತನಿದ್ದಾನೆ. ಸ್ವಯಂ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಮತ್ತು ನಾರಾಯಣ  ಎನ್ನುವ ಪಂಚರೂಪದಲ್ಲಿ ಜಗತ್ತಿನ ತಂದೆಯಾದ ಭಗವಂತ ತುಂಬಿದ್ದಾನೆ. ಹನ್ನೆರಡು ಮಾಸಗಳಲ್ಲಿ, ಹನ್ನೆರಡು ಇಂದ್ರಿಯಗಳಲ್ಲಿ ಭಗವಂತ ತುಂಬಿದ್ದಾನೆ. ಮಾರ್ಗಶಿರದಿಂದ ಕಾರ್ತ್ತಿಕದ ತನಕದ ಈ ತಿಂಗಳುಗಳನ್ನು ನಿಯಮಿಸುವ ಭಗವಂತನ ರೂಪಗಳೂ ಹನ್ನೆರಡು. ಅವುಗಳೆಂದರೆ: ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ದಾಮೋದರ. ಹೀಗೆ ಅನೇಕಾನೇಕ ರೂಪಗಳಿಂದ ಜಗತ್ತಿನ ರಕ್ಷಣೆ ಮಾಡುತ್ತಿದ್ದಾನೆ –ಜಗತ್ತಿನ ರಕ್ಷಕ ಭಗವಂತ. ಇಂತಹ ಭಗವಂತ ಏಳುಲೋಕಗಳಿಂದಾಚೆಗೆ, ಎಲ್ಲವುದಕ್ಕಿಂತ ಎತ್ತರದಲ್ಲಿರುವ ವೈಕುಂಠದಲ್ಲಿ ನೆಲೆಸಿದ್ದಾನೆ. ಭಗವಂತ ಭಕ್ತಿ-ಜ್ಞಾನಗಳ ಮುಖೇನ ಎತ್ತರಕ್ಕೇರಿದ ಜ್ಞಾನಿಯ ಸಾಧನೆ ಪೂರ್ಣವಾದಾಗ ತನ್ನ ಪುರದಲ್ಲಿ ಆತನಿಗೆ ಸ್ಥಾನವನ್ನು ಕೊಡುತ್ತಾನೆ. ಸಾಧನೆ ಪೂರ್ಣವಾಗುವ ತನಕ ಭೂಮಂಡಲದಲ್ಲಿ ಸ್ಥಾನವನ್ನು ಕೊಡುವವನೂ ಅವನೇ. ಭಗವಂತನನ್ನು ಹೃದಯದಲ್ಲಿ ಉಪಾಸನೆ ಮಾಡುವ, ಶತರ್ಚಿಗಳು “ಭಗವಂತ ಎಲ್ಲವನ್ನು ಬಲ್ಲವನಾಗಿ ನಮ್ಮೊಳಗೆ ನಮ್ಮನ್ನು ರಕ್ಷಣೆ ಮಾಡುವುದಕ್ಕಾಗಿ ಕುಳಿತಿದ್ದಾನೆ(ಉಪರೇ)” ಎಂದು ಉಪಾಸನೆ ಮಾಡುತ್ತಾರೆ. ಜ್ಞಾನಿಗಳು ಭಗವಂತನನ್ನು ತಮ್ಮ ಹೃದಯದಲ್ಲಿ ಕುಳ್ಳಿರಿಸಿ ಉಪಾಸನೆ ಮಾಡುತ್ತಾರೆ.
ಈ ರೀತಿ ಸೂರ್ಯ, ಪ್ರಾಣ ಮತ್ತು ಭಗವಂತ ನೆಲೆಸಿರುವ ಶರೀರ ಏಳು ಚಕ್ರಗಳ ಶರೀರ. ನಮ್ಮ ಶರೀರ ಏಳರ ಗುಂಪು. ಅವುಗಳೆಂದರೆ: ತ್ವಕ್(ಹೊರಮೈ), ಚರ್ಮ(ಒಳಮೈ), ಮಾಂಸ, ರಕ್ತ, ಕೊಬ್ಬು, ಎಲುಬು ಮತ್ತು ಮಜ್ಜೆ (ಸಪ್ತ ಧಾತುಗಳು).   ಯಾವುದರಿಂದ ನಾವು ನಡೆಯುತ್ತೇವೋ ಅದು ಚಕ್ರ. ಚಕ್ರ ಎಂದರೆ ಪರಿಮಾಣ. ನಮ್ಮ ಶರೀರ ನಮ್ಮ ಕಾಲಿನ ಏಳುಪಟ್ಟು ಇರುತ್ತದೆ. ಇಂತಹ ದೇಹಕ್ಕೆ  ಆರು ಅರಗಿಲು. ಅವುಗಳೆಂದರೆ: ಎರಡು ಕೈ, ಎರಡು ಕಾಲು, ದೇಹ ಮತ್ತು ತಲೆ.  
ಹೀಗೆ ಈ ಶ್ಲೋಕ- ಸೂರ್ಯ, ಪ್ರಾಣ ಮತ್ತು ನಾರಾಯಣ ಸಮಸ್ತ ಕಾಲದಲ್ಲಿ ತುಂಬಿ ಸೃಷ್ಟಿ ವಿಸ್ತಾರ ಮಾಡುವುದಕ್ಕೆ ಸಂವಾದಿಯಾಗಿದೆ.  

Tuesday, August 28, 2012

Prashnopanishad in Kannada-Prashna-I (9-10)


ಸಂವತ್ಸರೋ ವೈ ಪ್ರಜಾಪತಿಸ್ತಸ್ಯಾಯನೇ ದಕ್ಷಿಣಂ ಚೋತ್ತರಂ ಚ ತದ್ಯೇ ಹ ವೈ ತದಿಷ್ಟಾಪೂರ್ತೇ ಕೃತಮಿತ್ಯುಪಾಸತೇ ತೇ ಚಾಂದ್ರಮಸಮೇವ ಲೋಕಮಭಿಜಯಂತೇ   ತ ಏವ ಪುನರಾವರ್ತಂತೇ ತಸ್ಮಾದೇತ ಋಷಯಃ ಪ್ರಜಾಕಾಮಾ ದಕ್ಷಿಣಂ ಪ್ರತಿಪದ್ಯಂತೇ   ಏಷ ಹ ವೈ ರಯಿರ್ಯಃ ಪಿತೃಯಾಣಃ  

ಸೂರ್ಯ-ಚಂದ್ರರಿಂದ ಕಾಲದ ಘಟಕಗಳು ನಿರ್ಮಾಣವಾದವು. ಸೂರ್ಯ ಮೇಷದಿಂದ ಮೀನದ ತನಕ ಸಂಕ್ರಮಣ ಮಾಡಿದಾಗ ಅದು ಒಂದು ವರ್ಷವಾಯಿತು. ಇದು ~೩೬೫.೨೫ ದಿನಗಳಿಂದ ಕೂಡಿದ ಸೌರವರ್ಷ. ಇಂದು ವಿಶ್ವದಲ್ಲಿ ಆಚರಣೆಯಲ್ಲಿರುವ ಸಂವತ್ಸರ ಈ ಸೌರಸಂವತ್ಸರ. ಇಲ್ಲಿ ೩೬೫ ದಿನಗಳಿಗೆ ಒಂದು ವರ್ಷ ಹಾಗೂ ನಾಲ್ಕು ವರ್ಷಕ್ಕೊಮ್ಮೆ ಒಂದು ಅಧಿಕ ದಿನ.
ಅದೇ ರೀತಿ ಚಾಂದ್ರಮಾನದ ಪ್ರಕಾರ  ಚೈತ್ರದಿಂದ ಪಾಲ್ಗುಣದ ತನಕ  ೩೫೫ ದಿನಗಳು. ಇಲ್ಲಿ ಕಡಿಮೆಯಾದ ಹತ್ತು ದಿನಗಳನ್ನು ಮೂರು ವರ್ಷಕ್ಕೊಮ್ಮೆ ಒಂದು ಅಧಿಕ ಮಾಸವನ್ನಾಗಿ ಮಾಡಿ ಹೊಂದಾಣಿಕೆ ಮಾಡುತ್ತಾರೆ. ಒಟ್ಟಿನಲ್ಲಿ ಇಡೀ ವರ್ಷದ ಪರಿಗಣನೆಗೆ ನಮಗೆ ಮುಖ್ಯವಾದ ಶಕ್ತಿಗಳು ಸೂರ್ಯ ಮತ್ತು ಚಂದ್ರ. ಎಲ್ಲವೂ ಸೂರ್ಯ ಚಂದ್ರರನ್ನು ಆಧರಿಸಿಕೊಂಡಿದೆ. ಆದ್ದರಿಂದ ಸೂರ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಕಾಲಪುರುಷನಾಗಿ ಸಂವತ್ಸರದಲ್ಲಿ ಸನ್ನಿಹಿತನಾದ. ಒಂದು ಸಂವತ್ಸರದಲ್ಲಿ ಎರಡು ಅಯನಗಳು. ಉತ್ತರಾಯ  ಮತ್ತು ದಕ್ಷಿಣಾಯಣ.  ಸೂರ್ಯನಲ್ಲಿ ಸನ್ನಿಹಿತರಾಗಿರುವ ಪ್ರಾಣದೇವರು ಉತ್ತರಾಯಣದಲ್ಲಿ ಸನ್ನಿಹಿತರಾದರೆ, ಚಂದ್ರನಲ್ಲಿ ಸನ್ನಿಹಿತಳಾಗಿರುವ ಭಾರತಿ ದಕ್ಷಿಣಾಯಣದಲ್ಲಿ ಸನ್ನಿಹಿತಳಾಗಿದ್ದಾಳೆ.
ಮೇಲೆ ಹೇಳಿದ ಎರಡು ಅಯನಗಳಲ್ಲಿ ದಕ್ಷಿಣಾಯಣದಲ್ಲಿ ಇಷ್ಟಾ-ಪೂರ್ತಾದ ಮೂಲಕ, ಐಹಿಕ ಫಲಕಾಮನೆಯಿಂದ  ಕರ್ಮಾನುಷ್ಠಾನ ಮಾಡಿದವನು ಚಂದ್ರಲೋಕವನ್ನು ಪಡೆಯುತ್ತಾನೆ. ಇದು ಮೋಕ್ಷ ಸಾಧನವಲ್ಲ. ಏಕೆಂದರೆ ಚಂದ್ರಲೋಕ ದೇವತೆಗಳ ಲೋಕ. ಅಲ್ಲಿ ನಾವು ನಮ್ಮ ಪುಣ್ಯಫಲ ಮುಗಿದ ಮೇಲೆ ಮರಳಿ ಈ ಸಂಸಾರಕ್ಕೆ ಹಿಂತಿರುಗಬೇಕಾಗುತ್ತದೆ. ಇದು ತಾಯಿ ಭಾರತಿಯ ಸೃಷ್ಟಿ ವಿಸ್ತಾರದ ಪ್ರಚೋದನೆ. ಇಲ್ಲಿ ಹೇಳಿರುವ ಚಂದ್ರಲೋಕ ಎಂದರೆ ಚಂದ್ರ ಗ್ರಹವಲ್ಲ. ಇದು ದೇವತೆಗಳಿರುವ ಸೂಕ್ಷ್ಮಲೋಕ.
ಇಲ್ಲಿ ಹೇಳಲಾದ 'ಇಷ್ಟಾ-ಪೂರ್ತ' ಅನ್ನುವ ಪದಗಳಿಗೆ ವಿಶಿಷ್ಠ ಅರ್ಥವಿದೆ. ಇಷ್ಟಾ ಎಂದರೆ ನಮ್ಮ ವೈಯಕ್ತಿಕ ಅಭಿವೃದ್ಧಿಗೆ ಕಾರಣವಾದ ಪುಣ್ಯಕರ್ಮ. [ಜಪ, ಅನುಷ್ಠಾನ, ಯಜ್ಞ, ವ್ರತ, ಇತ್ಯಾದಿ ನಮಗೆ ಇಷ್ಟವಾಗಿ, ನಾವು ಮಾಡುವ ವೈಯಕ್ತಿಕ ಸಾಧನೆ] ಪೂರ್ತಾ ಎಂದರೆ: ಸಮಾಜದ ಪೂರ್ಣತೆಗೆ ಉಪಯೋಗಬೀಳುವ ಕರ್ಮ. [ಆಸ್ಪತ್ರೆ, ದೇವಸ್ಥಾನ, ಶಾಲೆ, ಇತ್ಯಾದಿಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಿಸುವುದು, ಸಾರ್ವಜನಿಕರಿಗಾಗಿ ಕೆರೆ ಬಾವಿ ತೊಡಿಸುವುದು ಇತ್ಯಾದಿ].  ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರವೃತ್ತಿಮಾರ್ಗದಲ್ಲಿ ಆಸಕ್ತಿ ಉಳ್ಳವರು ದಕ್ಷಿಣಾಯಣದಲ್ಲಿ ಕರ್ಮ ಮಾಡಿ ಚಂದ್ರಲೋಕವನ್ನು ಪಡೆಯುತ್ತಾರೆ. ಈ ಮಾರ್ಗವನ್ನು ಪಿತೃಗಳ ದಾರಿ ಎನ್ನುತ್ತಾರೆ.

ಅಥೋತ್ತರೇಣ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ವಿದ್ಯಯಾಽಽತ್ಮಾನಮನ್ವಿಷ್ಯಾದಿತ್ಯಮಭಿಜಯಂತೇ     ಏತದ್ವೈ  ಪ್ರಾಣಾನಾಮಾಯತನಮೇತದ-ಮೃತಮಭಯಮೇತತ್ಪರಾಯಣಮೇತಸ್ಮಾನ್ನ ಪುನರಾವರ್ತಂತ ಇತ್ಯೇಷ ನಿರೋಧಸ್ತದೇಷ ಶ್ಲೋಕಃ   ೧೦

ಉತ್ತರಾಯಣದಲ್ಲಿ ತಪಸ್ಸು ಮಾಡುವವರು  ಬ್ರಹ್ಮಚರ್ಯಪಾಲನೆ ಮಾಡುತ್ತಾ, ಸದಾ ಸತ್ಯದ ಬಗೆಗೆ ಚಿಂತನೆ ಮಾಡುತ್ತಾರೆ.  ಇಂದ್ರಿಯ ನಿಗ್ರಹ, ನಿರಂತರ ವೇದಾಧ್ಯಯನ ಮಾಡುತ್ತಾ, ಶ್ರದ್ಧೆಯಿಂದ, ಆಸ್ತಿಕ್ಯಪ್ರಜ್ಞೆಯಿಂದ, ಯಥಾರ್ಥ ಜ್ಞಾನ ಪಡೆದು, ನಿಜವಾದ ಅರಿವಿನಿಂದ, ಆತ್ಮನನ್ನು ತಿಳಿದು, ಪರಮಾತ್ಮನನ್ನು ಕಾಣುತ್ತಾರೆ. ನಾವು ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಆಗ ನಮ್ಮ ಅಂತರ್ಯಾಮಿಯಾದ ಭಗವಂತ ತಿಳಿಯುತ್ತಾನೆ. ಇದು ಎಷ್ಟೋ ಜನ್ಮಗಳ ಸಾಧನೆಯಿಂದ ಸಾಧ್ಯವಾಗುವ ಕ್ರಿಯೆ. ಒಮ್ಮೆ ನಮ್ಮ ಆತ್ಮದ ಅಂತರಾತ್ಮನಾದ ಭಗವಂತನನ್ನು ತಿಳಿದರೆ, ಅದರಿಂದ ಆದಿತ್ಯಲೋಕ ಪ್ರಾಪ್ತಿಯಾಗುತ್ತದೆ. ಪ್ರಾಣದೇವರು ನಮ್ಮನ್ನು ಆದಿತ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆದಿತ್ಯಲೋಕದಲ್ಲಿ ಆದಿತ್ಯನಲ್ಲಿರುವ ಭಗವಂತನ ಮೂಲಕ ಮತ್ತೆ ಮರಳಿ ಬಾರದ ನಿತ್ಯಲೋಕ ಪ್ರಾಪ್ತಿಯಾಗುತ್ತದೆ. ಹೀಗಾಗಿ ಉತ್ತರಾಯಣದ ಸಾಧನೆ ಇಲ್ಲಿಂದ ಬಿಡುಗಡೆಯ ಸಾಧನೆ.
 ಒಟ್ಟಿನಲ್ಲಿ ಹೇಳಬೇಕೆಂದರೆ ದಕ್ಷಿಣಾಯಣದ ಸಾಧನೆ ಸಂಸಾರದ ಚಕ್ರಭ್ರಮಣವಾದರೆ, ಉತ್ತರಾಯಣದ ಸಾಧನೆ ಮೋಕ್ಷಪ್ರದ ಸಾಧನೆ. ಇದನ್ನೇ ದಕ್ಷಿಣ ಮತ್ತು ಉತ್ತರ ಧ್ರುವಗಳು ಸಂಕೇತಿಸುತ್ತವೆ. ಉತ್ತರದಿಂದ ಪೂರ್ವದ ತನಕದ ಸೆಳೆತ ಊರ್ಧ್ವಮುಖವಾದರೆ, ದಕ್ಷಿಣದಿಂದ ಪಶ್ಚಿಮದ ಸೆಳೆತ ಚಕ್ರಭ್ರಮಣ. ಇದಕ್ಕಾಗಿ ಪ್ರಾಚೀನರು ಯಾವುದೇ ಅನುಷ್ಠಾನ, ಪೂಜೆ ಮಾಡುವುದಿದ್ದರೆ, ಮಂತ್ರಜಪ ಮಾಡುವುದಿದ್ದರೆ,  ಉತ್ತರ, ಈಶಾನ್ಯ ಅಥವಾ ಪೂರ್ವಕ್ಕೆ ಮುಖ ಮಾಡಿ ಮಾಡುತ್ತಿದ್ದರು.  ದಕ್ಷಿಣಕ್ಕೆ ಮುಖ ಮಾಡಿ ಪೂಜೆ ಅನುಷ್ಠಾನ ಮಾಡಬಾರದು. ಮಲಗುವಾಗ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎನ್ನುವುದು ಪ್ರಾಚೀನರು ನಮಗೆ ಕೊಟ್ಟ ವಿಜ್ಞಾನ. ಮಲಗುವಾಗ ತಲೆ ಉತ್ತರಕ್ಕೆ ಇದ್ದರೆ ಏಳುವಾಗ ನಾವು ದಕ್ಷಿಣ ಮುಖ ಮಾಡಿ ಎಳುತ್ತೇವೆ. ಹಾಗಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದೂ ನಿಷಿದ್ಧ.   
ಎಲ್ಲಾ ಜೀವರಿಗೂ ಕೊನೇಯ ಆಶ್ರಯ ಆದಿತ್ಯ ಅಂತರ್ಗತ ಭಗವಂತ. ಆತ ಸಮಸ್ತ ಜೀವಜಾತಗಳಿಗೆ ಕೊನೇಯ ನೆಲೆಮನೆ. ಆತನನ್ನು ಸೇರಿದರೆ ಸಾವಿಲ್ಲ, ಭಯವಿಲ್ಲ. ಉತ್ತರಾಯಣದಲ್ಲಿ ಸಾಧನೆ ಮಾಡಿ ಆದಿತ್ಯಲೋಕ ಸೇರಿದವರು ಎಂದೂ ಮರಳಿ ಹುಟ್ಟುವುದಿಲ್ಲ. ಅವರು ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ. ಇದಕ್ಕೆ ಸಂವಾದಿಯಾಗಿ ವೇದದ ಒಂದು ಮಂತ್ರವನ್ನು ಪಿಪ್ಪಲಾದರು ಮುಂದೆ ವಿವರಿಸುತ್ತಾರೆ:

Sunday, August 26, 2012

Prashnopanishad in Kannada-Prashna-I (8)


                                ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ ಜ್ಯೋತಿರೇಕಂ ತಪಂತಮ್
                                ಸಹಸ್ರರಶ್ಮಿಃ ಶತಧಾ ವರ್ತಮಾನಃ ಪ್ರಾಣಃ ಪ್ರಜಾನಾಮುದಯತ್ಯೇಷ ಸೂರ್ಯಃ  

ಉದಯತಿ ಏಷ ಸೂರ್ಯಃ ಎನ್ನುವುದರ ಅರ್ಥ ನಮಗೆಲ್ಲರಿಗೂ ತಿಳಿದಿದೆ.  ಆದರೆ ಇಲ್ಲಿ “ಪ್ರಾಣಃ ಪ್ರಜಾನಾಮ್ ಉದಯತಿ ಏಷ ಸೂರ್ಯಃ” ಎಂದಿದೆ. ಅಂದರೆ ಸೂರ್ಯನ ಮೂಲಕ ಸೌರಶಕ್ತಿ ಹರಿದುಬರುವುದು ಆತನ ಅಂತರ್ಯಾಮಿಯಾದ ಪ್ರಾಣನಿಂದ. ಈ ಪ್ರಾಣನಿಗೆ ಚೈತನ್ಯ ಕೊಡುವವನು ಆತನ ಅಂತರ್ಯಾಮಿ ಭಗವಂತ. ಆದ್ದರಿಂದ ಸೂರ್ಯೋದಯ ಎಂದರೆ ಸೂರ್ಯ, ಆತನ ಒಳಗೆ ಪ್ರಾಣ, ಪ್ರಾಣನ ಒಳಗೆ ನಾರಾಯಣ. ಇದೇ  ಸಮಸ್ತ ಜೀವಜಾತದ ಪ್ರಾಣಶಕ್ತಿ, ಇಡೀ ವಿಶ್ವವನ್ನು ಬದುಕಿಸುವ ಶಕ್ತಿ. ಹೀಗಾಗಿ ಮುಂಜಾನೆ ಎದ್ದು ಸೂರ್ಯನನ್ನು ಕಾಣುವುದು ಎಂದರೆ ನಮ್ಮ ಪ್ರಾಣಶಕ್ತಿ ಭಗವಂತನನ್ನು ಕಾಣುವುದು. ಆದ್ದರಿಂದ ಸೂರ್ಯನನ್ನು ಸೂರ್ಯನಾರಾಯಣ ಎಂದೂ ಕರೆಯುತ್ತಾರೆ. ಗಾಯತ್ತ್ರಿ ಜಪ ಮಾಡುವವರು ಪ್ರಾರ್ಥನೆ ಮಾಡುವುದು ಗಾಯತ್ತ್ರಿ ಪ್ರತಿಪಾಧ್ಯ ಸೂರ್ಯನಾರಾಯಣನನ್ನು. “ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್”  ಎಂದರೆ: “ಸೂರ್ಯನಲ್ಲಿರುವ ಜ್ಞಾನಾನಂದಮಯವಾದ ಬೆಳಕು ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಕೊಟ್ಟು, ನಾವು ಪ್ರಾಮಾಣಿಕವಾಗಿ ಬದುಕುವಂತೆ  ನಮ್ಮನ್ನು ಪಾಲಿಸಲಿ” ಎನ್ನುವ ಪ್ರಾರ್ಥನೆ”.
ಸೂರ್ಯನಲ್ಲಿರುವ ಭಗವದ್ ಶಕ್ತಿಯನ್ನು “ವಿಶ್ವರೂಪಂ ಹರಿಣಂ ಜಾತವೇದಸಮ್” ಎಂದಿದ್ದಾರೆ. ಅಂದರೆ ಇದು ಇಡೀ ವಿಶ್ವಕ್ಕೆ ರೂಪಕೊಟ್ಟ ಶಕ್ತಿ. ಸೂರ್ಯನಿಗಿಂತ ಮೊದಲು ಏನೂ ಇರಲಿಲ್ಲ. ಸೂರ್ಯನೊಳಗೆ ತುಂಬಿದ ಭಗವಂತ ಈ ಪ್ರಪಂಚಕ್ಕೆ ಆಕಾರ ಕೊಟ್ಟು ಬಿಂಬರೂಪನಾಗಿ ನಿಂತ. 
ಇಡೀ ವಿಶ್ವಕ್ಕೆ ಕೇಂದ್ರ ಸ್ಥಾನೀಯನಾಗಿ ಸೂರ್ಯನಿದ್ದಾನೆ. ಸೂರ್ಯನಲ್ಲಿ ಪ್ರಾಣ-ನಾರಾಯಣರಿದ್ದಾರೆ. ಈ ಶಕ್ತಿ ಕೇಂದ್ರವನ್ನು ಇಲ್ಲಿ ‘ಹರಿಣಮ್’ ಎಂದು ಕರೆದಿದ್ದಾರೆ. ಅಂದರೆ ಕೊಳೆಯ, ದೋಷದ ಮತ್ತು ಕತ್ತಲಿನ ಸ್ಪರ್ಶವೇ ಇಲ್ಲದ, ಸರ್ವರಿಗೂ ಆಶ್ರಯವಾದ, ಸರ್ವೋತ್ತಮ  ಬೆಳಕು ಎಂದರ್ಥ. ಇಂತಹ ಬೆಳಕು ಇನ್ನೊಂದಿಲ್ಲ. ಇದು ಎಲ್ಲಾ ಬೆಳಕುಗಳ ಮೂಲ ಬೆಳಕು. ಹೀಗೆ ವಿಶ್ವರೂಪನಾಗಿ ಸೂರ್ಯಮಂಡಲದಲ್ಲಿ ಶಕ್ತಿಯಾಗಿ ನಿಂತಿರುವ ಭಗವಂತ  “ಜಾತವೇದಸಮ್”. ಅಂದರೆ ಎಲ್ಲವನ್ನೂ ತಿಳಿದ ಸರ್ವಜ್ಞ.
ಎಲ್ಲಾ ಬೆಳಕುಗಳ ಮೂಲ ಬೆಳಕಾದ ಭಗವಂತನಿಗೆ ಸಾವಿರಾರು ಕಿರಣಗಳು. ಭಗವಂತನ ಮುಖೇನ ಪ್ರಾಣ-ಸೂರ್ಯರಿಗೂ ಸಾವಿರಾರು ಕಿರಣಗಳು. ಇದಕ್ಕಾಗಿ ಸೂರ್ಯ-ಪ್ರಾಣರನ್ನೂ ‘ಸಹಸ್ರರಶ್ಮಿಃ’ ಎಂದು ಕರೆಯುತ್ತಾರೆ. ಇಲ್ಲಿ “ಶತಧಾ ವರ್ತಮಾನಃ” ಎಂದಿದೆ. ಇದೊಂದು ಅಪೂರ್ವ ವಿಷಯ. ಪ್ರಾಚೀನರು ಸೂರ್ಯ ಕಿರಣವನ್ನು ನೂರು  ವಿಭಾಗವನ್ನಾಗಿ ಮಾಡಿದ್ದರು. ಆದರೆ ಆ ವಿಭಾಗದ ಬಗ್ಗೆ ವಿವರ ಎಲ್ಲಿಯೂ ದೊರೆತಿಲ್ಲ. ಭಗವಂತನಿಗೆ  ನೂರಾರು ರೂಪಗಳು. ಮೂಲರೂಪ, ಭೂಮಿಯಲ್ಲಿ ಅವತರಿಸಿದ ರೂಪ, ಪ್ರತಿಯೊಬ್ಬರ ಅಂತರ್ಯಾಮಿಯಾಗಿ ಬಿಂಬರೂಪ, ಹೀಗೆ ನೂರಾರು ರೂಪಗಳಲ್ಲಿ ಭಗವಂತ ತುಂಬಿದ್ದಾನೆ.  ಅದೇ ರೀತಿ ಪ್ರಾಣದೇವರು ಎಲ್ಲರ ಪ್ರಾಣಶಕ್ತಿಯಾಗಿ ಅನೇಕ ರೂಪಗಳಿಂದ ತುಂಬಿದ್ದರೆ, ಸೂರ್ಯ ಬೇರೆಬೇರೆ ಕಾಲಗಳಲ್ಲಿ ಬೇರೆಬೇರೆ ರೂಪಗಳಿಂದ ಕಾಣಿಸಿಕೊಳ್ಳುತ್ತಾನೆ.
ಇಲ್ಲಿ ನಾವು ಗಮನಿಸಬೇಕಾದ ಒಂದು ವಿಚಾರವೇನೆಂದರೆ: ಪಿಪ್ಪಲಾದರು “ಇದನ್ನು ಋಗ್ವೇದದ ಋಷಿಗಳು ಹೇಳಿದ್ದಾರೆ, ಅವರು ಕಂಡ ಸತ್ಯವನ್ನು ನಾನು ಹೇಳುತ್ತಿದ್ದೇನೆ” ಎಂದಿದ್ದಾರೆ. ಅಧ್ಯಾತ್ಮದಲ್ಲಿ ಯಾವಾಗಲೂ ನನ್ನ ಅನಿಸಿಕೆ ಎಂದು ಹೇಳುವುದಾಗಲೀ, ನನಗೆ ಇದು ಸರಿ ಕಾಣಿಸುತ್ತದೆ ಎನ್ನುವುದು ಸರಿಯಲ್ಲ. ಏಕೆಂದರೆ ನಮ್ಮ ಅನಿಸಿಕೆಯೂ ಸತ್ಯವೂ ಒಂದೇ ಆಗಿರಬೇಕೆಂದೇನೂ ಇಲ್ಲಾ. ನಮಗೆ ಅಸತ್ಯವೂ ಇಷ್ಟವಾಗಬಹುದು. ಆದ್ದರಿಂದ ಅಧ್ಯಾತ್ಮ ಸಾಧನೆಯಲ್ಲಿ ನಾವು ನಿಜವಾದ ಜ್ಞಾನಿಗಳು ಏನನ್ನು ಕಂಡಿದ್ದಾರೆ, ಕಂಡು ಏನನ್ನು ದಾಖಲೆ ಮಾಡಿದ್ದಾರೆ, ಅದರ ಆಧಾರದಲ್ಲಿ ಸತ್ಯವನ್ನು ಕಾಣಲು ಪ್ರಯತ್ನಿಸಬೇಕು.  

Saturday, August 25, 2012

Prashnopanishad in Kannada-Prashna-I (3 to 7)


ಮೊದಲನೆಯ ಪ್ರಶ್ನೆ


ಅಥ ಕಬಂಧೀ ಕಾತ್ಯಾಯನ ಉಪೇತ್ಯ ಪಪ್ರಚ್ಛ ಭಗವನ್ ಕುತೋ  ಹ ವಾ ಇಮಾಃ ಪ್ರಜಾಃ ಪ್ರಜಾಯಂತ ಇತಿ

ಪ್ರಶ್ನೆಯನ್ನು ಹೊತ್ತುತಂದ ಆರು ಮಂದಿ ಋಷಿಗಳಲ್ಲಿ ಕೊನೆಯವನಾದ  ಕಬಂಧೀ ಕಾತ್ಯಾಯನ ಗುರುಗಳಿಗೆ ಗೌರವಪೂರ್ವಕ ನಮಿಸಿ, ತನ್ನ ಪ್ರಶ್ನೆಯನ್ನು ಅವರ ಮುಂದಿಡುತ್ತಾನೆ. ಆತ ಕೇಳುತ್ತಾನೆ “ ಭಗವನ್, ಈ ಸೃಷ್ಟಿ ಹೇಗೆ ನಿರ್ಮಾಣವಾಯಿತು? ಯಾರಿಂದ ಸೃಷ್ಟಿಯಾಯಿತು? ಏಕೆ ಸೃಷ್ಟಿಯಾಯಿತು?” ಎಂದು. ಇದು ಅತ್ಯಂತ ಮೂಲಭೂತ ಪ್ರಶ್ನೆ. ಈ ಜಗತ್ತು, ಸಮಸ್ತ ಜೀವಕೋಟಿ ಎಲ್ಲಿಂದ ಬಂದಿರುವುದು? ಪ್ರಳಯಕಾಲದಲ್ಲಿ ಎಲ್ಲವೂ ನಾಶವಾದಾಗ ಅದನ್ನು ಮರಳಿ ಸೃಷ್ಟಿ ಮಾಡುವವರು ಯಾರು? ಈ ಪ್ರಪಂಚದ ಮುಖ್ಯ ಮತ್ತು ಅವಾಂತರ ಕಾರಣ ಯಾರು? ಏತಕ್ಕಾಗಿ ಈ ಸೃಷ್ಟಿ ?  ಇದು ಇಂದು ಎಲ್ಲರನ್ನೂ ಕಾಡುವ ಪ್ರಶ್ನೆ. ವಿಜ್ಞಾನದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ. ಇಂತಹ ಅಪೂರ್ವ ಪ್ರಶ್ನೆಗೆ ಪಿಪ್ಪಲಾದರ ಉತ್ತರ ಮುಂದಿನ ಗದ್ಯದಿಂದ ಪ್ರಾರಂಭವಾಗುತ್ತದೆ.

ತಸ್ಮೈ ಸ ಹೋವಾಚ ಪ್ರಜಾಕಾಮೋ ವೈ ಪ್ರಜಾಪತಿಃ ಸ ತಪೋಽತಪ್ಯತ; ಸ ತಪಸ್ತಪ್ತ್ವಾ ಸ ಮಿಥುನಮುತ್ಪಾದಯತೇ,   ರಯಿಂ ಚ ಪ್ರಾಣಂ ಚೇತ್ಯೇತೌ ಮೇ ಬಹುಧಾ ಪ್ರಜಾಃ ಕರಿಷ್ಯತ ಇತಿ  

ಇಲ್ಲಿ “ತಸ್ಮೈ ಸಃ ಹ ಉವಾಚ” ಎನ್ನುವಲ್ಲಿ ಹ-ಕಾರ ಬಳಕೆಯಾಗಿದೆ. ಅಂದಿನ ಕಾಲದ ಯಾವ ವಿದ್ವಾಂಸರಿಗೂ ತಿಳಿಯದ ವಿಚಾರವನ್ನು, ಪಿಪ್ಪಲಾದರು ತಿಳಿದಿರುವುದು ಒಂದು ವಿಸ್ಮಯ ಮತ್ತು  ಅದನ್ನು ಅವರಿಂದ ನಾವು ತಿಳಿದುಕೊಳ್ಳುವುದು ಒಂದು ಆನಂದ. ಈ ವಿಸ್ಮಯಾನಂದದ ಸಮನ್ವಯವನ್ನು ಹ-ಕಾರ ವ್ಯಕ್ತಪಡಿಸುತ್ತದೆ. ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ ಸಮಸ್ತ ಪ್ರಪಂಚದ ರಕ್ಷಕ, ಪ್ರಜಾಪಾಲಕ, ಜಗತ್ತಿನ ಸ್ವಾಮಿ, ಭಗವಂತ, ಪ್ರತಿಯೊಂದು ಜೀವದ ವ್ಯಕ್ತಿತ್ವ ವಿಕಸನಕ್ಕಾಗಿ, ಜೀವ ಜ್ಞಾನ ಪಡೆದು ಮುಕ್ತಿ ಸೇರಲಿ ಎನ್ನುವ ಉದ್ದೇಶದಿಂದ ಸೃಷ್ಟಿ ಮಾಡಲು ಬಯಸಿದ” ಎಂದು. ಇಲ್ಲಿ ‘ವೈ’ ಎನ್ನುವ ಪದ ಬಳಕೆಯಾಗಿದೆ. ‘ಇದು ಸಮಸ್ತ ವೇದಜ್ಞರಿಗೆ, ಜ್ಞಾನಿಗಳಿಗೆ ತಿಳಿದ ವಿಷಯ. ಇದರಲ್ಲಿ ಗೊಂದಲವಿಲ್ಲ ಎನ್ನುವುದನ್ನು ‘ವೈ’ ಪ್ರತಿಬಿಂಬಿಸುತ್ತದೆ.   

ಆದಿತ್ಯೋ ಹ ವೈ ಪ್ರಾಣೋ, ರಯಿರೇವ ಚಂದ್ರಮಾ, ರಯಿರ್ವಾ ಏತತ್ ಸರ್ವಂ ಯನ್ಮೂರ್ತಂ ಚಾಮೂರ್ತಂ ಚ; ತಸ್ಮಾನ್ಮೂರ್ತಿರೇವ ರಯಿಃ  

ಜೀವಗಳ ಸೃಷ್ಟಿಗಾಗಿ ಭಗವಂತ ಮೊದಲು ಬ್ರಹ್ಮ-ವಾಯು(ಪ್ರಾಣಃ) ಮತ್ತು ಸರಸ್ವತಿ-ಭಾರತಿ(ರಯಿ)ಯರನ್ನು ಸೃಷ್ಟಿ ಮಾಡಿದ. ಪ್ರಾಣ-ಭಾರತಿಯರಲ್ಲಿ ಭಗವಂತ ಅಂತರ್ಯಾಮಿಯಾಗಿ ಕುಳಿತು, ಸೃಷ್ಟಿ ವಿಸ್ತಾರಕ್ಕೆ ಸೂರ್ಯ-ಚಂದ್ರರನ್ನು ಸೃಷ್ಟಿಮಾಡಿ, ಸೂರ್ಯ-ಚಂದ್ರರೊಳಗೆ ಕುಳಿತ. ಇದೇ ಕಾಲದ ಸೃಷ್ಟಿ. [ಇಲ್ಲಿ ಕಾಲದ ಸೃಷ್ಟಿ ಎಂದರೆ ಕಾಲದ ಘಟಕಗಳ ಸೃಷ್ಟಿ. ಕಾಲದ ವಿಭಾಜಕವಾಗಿ ಸೂರ್ಯ-ಚಂದ್ರರ ಸೃಷ್ಟಿ].  ಹೀಗೆ ಸೃಷ್ಟಿಯಾದ ಸೂರ್ಯನ ಒಳಗೆ ಪ್ರಾಣ, ಚಂದ್ರನ ಒಳಗೆ ಭಾರತಿ ನಿಂತು, ಹಗಲು ರಾತ್ರಿಗಳಲ್ಲಿ ಸೃಷ್ಟಿ ವಿಸ್ತಾರವಾಯಿತು. ಪ್ರಾಣ-ಭಾರತಿಯರ  ಒಳಗೆ ಲಕ್ಷ್ಮೀ-ನಾರಾಯಣರು ನಿಂತು, ಈ ಸೃಷ್ಟಿಗೆ ಬೇಕಾದ ಶಕ್ತಿಪಾತ ಮಾಡಿದರು.
ಪಂಚಭೂತಗಳಲ್ಲಿ ಎರಡು ವಿಧ. ಒಂದು ಮೂರ್ತ(ಆಕಾರ ಉಳ್ಳದ್ದು) ಮತ್ತು ಇನ್ನೊಂದು ಅಮೂರ್ತ(No Form). ಮಣ್ಣು-ನೀರು-ಬೆಂಕಿ ಮೂರ್ತ ಹಾಗೂ ಗಾಳಿ ಮತ್ತು ಆಕಾಶ ಅಮೂರ್ತ. ಮಣ್ಣು-ನೀರು-ಬೆಂಕಿಯಲ್ಲಿ ಭಾರತಿ ತುಂಬಿ, ಗಾಳಿ-ಆಕಾಶದಲ್ಲಿ ಪ್ರಾಣದೇವರು ತುಂಬಿ,  ಪಂಚಭೂತಗಳಿಂದ ಈ ಪ್ರಪಂಚ ಸೃಷ್ಟಿ ಮಾಡಿದರು.
ಓದುಗರು ಇಲ್ಲಿ ಒಂದು ಅಂಶವನ್ನು ತಿಳಿದಿರಬೇಕು. ನಮಗೆ ತಿಳಿದಂತೆ ಪ್ರಳಯ ಕಾಲದಲ್ಲಿ ಎಲ್ಲವೂ ಭಗವಂತನ ಉದರದಲ್ಲಿದ್ದು, ಸೃಷ್ಟಿಕಾಲದಲ್ಲಿ ಭಗವಂತನ ನಾಭಿಯಿಂದ ಬ್ರಹ್ಮಾಂಡ ಸೃಷ್ಟಿಯಾಯಿತು. ಇದು ಮೊತ್ತಮೊದಲ ಸೂಕ್ಷ್ಮಸೃಷ್ಟಿ. ಆನಂತರ ಇನ್ನೂ ಅನೇಕ ಹಂತಗಳಿಂದ ಸ್ಥೂಲ ಸೃಷ್ಟಿಯ ನಿರ್ಮಾಣವಾಯಿತು. ಚತುರ್ಮುಖ ಬ್ರಹ್ಮನನ್ನು ನೋಡಿದರೆ, ಸೂಕ್ಷ್ಮದಿಂದ ಸ್ಥೂಲದ ತನಕ ಆತನಿಗೆ ಮೂರು ಹುಟ್ಟು. ಈ ರೀತಿ ಅನೇಕ ಹಂತಗಳಲ್ಲಿ ಸೃಷ್ಟಿ ನಿರ್ಮಾಣ ಕಾರ್ಯವನ್ನು ಭಗವಂತ ಮಾಡಿರುವುದರಿಂದ, ಅಧ್ಯಾತ್ಮ ಸಾಹಿತ್ಯದಲ್ಲಿ ಒಂದೊಂದು ಕಡೆ ಒಂದೊಂದು ವಿವರಣೆಯನ್ನು ಕಾಣುತ್ತೇವೆ. ಉದಾಹರಣೆಗೆ ಒಂದೆಡೆ ಚತುರ್ಮುಖ ಭಗವಂತನ ನಾಭಿಯಿಂದ ಜನಿಸಿದ ಎಂದರೆ, ಇನ್ನೊಂದೆಡೆ ಚತುರ್ಮುಖನನ್ನು ನಾನು ನನ್ನ ನೆತ್ತಿಯಿಂದ ಹೆತ್ತೆ ಎನ್ನುತ್ತಾಳೆ ಲಕ್ಷ್ಮಿ. ಒಂದು ಕಡೆ  ಚತುರ್ಮುಖನಿಂದ ಈ  ಸೃಷ್ಟಿ ವಿಸ್ತಾರವಾಯಿತು ಎಂದರೆ, ಇನ್ನೊಂದೆಡೆ ಶಿವನಿಂದ ಈ ಸೃಷ್ಟಿ ವಿಸ್ತಾರವಾಯಿತು ಎಂದಿದೆ. ಇದು ನಮಗೆ ಅರ್ಥವಾಗಬೇಕಾದರೆ ನಾವು ಭಗವಂತನ ಸೃಷ್ಟಿ ಪ್ರಕ್ರಿಯೆಯ ವಿವಿಧ ಹಂತಗಳನ್ನು (ಸೂಕ್ಷ್ಮದಿಂದ-ಸ್ಥೂಲದ ತನಕ) ವಿವರವಾಗಿ ತಿಳಿಯಬೇಕು. ಇಲ್ಲದಿದ್ದರೆ ಎಲ್ಲವೂ ಗೊಂದಲ. ಉದಾಹರಣೆಗೆ ಒಂದು ಮಗು ಹುಟ್ಟಿತು ಎಂದರೆ –ಮೇಲ್ನೋಟಕ್ಕೆ ಆ ಮಗುವಿನ ಸೃಷ್ಟಿಕರ್ತೃ ಮಗುವಿನ ತಂದೆ-ತಾಯಿ. ಆದರೆ ಆ ಸೃಷ್ಟಿಯ ಹಿಂದೆ ಶಿವ-ಪಾರ್ವತಿಯರಿದ್ದಾರೆ, ಪ್ರಾಣ-ಭಾರತಿಯರಿದ್ದಾರೆ, ಬ್ರಹ್ಮ-ಸರಸ್ವತಿಯರಿದ್ದಾರೆ, ಎಲ್ಲಕ್ಕೂ ಮೂಲದಲ್ಲಿ ಲಕ್ಷ್ಮೀ-ನಾರಾಯಣರಿದ್ದಾರೆ. ಬನ್ನಿ, ಈ ಹಿನ್ನೆಲೆಯೊಂದಿಗೆ ಪಿಪ್ಪಲಾದರ ಉಪದೇಶವನ್ನಾಲಿಸೋಣ.

ಅಥಾದಿತ್ಯ ಉದಯನ್ ಯತ್ ಪ್ರಾಚೀಂ ದಿಶಂ ಪ್ರವಿಶತಿ, ತೇನ ಪ್ರಾಚ್ಯಾನ್ ಪ್ರಾಣಾನ್ ರಶ್ಮಿಷು ಸಂನಿಧತ್ತೇ   ಯದ್ದಕ್ಷಿಣಾಂ ಯತ್ ಪ್ರತೀಚೀಂ ಯದುದೀಚೀಂ ಯದಧೋ ಯದೂರ್ಧ್ವಂ ಯದಂತರಾ ದಿಶೋ ಯತ್ಸರ್ವಂ ಪ್ರಕಾಶಯತಿ,ತೇನ ಸರ್ವಾನ್ ಪ್ರಾಣಾನ್ ರಶ್ಮಿಷು ಸಂನಿಧತ್ತೇ  

ಸ ಏಷ ವೈಶ್ವಾನರೋ ವಿಶ್ವರೂಪಃ ಪ್ರಾಣೋಽಗ್ನಿರುದಯತೇ ತದೇತದೃಚಾಭ್ಯುಕ್ತಮ್  

ಸೃಷ್ಟಿ ನಿರ್ಮಾಣ ಕಾರ್ಯದಲ್ಲಿ ದಿಕ್ಕುಗಳ ದೇವತೆಗಳ ಪಾತ್ರವನ್ನು ಇಲ್ಲಿ ವಿವರಿಸಲಾಗಿದೆ. ನಮಗೆ ತಿಳಿದಂತೆ ಇಂದ್ರ ಪೂರ್ವ ದಿಕ್ಕಿನ ದೇವತೆ, ಅಗ್ನಿ ಆಗ್ನೇಯ ದಿಕ್ಕಿನ ದೇವತೆ, ಯಮ ದಕ್ಷಿಣ ದಿಕ್ಕಿನ ದೇವತೆ, ನಿರ್ಋತಿ ನೈಋತ್ಯ ದಿಕ್ಕಿನ ದೇವತೆ, ಪಶ್ಚಿಮಕ್ಕೆ ವರುಣ, ವಾಯುವ್ಯಕ್ಕೆ ಪ್ರವಹವಾಯು, ಉತ್ತರಕ್ಕೆ ಚಂದ್ರ, ಈಶಾನ್ಯಕ್ಕೆ ಈಶಾನ(ಶಿವ) ದೇವತೆ. ಅಧೋಲೋಕ(ಕೆಳಗೆ)ಕ್ಕೆ  ಶೇಷ ಮತ್ತು ಮಿತ್ರ ದೇವತೆಗಳಾದರೆ, ಊರ್ಧ್ವ(ಮೇಲೆ)ದಿಕ್ಕಿಗೆ  ಗರುಡ-ಕಾಮರು ದೇವತೆಗಳು.
ಸೂರ್ಯಮಂಡಲದಿಂದ ದಶದಿಕ್ಕುಗಳಿಗೂ ಸೂರ್ಯ ಪ್ರಕಾಶ ಹರಡಿ ಆ ದಿಕ್ಕಿನ ದೇವತಗಳ ಮೇಲೆ ಭಗವಂತನ ಶಕ್ತಿಪಾತವಾಗುತ್ತದೆ. ಇಲ್ಲಿ ಹೇಳಿರುವ ಪ್ರತಿಯೊಬ್ಬ ದೇವತೆಗಳೂ ಪತ್ನಿ ಸಮೇತರಾಗಿ ತಮ್ಮತಮ್ಮ ದಿಕ್ಕುಗಳಲ್ಲಿ ನಿಂತು, ಭಗವಂತನಿಂದ ಶಕ್ತಿಪಡೆದು, ಭಗವಂತನ ಇಚ್ಛೆಗನುಗುಣವಾಗಿ ಸೃಷ್ಟಿ ವಿಸ್ತಾರದಲ್ಲಿ ಪಾಲ್ಗೊಳ್ಳುತ್ತಾರೆ. ಇಂದ್ರ-ಶಚಿ, ಅಗ್ನಿ-ಸ್ವಾಹ, ಯಮ-ಶ್ಯಾಮಲ, ನಿರ್ಋತಿ-ಧೀರ್ಘಾ, ವರುಣ-ಗಂಗಾ, ಪ್ರವಹವಾಯು-ಪ್ರಾವಹೀ, ಚಂದ್ರ-ರೋಹಿಣಿ, ಈಶಾನ-ಪಾರ್ವತಿ, ಶೇಷ-ವಾರುಣಿ, ಮಿತ್ರ-ರೇವತಿ, ಗರುಡ-ಸುಪರ್ಣಿ, ಮನ್ಮಥ-ರತಿ ಹೀಗೆ ಇಪ್ಪತ್ನಾಲ್ಕು ದೇವತೆಗಳಲ್ಲಿ ಭಗವಂತನ ಶಕ್ತಿಪಾತವಾಗಿ ಅವರ ಮುಖೇನ ಪ್ರಪಂಚಕ್ಕೆ ಶಕ್ತಿ ಹರಿದುಬಂದು, ಪ್ರಪಂಚ ನಿರ್ಮಾಣವಾಯಿತು. ಸರ್ವಚೇಷ್ಟಕನಾದ ಭಗವಂತ ವಿಶ್ವರೂಪನಾಗಿ ಬ್ರಹ್ಮಾಂಡದಲ್ಲೂ, ವೈಶ್ವಾನರನಾಗಿ ಎಲ್ಲಾ ಪಿಂಡಾಂಡದಲ್ಲೂ, ಪ್ರಾಣಾಂತರ್ಗತನಾಗಿ ತುಂಬಿದ. ಇದನ್ನು ಋಗ್ವೇದದಲ್ಲೇ ಹೇಳಿದ್ದಾರೆ[ “ತದೇತದೃಚಾಭ್ಯುಕ್ತಮ್”].

Monday, August 20, 2012

Prashnopanishad in Kannada-Prashna-I (1 to 2)


ಹಿನ್ನೆಲೆ


ಸುಕೇಶಾ ಚ ಭಾರದ್ವಾಜಃ, ಶೈಬ್ಯಶ್ಚ ಸತ್ಯಕಾಮಃ, ಸೌರ್ಯಾಯಣೀ ಚ ಗಾರ್ಗ್ಯಃ, ಕೌಸಲ್ಯಶ್ಚಾಶ್ವಲಾಯನೋ, ಭಾರ್ಗವೋ ವೈದರ್ಭಿಃ, ಕಬಂಧೀ ಕಾತ್ಯಾಯನಸ್ತೇ ಹೈತೇ ಬ್ರಹ್ಮಪರಾ ಬ್ರಹ್ಮನಿಷ್ಠಾಃ ಪರಂ ಬ್ರಹ್ಮಾನ್ವೇಷಮಾಣಾ ಏಷ ಹ ವೈ ತತ್ಸರ್ವಂ ವಕ್ಷ್ಯತೀತಿ ತೇ ಹ ಸಮಿತ್ಪಾಣಯೋ ಭಗವಂತಂ ಪಿಪ್ಪಲಾದಮುಪಸನ್ನಾಃ  

ದೇಶದ ಬೇರೆಬೇರೆ ಕಡೆಯಿಂದ ಮಹಾ ವಿದ್ವಾಂಸರಾದ ಆರು ಮಂದಿ ಋಷಿಗಳು ಜ್ಞಾನ ಪಿಪಾಸೆಯಿಂದ, ತಮ್ಮ ಪ್ರಶ್ನೆಗೆ ಉತ್ತರ ಕೊಡುವ ಯೋಗ್ಯ ಗುರುವನ್ನು ಅರಸುತ್ತಾ, ಎಲ್ಲರ ಮಾರ್ಗದರ್ಶನದಂತೆ, ಮಹಾನ್ ಜ್ಞಾನಿ, ಭಗವದ್ ದೃಷ್ಟಾರರಾದ ‘ಪಿಪ್ಪಲಾದ’ ಎನ್ನುವ ಶ್ರೇಷ್ಠ ಮಹರ್ಷಿಯ ಬಳಿ ಬಂದು ಸೇರಿದರು. ಹೀಗೆ ಪಿಪ್ಪಲಾದರಲ್ಲಿಗೆ ತಮ್ಮ ಪ್ರಶ್ನೆಯನ್ನು ಹೊತ್ತು ತಂದ ಆ  ಆರು ಮಂದಿ ಋಷಿಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಈ ಆರು ಋಷಿಗಳನ್ನು ಅವರ ಯೋಗ್ಯತೆಯ ಕ್ರಮಾಂಕದಲ್ಲಿ ಇಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ.
ಇವರಲ್ಲಿ ಮೊದಲನೆಯ ಋಷಿಯ ಹೆಸರು ಸುಕೇಶ. ಈತ ಭಾರದ್ವಾಜನ ಮಗ. ಸಾಮಾನ್ಯವಾಗಿ ನಮ್ಮ ಪೌರಾಣಿಕ ಇತಿಹಾಸದಲ್ಲಿ ಭಾರದ್ವಾಜ ಎನ್ನುವ ಹೆಸರನ್ನು ಕ್ಷತ್ರಿಯರಿಗೆ ಬಳಸಿರುವುದು ಬಹಳ ವಿರಳ. ಹಾಗಾಗಿ ಈತ ಒಬ್ಬ ಬ್ರಹ್ಮರ್ಷಿ ಇರಬಹುದು ಎಂದು ನಾವು ತಿಳಿಯಬಹುದು. ಸು-ಕೇಶ ಎಂದರೆ ಸುಂದರವಾದ ವ್ಯಕ್ತಿತ್ವ ಉಳ್ಳವನು ಎನ್ನುವುದು ಮೇಲ್ನೋಟದ ಅರ್ಥ. ಇನ್ನೊಂದು ಮುಖದಲ್ಲಿ ಈ ಹೆಸರಿನ ಅರ್ಥವನ್ನು ನೋಡಿದರೆ: ದುಃಖ ರಹಿತವಾದ ಸುಖಕ್ಕೆ ಅರ್ಹನಾದವ ಅಥವಾ ಮೋಕ್ಷಯೋಗ್ಯ ಎನ್ನುವ ಅರ್ಥ ಕಾಣುತ್ತದೆ. ಆರು ಜನ ಋಷಿಗಳಲ್ಲಿ ಬಹಳ ಶ್ರೇಷ್ಠ ಪ್ರಶ್ನೆ ಕೇಳಿದವ ಈತ. ಆದ್ದರಿಂದ ಈತನ ಹೆಸರನ್ನು ಇಲ್ಲಿ ಮೊದಲು ಹೇಳಲಾಗಿದೆ.
ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಅಂಶವೆಂದರೆ:  ಮೊದಲ ನಾಲ್ಕು ಮಂದಿ ಋಷಿಗಳ ಕುರಿತು ಹೇಳುವಾಗ ‘ಚ-ಕಾರ’ ಉಪಯೋಗಿಸಿ ಹೇಳಿದ್ದಾರೆ[ಉದಾ:ಸುಕೇಶಾ ಚ].  ಸಂಸ್ಕೃತದಲ್ಲಿ ಚ-ಕಾರವನ್ನು ‘ಅಪೂರ್ವ, ದುರ್ಲಭ’ ಇತ್ಯಾದಿ ಅರ್ಥದಲ್ಲಿ ಬಳಸುತ್ತಾರೆ. ಇಲ್ಲಿ ಮೊದಲ ನಾಲ್ಕು ಮಂದಿ ಋಷಿಗಳು, ಬಹಳ ಅಪೂರ್ವವಾದ ಪ್ರಶ್ನೆಯನ್ನು ಹೊತ್ತು ತಂದ ಶ್ರೇಷ್ಟರು.  ಆದ್ದರಿಂದ ಅವರನ್ನು ಚ-ಕಾರದಿಂದ ಸಂಬೋಧಿಸಲಾಗಿದೆ.
ಎರಡನೇ ಋಷಿಯ ಹೆಸರು ಸತ್ಯಕಾಮಃ. ಈತ ಶಿಬಿ(ವಿ)ಯ ಮಗ. ಶಿಬಿ ಎನ್ನುವ ಹೆಸರು ಸಾಮಾನ್ಯವಾಗಿ ಬ್ರಾಹ್ಮಣರಿಗಿರುವುದಿಲ್ಲ. ಆದ್ದರಿಂದ ಈತ ಕ್ಷತ್ರಿಯ(ರಾಜರ್ಷಿ) ಇರಬಹುದು. ‘ಸತ್ಯಕಾಮಃ’ ಎನ್ನುವಲ್ಲಿ ‘ಸತ್ಯ’ ಎನ್ನುವುದು ಮೂಲಭೂತವಾಗಿ ದೇವರ ಹೆಸರು. ಆದ್ದರಿಂದ ಸತ್ಯಕಾಮಃ ಎಂದರೆ ದೇವರನ್ನು ಪ್ರೀತಿಸುವವ ಎಂದರ್ಥ.
ಗಾರ್ಗ್ಯ ಗೋತ್ರದವನಾದ ಮೂರನೇ ಋಷಿ, ಸೂರ್ಯ ಎನ್ನುವವನ ಮೊಮ್ಮಗ [ಸೌರ್ಯಾಯಣೀ ಎಂದರೆ ಸೌರ್ಯಾಯಣನ ಮಗನ ಮಗ]. ಈತ ಕೂಡಾ ರಾಜರ್ಷಿ ಇದ್ದರೂ ಇರಬಹುದು. ನಾಲ್ಕನೇ ಋಷಿ ಅಶ್ವಲಾಯ ಗೋತ್ರದ, ಕೋಸಲ ದೇಶದ ರಾಜನ ಮಗ.
ಐದನೆಯವ ವಿದರ್ಭ ದೇಶದ ರಾಜನ ಮಗ.  ಈತ ಭಾರ್ಗವ ಗೋತ್ರದವನು. ಆರನೆಯ ಋಷಿ ಕತ್ಯನ ಮಗನಾದ ಕಬಂಧೀ. ‘ಕಬಂಧೀ’ ಎಂದರೆ ಇಂದ್ರಿಯ ನಿಗ್ರಹ ಮಾಡಿದವ ಎಂದರ್ಥ.
ಇಲ್ಲಿ “ತೇ ಹ ಏತೇ” ಎನ್ನುವಲ್ಲಿ ‘ಹ-ಕಾರ’ಕ್ಕೆ ಬಹಳ ಮುಖ್ಯವಾದ ಅರ್ಥವಿದೆ. ಸಂಸ್ಕೃತದಲ್ಲಿ ‘ಹ-ಕಾರ’ ಸಂತೋಷ, ಆಶ್ಚರ್ಯ, ವಿಸ್ಮಯ, ಆನಂದವನ್ನು ವ್ಯಕ್ತಪಡಿಸುವ ಪದ. ಇಲ್ಲಿ ಅದನ್ನು ವಿಸ್ಮಯ ಮತ್ತು ಆನಂದಕಾರಕವಾಗಿ ಉಪಯೋಗಿಸಿದ್ದಾರೆ.  ಇಷ್ಟು ದೊಡ್ಡ ವಿದ್ವಾಂಸರು, ತಿಳಿದುಕೊಳ್ಳಬೇಕು ಎನ್ನುವ ಅಭಿಲಾಷೆಯಿಂದ ಗುರುವನ್ನು ಅರಸಿ ಬಂದಿದ್ದಾರಲ್ಲಾ. ಇದೊಂದು ವಿಸ್ಮಯ ಮತ್ತು ಆನಂದ. ಈ ಋಷಿಗಳು ಸಾಮಾನ್ಯರಲ್ಲ. ಇವರು ವೇದದ ಅರ್ಥಚಿಂತನೆ ಮಾಡಿ, ವೇದೋಕ್ತ  ಕರ್ಮಾನುಷ್ಠಾನ ಮಾಡಿದವರು. ಇಲ್ಲಿ ಸಮಸ್ತ ವೇದದ ಭಗವದ್ ಪರತೆಯನ್ನು ತಿಳಿದುಕೊಳ್ಳಬೇಕು ಎನ್ನುವ ಆಸೆಯಿಂದ ಗುರುವನ್ನು ಹುಡುಕಿ ಬಂದ ಮಹಾತ್ಮರಿವರು.
ಗುರುಗಳ ಬಳಿ ಹೋಗುವಾಗ ಯಾರೂ ಬರಿಗೈಯಲ್ಲಿ ಹೋಗಬಾರದು. ಆದರೆ ಎಲ್ಲವನ್ನೂ ತ್ಯಾಗ ಮಾಡಿ ಕಾಡಿನಲ್ಲಿ ವಾಸ ಮಾಡುತ್ತಿರುವ ಪಿಪ್ಪಲಾದರಲ್ಲಿಗೆ ಧನ-ಕನಕ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗಾಗಿ ಈ ಆರು ಜನ ಋಷಿಗಳು ಯಜ್ಞಕ್ಕೆ ಬೇಕಾಗುವ  ಕಟ್ಟಿಗೆಯನ್ನು ಹಿಡಿದುಕೊಂಡು ಮಹಾತ್ಮರಾದ ಪಿಪ್ಪಲಾದರಲ್ಲಿಗೆ, ಬಹಳ ಭಯಭಕ್ತಿಯಿಂದ ಬಂದು ಗೌರವಪೂರ್ವಕವಾಗಿ ನಮಸ್ಕರಿಸಿದರು.
‘ಪಿಪ್ಪಲಾದ’ ಎನ್ನುವುದು ವೇದ ಕಾಲದ ಋಷಿಗಳ ಹೆಸರು. ಇಂದು ಇಂತಹ ಹೆಸರು ಪ್ರಚಲಿತದಲ್ಲಿಲ್ಲ. ಪಿಪ್ಪಲಂ+ಆದ= ಪಿಪ್ಪಲಾದ. ಅಂದರೆ ಕರ್ಮವನ್ನು ದಾಟಿ ನಿಂತವರು ಎಂದರ್ಥ. ಇಲ್ಲಿ ಪಿಪ್ಪಲಾದರನ್ನು ‘ಭಗವಂತಂ’ ಎಂದು ಸಂಬೋಧಿಸಿರುವುದನ್ನು ಕಾಣುತ್ತೇವೆ. ಭಗವಾನ್ ಎನ್ನುವುದಕ್ಕೆ ವಿಶೇಷ ಅರ್ಥವಿದೆ.  “ಉತ್ಪತಿಂ ಪ್ರಳಯಂಚೈವ ಭೂತಾನಾಂ ಆಗತಿಂ ಗತಿಮ್ | ವೇತ್ತಿ ವಿದ್ಯಾಂ ಅವಿದ್ಯಾಂಚ ಸ ವಾಚ್ಯೋ ಭಗವಾನ್ ಇತಿ |”  ಪಿಪ್ಪಲಾದರು ಹುಟ್ಟು-ಸಾವಿನ, ಭೂತ-ಭವಿಷ್ಯದ, ಜ್ಞಾನ-ಅಜ್ಞಾನದ ರಹಸ್ಯ ತಿಳಿದವರಾದ್ದರಿಂದ ಅವರನ್ನು ಇಲ್ಲಿ ‘ಭಗವಂತಂ ಪಿಪ್ಪಲಾದ’  ಎಂದು ಸಂಬೋಧಿಸಿದ್ದಾರೆ.   

ತಾನ್  ಹ ಸ ಋಷಿರುವಾಚ-ಭೂಯ ಏವ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂವತ್ಸರಂ ಸಂವತ್ಸ್ಯಥ; ಯಥಾಕಾಮಂ ಪ್ರಶ್ನಾನ್ ಪೃಚ್ಛತ; ಯದಿ ವಿಜ್ಞಾಸ್ಯಾಮಃ ಸರ್ವಂ ಹ ವೋ ವಕ್ಷ್ಯಾಮ ಇತಿ  

ಬೇರೆಬೇರೆ ಜ್ಞಾನ ಜಿಜ್ಞಾಸೆಯಿಂದ ಬಂದ  ಆರು ಮಂದಿ ಋಷಿಗಳು: “ನಮ್ಮ ಪ್ರಶ್ನೆಗೆ ನೀವು ಉತ್ತರ ಕೊಡಬಲ್ಲಿರಿ ಎಂದು ತಿಳಿದು ನಿಮ್ಮಲ್ಲಿಗೆ ಬಂದಿದ್ದೇವೆ. ನಮಗೆ ನಿಮ್ಮಿಂದ ಉತ್ತರ ಬೇಕು” ಎಂದು ಪ್ರಾರ್ಥಿಸುತ್ತಾರೆ. ಇಲ್ಲಿ ಈ ಆರುಮಂದಿ ಋಷಿಗಳು ತೋರುತ್ತಿರುವ ಗೌರವ ಹಾಗೂ ಪಿಪ್ಪಲಾದರ ವಿನಯವನ್ನು ‘ಹ-ಕಾರ’ ಬಿಂಬಿಸುತ್ತದೆ. ತಮ್ಮ ಬಳಿ ಬಂದ ಈ ಆರು ಮಂದಿ ಋಷಿಗಳನ್ನು ಉದ್ದೇಶಿಸಿ ಪಿಪ್ಪಲಾದರು ಹೇಳುತ್ತಾರೆ: “ಒಂದು ಸಂವತ್ಸರ ನಮ್ಮ ಆಶ್ರಮದಲ್ಲಿ ಬ್ರಹ್ಮಚರ್ಯದಿಂದ, ತಪಸ್ಸನ್ನಾಚರಿಸಿಕೊಂಡು, ಶ್ರದ್ಧೆಯಿಂದ, ಸ್ವಾಧ್ಯಾಯದಲ್ಲಿ ತೊಡಗಿಕೊಂಡು ಇರಿ(ಇರುತ್ತೀರಿ). ಆ ನಂತರ ನಿಮಗೆ ಏನು ಪ್ರಶ್ನೆ ಕೇಳಬೇಕೋ ಅದನ್ನು ಕೇಳಿ. ನನಗೆ ತಿಳಿದಿದ್ದರೆ ಉತ್ತರಿಸುತ್ತೇನೆ” ಎಂದು. ಇಲ್ಲಿ ಒಂದು ವರ್ಷಗಳ ಕಾಲ ಆಶ್ರಮದಲ್ಲಿ ಇರುವಂತೆ ಪಿಪ್ಪಲಾದರು ತಮ್ಮ ಬಳಿಗೆ ಬಂದ ಶಿಷ್ಯರಲ್ಲಿ ಹೇಳುತ್ತಾರೆ. ಇದು ಗುರು ಶಿಷ್ಯರನ್ನು ಪರೀಕ್ಷಿಸುವ ಹಾಗೂ ಶಿಷ್ಯರಿಗೆ ತನ್ನನ್ನು ಪರೀಕ್ಷಿಸಲು ಅವಕಾಶ ಮಾಡಿಕೊಡುವ ಒಂದು ವಿಶಿಷ್ಠ ನಡೆ. ನಂತರ “ನನಗೆ ತಿಳಿದಿದ್ದರೆ ಹೇಳುತ್ತೇನೆ” ಎಂದು ಹೇಳಿದುದರ ಹಿಂದೆ  ಅಹಂಕಾರ ರಹಿತ ವಿನಯ ಅಡಗಿದೆ. ಇದು ಜ್ಞಾನಿಗಳ ವಿಸ್ಮಯ ಮತ್ತು ಗೌರವಾನ್ವಿತ ನಡೆ ಎನ್ನುವುದನ್ನು ಮರಳಿ ಹ-ಕಾರ ಬಿಂಬಿಸುತ್ತದೆ.
ಹೀಗೆ ಗುರುಗಳು ಹೇಳಿದಂತೆ ಆರು ಮಂದಿ ಋಷಿಗಳು ಶ್ರದ್ಧೆಯಿಂದ ವೇದಾರ್ಥ ಚಿಂತನೆ ಮಾಡಿಕೊಂಡು ಒಂದು ವರ್ಷ ಕಳೆಯುತ್ತಾರೆ. ಒಂದು ವರ್ಷದ ನಂತರ, ಪಿಪ್ಪಲಾದರ ಬಳಿ ಆರನೆಯ ಋಷಿ ಕತ್ಯನ ಮಗನಾದ ಕಬಂಧೀ ತನ್ನ ಮೊದಲ ಪ್ರಶ್ನೆಯನ್ನು ನಿವೇದಿಸಿಕೊಳ್ಳುವುದರೊಂದಿಗೆ ಈ ಷಟ್ ಪ್ರಶ್ನ ಉಪನಿಷತ್ತಿನ ಉಪದೇಶ ಭಾಗ ಪ್ರಾರಂಭವಾಗುತ್ತದೆ.
ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಈ ಕ್ಷಣದಲ್ಲಿ ನಮಗೆ ಈ ಆರು ಮಂದಿ ಋಷಿಗಳು ಕೇಳುವ ಪ್ರಶ್ನೆ ಯಾವುದು, ಅದಕ್ಕೆ ಪಿಪ್ಪಲಾದರು ಏನು ಉತ್ತರ ಕೊಡುತ್ತಾರೆ ಎನ್ನುವ ವಿಷಯ ತಿಳಿದಿಲ್ಲ. ಆದರೆ ನಮಗೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿ ತಿಳಿದಿದೆ. ಇಲ್ಲಿ ಪ್ರಶ್ನೆ ಹಾಕುತ್ತಿರುವ ಋಷಿಗಳು ಸಾಮಾನ್ಯರಲ್ಲ. ಅವರೆಲ್ಲರೂ ಮಹಾ ವಿದ್ವಾಂಸರು ಎಂದು. ಹೀಗಿರುವಾಗ ಅವರ ಪ್ರಶ್ನೆ ಅದೆಷ್ಟು ಮಹತ್ತಾಗಿರಬೇಕು? ಇಲ್ಲಿ ಗುರುವಿನ ಸ್ಥಾನದಲ್ಲಿ ನಿಂತಿರುವ ವಿನಯಮೂರ್ತಿ ‘ಪಿಪ್ಪಲಾದರು’ ಕರ್ಮವನ್ನೇ ದಾಟಿ ನಿಂತ ಮಹಾನ್ ಜ್ಞಾನಿ. ಇವರ ನಡುವೆ ನಡೆಯಲಿರುವ ಸಂವಾದವನ್ನು ಕೇಳಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಬನ್ನಿ, ಈ ಅದ್ಭುತ  ಜ್ಞಾನವನ್ನು ಗ್ರಹಿಸಲು ನಮಗೆ ಶಕ್ತಿ ಕೊಡು ಎಂದು ಆ ಭಗವಂತನಲ್ಲಿ ಬೇಡಿ, ಈ ಉಪದೇಶವನ್ನಾಲಿಸೋಣ.


*******

Sunday, August 19, 2012

Prashnopanishad in Kannada-Shanthi Mantra


ಶಾಂತಿಪಾಠ


                                    ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ  ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
                                   ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ

ಅಧ್ಯಯನ ಪ್ರಾರಂಭಿಸುವ ಮೊದಲು ದೇವರನ್ನು ಪ್ರಾರ್ಥನೆ ಮಾಡಿ, “ನಿರ್ವಿಘ್ನವಾಗಿ ನಮ್ಮ ಅಧ್ಯಯನ ನಡೆಯಲಿ” ಎಂದು ಪ್ರಾರ್ಥಿಸುವ ಸ್ತೋತ್ರ ಶಾಂತಿಮಂತ್ರ. ಇಲ್ಲಿ  ಜ್ಞಾನಾನಂದವನ್ನು ಕೊಡು ಎನ್ನುವ ಪ್ರಾರ್ಥನೆಯ ಜೊತೆಗೆ ವಿಶ್ವಶಾಂತಿಯ ಪ್ರಾರ್ಥನೆ ಕೂಡಾ ಇದೆ. ಹೀಗಾಗಿ ಯಾವುದೇ ಒಂದು ಅಧ್ಯಯನ ಮಾಡುವ ಮೊದಲು ಮತ್ತು ಕೊನೆಯಲ್ಲಿ ಶಾಂತಿಮಂತ್ರ ಹೇಳುವ ಕ್ರಮವಿದೆ. ಇದು ಜೀವನದಲ್ಲಿ ಅಶಾಂತಿ ಬರಬಾರದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಂತಿಯನ್ನು ಪ್ರಾರ್ಥಿಸುವ ಮಂತ್ರ ಕೂಡಾ ಹೌದು. ಒಂದೊಂದು ವೇದ ಶಾಖೆಯವರಿಗೂ ಒಂದೊಂದು ಶಾಂತಿ ಮಂತ್ರವಿದೆ. ಇಲ್ಲಿ ಬಂದಿರುವುದು ಅಥರ್ವ ವೇದದ ಶಾಂತಿ ಮಂತ್ರ.
  “ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ  ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ”.  ಇಲ್ಲಿ ‘ಯಜತ್ರಾಃ’ ಎಂದರೆ ನಮ್ಮಿಂದ ಪೂಜಿಸಲ್ಪಡುವವರು, ನಮ್ಮನ್ನು ರಕ್ಷಿಸುವವರು ಎಂದರ್ಥ. ಅದೇ ರೀತಿ ‘ದೇವಾಃ’ ಎಂದರೆ ದೇವತೆಗಳು ಮತ್ತು ಅವರ ಅಂತರ್ಯಾಮಿಯಾಗಿರುವ ಭಗವಂತ. ಅಧ್ಯಯನಕ್ಕೆ ಮೊದಲು ಗುರು-ಶಿಷ್ಯರು ಪೂಜಾರ್ಹರಾದ ತಮ್ಮ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಈ ರೀತಿ ಪ್ರಾರ್ಥನೆ ಮಾಡುತ್ತಿದ್ದಾರೆ: “ನೀವು ನಮ್ಮ ಕಿವಿ ಒಳ್ಳೆಯದನ್ನು ಕೇಳುವಂತೆ, ನಮ್ಮ ಕಣ್ಣು ಒಳ್ಳೆಯದನ್ನು ನೋಡುವಂತೆ ಅನುಗ್ರಹಿಸಿ” ಎಂದು. ಎಲ್ಲಕ್ಕಿಂತ ಒಳ್ಳೆಯ ಸುದ್ದಿ ಎಂದರೆ ಅದು ದೇವರ ಸುದ್ದಿ. ಒಳ್ಳೆಯದನ್ನು ಕೇಳುವುದು ಎಂದರೆ ಮೊದಲು ಭಗವಂತನ ಬಗೆಗೆ ಕೇಳುವುದು. ನಂತರ ಲೋಕದಲ್ಲಿನ ಒಳ್ಳೆಯ ಸುದ್ದಿಯನ್ನು ಕೇಳುವುದು. ಸಾಮಾನ್ಯವಾಗಿ ಲೋಕದಲ್ಲಿನ ಕೆಟ್ಟ ವಿಷಯ ಕಿವಿಯ ಮೇಲೆ ಬಿದ್ದಾಗ, ಕೆಟ್ಟ ದೃಶ್ಯವನ್ನು ನೋಡಿದಾಗ ಮನಸ್ಸು ಕದಡುತ್ತದೆ. ಅದರಿಂದ ಕೊಪ, ದ್ವೇಷ ಬೆಳೆಯುತ್ತಾ ಹೋಗುತ್ತದೆ. ಅದಕ್ಕಾಗಿ ‘ಕೆಟ್ಟ ವಿಷಯ ಕಿವಿಯ ಮೇಲೆ ಬೀಳದಿರಲಿ, ಕೆಟ್ಟ ದೃಶ್ಯ ಕಣ್ಣಿಗೆ ಕಾಣದಿರಲಿ’ ಎನ್ನುವ ಪ್ರಾರ್ಥನೆ ಇಲ್ಲಿದೆ.
“ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ”. “ನಾವು ಬದುಕ್ಕಿದ್ದಾಗ ನಮಗೆ ಆರೋಗ್ಯವಂತ ಮತ್ತು ಗಟ್ಟಿಮುಟ್ಟಾದ ಇಂದ್ರಿಯ ಮತ್ತು  ಶರೀರವನ್ನು ಕೊಡು” ಎಂದು ಇಲ್ಲಿ ಪ್ರಾರ್ಥಿಸುತ್ತಾರೆ. ಬದುಕಿರುವಷ್ಟು ಕಾಲ ಇನ್ನೊಬ್ಬರಿಗೆ ಭಾರವಾಗಿ ಬದುಕಿಸಬೇಡ, ಸಾಯುವ ತನಕ ಭಗವಂತನ ಧ್ಯಾನ ಮಾಡುತ್ತಾ, ಜಾಗೃತವಾದ ಮನಸ್ಸಿನಲ್ಲಿ ಭಗವಂತನ ಗುಣಗಳ ಅನುಸಂಧಾನ ಮಾಡುತ್ತಾ, ದೇವರು ಮೆಚ್ಚುವ ಬದುಕನ್ನು ಬಾಳಬೇಕು. ಅದಕ್ಕಾಗಿ “ಓ ತತ್ತ್ವಾಭಿಮಾನಿ ದೇವತೆಗಳೇ ನಮಗೆ ಆರೋಗ್ಯವಂತ ಶರೀರವನ್ನು ಕೊಟ್ಟು ಅನುಗ್ರಹಿಸಿ” ಎಂದು ಇಲ್ಲಿ ಪ್ರಾರ್ಥಿಸಿದ್ದಾರೆ.
ಇಲ್ಲಿ ಶರೀರಗಳು(ತನೂಭಿಃ) ಎಂದು ಬಹುವಚನ ಉಪಯೋಗಿಸಿ ಪ್ರಾರ್ಥಿಸಿರುವುದನ್ನು ಕಾಣುತ್ತೇವೆ. ಇದರ ಹಿಂದೆ ಎರಡು ಅರ್ಥವಿದೆ. “ಜನ್ಮಜನ್ಮಗಳಲ್ಲೂ ಆರೋಗ್ಯವಂತ ಶರೀರ ಕೊಡು” ಎನ್ನುವುದು ಒಂದರ್ಥವಾದರೆ, “ಪ್ರಾರ್ಥಿಸುತ್ತಿರುವ ಎಲ್ಲರಿಗೂ ಆರೋಗ್ಯವಂತ ದೇಹ ಕೊಡು” ಎನ್ನುವುದು ಇನ್ನೊಂದು ಅರ್ಥ.  ಒಟ್ಟಿನಲ್ಲಿ ಹೇಳಬೇಕೆಂದರೆ: “ಒಳ್ಳೆಯದನ್ನು ಕೇಳಿಸು, ಒಳ್ಳೆಯದನ್ನು ನೋಡುವಂತೆ ಮಾಡು, ಉಸಿರಿರುವಷ್ಟು ಕಾಲ ದೇವರು ಮೆಚ್ಚುವ ಬದುಕನ್ನು ಪರಾಧೀನನಾಗದೇ ಬದುಕುವಂತೆ ಮಾಡು” ಎನ್ನುವುದು ಇಲ್ಲಿರುವ ಮೂಲ ಪ್ರಾರ್ಥನೆ.

                         ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ    ಸ್ವಸ್ತಿ ನಃ ಪೂಷಾ ವಿಶ್ವವೇದಾಃ
                         ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ    ಸ್ವಸ್ತಿ ನೋ ಬೃಹಸ್ಪತಿರ್ದಧಾತು
                                 ಓಂ ಶಾಂತಿಃ ಶಾಂತಿಃ ಶಾಂತಿಃ

ಮೇಲ್ನೋಟದಲ್ಲಿ ಈ ಶಾಂತಿಮಂತ್ರವನ್ನು  ನೋಡಿದರೆ ಇಲ್ಲಿ ಇಂದ್ರ, ಪೂಷಾ, ತಾಕ್ಷ್ಯ ಮತ್ತು ಬೃಹಸ್ಪತಿ ಎನ್ನುವ ನಾಲ್ಕು ದೇವತೆಗಳನ್ನು ಪ್ರಾರ್ಥಿಸುತ್ತಿರುವಂತೆ ಕಾಣುತ್ತದೆ. ಆದರೆ ಇದು ಭಗವಂತನ ನಾಲ್ಕು ರೂಪಗಳನ್ನು ಸ್ತೋತ್ರ ಮಾಡುವ ಮಂತ್ರ.  ಸೃಷ್ಟಿ, ಪಾಲನೆ, ಸಂಹಾರ ಮತ್ತು ಮೋಕ್ಷ ಈ ನಾಲ್ಕು ಸ್ಥಿತಿಯಲ್ಲಿ ನಮ್ಮನ್ನು ನಿರಂತರ ನಿಯಂತ್ರಿಸುವ ಭಗವಂತನ ಚತುರ್ಮುಖ ಸ್ತುತಿ ಇದಾಗಿದೆ. ಸೃಷ್ಟಿಗೆ ಕಾರಣವಾದ ಭಗವಂತನ ಪ್ರದ್ಯುಮ್ನ ರೂಪ, ಪಾಲನೆಗೆ ಕಾರಣವಾದ ಅನಿರುದ್ಧರೂಪ, ಸಂಹಾರಕರ್ತ ಸಂಕರ್ಷಣ ರೂಪ ಮತ್ತು ಮೋಕ್ಷಪ್ರದ ವಾಸುದೇವ ರೂಪ  ಇವೇ ಆ ಚತುರ್ಮೂರ್ತಿ ರೂಪಗಳು.
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ: ‘ಪ್ರದ್ಯುಮ್ನಂಚ ಇಂದ್ರ ನಾಮಕಃ’ ಎಂದು ತೈತ್ತಿರೀಯ ಭಾಷ್ಯದಲ್ಲಿ ಆಚಾರ್ಯರು ಹೇಳಿದ್ದಾರೆ. ಆದ್ದರಿಂದ ಇಲ್ಲಿ ‘ಇಂದ್ರ’ ಎಂದರೆ ಸೃಷ್ಟಿಗೆ ಕಾರಣನಾದ ಭಗವಂತನ ಪ್ರದ್ಯುಮ್ನರೂಪ. “ವೃದ್ಧಶ್ರವಾಃ” ಎಂದರೆ ಎಲ್ಲಾ ಕಡೆ ಹಬ್ಬಿದ ಕೀರ್ತಿ ಉಳ್ಳವನು ಎಂದರ್ಥ. ಜಗತ್ತನ್ನು ಸೃಷ್ಟಿ ಮಾಡಿದ ಭಗವಂತನ ಕೀರ್ತಿಗಿಂತ ಮಹತ್ತಾದ ಇನ್ನೊಂದು ಕೀರ್ತಿ ಯಾವುದಿದೆ? ಜಗತ್ ಸೃಷ್ಟಾ ಎಂದು ನಾವು ಹಾಡಿ ಹೊಗಳುವ ದೇವರು ಆ ಪ್ರದ್ಯುಮ್ನ ದೇವರು. ಅವರು ನಮ್ಮ ಜೀವನದಲ್ಲಿ ಜ್ಞಾನಾನಂದವನ್ನು ಕೊಟ್ಟು ರಕ್ಷಿಸಲಿ ಎನ್ನುವ ಪ್ರಾರ್ಥನೆ ಇಲ್ಲಿದೆ.
ಸ್ವಸ್ತಿ ನಃ ಪೂಷಾ ವಿಶ್ವವೇದಾಃ : ‘ಪೂಷಾ’ ಎಂದರೆ ಪೋಷಣೆ.  ಪಾಲನೆ ಮಾಡುವ ಅನಿರುದ್ಧರೂಪಿ ಭಗವಂತ  ಪೂಷಾ. ‘ವಿಶ್ವವೇದಾಃ’ ಎಂದರೆ ಎಲ್ಲವನ್ನೂ ತಿಳಿದವನು. “ಸರ್ವಜ್ಞನಾಗಿದ್ದು, ಎಲ್ಲರನ್ನೂ ಪಾಲನೆ ಪೋಷಣೆ ಮಾಡುವ ಅನಿರುದ್ಧ ನಮಗೆ ಮಾಂಗಲಿಕವಾದ, ಜ್ಞಾನಾನಂದಮಾಯವಾದ ಬದುಕನ್ನು ಕೊಡಲಿ ಎನ್ನುವುದು ಇಲ್ಲಿರುವ ಪ್ರಾರ್ಥನೆ.
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ : ಇಲ್ಲಿ ‘ನೇಮಿ’ ಎಂದರೆ ಚಕ್ರ.  ಅಧರ್ಮ ಮತ್ತು ಅಜ್ಞಾನದ ನಾಶಕ್ಕಾಗಿ ಕೈಯಲ್ಲಿ ಚಕ್ರವನ್ನು ಹಿಡಿದವನು   ‘ಅರಿಷ್ಟನೇಮಿಃ’. ಸಜ್ಜನರ ಮತ್ತು ಧರ್ಮದ ರಕ್ಷಣೆಗಾಗಿ ಕೈಯಲ್ಲಿ ಆಯುಧ ಹಿಡಿದಿರುವ ಸಂಕರ್ಷಣರೂಪಿ ಭಗವಂತ, ನಮ್ಮ ಸಂಸಾರ ದುಃಖವನ್ನು ನಾಶಮಾಡಿ, ನಮ್ಮನ್ನು ಉದ್ಧಾರ ಮಾಡಲಿ ಎನ್ನುವುದು ಇಲ್ಲಿರುವ ಪ್ರಾರ್ಥನೆ.
ಸ್ವಸ್ತಿ ನೋ ಬೃಹಸ್ಪತಿರ್ದಧಾತು: ಸಂಸಾರ ಬಂಧವನ್ನು ಕಳಚಿಕೊಂಡು ಮೋಕ್ಷವನ್ನು ಸೇರಿದ ದೊಡ್ಡವರ ಸ್ವಾಮಿ, ‘ಮೋಕ್ಷಪ್ರದ ವಾಸುದೇವ’ ನಮ್ಮನ್ನು ಅತ್ಯಂತ ಮಾಂಗಲಿಕ ಸ್ಥಿತಿಯಲ್ಲಿ ಧಾರಣೆ ಮಾಡಿ ರಕ್ಷಿಸಲಿ, ಮೋಕ್ಷಪ್ರದನಾದ ಆತ ನಮಗೆ ಮೋಕ್ಷವನ್ನು ಕರುಣಿಸಲಿ ಎನ್ನುವುದು ಇಲ್ಲಿರುವ ಪ್ರಾರ್ಥನೆ.
ಓಂ ಶಾಂತಿಃ ಶಾಂತಿಃ ಶಾಂತಿಃ :   ‘ಓಂ’ ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ. ಇದು ಭಗವಂತನ ಹೆಸರು. ‘ಶಂ’ ಎಂದರೆ ಆನಂದ; ‘ಇ’ ಎಂದರೆ ಜ್ಞಾನ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ‘ಓಂ ಶಾಂತಿಃ’ ಎಂದರೆ: ‘ಭಗವಂತ ಜ್ಞಾನಾನಂದಗಳ ತುತ್ತ ತುದಿಯಲ್ಲಿರುವವ’ ಎಂದರ್ಥ.  ಮೂರು ವೇದಗಳಲ್ಲಿ ಪ್ರತಿಪಾಧ್ಯನಾಗಿರುವ, ಮೂರು ಕಾಲಗಳಲ್ಲಿರುವ, ಎಲ್ಲಾಕಡೆ ಇರುವ ಭಗವಂತ ಜ್ಞಾನಾನಂದಪೂರ್ಣ ಎಂದು ಇಲ್ಲಿ ಮೂರು ಬಾರಿ ಹೇಳಲಾಗಿದೆ. “ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡಾ ಶಾಂತಿಯನ್ನು ಕೊಡು” ಎನ್ನುವ ಪ್ರಾರ್ಥನೆ ಇಲ್ಲಿದೆ.
*******

Prashnopanishad in Kannada-Introduction


ಪ್ರಸ್ತಾವನೆ


ಷಟ್ ಪ್ರಶ್ನೋಪನಿಷತ್ತು  ಅಥರ್ವ ವೇದಕ್ಕೆ ಸೇರಿದ ಉಪನಿಷತ್ತು. ಈ ಉಪನಿಷತ್ತಿಗೆ ತುಂಬಾ ಬಳಕೆಯಲ್ಲಿರುವ ಹೆಸರು ‘ಪ್ರಶ್ನೋಪನಿಷತ್ತು’. ಆದರೆ ಇದರ ಪ್ರಾಚೀನ ಹೆಸರು ‘ಷಟ್ ಪ್ರಶ್ನ ಉಪನಿಷತ್ತು’. ಆರು ಋಷಿಗಳು ಕೇಳುವ ಆರು ಪ್ರಶ್ನೆಗಳಿಗೆ ಪಿಪ್ಪಲಾದರು ಕೊಡುವ ಉತ್ತರವನ್ನು ಇಲ್ಲಿ ಆರು ಅಧ್ಯಾಯ ರೂಪದಲ್ಲಿ ಕಾಣಬಹುದು.
ಉಪನಿಷತ್ತಿಗೆ ಪ್ರವೇಶಿಸುವ ಮುನ್ನ ಉಪನಿಷತ್ತಿನ ಹಿನ್ನಲೆಯನ್ನು ತಿಳಿಯುವುದು ಬಹಳ ಮುಖ್ಯ. ಮೂಲಭೂತವಾಗಿ ಎಲ್ಲಾ ವೇದಗಳಿಗೆ ಮೂಲ ಓಂಕಾರ. ಓಂಕಾರದ ಮೂರು ಅಕ್ಷರಗಳಿಂದ ಓಂ ಭೂಃ ಓಂ ಭುವಃ ಓಂ ಸುವಃ  ಎನ್ನುವ ಮೂರು ವ್ಯಾಹೃತಿಗಳು ಸೃಷ್ಟಿಯಾದವು. ಈ ವ್ಯಾಹೃತಿಯಿಂದ ಮೂರು ಪಾದದ ಗಾಯತ್ತ್ರಿ ಸೃಷ್ಟಿಯಾಯಿತು. ಮುಂದೆ ಮೂರು ಪಾದದ ಗಾಯತ್ತ್ರಿಯಿಂದ  ಮೂರು ವರ್ಗದ ಪುರುಷಸೂಕ್ತ ಸೃಷ್ಟಿಯಾಯಿತು[ಇದು ಋಗ್ವೇದದ ಹದಿನಾರು ಮಂತ್ರಗಳಿರುವ ಪುರುಷಸೂಕ್ತ. ಇಲ್ಲಿ ಮೊದಲ ಐದು, ನಂತರದ ಐದು ಹಾಗೂ ಕೊನೇಯ ಆರು ಮಂತ್ರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ]. ಹೀಗೆ ಸೃಷ್ಟಿಯಾದ ಪುರುಷಸೂಕ್ತದ ಮೊದಲ ವರ್ಗ ವಿಸ್ತಾರಗೊಂಡು ಋಗ್ವೇದ, ಎರಡನೇ ವರ್ಗ ವಿಸ್ತಾರವಾಗಿ ಯಜುರ್ವೇದ ಮತ್ತು ಮೂರನೇ ವರ್ಗ ವಿಸ್ತಾರವಾಗಿ ಸಾಮವೇದದ ಜನನವಾಯಿತು. ಮುಂದೆ ಅಥರ್ವ ಮುನಿಯಿಂದ ನಾಲ್ಕನೇ ವೇದದ ಸೃಷ್ಟಿಯಾಯಿತು. ಇದು ನಮ್ಮ ವೈದಿಕ ವಾಙ್ಮಯ ಬೆಳೆದುಬಂದ ಬಗೆ. ಓಂಕಾರ ಎನ್ನುವ ಬೀಜದಿಂದ ಮಹಾವೃಕ್ಷವಾಗಿ, ಹೆಮ್ಮರವಾಗಿ ವೈದಿಕ ಸಾಹಿತ್ಯ ಬೆಳೆದಿದೆ.
ಎಲ್ಲಾ ವೇದಗಳಿಗೂ ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತು  ಎನ್ನುವ ನಾಲ್ಕು ಮುಖಗಳಿವೆ. ‘ಸಂಹಿತೆ’ ಅಂದರೆ ಮೂಲಪಾಠ(Text). ‘ಬ್ರಾಹ್ಮಣ’ ವೇದದಲ್ಲಿ ಕರ್ಮ ಭಾಗವನ್ನು ಮತ್ತು ಅದರ ಅನುಷ್ಟಾನದ ಬಗೆಯನ್ನು ವಿವರಿಸುವ ಭಾಗ. ಸಾಮಾನ್ಯವಾಗಿ ಬ್ರಹ್ಮಚಾರಿಗಳಿಗೆ (ಮದುವೆಗೆ ಮೊದಲು) ಸಂಹಿತೆಯ  ಅಧ್ಯಯನವಾದರೆ, ಮದುವೆಯಾದ ನಂತರ ಗ್ರಹಸ್ಥ ಜೀವನಕ್ಕೆ ಬೇಕಾದ ವಿವರಗಳನ್ನು ಕೊಡತಕ್ಕಂತಹ ವೇದದ ಭಾಗ ‘ಬ್ರಾಹ್ಮಣ’.
ಹಿಂದಿನ ಕಾಲದಲ್ಲಿ ಗ್ರಹಸ್ಥ ಜೀವನದ ನಂತರ, ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಿ ಸುಮಾರು ಐವತ್ತರಿಂದ ಅರವತ್ತರ ವಯಸ್ಸಿನಲ್ಲಿ ಎಲ್ಲವನ್ನೂ ಮಕ್ಕಳ ಸ್ವಾಧೀನ ಬಿಟ್ಟು, ಕಾಡಿಗೆ ಹೋಗಿ ವಾಸ ಮಾಡುತ್ತಿದ್ದರು. ಅದನ್ನೇ ವಾನಪ್ರಸ್ಥ ಎನ್ನುತ್ತಾರೆ. ಸಾಂಸಾರಿಕ ಜೀವನದ ಬಹುಭಾಗವನ್ನು ಕಳಚಿಕೊಂಡು ಕಾಡಿನಲ್ಲಿ ವಾಸವಾಗಿರುವಾಗ ಹೆಚ್ಚು ಉಪಯೋಗಕ್ಕೆ ಬರುವ ವೇದದ ಭಾಗವೇ ‘ಅರಣ್ಯಕ’. ಸಮಗ್ರವನ್ನೂ ತ್ಯಜಿಸಿರುವ ಸಂನ್ಯಾಸಿಗಳಿಗೆ ನಿರಂತರ ಭಗವಂತನ ಚಿಂತನೆ ಮಾಡಲು ಬೇಕಾಗಿರುವ ವೇದದ ಭಾಗವೇ ಉಪನಿಷತ್ತು. ಒಟ್ಟಿನಲ್ಲಿ ಹೇಳಬೇಕೆಂದರೆ ಸಂಹಿತೆ- ಬ್ರಹ್ಮಚಾರಿಗಳಿಗೆ, ಬ್ರಾಹ್ಮಣ-ಗ್ರಹಸ್ಥರಿಗೆ, ಅರಣ್ಯಕ-ವಾನಪ್ರಸ್ಥರಿಗೆ ಮತ್ತು ಉಪನಿಷತ್ತು-ಸಂನ್ಯಾಸಿಗಳಿಗೆ. ಇದರರ್ಥ ಗ್ರಹಸ್ಥರು ಉಪನಿಷತ್ತನ್ನು ಓದಬಾರದು ಎಂದರ್ಥವಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಆದರೆ ವಿಶೇಷ ಒತ್ತುಕೊಟ್ಟು ಮೇಲಿನ ವಿಭಾಗವಿದೆ ಅಷ್ಟೇ.
ಹಿಂದೆ ಹೇಳಿದಂತೆ ಪ್ರತಿಯೊಂದು ವೇದಗಳಿಗೂ ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳಿವೆ. ಐತರೇಯ ಬ್ರಾಹ್ಮಣ, ಐತರೇಯ ಅರಣ್ಯಕ ಮತ್ತು ಐತರೇಯ ಉಪನಿಷತ್ತು ಋಗ್ವೇದಕ್ಕೆ ಸಂಬಂಧಪಟ್ಟಿದ್ದು. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆಗಳಿವೆ ಮತ್ತು ಅಲ್ಲಿ ಪ್ರತೀ ಶಾಖೆಗೂ ಎರಡು ಉಪನಿಷತ್ತುಗಳಿವೆ. ಶುಕ್ಲಯಜುರ್ವೇದದಲ್ಲಿ ಈಶಾವಾಸ್ಯ ಮತ್ತು ಬೃಹದಾರಣ್ಯಕ ಎನ್ನುವ ಎರಡು ಉಪನಿಷತ್ತುಗಳಿವೆ. ಅದೇ ರೀತಿ ಕೃಷ್ಣ ಯಜುರ್ವೇದದಲ್ಲಿ ತೈತ್ತಿರೀಯ ಮತ್ತು ಕಾಠಕ ಎನ್ನುವ ಎರಡು ಉಪನಿಷತ್ತುಗಳಿವೆ. ಇನ್ನು ಸಾಮವೇದದಲ್ಲಿ ಕೂಡಾ  ಎರಡು ಉಪನಿಷತ್ತುಗಳಿವೆ. ಅವುಗಳೆಂದರೆ ಕೇನೋಪನಿಷತ್ತು ಮತ್ತು ಛಂದೋಗ ಉಪನಿಷತ್ತು.  
ಅಥರ್ವವೇದದಲ್ಲಿ ಮೂರು ಉಪನಿಷತ್ತುಗಳಿವೆ. ಅವುಗಳೆಂದರೆ: ಅಥರ್ವವೇದೊಪನಿಷತ್ತು, ಮಾಂಡೂಕ ಉಪನಿಷತ್ತು ಮತ್ತು ಷಟ್ ಪ್ರಶ್ನ ಉಪನಿಷತ್ತು. ಇಲ್ಲಿ ನಾವು ನೋಡುತ್ತಿರುವ ಉಪನಿಷತ್ತು ಈ ಮೇಲಿನ ದಶೋಪನಿಷತ್ತುಗಳಲ್ಲಿ ಒಂದಾದ ಅಥರ್ವವೇದದ   “ಷಟ್ ಪ್ರಶ್ನ ಉಪನಿಷತ್ತು”.
ಪ್ರಶ್ನೋಪನಿಷತ್ತಿನಲ್ಲಿ ಪ್ರತಿಪಾಧ್ಯವಾಗಿರುವ ಮುಖ್ಯ ಸಂಗತಿ  ಪ್ರಾಣತತ್ವ ಮತ್ತು ಪ್ರಾಣನನ್ನು ನಿಯಂತ್ರಿಸುವ ನಾರಾಯಣ. ಮುಖ್ಯವಾಗಿ ಈ ಎರಡು ಉಪಾಸನೆಯನ್ನು ಹೇಳುವ ಉಪನಿಷತ್ತು ‘ಪ್ರಶ್ನೋಪನಿಷತ್ತು’.  ಉಪನಿಷತ್ತಿನ ಛಂದಸ್ಸನ್ನು ನೋಡಿದರೆ ಇಲ್ಲಿ ಹೆಚ್ಚಿನ ಭಾಗ ಗದ್ಯರೂಪದಲ್ಲಿದೆ ಹಾಗೂ ನಡುವೆ ಕೆಲವು ಪದ್ಯಗಳನ್ನೂ ನಾವು ನೋಡಬಹುದು. ಹೆಸರೇ ಸೂಚಿಸುವಂತೆ ಆರು ಮಂದಿ ಋಷಿಗಳು ಪಿಪ್ಪಲಾದರನ್ನು ಪ್ರಶ್ನೆ ಮಾಡುತ್ತಾರೆ ಹಾಗೂ ಪಿಪ್ಪಲಾದರು ಅವರ ಪ್ರಶ್ನೆಗೆ ಕೊಡುವ ಉತ್ತರ ಇಲ್ಲಿ ಉಪನಿಷತ್ತಿನ ರೂಪದಲ್ಲಿ ಮೂಡಿಬಂದಿದೆ. ಆದ್ದರಿಂದ ಈ ಏಳುಮಂದಿ ಋಷಿಗಳು ಈ ‘ಉಪನಿಷತ್ತಿನ ಋಷಿಗಳು’. [ ಈ ಋಷಿಗಳ ವಿವರಣೆ ಮುಂದೆ ಉಪನಿಷತ್ತಿನಲ್ಲೇ ಬರುತ್ತದೆ].
ಎಲ್ಲಾ ಉಪನಿಷತ್ತುಗಳಲ್ಲೂ ನಾವು ಪ್ರಶ್ನೆಯನ್ನು ಕಾಣುತ್ತೇವೆ. ಆದರೆ ಇಲ್ಲಿ ಒಂದು ವಿಶೇಷವಿದೆ. ಇದು ಪ್ರಶ್ನೆಯನ್ನು ಹೇಳುವ ಉಪನಿಷತ್ತಲ್ಲ. ಇದು ಆರು ಮಂದಿ ಋಷಿಗಳು ಹಾಕಿದ ಆರು ಪ್ರಶ್ನೆಗೆ ಉತ್ತರಕೊಡುವ ಉಪನಿಷತ್ತು. ಆದ್ದರಿಂದ ಈ ಉಪನಿಷತ್ತನ್ನು ಕೇವಲ ‘ಪ್ರಶ್ನೋಪನಿಷತ್ತು’ ಎಂದು ಹೇಳದೇ ‘ಷಟ್ ಪ್ರಶ್ನ ಉಪನಿಷತ್ತು’ ಎಂದು ಹೇಳುವುದು ಹೆಚ್ಚು ಅರ್ಥಪೂರ್ಣ.
ದೇಶದ ಬೇರೆಬೇರೆ ಕಡೆಯವರಾದ ಆರು ಮಂದಿ ತತ್ತ್ವ ಜಿಜ್ಞಾಸುಗಳು ತತ್ತ್ವವನ್ನು ತಿಳಿಯುವುದಕ್ಕೋಸ್ಕರ ಒಳ್ಳೆಯ ತತ್ತ್ವಜ್ಞಾನಿ ಗುರುವನ್ನು ಹುಡುಕುತ್ತಾ , ಪಿಪ್ಪಲಾದರ ಕೀರ್ತಿಯನ್ನು ಕೇಳಿ ತಿಳಿದು, ಅವರ ಹತ್ತಿರ ತಮ್ಮ ತಾತ್ತ್ವಿಕ ಜಿಜ್ಞಾಸೆಯನ್ನು ಪರಿಹರಿಸಿಕೊಳ್ಳಬೇಕೆಂದು, ಪಿಪ್ಪಲಾದರ ಆಶ್ರಮದಲ್ಲಿ ಒಟ್ಟಾಗುತ್ತಾರೆ. ಹೀಗೆ ಆರು ಮಹತ್ತರವಾದ ಪ್ರಶ್ನೆಗಳನ್ನು ಹೊತ್ತು ತಂದ ಆರು ಮಂದಿ ಋಷಿಗಳಿಗೆ ಉತ್ತರ ಕೊಟ್ಟವರು ಪಿಪ್ಪಲಾದರು.  ಬನ್ನಿ, ಭಗವಂತನ ಅನುಗ್ರಹ ಬೇಡಿ, ಈ ಆರು ಮಂದಿ ಋಷಿಗಳ ಜೊತೆ ಸೇರಿ,  ನಾವೂ ಕೂಡ ನಮ್ಮಿಂದ ಸಾಧ್ಯವಾದಷ್ಟು ಜ್ಞಾನವನ್ನು ಪಿಪ್ಪಲಾದರಿಂದ ಪಡೆದು ಕೃತಾರ್ಥರಾಗೋಣ.

  *******