ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, December 7, 2012

Prashnopanishad in Kannada-Prashna-VI (05-08)


ಹದಿನೈದು ಬೇಲಿಗಳನ್ನು ಹದಿನಾರನೇ ಜೀವನಿಗೆ ಕೊಟ್ಟವಳು ಹದಿನೇಳನೇ ಪ್ರಕೃತಿ. ಅದರಿಂದ ಬಿಡುಗಡೆಗೊಳಿಸಿ ಮೊಕ್ಷಕೊಡುವವ ಹದಿನೆಂಟನೇ ನಾರಾಯಣ. ಹಾಗಾಗಿ ವೇದಾಂತದಲ್ಲಿರುವ ಒಟ್ಟು ವಿಷಯಗಳು ಹದಿನೆಂಟೇ.
ಮೇಲೆ ಹೇಳಿದ ಹದಿನಾರು ಕಲೆಗಳಲ್ಲಿ ಹದಿನೈದು ಜಡಕಲೆ. ನಮಗೆ ತಿಳಿದಂತೆ ಅಧ್ಯಾತ್ಮದಲ್ಲಿ ಎಲ್ಲೂ ಕೇವಲ ಜಡವನ್ನು ಹೇಳುವ ಪದ್ಧತಿ ಇಲ್ಲಾ. ಆದ್ದರಿಂದ ಹೇಗೆ ಜೀವ ಕಲಾಭಿಮಾನಿ ಪ್ರಾಣದೇವರೋ ಹಾಗೇ ಇತರ ಹದಿನೈದು ಕಲೆಗಳು ಅದರ ತತ್ತ್ವಾಭಿಮಾನಿ ದೇವತೆಗಳನ್ನು ಹೇಳುತ್ತವೆ. ಈ ತತ್ತ್ವಾಭಿಮಾನಿ ದೇವತೆಗಳು ಜೀವನ ಸಾಧನೆಯ ಹಾದಿಯಲ್ಲಿನ ವಿವಿಧ ಹಂತದಲ್ಲಿರುವ ಮೆಟ್ಟಿಲುಗಳು. ಈ ದೇವತೆಗಳನ್ನು ನಾವು ಅವರ ತಾರತಮ್ಯಕ್ಕನುಗುಣವಾಗಿ ವಿವಿಧ ಹಂತದಲ್ಲಿ ಕಾಣಬೇಕು. ಮೊದಲಿಗೆ ಪುಷ್ಕರ. ಈತ ಕರ್ಮದ ಅಭಿಮಾನಿ ದೇವತೆ. ಈತ ನಮಗೆ ಸಾಧನೆಯ ಹಾದಿಯಲ್ಲಿ ಮೊದಲ ಮೆಟ್ಟಿಲು. ನಂತರ ಶನಿ. ಈತ ಭೂಮಿಯ ಅಭಿಮಾನಿ ದೇವತೆ. ಹಾಗೇ ಉಷಾದೇವಿ ಮಾತಿನ ದೇವತೆ; ಬುಧ ನೀರಿಂದ ದೇವತೆ; ಸ್ವಾಹಾದೇವಿ ಮಾತಿನ ದೇವತೆ; ಅಗ್ನಿ ಪುತ್ರ ಪಾವಕ ಬೆಂಕಿಯ ದೇವತೆ;  ವಾಯುಪುತ್ರ ಮರೀಚಿ ಗಾಳಿಯ ದೇವತೆ; ಗಣಪತಿ ಆಕಾಶದ ದೇವತೆ; ವರುಣ ವೀರ್ಯದ ದೇವತೆ; ಚಂದ್ರ ಅನ್ನದ ಅಭಿಮಾನಿ ದೇವತೆ; ಇಂದ್ರ ಇಂದ್ರಿಯಗಳ ಅಭಿಮಾನಿ ದೇವತೆ; ಗರುಡ-ಶೇಷ ರುದ್ರರು ಮನಸ್ಸಿನ ಅಭಿಮಾನಿ ದೇವತೆಯರು.  ನಂತರ ಭಾರತಿ ಅಥವಾ ಶ್ರದ್ಧಾದೇವಿ ಶ್ರದ್ಧೆಯ ಅಭಿಮಾನಿದೇವತೆ. ಪ್ರಾಣದೇವರು ಪ್ರಾಣದ ಅಭಿಮಾನಿದೇವತೆ. ಇದು ನಮ್ಮ ಸಾಧನೆಯ ಹಾದಿಯಲ್ಲಿನ ಅತ್ಯಂತ ಎತ್ತರದ ಮೆಟ್ಟಿಲು. ಈ ಮೆಟ್ಟಿಲಿನ ನಂತರ ನಮಗೆ ನೇರವಾಗಿ ಲಕ್ಷ್ಮೀ-ನಾರಾಯಣರ ದರ್ಶನ. ಈ ಎಲ್ಲಾ ಅಭಿಮಾನಿ ದೇವತೆಗಳ/ಕಲೆಗಳ ಸ್ವಾಮಿ ಆ ಭಗವಂತ. ಒಟ್ಟಿನಲ್ಲಿ ಹೇಳಬೇಕೆಂದರೆ ಇದು ನಮ್ಮ ಉಪಾಸನೆಯ ಹದಿನೆಂಟು ಮಜಲುಗಳನ್ನು ಹೇಳುತ್ತದೆ. ಹದಿನೆಂಟು ಭಾರತೀಯ ತತ್ತ್ವಶಾಸ್ತ್ರದ ಅಪೂರ್ವ ಸಂಖ್ಯೆ. ಇದು ‘ಜಯ’ವನ್ನು ಹೇಳುತ್ತದೆ. ಇಲ್ಲಿ ಈ ಹದಿನೆಂಟು ಮೆಟ್ಟಿಲುಗಳು ಸಂಸಾರದಿಂದ ಜಯಪಡೆಯಲಿಕ್ಕಾಗಿ ಇರುವ ಸಾಧನೆಯ ಮೆಟ್ಟಿಲುಗಳು.

ಸ ಯಥೇಮಾ ನಧ್ಯಃ ಸ್ಯಂದಮಾನಾಃ ಸಮುದ್ರಾಯಣಾಃ ಸಮುದ್ರಂ ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ತಾಸಾಂ ನಾಮರುಪೇ ಸಮುದ್ರ ಇತ್ಯೇವಂ ಪ್ರೋಚ್ಯತೇ ಏವಮೇವಾಸ್ಯ ಪರಿದ್ರಷ್ಟುರಿಮಾಃ ಷೋಡಶಕಲಾಃ ಪುರುಷಾಯಣಾಃ
ಪುರುಷಂ ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ಚಾSಸಾಂ ನಾಮರುಪೇ ಪುರುಷ ಇತ್ಯೇವಂ ಪ್ರೋಚ್ಯತೇ ಸ ಏಷೋSಕಲೋSಮೃತೋ ಭವತಿ

ಹೇಗೆ ಹರಿಯುವ ನದಿಯ ಕೊನೆಯ ಗುರಿ ಸಮುದ್ರವೋ ಹಾಗೇ, ಪ್ರತಿಯೊಬ್ಬ ಮೊಕ್ಷಯೋಗ್ಯ ಜೀವ ಹಾಗೂ ಸಕಲ ತತ್ತ್ವಾಭಿಮಾನಿ ದೇವತೆಗಳ ಕೊನೆಯ ಗುರಿ ಆ ಭಗವಂತ. ಮೋಕ್ಷವನ್ನು ಸೇರಿದ ಎಲ್ಲಾ ಜೀವರು ಭಗವಂತನನ್ನು ಸೇರುತ್ತಾರೆ. ಈ ರೀತಿ ಮೋಕ್ಷವನ್ನು ಸೇರಿದ ಮೇಲೆ ಅವರ ಸ್ವರೂಪರೂಪ, ಲಿಂಗ ಬದಲಾಗುವುದಿಲ್ಲ. ಆದರೆ  ಅವರು ಲೋಕದಲ್ಲಿ ಕಂಡಂತೆ ಬೇರೆಯಾಗಿ ಕಾಣಿಸಿಕೊಳ್ಳದೇ ಆ ಪರಮ ಪುರುಷನೊಂದಿಗಿರುತ್ತಾರೆ. ಇಲ್ಲಿ ಆ ಪರಮಪುರುಷ ಭಗವಂತನನ್ನು ಪಿಪ್ಪಲಾದರು ‘ಅಕಲಃ, ಅಮೃತಃ’ ಎಂದು ಸಂಬೋಧಿಸಿದ್ದಾರೆ. ಅಕಲಃ ಎಂದರೆ ಯಾವ ಕಲೆಗಳ ಸ್ಪರ್ಶವೂ ಇಲ್ಲದವ ಎಂದರ್ಥ. ಸಾವಿಲ್ಲದ ನಿತ್ಯಮುಕ್ತ ಭಗವಂತ ಅಮೃತಃ. ಮೊಕ್ಷಯೋಗ್ಯ ಜೀವ ಭಗವಂತನ ಅನುಗ್ರಹದಿಂದ ಹದಿನೈದು ಬೆಲಿಗಳನ್ನು ಕಳಚಿಕೊಂಡು ಸಕಲ ಕಲಾಭಿಮಾನಿದೇವತೆಗಳ ನೆರವಿನಿಂದ ಮೋಕ್ಷವನ್ನು ಪಡೆಯುತ್ತಾನೆ.  

ತದೇಷ ಶ್ಲೋಕಃ
ಅರಾ ಇವ ರಥನಾಭೌ ಕಲಾ ಯಸ್ಮಿನ್ ಪ್ರತಿಷ್ಟಿತಾಃ
ತಂ ವೇಧ್ಯಂ ಪುರುಷಂ ವೇದಯಥಾ ಮಾ ವೋ ಮೃತ್ಯುಃ ಪರಿವ್ಯಥಾ ಇತಿ

ಮೇಲೆ ವಿವರಿಸಲಾದ ವಿಷಯಗಳಿಗೆ ಸಂವಾದಿಯಾಗಿ/ಪೂರಕವಾಗಿ ಪಿಪ್ಪಲಾದರು ಈ ವೇದ ಮಂತ್ರವನ್ನು ಉಲ್ಲೇಖ ಮಾಡುತ್ತಾರೆ. “ಎಲ್ಲಾ ಕಲೆಗಳು, ಕಲಾಭಿಮಾನಿ ದೇವತೆಗಳು ಯಾರಲ್ಲಿ ಆಶ್ರಯರಾಗಿದ್ದಾರೋ  ಅವನು ಭಗವಂತ. ಹೇಗೆ ರಥದ ಚಕ್ರದ ಅರಗಿಲುಗಳು ಮದ್ಯದ ನಾಭಿಯಲ್ಲಿ ನೆಲೆಗೊಂಡಿದ್ದಾವೋ ಹಾಗೇ,  ಇಡೀ ವಿಶ್ವ  ಭಗವಂತನಲ್ಲಿ ನೆಲೆಗೊಂಡಿದೆ. ಸಮಸ್ತ ವೇದಗಳಿಂದ ವೇದ್ಯನಾದವ, ಸಾಧನೆಯಿಂದ ತಿಳಿದುಕೊಳ್ಳಲೇಬೇಕಾದ ಪರಮಪುರುಷ ಆ ಭಗವಂತ. ಇಂಥಹ ಪರಮಪುರುಷ ಭಗವಂತನನ್ನು ತಿಳಿದುಕೊಂಡಾಗ ನಮಗೆ ಸಾವು ದುಃಖವಾಗಿ ಕಾಡುವುದಿಲ್ಲ ಮತ್ತು ಸತ್ತ ಮೇಲೆ ಅಮೃತತ್ತ್ವ ನಮ್ಮಪಾಲಾಗುತ್ತದೆ”.

ತಾನ್ ಹೋವಾಚ ಚೈತಾವದೇವಾಹಮೇತತ್ ಪರಂ ಬ್ರಹ್ಮ ವೇದ ನಾತಃ ಪರಮಸ್ತೀತಿ

ಇಂಥಹ ಅತ್ಯದ್ಭುತ ಜ್ಞಾನ ಸಂದೇಶವನ್ನು ತನ್ನ ಆರುಮಂದಿ ಶಿಷ್ಯರಿಗೆ ನೀಡಿದ ಪಿಪ್ಪಲಾದರು ಕೊನೆಯಲ್ಲಿ ಹೇಳುತ್ತಾರೆ: “ನನಗೆ ತಿಳಿದಿರುವ ಎಲ್ಲಾ ಅಧ್ಯಾತ್ಮದ ರಹಸ್ಯವನ್ನು ನಾನು ನಿಮ್ಮ ಮುಂದೆ ತೆರೆದಿಟ್ಟೆ. ಇದರಿಂದಾಚೆಗೆ ನನಗೆ ಏನೂ ತಿಳಿದಿಲ್ಲ.” ಎಂದು. ಪಿಪ್ಪಲಾದರ ಈ ಮಾತಿನ ಹಿಂದಿನ ಸೌಜನ್ಯ ಅಪೂರ್ವವಾದುದು.  

ತೇ ತಮರ್ಚಯಂತಸ್ತ್ವಂ ಹಿ ನಃ ಪಿತಾ ಯೋSಸ್ಮಾಕಮವಿಧ್ಯಾಯಾಃ ಪರಂ ಪಾರಂ ತಾರಯಸೀತಿ ನಮಃ ಪರಮಋಷಿಭ್ಯೋ ನಮಃ ಪರಮಋಷಿಭ್ಯಃ

ಪಿಪ್ಪಲಾದರ ಉಪದೇಶವನ್ನು ಕೇಳಿದ ಆರು ಮಂದು ಋಷಿಗಳು ಬಹಳ ಸಂತೋಷದಿಂದ ಹೇಳುತ್ತಾರೆ: “ಗುರುಗಳೇ, ನಮ್ಮ ಬಾಳು ಧನ್ಯವಾಯಿತು. ನಿಮ್ಮಿಂದ ನಮಗೆ ಸತ್ಯದ ದರ್ಶನವಾಯಿತು. ನೀವು ನಮಗೆ ಜ್ಞಾನದ ದೇಹವನ್ನು ಕೊಟ್ಟ ತಂದೆ. ಅಜ್ಞಾನದ ಕಡಲಲ್ಲಿದ್ದ ನಮಗೆ ನೀವು ಜ್ಞಾನದ ತಡಿಯನ್ನು ತೋರಿದಿರಿ. ನಮಗಿನ್ನೇನು ಬೇಕು” ಎಂದು. ಮನುಷ್ಯಜನ್ಮದ ಏಕಮಾತ್ರ ಸಾರ್ಥಕ್ಯ ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಪಯಣಿಸಿ, ಕತ್ತಲಿನಿಂದ ಬೆಳಕಿಂದ ಕಡೆಗೆ ಪಯಣಿಸಿ, ಸಾವಿನಿಂದ ಅಮೃತತ್ವವನ್ನು ಪಡೆಯುವುದು.  “ನೀವು ನಮ್ಮನ್ನು  ಸಂಸಾರದ ಗಡಿ ದಾಟಿಸಿ ಮೋಕ್ಷದತ್ತ ಹಾಯಿಸಿದಿರಿ” ಎಂದು ಹೇಳಿದ ಋಷಿಗಳು ಕೊನೆಯಲ್ಲಿ ಹೇಳುತ್ತಾರೆ:  “ಪರಮಋಷಿಭ್ಯೋ ನಮಃ ಪರಮಋಷಿಭ್ಯಃ” ಎಂದು. ಅಂದರೆ “ಪರಮಋಷಿಗಳಿಗೆ ನಮಸ್ಕಾರ, ಪರಮ ಋಷಿಗಳಿಗೆ ನಮಸ್ಕಾರ” ಎಂದರ್ಥ. ಋಷಿ ಎಂದರೆ ಜ್ಞಾನಿ. ಪರಮಋಷಿ ಎಂದರೆ ಪೂರ್ಣಜ್ಞಾನಿ. ಭಗವಂತ ಒಬ್ಬನೇ ಪೂರ್ಣ ಜ್ಞಾನಿ. “ಸರ್ವಜ್ಞನಾದ ಭಗವಂತನ ಅನಂತರೂಪಗಳಿಗೆ ನಮ್ಮ ನಮಸ್ಕಾರ; ಭಗವಂತನನ್ನು ತಿಳಿದ ಎಲ್ಲಾ ಜ್ಞಾನಿ ಶ್ರೇಷ್ಠರಿಗೆ ನಮಸ್ಕಾರ; ವಿಶೇಷವಾಗಿ ನಮಗೆ ಜ್ಞಾನವನ್ನು ಕೊಟ್ಟ ಪಿಪ್ಪಲಾದರಿಗೆ ನಮಸ್ಕಾರ” ಎಂದು ನಮಸ್ಕರಿಸಿದರು ಎನ್ನುವಲ್ಲಿಗೆ ಪ್ರಶ್ನೋಪನಿಷತ್ತಿನ ಈ ಅತ್ಯದ್ಭುತ ಉಪದೇಶ ಕೊನೆಗೊಳ್ಳುತ್ತದೆ.

ಇತಿ ಪ್ರಶ್ನೋಪನಿಷದಿ ಷಷ್ಠಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಆರನೇ ಪ್ರಶ್ನೆ/ಅಧ್ಯಾಯ ಮುಗಿಯಿತು
*******
|| ಸರ್ವೇ ಜನಾಃ ಸುಖಿನೋ ಭವಂತು - ಶ್ರೀ ಕೃಷ್ಣಾರ್ಪಣಮಸ್ತು ||

No comments:

Post a Comment