ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Wednesday, December 5, 2012

Prashnopanishad in Kannada-Prashna-VI (03-04)


ಸ ಈಕ್ಷಾಚಕ್ರೇ ಕಸ್ಮಿನ್ ನ್ವಹಮುತ್ಕ್ರಾಂತ ಉತ್ಕ್ರಾಂತೋ ಭವಿಷ್ಯಾಮಿ ಕಸ್ಮಿನ್ ವಾ ಪ್ರತಿಷ್ಟಿತೇ ಪ್ರತಿಷ್ಟಸ್ಯಾಮೀತಿ

ಸೃಷ್ಟಿಯ ಆರಂಭದಲ್ಲಿ ಭಗವಂತ ತನ್ನ ಸೃಷ್ಟಿಯ ಕುರಿತು ಹೀಗೆ ಆಲೋಚಿಸಿದ: “ನಾನು ಸೃಷ್ಟಿಮಾಡಿದ ಮೇಲೆ ಪ್ರತಿಯೊಂದು ವಸ್ತುವಿನ ಒಳಗೂ ನಾನು ತುಂಬುತ್ತೇನೆ. ಜೀವನನ್ನು ಧಾರಣೆ ಮಾಡಿ ನಾನು ದೇಹವನ್ನು ಪ್ರವೇಶಿಸುತ್ತೇನೆ ಮತ್ತು ಆ ಜೀವದ ಆಯುಸ್ಸು ಮುಗಿದಾಗ ಹೊರಬರುತ್ತೇನೆ” ಎಂದು. ಆದ್ದರಿಂದ ಹುಟ್ಟುವುದು ಎಂದರೆ ಜೀವನ ಜೊತೆಗೆ ಭಗವಂತ ದೇಹ ಪ್ರವೇಶ ಮಾಡುವುದು ಹಾಗೂ ಸಾಯುವುದು ಎಂದರೆ ಜೀವನನ್ನು ಹಿಡಿದುಕೊಂಡು ದೇಹದಿಂದ ಹೊರಬರುವುದು. ಇದೇ ಕಾರಣಕ್ಕಾಗಿ ಭಗವಂತನನ್ನು ‘ಶತರ್ಚಿ’ ಎಂದು ಕರೆಯುತ್ತಾರೆ.   

ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ

ಸೃಷ್ಟಿ ಪ್ರಾರಂಭದಲ್ಲಿ ಭಗವಂತ ತನ್ನೊಂದಿಗೆ ಸದಾ ಇರುವ ಒಬ್ಬ ಒಡನಾಡಿ ಬೇಕು ಎಂದು ಇಚ್ಛೆಪಟ್ಟು ಪ್ರಾಣದೇವರನ್ನು ಸೃಷ್ಟಿ ಮಾಡಿದ. ಪ್ರಪಂಚ ಸೃಷ್ಟಿಯಲ್ಲಿ ಪ್ರಾಣದಸೃಷ್ಟಿ ಎಂದರೆ ಜೀವಕಲೆಯ ಸೃಷ್ಟಿ. ಅಂದರೆ ಜೀವರುಗಳ ಸೃಷ್ಟಿ. ಈ ಸಮಸ್ತ ಜೀವರುಗಳಿಗೆ ಅಭಿಮಾನಿ ದೇವತೆ ಪ್ರಾಣದೇವರು.  ಷೋಡಶಕಲೆಗಳಲ್ಲಿ ‘ಜೀವ’ ಹದಿನಾರನೇ ಕಲೆ ಹಾಗೂ ಇದೊಂದೇ ಚೇತನ. ಇದಲ್ಲದೆ ಇನ್ನು ಹದಿನೈದು ಕಲೆಗಳು. ಅವುಗಳೆಂದರೆ: ಶ್ರದ್ಧೆ, ಖಂ, ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ಲೋಕೇಷು ನಾಮ.
ಮೊದಲು ಜೀವನಿಗೆ ಶ್ರದ್ಧೆಯನ್ನು ಸೃಷ್ಟಿಮಾಡಿದ. ಇದು ಮಾನಸಿಕ ಸ್ಥಿತಿ; ಜೀವದ ಅಂತರಂಗದ ಸ್ಥಿತಿ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಅದು ಶ್ರದ್ಧೆ. ನಮ್ಮನಮ್ಮ ಶ್ರದ್ಧೆ ನಮನಮಗೆ. ನಾವು ಏನನ್ನು ನಂಬುತ್ತೆವೋ ಅದು ನಮಗೆ ಸತ್ಯ. ನಾವು ಏನನ್ನು ನಂಬುವುದಿಲ್ಲವೋ ಅದು ನಮ್ಮ ಪಾಲಿಗೆ ಇಲ್ಲಾ. ಆದ್ದರಿಂದ ಜೀವದ ಇಡಿಯ ಬೆಳವಣಿಗೆಗೆ ಮೂಲಭೂತವಾಗಿರತಕ್ಕಂತದ್ದು ‘ನಂಬಿಕೆ’. ನಂಬಿಕೆ ನಿಜವಾದರೆ ಏಳಿಗೆ. ಇಲ್ಲದಿದ್ದರೆ ಇಲ್ಲಾ! ಹಾಗಾಗಿ ನಮ್ಮ ಇಡೀ ಜೀವನದ ಏರಿಳಿತಗಳಿಗೆ ಮೂಲಭೂತವಾಗಿರುವುದು ನಮ್ಮ ನಂಬಿಕೆ. ಉದಾಹರಣೆಗೆ ಕೆಲವರು ದೇವರೇ ಇಲ್ಲಾ ಎಂದು ಗಟ್ಟಿಯಾಗಿ ನಂಬಿರುತ್ತಾರೆ. ಆಗ ಅವರು ಮೊಕ್ಷಮಾರ್ಗದಲ್ಲಿ ಸಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ‘ಶ್ರದ್ಧೆ’ ಹುಟ್ಟುವುದಕ್ಕೂ ಮೊದಲು ಇರುವ ಮೊಳಕೆ. ಆನಂತರ ಹುಟ್ಟಿದಮೇಲೆ ಆ ಮೊಳಕೆಯ ಮೇಲೆ ಅನುವಂಶೀಯ ಮತ್ತು ಪರಿಸರದ ಪ್ರಭಾವ ಇತ್ಯಾದಿ ನಂಬಿಕೆಗಳು ಮುಚ್ಚಳವಾಗಿ ಸೇರಿಕೊಳ್ಳುತ್ತವೆ.
‘ಜೀವ ಮತ್ತು ಅದಕ್ಕೊಂದು ನಂಬಿಕೆ’. ಇಂತಹ ಜೀವ ತಾಯಿಯ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಅಲ್ಲಿ ಆ ಜೀವಕ್ಕೆ ಪಂಚಭೂತಗಳಿಂದ ಕೂಡಿದ ಶರೀರ ಬರುತ್ತದೆ. ಇಲ್ಲಿ ಖಂ ಅಂದರೆ ಆಕಾಶ, ವಾಯು ಅಂದರೆ ಗಾಳಿ, ಜ್ಯೋತಿ ಅಂದರೆ ಬೆಂಕಿ, ಆಪಃ ಎಂದರೆ ನೀರು. ಪ್ರಥಿವೀ ಎಂದರೆ ಮಣ್ಣು. ಹೀಗೆ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವ ಐದು ಕಲೆಗಳು ಸೇರಿ ಶರೀರ ನಿರ್ಮಾಣವಾಗುತ್ತದೆ. ಇದನ್ನು ಅನ್ನಮಯಕೋಶ ಎನ್ನುತ್ತಾರೆ. ಪಂಚಭೂತಗಳಿಂದಾದ ಶರೀರ ಪ್ರಪಂಚದಲ್ಲಿರುವುದನ್ನು ಅನುಭವಿಸಲು ಇಂದ್ರಿಯಗಳು ಬೇಕು. ಪ್ರಪಂಚದಲ್ಲಿರುವ ರೂಪಗಳನ್ನು ನೋಡಲು ಕಣ್ಣು, ನಾದವನ್ನು ಕೇಳಲು ಕಿವಿ, ಸುಗಂಧ ಮೂಸಲು ಮೂಗು, ರುಚಿ ನೋಡಲು ನಾಲಿಗೆ, ಸ್ಪರ್ಶದ ಅನುಭವಕ್ಕೆ ತ್ವಗೀಂದ್ರಿಯ. ಹೀಗೆ ಪಂಚೇಂದ್ರಿಯಗಳ ಸೃಷ್ಟಿಯಾಯಿತು. ನಂತರ ಕುಸುರಿಕೆಲಸ ಶಿಲ್ಪಕಲೆ ಇತ್ಯಾದಿ ಕರ್ಮವನ್ನು ಮಾಡಲು ಕೈ, ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗಿ ತನ್ನ ಅನುಭವವನ್ನು ವಿಸ್ತರಿಸಿಕೊಳ್ಳಲು ಕಾಲು, ನುಡಿಯಲು ಬಾಯಿ, ದೇಹಕ್ಕೆ ಬೇಡವಾದುದ್ದನ್ನು ಹೊರಹಾಕಲು ಪಾಯು ಮತ್ತು ಉಪಸ್ಥ; ಸೃಷ್ಟಿ ವಿಸ್ತಾರಕ್ಕೆ, ಸಂತಾನ ವೃದ್ಧಿಗೆ-ಜನನೇಂದ್ರಿಯ. ಹೀಗೆ ಪಂಚಕರ್ಮೇಂದ್ರಿಯದ ಸೃಷ್ಟಿಯಾಯಿತು.  ಆನಂತರ ಇಂದ್ರಿಯಾನುಭವವನ್ನು ಗ್ರಹಿಸಲು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎನ್ನುವ ಐದು ಅಂತಃಕರಣಗಳನ್ನೊಳಗೊಂಡ ಮನೋಮಯಕೋಶ ಸೃಷ್ಟಿಯಾಯಿತು. ಹೀಗೆ  ಶ್ರದ್ಧೆ, ಪಂಚಭೂತಗಳು, ಇಂದ್ರಿಯಗಳು(ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯ) ಮತ್ತು  ಮನೋಮಯಕೋಶ ಎನ್ನುವ ಎಂಟು ಕಲೆಗಳಿಂದ ವ್ಯಕ್ತಿತ್ವದ ಪೂರ್ಣ ಬೆಳವಣಿಗೆಯಾಯಿತು. ಹೀಗೆ ರೂಪುಗೊಂಡ ದೇಹದ ಭೋಗಕ್ಕಾಗಿ ಜಡಪ್ರಪಂಚದ ಸೃಷ್ಟಿಯಾಯಿತು. ಜಡಪದಾರ್ಥವನ್ನು ಆಹಾರವಾಗಿ ಸೇವಿಸಿದಾಗ  ಅದರಿಂದ ದೇಹದಲ್ಲಿ ಶಕ್ತಿ ಬೆಳೆಯುತ್ತದೆ. ಅದರಿಂದ ಮುಂದಿನ ಸಂತಾನಕ್ಕೆ ಕಾರಣಭೂತವಾಗಿರುವ ವೀರ್ಯ ದೇಹದಲ್ಲಿ ನಿಷ್ಪನ್ನವಾಗುತ್ತದೆ. ಇದು ಸಂತಾನಕ್ಕೆ ಬೇಕಾದ ಹತ್ತನೇ ಕಲೆ.
ಜೀವ ದೇಹದಿಂದ ಬೆಳೆಯುವಾಗ ಜೀವನದ ನಡೆಯಲ್ಲಿ ಮೂರು ಕಲೆಗಳಿವೆ. ಅವುಗಳೆಂದರೆ ತಪಃ, ಮಂತ್ರ ಮತ್ತು ಕರ್ಮ. ಮನಸ್ಸಿನಲ್ಲಿ ತಾನು ಏನುಮಾಡಬೇಕು, ಏನಾಗಬೇಕು, ಇತ್ಯಾದಿ ಆಲೋಚನೆ ಮಾಡುವುದು ತಪಃ. ಹಾಗೆ ಯೋಚಿಸಿರುವುದನ್ನು ಇನ್ನೊಬ್ಬರೊಂದಿಗೆ ಮಂತ್ರಾಲೋಚನೆ ಮಾಡುವುದು ಮಂತ್ರ. ನಂತರ ತಾನು ಆಲೋಚಿಸಿರುವುದನ್ನು, ಹೇಳಿರುವುದನ್ನು ಮಾಡುವುದು ಕರ್ಮ. ಇವು ಬೆಳವಣಿಗೆಯಲ್ಲಿರುವ ಮೂರು ಕಲೆಗಳು. ಕರ್ಮವನ್ನು ಮಾಡುತ್ತಾ ನಾವು ಲೋಕವನ್ನು ಗಳಿಸುತ್ತೇವೆ. ಇಲ್ಲಿ ಲೋಕ ಅಂದರೆ ಸ್ಥಿರ-ಚರ ಸೊತ್ತುಗಳು. ಇನ್ನು ಹದಿನೈದನೇ ಕಲೆ ನಾಮ. ಇಲ್ಲಿ ನಾಮ ಅಂದರೆ ಹುಟ್ಟಿದಾಗ ಇಟ್ಟ ಹೆಸರು,  ಜೀವನದಲ್ಲಿ ಪಡೆದ ಕೀರ್ತಿ, ಅಪಕೀರ್ತಿ ಇತ್ಯಾದಿ.
ಒಟ್ಟಿನಲ್ಲಿ ಹೇಳಬೇಕೆಂದರೆ ಶ್ರದ್ಧೆ, ಪಂಚಭೂತಗಳು, ಇಂದ್ರಿಯಗಳು, ಮನೋಮಯಕೋಶ, ಆಹಾರ, ವೀರ್ಯ, ಆಲೋಚನೆ, ಮಾತು, ಕರ್ಮ, ಲೋಕ ಮತ್ತು ನಾಮ ಇವು ಜೀವದ ಮುಂದಿರುವ ಹದಿನೈದು ಬೇಲಿಗಳು. ಈ ಹದಿನೈದು ಬೇಲಿಗಳೊಳಗೆ ಸಿಕ್ಕಿಹಾಕಿಕೊಂಡಿರುವ ಜೀವ ಹದಿನಾರನೆ ಕಲೆ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಅದೇನೆಂದರೆ: ಇಂದ್ರಿಯ, ಮನಸ್ಸು, ಇತ್ಯಾದಿ ನಮಗೆ ಬೇಲಿಯಾಗುವುದು ಹೇಗೆ ಎಂದು.  ಇಂದ್ರಿಯಗಳಿಂದ ಮನುಷ್ಯ ಜ್ಞಾನಗಳಿಸುತ್ತಾನೆ, ಎತ್ತರಕ್ಕೇರುತ್ತಾನೆ. ಮನಸ್ಸಿನಿಂದ ಉಚ್ಛ ವಿಚಾರಗಳನ್ನು ಚಿಂತನೆ ಮಾಡುತ್ತಾನೆ. ಹೀಗಿರುವಾಗ ಇದು ಬೇಲಿಯಾಗುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಸ್ವಲ್ಪ ಅಂತರಂಗದ ವಿಚಾರವನ್ನು ವಿಶ್ಲೇಷಿಸಬೇಕಾಗುತ್ತದೆ. ಉದಾಹರಣೆಗೆ ಕಣ್ಣು. ಕಣ್ಣಿನಿಂದ ನಾವು ನೋಡುತ್ತೇವೆ. ಆದರೆ ಈ ಕಣ್ಣು ನಮ್ಮ ಅಂತರಂಗವನ್ನು, ಸೂಕ್ಷ್ಮಪ್ರಪಂಚವನ್ನು ಗ್ರಹಿಸಲಾರದು. ಇದರಿಂದಾಗಿ ನಾವು ನಮ್ಮ ಒಳಗಣ್ಣನ್ನು ಮರೆತು ಹೊರಪ್ರಪಂಚದಲ್ಲೇ ಬದುಕಿಬಿಡುತ್ತೇವೆ. ಅದೇ ರೀತಿ ಮನಸ್ಸು. ಮನಸ್ಸು ನಮಗೆ ಸತ್ಯವನ್ನು ತಿಳಿಯದಂತೆ ನಮ್ಮನ್ನು ಹೊರಗೆಳೆದು ನಮ್ಮ ದಿಕ್ಕನ್ನು ಬದಲಿಸುತ್ತದೆ. ಎಲ್ಲವುದಕ್ಕೂ ಮೊದಲು ನಮ್ಮ ನಂಬಿಕೆ. ಒಂದು ವೇಳೆ ನಮ್ಮ ನಂಬಿಕೆ ತಪ್ಪಾಗಿದ್ದರೆ ನಮ್ಮ ಇಡೀ ಜೀವನವೇ ವ್ಯರ್ಥವಾಗುತ್ತದೆ. ಹೀಗೆ ಈ ಎಲ್ಲಾ ಹದಿನೈದು ಕಲೆಗಳೂ ಕೂಡಾ ಜೀವನನ್ನು ಬೇಲಿಯಂತೆ ಸುತ್ತುವರಿದಿರುತ್ತವೆ.

No comments:

Post a Comment