ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, December 7, 2012

Prashnopanishad in Kannada-Prashna-VI (05-08)


ಹದಿನೈದು ಬೇಲಿಗಳನ್ನು ಹದಿನಾರನೇ ಜೀವನಿಗೆ ಕೊಟ್ಟವಳು ಹದಿನೇಳನೇ ಪ್ರಕೃತಿ. ಅದರಿಂದ ಬಿಡುಗಡೆಗೊಳಿಸಿ ಮೊಕ್ಷಕೊಡುವವ ಹದಿನೆಂಟನೇ ನಾರಾಯಣ. ಹಾಗಾಗಿ ವೇದಾಂತದಲ್ಲಿರುವ ಒಟ್ಟು ವಿಷಯಗಳು ಹದಿನೆಂಟೇ.
ಮೇಲೆ ಹೇಳಿದ ಹದಿನಾರು ಕಲೆಗಳಲ್ಲಿ ಹದಿನೈದು ಜಡಕಲೆ. ನಮಗೆ ತಿಳಿದಂತೆ ಅಧ್ಯಾತ್ಮದಲ್ಲಿ ಎಲ್ಲೂ ಕೇವಲ ಜಡವನ್ನು ಹೇಳುವ ಪದ್ಧತಿ ಇಲ್ಲಾ. ಆದ್ದರಿಂದ ಹೇಗೆ ಜೀವ ಕಲಾಭಿಮಾನಿ ಪ್ರಾಣದೇವರೋ ಹಾಗೇ ಇತರ ಹದಿನೈದು ಕಲೆಗಳು ಅದರ ತತ್ತ್ವಾಭಿಮಾನಿ ದೇವತೆಗಳನ್ನು ಹೇಳುತ್ತವೆ. ಈ ತತ್ತ್ವಾಭಿಮಾನಿ ದೇವತೆಗಳು ಜೀವನ ಸಾಧನೆಯ ಹಾದಿಯಲ್ಲಿನ ವಿವಿಧ ಹಂತದಲ್ಲಿರುವ ಮೆಟ್ಟಿಲುಗಳು. ಈ ದೇವತೆಗಳನ್ನು ನಾವು ಅವರ ತಾರತಮ್ಯಕ್ಕನುಗುಣವಾಗಿ ವಿವಿಧ ಹಂತದಲ್ಲಿ ಕಾಣಬೇಕು. ಮೊದಲಿಗೆ ಪುಷ್ಕರ. ಈತ ಕರ್ಮದ ಅಭಿಮಾನಿ ದೇವತೆ. ಈತ ನಮಗೆ ಸಾಧನೆಯ ಹಾದಿಯಲ್ಲಿ ಮೊದಲ ಮೆಟ್ಟಿಲು. ನಂತರ ಶನಿ. ಈತ ಭೂಮಿಯ ಅಭಿಮಾನಿ ದೇವತೆ. ಹಾಗೇ ಉಷಾದೇವಿ ಮಾತಿನ ದೇವತೆ; ಬುಧ ನೀರಿಂದ ದೇವತೆ; ಸ್ವಾಹಾದೇವಿ ಮಾತಿನ ದೇವತೆ; ಅಗ್ನಿ ಪುತ್ರ ಪಾವಕ ಬೆಂಕಿಯ ದೇವತೆ;  ವಾಯುಪುತ್ರ ಮರೀಚಿ ಗಾಳಿಯ ದೇವತೆ; ಗಣಪತಿ ಆಕಾಶದ ದೇವತೆ; ವರುಣ ವೀರ್ಯದ ದೇವತೆ; ಚಂದ್ರ ಅನ್ನದ ಅಭಿಮಾನಿ ದೇವತೆ; ಇಂದ್ರ ಇಂದ್ರಿಯಗಳ ಅಭಿಮಾನಿ ದೇವತೆ; ಗರುಡ-ಶೇಷ ರುದ್ರರು ಮನಸ್ಸಿನ ಅಭಿಮಾನಿ ದೇವತೆಯರು.  ನಂತರ ಭಾರತಿ ಅಥವಾ ಶ್ರದ್ಧಾದೇವಿ ಶ್ರದ್ಧೆಯ ಅಭಿಮಾನಿದೇವತೆ. ಪ್ರಾಣದೇವರು ಪ್ರಾಣದ ಅಭಿಮಾನಿದೇವತೆ. ಇದು ನಮ್ಮ ಸಾಧನೆಯ ಹಾದಿಯಲ್ಲಿನ ಅತ್ಯಂತ ಎತ್ತರದ ಮೆಟ್ಟಿಲು. ಈ ಮೆಟ್ಟಿಲಿನ ನಂತರ ನಮಗೆ ನೇರವಾಗಿ ಲಕ್ಷ್ಮೀ-ನಾರಾಯಣರ ದರ್ಶನ. ಈ ಎಲ್ಲಾ ಅಭಿಮಾನಿ ದೇವತೆಗಳ/ಕಲೆಗಳ ಸ್ವಾಮಿ ಆ ಭಗವಂತ. ಒಟ್ಟಿನಲ್ಲಿ ಹೇಳಬೇಕೆಂದರೆ ಇದು ನಮ್ಮ ಉಪಾಸನೆಯ ಹದಿನೆಂಟು ಮಜಲುಗಳನ್ನು ಹೇಳುತ್ತದೆ. ಹದಿನೆಂಟು ಭಾರತೀಯ ತತ್ತ್ವಶಾಸ್ತ್ರದ ಅಪೂರ್ವ ಸಂಖ್ಯೆ. ಇದು ‘ಜಯ’ವನ್ನು ಹೇಳುತ್ತದೆ. ಇಲ್ಲಿ ಈ ಹದಿನೆಂಟು ಮೆಟ್ಟಿಲುಗಳು ಸಂಸಾರದಿಂದ ಜಯಪಡೆಯಲಿಕ್ಕಾಗಿ ಇರುವ ಸಾಧನೆಯ ಮೆಟ್ಟಿಲುಗಳು.

ಸ ಯಥೇಮಾ ನಧ್ಯಃ ಸ್ಯಂದಮಾನಾಃ ಸಮುದ್ರಾಯಣಾಃ ಸಮುದ್ರಂ ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ತಾಸಾಂ ನಾಮರುಪೇ ಸಮುದ್ರ ಇತ್ಯೇವಂ ಪ್ರೋಚ್ಯತೇ ಏವಮೇವಾಸ್ಯ ಪರಿದ್ರಷ್ಟುರಿಮಾಃ ಷೋಡಶಕಲಾಃ ಪುರುಷಾಯಣಾಃ
ಪುರುಷಂ ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ಚಾSಸಾಂ ನಾಮರುಪೇ ಪುರುಷ ಇತ್ಯೇವಂ ಪ್ರೋಚ್ಯತೇ ಸ ಏಷೋSಕಲೋSಮೃತೋ ಭವತಿ

ಹೇಗೆ ಹರಿಯುವ ನದಿಯ ಕೊನೆಯ ಗುರಿ ಸಮುದ್ರವೋ ಹಾಗೇ, ಪ್ರತಿಯೊಬ್ಬ ಮೊಕ್ಷಯೋಗ್ಯ ಜೀವ ಹಾಗೂ ಸಕಲ ತತ್ತ್ವಾಭಿಮಾನಿ ದೇವತೆಗಳ ಕೊನೆಯ ಗುರಿ ಆ ಭಗವಂತ. ಮೋಕ್ಷವನ್ನು ಸೇರಿದ ಎಲ್ಲಾ ಜೀವರು ಭಗವಂತನನ್ನು ಸೇರುತ್ತಾರೆ. ಈ ರೀತಿ ಮೋಕ್ಷವನ್ನು ಸೇರಿದ ಮೇಲೆ ಅವರ ಸ್ವರೂಪರೂಪ, ಲಿಂಗ ಬದಲಾಗುವುದಿಲ್ಲ. ಆದರೆ  ಅವರು ಲೋಕದಲ್ಲಿ ಕಂಡಂತೆ ಬೇರೆಯಾಗಿ ಕಾಣಿಸಿಕೊಳ್ಳದೇ ಆ ಪರಮ ಪುರುಷನೊಂದಿಗಿರುತ್ತಾರೆ. ಇಲ್ಲಿ ಆ ಪರಮಪುರುಷ ಭಗವಂತನನ್ನು ಪಿಪ್ಪಲಾದರು ‘ಅಕಲಃ, ಅಮೃತಃ’ ಎಂದು ಸಂಬೋಧಿಸಿದ್ದಾರೆ. ಅಕಲಃ ಎಂದರೆ ಯಾವ ಕಲೆಗಳ ಸ್ಪರ್ಶವೂ ಇಲ್ಲದವ ಎಂದರ್ಥ. ಸಾವಿಲ್ಲದ ನಿತ್ಯಮುಕ್ತ ಭಗವಂತ ಅಮೃತಃ. ಮೊಕ್ಷಯೋಗ್ಯ ಜೀವ ಭಗವಂತನ ಅನುಗ್ರಹದಿಂದ ಹದಿನೈದು ಬೆಲಿಗಳನ್ನು ಕಳಚಿಕೊಂಡು ಸಕಲ ಕಲಾಭಿಮಾನಿದೇವತೆಗಳ ನೆರವಿನಿಂದ ಮೋಕ್ಷವನ್ನು ಪಡೆಯುತ್ತಾನೆ.  

ತದೇಷ ಶ್ಲೋಕಃ
ಅರಾ ಇವ ರಥನಾಭೌ ಕಲಾ ಯಸ್ಮಿನ್ ಪ್ರತಿಷ್ಟಿತಾಃ
ತಂ ವೇಧ್ಯಂ ಪುರುಷಂ ವೇದಯಥಾ ಮಾ ವೋ ಮೃತ್ಯುಃ ಪರಿವ್ಯಥಾ ಇತಿ

ಮೇಲೆ ವಿವರಿಸಲಾದ ವಿಷಯಗಳಿಗೆ ಸಂವಾದಿಯಾಗಿ/ಪೂರಕವಾಗಿ ಪಿಪ್ಪಲಾದರು ಈ ವೇದ ಮಂತ್ರವನ್ನು ಉಲ್ಲೇಖ ಮಾಡುತ್ತಾರೆ. “ಎಲ್ಲಾ ಕಲೆಗಳು, ಕಲಾಭಿಮಾನಿ ದೇವತೆಗಳು ಯಾರಲ್ಲಿ ಆಶ್ರಯರಾಗಿದ್ದಾರೋ  ಅವನು ಭಗವಂತ. ಹೇಗೆ ರಥದ ಚಕ್ರದ ಅರಗಿಲುಗಳು ಮದ್ಯದ ನಾಭಿಯಲ್ಲಿ ನೆಲೆಗೊಂಡಿದ್ದಾವೋ ಹಾಗೇ,  ಇಡೀ ವಿಶ್ವ  ಭಗವಂತನಲ್ಲಿ ನೆಲೆಗೊಂಡಿದೆ. ಸಮಸ್ತ ವೇದಗಳಿಂದ ವೇದ್ಯನಾದವ, ಸಾಧನೆಯಿಂದ ತಿಳಿದುಕೊಳ್ಳಲೇಬೇಕಾದ ಪರಮಪುರುಷ ಆ ಭಗವಂತ. ಇಂಥಹ ಪರಮಪುರುಷ ಭಗವಂತನನ್ನು ತಿಳಿದುಕೊಂಡಾಗ ನಮಗೆ ಸಾವು ದುಃಖವಾಗಿ ಕಾಡುವುದಿಲ್ಲ ಮತ್ತು ಸತ್ತ ಮೇಲೆ ಅಮೃತತ್ತ್ವ ನಮ್ಮಪಾಲಾಗುತ್ತದೆ”.

ತಾನ್ ಹೋವಾಚ ಚೈತಾವದೇವಾಹಮೇತತ್ ಪರಂ ಬ್ರಹ್ಮ ವೇದ ನಾತಃ ಪರಮಸ್ತೀತಿ

ಇಂಥಹ ಅತ್ಯದ್ಭುತ ಜ್ಞಾನ ಸಂದೇಶವನ್ನು ತನ್ನ ಆರುಮಂದಿ ಶಿಷ್ಯರಿಗೆ ನೀಡಿದ ಪಿಪ್ಪಲಾದರು ಕೊನೆಯಲ್ಲಿ ಹೇಳುತ್ತಾರೆ: “ನನಗೆ ತಿಳಿದಿರುವ ಎಲ್ಲಾ ಅಧ್ಯಾತ್ಮದ ರಹಸ್ಯವನ್ನು ನಾನು ನಿಮ್ಮ ಮುಂದೆ ತೆರೆದಿಟ್ಟೆ. ಇದರಿಂದಾಚೆಗೆ ನನಗೆ ಏನೂ ತಿಳಿದಿಲ್ಲ.” ಎಂದು. ಪಿಪ್ಪಲಾದರ ಈ ಮಾತಿನ ಹಿಂದಿನ ಸೌಜನ್ಯ ಅಪೂರ್ವವಾದುದು.  

ತೇ ತಮರ್ಚಯಂತಸ್ತ್ವಂ ಹಿ ನಃ ಪಿತಾ ಯೋSಸ್ಮಾಕಮವಿಧ್ಯಾಯಾಃ ಪರಂ ಪಾರಂ ತಾರಯಸೀತಿ ನಮಃ ಪರಮಋಷಿಭ್ಯೋ ನಮಃ ಪರಮಋಷಿಭ್ಯಃ

ಪಿಪ್ಪಲಾದರ ಉಪದೇಶವನ್ನು ಕೇಳಿದ ಆರು ಮಂದು ಋಷಿಗಳು ಬಹಳ ಸಂತೋಷದಿಂದ ಹೇಳುತ್ತಾರೆ: “ಗುರುಗಳೇ, ನಮ್ಮ ಬಾಳು ಧನ್ಯವಾಯಿತು. ನಿಮ್ಮಿಂದ ನಮಗೆ ಸತ್ಯದ ದರ್ಶನವಾಯಿತು. ನೀವು ನಮಗೆ ಜ್ಞಾನದ ದೇಹವನ್ನು ಕೊಟ್ಟ ತಂದೆ. ಅಜ್ಞಾನದ ಕಡಲಲ್ಲಿದ್ದ ನಮಗೆ ನೀವು ಜ್ಞಾನದ ತಡಿಯನ್ನು ತೋರಿದಿರಿ. ನಮಗಿನ್ನೇನು ಬೇಕು” ಎಂದು. ಮನುಷ್ಯಜನ್ಮದ ಏಕಮಾತ್ರ ಸಾರ್ಥಕ್ಯ ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಪಯಣಿಸಿ, ಕತ್ತಲಿನಿಂದ ಬೆಳಕಿಂದ ಕಡೆಗೆ ಪಯಣಿಸಿ, ಸಾವಿನಿಂದ ಅಮೃತತ್ವವನ್ನು ಪಡೆಯುವುದು.  “ನೀವು ನಮ್ಮನ್ನು  ಸಂಸಾರದ ಗಡಿ ದಾಟಿಸಿ ಮೋಕ್ಷದತ್ತ ಹಾಯಿಸಿದಿರಿ” ಎಂದು ಹೇಳಿದ ಋಷಿಗಳು ಕೊನೆಯಲ್ಲಿ ಹೇಳುತ್ತಾರೆ:  “ಪರಮಋಷಿಭ್ಯೋ ನಮಃ ಪರಮಋಷಿಭ್ಯಃ” ಎಂದು. ಅಂದರೆ “ಪರಮಋಷಿಗಳಿಗೆ ನಮಸ್ಕಾರ, ಪರಮ ಋಷಿಗಳಿಗೆ ನಮಸ್ಕಾರ” ಎಂದರ್ಥ. ಋಷಿ ಎಂದರೆ ಜ್ಞಾನಿ. ಪರಮಋಷಿ ಎಂದರೆ ಪೂರ್ಣಜ್ಞಾನಿ. ಭಗವಂತ ಒಬ್ಬನೇ ಪೂರ್ಣ ಜ್ಞಾನಿ. “ಸರ್ವಜ್ಞನಾದ ಭಗವಂತನ ಅನಂತರೂಪಗಳಿಗೆ ನಮ್ಮ ನಮಸ್ಕಾರ; ಭಗವಂತನನ್ನು ತಿಳಿದ ಎಲ್ಲಾ ಜ್ಞಾನಿ ಶ್ರೇಷ್ಠರಿಗೆ ನಮಸ್ಕಾರ; ವಿಶೇಷವಾಗಿ ನಮಗೆ ಜ್ಞಾನವನ್ನು ಕೊಟ್ಟ ಪಿಪ್ಪಲಾದರಿಗೆ ನಮಸ್ಕಾರ” ಎಂದು ನಮಸ್ಕರಿಸಿದರು ಎನ್ನುವಲ್ಲಿಗೆ ಪ್ರಶ್ನೋಪನಿಷತ್ತಿನ ಈ ಅತ್ಯದ್ಭುತ ಉಪದೇಶ ಕೊನೆಗೊಳ್ಳುತ್ತದೆ.

ಇತಿ ಪ್ರಶ್ನೋಪನಿಷದಿ ಷಷ್ಠಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಆರನೇ ಪ್ರಶ್ನೆ/ಅಧ್ಯಾಯ ಮುಗಿಯಿತು
*******
|| ಸರ್ವೇ ಜನಾಃ ಸುಖಿನೋ ಭವಂತು - ಶ್ರೀ ಕೃಷ್ಣಾರ್ಪಣಮಸ್ತು ||

Wednesday, December 5, 2012

Prashnopanishad in Kannada-Prashna-VI (03-04)


ಸ ಈಕ್ಷಾಚಕ್ರೇ ಕಸ್ಮಿನ್ ನ್ವಹಮುತ್ಕ್ರಾಂತ ಉತ್ಕ್ರಾಂತೋ ಭವಿಷ್ಯಾಮಿ ಕಸ್ಮಿನ್ ವಾ ಪ್ರತಿಷ್ಟಿತೇ ಪ್ರತಿಷ್ಟಸ್ಯಾಮೀತಿ

ಸೃಷ್ಟಿಯ ಆರಂಭದಲ್ಲಿ ಭಗವಂತ ತನ್ನ ಸೃಷ್ಟಿಯ ಕುರಿತು ಹೀಗೆ ಆಲೋಚಿಸಿದ: “ನಾನು ಸೃಷ್ಟಿಮಾಡಿದ ಮೇಲೆ ಪ್ರತಿಯೊಂದು ವಸ್ತುವಿನ ಒಳಗೂ ನಾನು ತುಂಬುತ್ತೇನೆ. ಜೀವನನ್ನು ಧಾರಣೆ ಮಾಡಿ ನಾನು ದೇಹವನ್ನು ಪ್ರವೇಶಿಸುತ್ತೇನೆ ಮತ್ತು ಆ ಜೀವದ ಆಯುಸ್ಸು ಮುಗಿದಾಗ ಹೊರಬರುತ್ತೇನೆ” ಎಂದು. ಆದ್ದರಿಂದ ಹುಟ್ಟುವುದು ಎಂದರೆ ಜೀವನ ಜೊತೆಗೆ ಭಗವಂತ ದೇಹ ಪ್ರವೇಶ ಮಾಡುವುದು ಹಾಗೂ ಸಾಯುವುದು ಎಂದರೆ ಜೀವನನ್ನು ಹಿಡಿದುಕೊಂಡು ದೇಹದಿಂದ ಹೊರಬರುವುದು. ಇದೇ ಕಾರಣಕ್ಕಾಗಿ ಭಗವಂತನನ್ನು ‘ಶತರ್ಚಿ’ ಎಂದು ಕರೆಯುತ್ತಾರೆ.   

ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ

ಸೃಷ್ಟಿ ಪ್ರಾರಂಭದಲ್ಲಿ ಭಗವಂತ ತನ್ನೊಂದಿಗೆ ಸದಾ ಇರುವ ಒಬ್ಬ ಒಡನಾಡಿ ಬೇಕು ಎಂದು ಇಚ್ಛೆಪಟ್ಟು ಪ್ರಾಣದೇವರನ್ನು ಸೃಷ್ಟಿ ಮಾಡಿದ. ಪ್ರಪಂಚ ಸೃಷ್ಟಿಯಲ್ಲಿ ಪ್ರಾಣದಸೃಷ್ಟಿ ಎಂದರೆ ಜೀವಕಲೆಯ ಸೃಷ್ಟಿ. ಅಂದರೆ ಜೀವರುಗಳ ಸೃಷ್ಟಿ. ಈ ಸಮಸ್ತ ಜೀವರುಗಳಿಗೆ ಅಭಿಮಾನಿ ದೇವತೆ ಪ್ರಾಣದೇವರು.  ಷೋಡಶಕಲೆಗಳಲ್ಲಿ ‘ಜೀವ’ ಹದಿನಾರನೇ ಕಲೆ ಹಾಗೂ ಇದೊಂದೇ ಚೇತನ. ಇದಲ್ಲದೆ ಇನ್ನು ಹದಿನೈದು ಕಲೆಗಳು. ಅವುಗಳೆಂದರೆ: ಶ್ರದ್ಧೆ, ಖಂ, ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ಲೋಕೇಷು ನಾಮ.
ಮೊದಲು ಜೀವನಿಗೆ ಶ್ರದ್ಧೆಯನ್ನು ಸೃಷ್ಟಿಮಾಡಿದ. ಇದು ಮಾನಸಿಕ ಸ್ಥಿತಿ; ಜೀವದ ಅಂತರಂಗದ ಸ್ಥಿತಿ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಅದು ಶ್ರದ್ಧೆ. ನಮ್ಮನಮ್ಮ ಶ್ರದ್ಧೆ ನಮನಮಗೆ. ನಾವು ಏನನ್ನು ನಂಬುತ್ತೆವೋ ಅದು ನಮಗೆ ಸತ್ಯ. ನಾವು ಏನನ್ನು ನಂಬುವುದಿಲ್ಲವೋ ಅದು ನಮ್ಮ ಪಾಲಿಗೆ ಇಲ್ಲಾ. ಆದ್ದರಿಂದ ಜೀವದ ಇಡಿಯ ಬೆಳವಣಿಗೆಗೆ ಮೂಲಭೂತವಾಗಿರತಕ್ಕಂತದ್ದು ‘ನಂಬಿಕೆ’. ನಂಬಿಕೆ ನಿಜವಾದರೆ ಏಳಿಗೆ. ಇಲ್ಲದಿದ್ದರೆ ಇಲ್ಲಾ! ಹಾಗಾಗಿ ನಮ್ಮ ಇಡೀ ಜೀವನದ ಏರಿಳಿತಗಳಿಗೆ ಮೂಲಭೂತವಾಗಿರುವುದು ನಮ್ಮ ನಂಬಿಕೆ. ಉದಾಹರಣೆಗೆ ಕೆಲವರು ದೇವರೇ ಇಲ್ಲಾ ಎಂದು ಗಟ್ಟಿಯಾಗಿ ನಂಬಿರುತ್ತಾರೆ. ಆಗ ಅವರು ಮೊಕ್ಷಮಾರ್ಗದಲ್ಲಿ ಸಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ‘ಶ್ರದ್ಧೆ’ ಹುಟ್ಟುವುದಕ್ಕೂ ಮೊದಲು ಇರುವ ಮೊಳಕೆ. ಆನಂತರ ಹುಟ್ಟಿದಮೇಲೆ ಆ ಮೊಳಕೆಯ ಮೇಲೆ ಅನುವಂಶೀಯ ಮತ್ತು ಪರಿಸರದ ಪ್ರಭಾವ ಇತ್ಯಾದಿ ನಂಬಿಕೆಗಳು ಮುಚ್ಚಳವಾಗಿ ಸೇರಿಕೊಳ್ಳುತ್ತವೆ.
‘ಜೀವ ಮತ್ತು ಅದಕ್ಕೊಂದು ನಂಬಿಕೆ’. ಇಂತಹ ಜೀವ ತಾಯಿಯ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಅಲ್ಲಿ ಆ ಜೀವಕ್ಕೆ ಪಂಚಭೂತಗಳಿಂದ ಕೂಡಿದ ಶರೀರ ಬರುತ್ತದೆ. ಇಲ್ಲಿ ಖಂ ಅಂದರೆ ಆಕಾಶ, ವಾಯು ಅಂದರೆ ಗಾಳಿ, ಜ್ಯೋತಿ ಅಂದರೆ ಬೆಂಕಿ, ಆಪಃ ಎಂದರೆ ನೀರು. ಪ್ರಥಿವೀ ಎಂದರೆ ಮಣ್ಣು. ಹೀಗೆ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವ ಐದು ಕಲೆಗಳು ಸೇರಿ ಶರೀರ ನಿರ್ಮಾಣವಾಗುತ್ತದೆ. ಇದನ್ನು ಅನ್ನಮಯಕೋಶ ಎನ್ನುತ್ತಾರೆ. ಪಂಚಭೂತಗಳಿಂದಾದ ಶರೀರ ಪ್ರಪಂಚದಲ್ಲಿರುವುದನ್ನು ಅನುಭವಿಸಲು ಇಂದ್ರಿಯಗಳು ಬೇಕು. ಪ್ರಪಂಚದಲ್ಲಿರುವ ರೂಪಗಳನ್ನು ನೋಡಲು ಕಣ್ಣು, ನಾದವನ್ನು ಕೇಳಲು ಕಿವಿ, ಸುಗಂಧ ಮೂಸಲು ಮೂಗು, ರುಚಿ ನೋಡಲು ನಾಲಿಗೆ, ಸ್ಪರ್ಶದ ಅನುಭವಕ್ಕೆ ತ್ವಗೀಂದ್ರಿಯ. ಹೀಗೆ ಪಂಚೇಂದ್ರಿಯಗಳ ಸೃಷ್ಟಿಯಾಯಿತು. ನಂತರ ಕುಸುರಿಕೆಲಸ ಶಿಲ್ಪಕಲೆ ಇತ್ಯಾದಿ ಕರ್ಮವನ್ನು ಮಾಡಲು ಕೈ, ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗಿ ತನ್ನ ಅನುಭವವನ್ನು ವಿಸ್ತರಿಸಿಕೊಳ್ಳಲು ಕಾಲು, ನುಡಿಯಲು ಬಾಯಿ, ದೇಹಕ್ಕೆ ಬೇಡವಾದುದ್ದನ್ನು ಹೊರಹಾಕಲು ಪಾಯು ಮತ್ತು ಉಪಸ್ಥ; ಸೃಷ್ಟಿ ವಿಸ್ತಾರಕ್ಕೆ, ಸಂತಾನ ವೃದ್ಧಿಗೆ-ಜನನೇಂದ್ರಿಯ. ಹೀಗೆ ಪಂಚಕರ್ಮೇಂದ್ರಿಯದ ಸೃಷ್ಟಿಯಾಯಿತು.  ಆನಂತರ ಇಂದ್ರಿಯಾನುಭವವನ್ನು ಗ್ರಹಿಸಲು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎನ್ನುವ ಐದು ಅಂತಃಕರಣಗಳನ್ನೊಳಗೊಂಡ ಮನೋಮಯಕೋಶ ಸೃಷ್ಟಿಯಾಯಿತು. ಹೀಗೆ  ಶ್ರದ್ಧೆ, ಪಂಚಭೂತಗಳು, ಇಂದ್ರಿಯಗಳು(ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯ) ಮತ್ತು  ಮನೋಮಯಕೋಶ ಎನ್ನುವ ಎಂಟು ಕಲೆಗಳಿಂದ ವ್ಯಕ್ತಿತ್ವದ ಪೂರ್ಣ ಬೆಳವಣಿಗೆಯಾಯಿತು. ಹೀಗೆ ರೂಪುಗೊಂಡ ದೇಹದ ಭೋಗಕ್ಕಾಗಿ ಜಡಪ್ರಪಂಚದ ಸೃಷ್ಟಿಯಾಯಿತು. ಜಡಪದಾರ್ಥವನ್ನು ಆಹಾರವಾಗಿ ಸೇವಿಸಿದಾಗ  ಅದರಿಂದ ದೇಹದಲ್ಲಿ ಶಕ್ತಿ ಬೆಳೆಯುತ್ತದೆ. ಅದರಿಂದ ಮುಂದಿನ ಸಂತಾನಕ್ಕೆ ಕಾರಣಭೂತವಾಗಿರುವ ವೀರ್ಯ ದೇಹದಲ್ಲಿ ನಿಷ್ಪನ್ನವಾಗುತ್ತದೆ. ಇದು ಸಂತಾನಕ್ಕೆ ಬೇಕಾದ ಹತ್ತನೇ ಕಲೆ.
ಜೀವ ದೇಹದಿಂದ ಬೆಳೆಯುವಾಗ ಜೀವನದ ನಡೆಯಲ್ಲಿ ಮೂರು ಕಲೆಗಳಿವೆ. ಅವುಗಳೆಂದರೆ ತಪಃ, ಮಂತ್ರ ಮತ್ತು ಕರ್ಮ. ಮನಸ್ಸಿನಲ್ಲಿ ತಾನು ಏನುಮಾಡಬೇಕು, ಏನಾಗಬೇಕು, ಇತ್ಯಾದಿ ಆಲೋಚನೆ ಮಾಡುವುದು ತಪಃ. ಹಾಗೆ ಯೋಚಿಸಿರುವುದನ್ನು ಇನ್ನೊಬ್ಬರೊಂದಿಗೆ ಮಂತ್ರಾಲೋಚನೆ ಮಾಡುವುದು ಮಂತ್ರ. ನಂತರ ತಾನು ಆಲೋಚಿಸಿರುವುದನ್ನು, ಹೇಳಿರುವುದನ್ನು ಮಾಡುವುದು ಕರ್ಮ. ಇವು ಬೆಳವಣಿಗೆಯಲ್ಲಿರುವ ಮೂರು ಕಲೆಗಳು. ಕರ್ಮವನ್ನು ಮಾಡುತ್ತಾ ನಾವು ಲೋಕವನ್ನು ಗಳಿಸುತ್ತೇವೆ. ಇಲ್ಲಿ ಲೋಕ ಅಂದರೆ ಸ್ಥಿರ-ಚರ ಸೊತ್ತುಗಳು. ಇನ್ನು ಹದಿನೈದನೇ ಕಲೆ ನಾಮ. ಇಲ್ಲಿ ನಾಮ ಅಂದರೆ ಹುಟ್ಟಿದಾಗ ಇಟ್ಟ ಹೆಸರು,  ಜೀವನದಲ್ಲಿ ಪಡೆದ ಕೀರ್ತಿ, ಅಪಕೀರ್ತಿ ಇತ್ಯಾದಿ.
ಒಟ್ಟಿನಲ್ಲಿ ಹೇಳಬೇಕೆಂದರೆ ಶ್ರದ್ಧೆ, ಪಂಚಭೂತಗಳು, ಇಂದ್ರಿಯಗಳು, ಮನೋಮಯಕೋಶ, ಆಹಾರ, ವೀರ್ಯ, ಆಲೋಚನೆ, ಮಾತು, ಕರ್ಮ, ಲೋಕ ಮತ್ತು ನಾಮ ಇವು ಜೀವದ ಮುಂದಿರುವ ಹದಿನೈದು ಬೇಲಿಗಳು. ಈ ಹದಿನೈದು ಬೇಲಿಗಳೊಳಗೆ ಸಿಕ್ಕಿಹಾಕಿಕೊಂಡಿರುವ ಜೀವ ಹದಿನಾರನೆ ಕಲೆ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಅದೇನೆಂದರೆ: ಇಂದ್ರಿಯ, ಮನಸ್ಸು, ಇತ್ಯಾದಿ ನಮಗೆ ಬೇಲಿಯಾಗುವುದು ಹೇಗೆ ಎಂದು.  ಇಂದ್ರಿಯಗಳಿಂದ ಮನುಷ್ಯ ಜ್ಞಾನಗಳಿಸುತ್ತಾನೆ, ಎತ್ತರಕ್ಕೇರುತ್ತಾನೆ. ಮನಸ್ಸಿನಿಂದ ಉಚ್ಛ ವಿಚಾರಗಳನ್ನು ಚಿಂತನೆ ಮಾಡುತ್ತಾನೆ. ಹೀಗಿರುವಾಗ ಇದು ಬೇಲಿಯಾಗುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಸ್ವಲ್ಪ ಅಂತರಂಗದ ವಿಚಾರವನ್ನು ವಿಶ್ಲೇಷಿಸಬೇಕಾಗುತ್ತದೆ. ಉದಾಹರಣೆಗೆ ಕಣ್ಣು. ಕಣ್ಣಿನಿಂದ ನಾವು ನೋಡುತ್ತೇವೆ. ಆದರೆ ಈ ಕಣ್ಣು ನಮ್ಮ ಅಂತರಂಗವನ್ನು, ಸೂಕ್ಷ್ಮಪ್ರಪಂಚವನ್ನು ಗ್ರಹಿಸಲಾರದು. ಇದರಿಂದಾಗಿ ನಾವು ನಮ್ಮ ಒಳಗಣ್ಣನ್ನು ಮರೆತು ಹೊರಪ್ರಪಂಚದಲ್ಲೇ ಬದುಕಿಬಿಡುತ್ತೇವೆ. ಅದೇ ರೀತಿ ಮನಸ್ಸು. ಮನಸ್ಸು ನಮಗೆ ಸತ್ಯವನ್ನು ತಿಳಿಯದಂತೆ ನಮ್ಮನ್ನು ಹೊರಗೆಳೆದು ನಮ್ಮ ದಿಕ್ಕನ್ನು ಬದಲಿಸುತ್ತದೆ. ಎಲ್ಲವುದಕ್ಕೂ ಮೊದಲು ನಮ್ಮ ನಂಬಿಕೆ. ಒಂದು ವೇಳೆ ನಮ್ಮ ನಂಬಿಕೆ ತಪ್ಪಾಗಿದ್ದರೆ ನಮ್ಮ ಇಡೀ ಜೀವನವೇ ವ್ಯರ್ಥವಾಗುತ್ತದೆ. ಹೀಗೆ ಈ ಎಲ್ಲಾ ಹದಿನೈದು ಕಲೆಗಳೂ ಕೂಡಾ ಜೀವನನ್ನು ಬೇಲಿಯಂತೆ ಸುತ್ತುವರಿದಿರುತ್ತವೆ.

Saturday, December 1, 2012

Prashnopanishad in Kannada-Prashna-VI (01-02)


ಷಷ್ಠಃ ಪ್ರಶ್ನಃ


ಅಥ ಹೈನಂ ಸುಕೇಶಾ ಭಾರದ್ವಾಜಃ ಪಪ್ರಚ್ಛ ಭಗವನ್ ಹಿರಣ್ಯನಾಭಃ ಕೌಸಲ್ಯೋ ರಾಜಪುತ್ರೋ ಮಾಮುಪೇತ್ಯೈತಂ ಪ್ರಶ್ನಮಪೃಚ್ಛತ ಷೋಡಶಕಲಂ ಭಾರದ್ವಾಜ ಪುರುಷಂ ವೇತ್ಥ   ತಮಹಂ ಕುಮಾರಂಬ್ರುವಂ ನಾಹಮಿಮಂ ವೇದ  ಯಧ್ಯಹಮಿಮಮವೇದಿಷ್ಯಂ ಕಥಂ ತೇ ನಾವಕ್ಷ್ಯಮಿತಿ   ಸಮೂಲೋ ವಾ ಏಷ ಪರಿಶುಷ್ಯತಿ ಯೋSನೃತಮಭಿವದತಿ ತಸ್ಮಾನ್ನಾರ್ಹಮ್ಯನೃತಂ ವಕ್ತುಂ ಸ ತೂಷ್ಣೀಂ ರಥಮಾರುಹ್ಯ ಪ್ರವವ್ರಾಜ ತಂ ತ್ವಾ ಪೃಚ್ಛಾಮಿ ಕ್ವಾಸೌಪುರುಷ ಇತಿ

ಆರು ಜನ ಋಷಿಗಳಲ್ಲಿ ಶ್ರೇಷ್ಠರಾದ ಸುಕೇಶಾ ಭಾರದ್ವಾಜರು ತಮ್ಮ ಪ್ರಶ್ನೆಯನ್ನು ಕೇಳುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ. ಅವರು ತಮ್ಮ ಪ್ರಶ್ನೆಯ ಮಹತ್ವವನ್ನು ವಿವರಿಸುವುದಕ್ಕೊಸ್ಕರ, ತಮ್ಮ ಪ್ರಶ್ನೆಗೆ ಸಂಬಂಧಿಸಿದ, ಅವರ ಜೀವನದಲ್ಲಿ  ನಡೆದ ಒಂದು ಘಟನೆಯನ್ನು ಮೊದಲು ವಿವರಿಸುತ್ತಾರೆ. ಅವರು ಹೇಳುತ್ತಾರೆ: “ನಾನು ಇಲ್ಲಿ ಕೇಳುವ ಪ್ರಶ್ನೆ ನನ್ನಲ್ಲಿ ಹಿಂದೆ ಒಬ್ಬರು ಕೇಳಿದ ಪ್ರಶ್ನೆ” ಎಂದು. ಒಮ್ಮೆ ಕೋಸಲ ದೇಶದ ರಾಜಕುಮಾರ ‘ಹಿರಣ್ಯನಾಭ’ ನನ್ನ ಬಳಿ ಬಂದು ನನ್ನಲ್ಲಿ ಈ ರೀತಿ ಪ್ರಶ್ನೆ ಹಾಕಿದ: “ಹದಿನಾರು ಕಲೆಯ ಒಡೆಯನಾದ ಒಬ್ಬ ಪರಮಪುರುಷನ ಉಪಾಸನೆ ಹೇಗೆ ಮಾಡಬೇಕು” ಎಂದು. ನಾವು ಪುರುಷಸೂಕ್ತವನ್ನು ನೋಡಿದಾಗ ಅಲ್ಲಿ “ಸಹಸ್ರಶೀರ್ಷಾ ಪುರುಷಃ” ಎಂದು ನಾರಾಯಣನನ್ನು ಸ್ತುತಿಸಿರುವುದನ್ನು ಕಾಣುತ್ತೇವೆ. ಆದ್ದರಿಂದ ಪುರುಷಃ ಎಂದರೆ ನಾರಾಯಣ. ಆದರೆ ಹದಿನಾರು ಕಲೆಗಳು ಯಾವುದು? ಅವುಗಳನ್ನು ನಿಯಂತ್ರಿಸುವ ಭಗವಂತನನ್ನು ಎಲ್ಲಿ ಹೇಗೆ ಉಪಾಸನೆ ಮಾಡಬೇಕು ಎನ್ನುವುದು ಇಲ್ಲಿರುವ ಪ್ರಶ್ನೆ. “ಈ ಪ್ರಶ್ನೆಗೆ ಉತ್ತರ ನನಗೆ ತಿಳಿಯದು” ಎಂದು  ಸುಕೇಶಾ ಭಾರದ್ವಾಜರು ಹೇಳಿದಾಗ, ಹಿರಣ್ಯನಾಭ ಪುನಃ  “ನಿಮಗೆ ಖಂಡಿತವಾಗಿ ತಿಳಿದಿದೆ. ಅದನ್ನು ನನಗೆ ಹೇಳಿ” ಎಂದು ಒತ್ತಾಯಿಸುತ್ತಾನೆ.[ಇಲ್ಲಿ ಅಬ್ರವಂ ಎನ್ನುವ ಪದವನ್ನು ‘ಅಬ್ರುವಮ್’ ಎಂದು ಬಳಸಿದ್ದಾರೆ. ಇದು ತಾತ್ಪರ್ಯಪೂರ್ವಕ ಅಥವಾ ಒತ್ತುಕೊಟ್ಟು ಹೇಳುವುದನ್ನು ಸೂಚಿಸುತ್ತದೆ. ಉದಾಹರಣೆಗೆ: ಬಹಳàಬಹಾಳ]   ಆಗ ಸುಕೇಶಾ ಭಾರದ್ವಾಜರು ಹೇಳುತ್ತಾರೆ. “ನನಗೆ ಈ ಜ್ಞಾನ ತಿಳಿದಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಯಾರು ಸುಳ್ಳುಹೇಳುತ್ತಾನೋ ಅವನ ಬದುಕು ಬೇರುಸಹಿತ ಒಣಗಿದ ಮರದಂತೆ ವ್ಯರ್ಥ ಎನ್ನುವುದು ನನಗೆ ತಿಳಿದಿದೆ. ಆದ್ದರಿಂದ ನನಗೆ ತಿಳಿಯದ್ದನ್ನು ನಿನಗೆ ಹೇಗೆ ಹೇಳಲಿ” ಎಂದು. ಇಲ್ಲಿ ‘ಅಭಿವದತಿ’ ಎನ್ನುವ ಪದ ಬಳಕೆಯಾಗಿದೆ. ಅಬಿವದತಿ ಅಂದರೆ ಒಳಗಿನಿಂದ ಮತ್ತು ಹೊರಗಿನಿಂದ ಸುಳ್ಳು ಹೇಳುವುದು. ಮೋಸಮಾಡಬೇಕೆನ್ನುವ ಉದ್ದೇಶದಿಂದ ಹೇಳುವ ಸುಳ್ಳ-ಅಭಿವದತಿ. ಇನ್ನೊಬ್ಬರ ಶ್ರೇಯಸ್ಸಿಗಾಗಿ ಹೇಳುವ ಸುಳ್ಳು ಸುಳ್ಳಲ್ಲ.   ಇಲ್ಲಿ ಸುಕೇಶಾ ಭಾರದ್ವಾಜರು ಮುಂದುವರಿದು: “ನಾನು ಅಪ್ರಾಮಾಣಿಕತೆಯಿಂದ ಸುಳ್ಳು ಹೇಳಿದರೆ, ನನ್ನ ಎಲ್ಲಾ ಪುಣ್ಯಗಳು ನಾಶವಾಗಿ, ನಾನು ನಿರ್ನಾಮವಾಗಿ ಹೋಗುತ್ತೇನೆ. ಸುಳ್ಳು ಹೇಳುವುದರಿಂದ ಇಡೀ ಮನುಷ್ಯನ ವ್ಯಕ್ತಿತ್ವ ನಾಶವಾಗಿ ಹೋಗುತ್ತದೆ. ಅವನು ಮಾಡಿದ ಪುಣ್ಯಕರ್ಮಗಳು ಕರಗಿ ಹೋಗುತ್ತವೆ. ಹೀಗಾಗಿ ಸುಳ್ಳು ಹೇಳುವುದರ ಅಪಾಯದ ಅರಿವು ನನಗಿದೆ. ಪ್ರಾಮಾಣಿಕವಾಗಿ ನನಗೆ ನಿನ್ನ ಪ್ರಶ್ನೆಗೆ ಉತ್ತರ ತಿಳಿದಿಲ್ಲ” ಎನ್ನುತ್ತಾರೆ. ಸುಕೇಶಾ ಭಾರದ್ವಾಜರು ಈ ರೀತಿ ನುಡಿದಾಗ ಹಿರಣ್ಯನಾಭ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲಾ ಎಂದು ಬೇಸರದಿಂದ ತನ್ನ ವಾಹನವನ್ನು ಏರಿ  ಅಲ್ಲಿಂದ ಹೊರಟುಹೋಗುತ್ತಾನೆ.
“ಆ ರಾಜಕುಮಾರ ಕೇಳಿರುವ ಪ್ರಶ್ನೆಗೆ ಉತ್ತರ ನಿಮಗೆ ತಿಳಿದಿದೆ.  ಆದ್ದರಿಂದ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಆ  ಷೋಡಶ ಕಲೆಗಳು ಯಾವುದು?  ಷೋಡಶ ಕಲೆಗಳಿಗೂ ಭಗವಂತನಿಗೂ ಯಾವ ಸಂಬಂಧ? ಷೋಡಶಕಲಾ ಪುರುಷನನ್ನು ಎಲ್ಲಿ ಹೇಗೆ ಉಪಾಸನೆ ಮಾಡಬೇಕು?” ಇದು ಈ ಉಪನಿಷತ್ತಿನಲ್ಲಿರುವ ಆರನೆಯ ಮತ್ತು ಕೊನೇಯ ಪ್ರಶ್ನೆ. ಬನ್ನಿ, ಆರುಮಂದಿ ಋಷಿಗಳೊಂದಿಗೆ ಸೇರಿ, ನಾವೂ ಈ ಪ್ರಶ್ನೆಗೆ ಉತ್ತರ ರೂಪವಾಗಿರುವ ಅತ್ಯದ್ಭುತ ಜ್ಞಾನ ಸಂದೇಶವನ್ನು ಭಗವಂತನ ಕೃಪೆಬೇಡಿ, ಪಿಪ್ಪಲಾದರಿಂದ  ಕೇಳಿ ತಿಳಿದು ಧನ್ಯರಾಗೋಣ.   

ತಸ್ಮೈ ಸ ಹೋವಾಚ   ಇಹೈವಾಂತಃ ಶರೀರೇ ಸೋಮ್ಯ ಸ ಪುರುಷೇ ಯಸ್ಮಿನ್ನೇತಾಃ ಷೋಡಶಕಲಾಃ ಪ್ರಭವಂತೀತಿ

ಒಬ್ಬ ಸಾಧಕ ತಿಳಿಯಲೇಬೇಕಾಗಿರುವ ಅತ್ಯುತ್ತಮ ಪ್ರಶ್ನೆ ಇದಾಗಿರುವುದರಿಂದ, ಪಿಪ್ಪಲಾದರಿಗೆ ಬಹಳ ಸಂತೋಷವಾಯಿತು[ಹ-ಕಾರ ಇದನ್ನು ಸೂಚಿಸುತ್ತದೆ]. ಅವರು ಹೇಳುತ್ತಾರೆ: ಭಗವಂತನನ್ನು ನಾವು ನಮ್ಮ ದೇಹದೊಳಗೇ ಕಂಡು ಉಪಾಸನೆ ಮಾಡಬೇಕೇ ಹೊರತು, ಆತನನ್ನು ಎಲ್ಲೆಲ್ಲೋ ಹುಡುಕುವುದಲ್ಲ” ಎಂದು. ಇಲ್ಲಿ ಪಿಪ್ಪಲಾದರು ಸುಕೇಶಾ ಭಾರದ್ವಾಜರನ್ನು ‘ಸೋಮ್ಯ’ ಎಂದು ಸಂಬೋಧಿಸಿದ್ದಾರೆ. ಸೋಮ+ಇವ=ಸೋಮ್ಯ. ಅಂದರೆ ಚಂದ್ರನಂತೆ ತುಂಬಾ ತಂಪಾದ ಸ್ವಭಾವ ಉಳ್ಳವನು, ಯಾರ ಮನಸ್ಸಿಗೂ ನೋವಾಗದಂತೆ ಪ್ರೀತಿಯಿಂದ ಮಾತನಾಡುವವನು, ಮೃದು ಸ್ವಭಾವದವನು ಎಂದರ್ಥ. ಒಬ್ಬ ಶಾಸ್ತ್ರಜ್ಞ ಎಷ್ಟು ಸೌಮ್ಯನಾಗಿರಬೇಕೆಂದರೆ:  ಆತ ಯಾರನ್ನೂ ದ್ವೇಷ ಮಾಡುವಂತಿಲ್ಲ, ಇನ್ನೊಬ್ಬರನ್ನು ಅವಮಾನಗೊಳಿಸುವ ಕೆಟ್ಟ ಮಾತನ್ನಾಡುವಂತಿಲ್ಲ. ಇದು ಶಾಸ್ತ್ರದ ನಿಯಮ. “ಇದನ್ನೇ ವಿದ್ಯಾ ದದಾತಿ  ವಿನಯಮ್” ಎನ್ನುತ್ತಾರೆ. ಇದು ಅಧ್ಯಾತ್ಮದ ಮಾರ್ಗದಲ್ಲಿ ಮೊದಲು ಗಳಿಸಬೇಕಾದಂತಹ ಅರ್ಹತೆ. ‘ಸೋಮ್ಯ’ ಎಂದರೆ ಸೋಮಯಾಗ ಮುಂತಾದಂತಹ ವೇದೋಕ್ತವಾದ ಕರ್ಮಾನುಷ್ಠಾನ ಮಾಡುತ್ತಾ, ಕರ್ಮದಲ್ಲಿ ಪರಿಣತಿ ಪಡೆದವ ಎನ್ನುವುದು ಇನ್ನೊಂದು ಅರ್ಥ.
ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ ‘ಪುರುಷಃ’. ನಮ್ಮ ಹೃತ್ಕಮಲ ಮಧ್ಯದಲ್ಲಿರುವ ಬಿಂಬರೂಪಿ ಪರಮಪುರುಷನನ್ನು, ಅಂತಃದೃಷ್ಟಿಯಿಂದ ಕಂಡು ಮಾಡುವ  ಉಪಾಸನೆಯೇ ಷೋಡಶಕಲಾ ಉಪಾಸನೆ. ಹದಿನಾರು ಕಲೆಗಳು ಭಗವಂತನ ಆಶ್ರಯದಿಂದ ಈ ಪ್ರಪಂಚವಾಗಿ ರೂಪುಗೊಂಡು, ತಮ್ಮತಮ್ಮ ಕಾರ್ಯನಿರ್ವಹಣೆ ಮಾಡುತ್ತವೆ. 

Wednesday, November 28, 2012

Prashnopanishad in Kannada-Prashna-V (07-08)


ತದೇತೌ ಶ್ಲೋಕೌ ಭವತಃ -
ತಿಸ್ರೋ ಮಾತ್ರಾ ಮೃತ್ಯುಮತ್ಯಃ ಪ್ರಯುಕ್ತಾ ಅನ್ಯೋನ್ಯಸಕ್ತಾ ಅನವಿಪ್ರಯುಕ್ತಾಃ
ಕ್ರಿಯಾಸು ಬಾಹ್ಯಾಂತರಮಧ್ಯಮಾಸು ಸಮ್ಯಕ್ ಪ್ರಯುಕ್ತಾಸು ನ ಕಂಪತೇ ಜ್ಞಃ

ಋಗ್ಭಿರೇತಂ ಯಜುರ್ಭಿರಂತರಿಕ್ಷಂ ಸಾಮಭಿರ್ಯತ್ ತತ್ ಕವಯೋ ವೇದಯಂತೇ
ತಮೋಂಕಾರೇಣಯನೇನಾನ್ವೇತಿ ವಿದ್ವಾನ್ ಯತ್ ತಚ್ಛಾಂತಮಜರಮಮೃತಮಭಯಂ ಪರಂ ಚೇತಿ

ಮೇಲೆ ವಿವರಿಸಲಾದ ವಿಷಯಗಳಿಗೆ ಸಂವಾದಿಯಾಗಿ/ಪೂರಕವಾಗಿ ಪಿಪ್ಪಲಾದರು ಎರಡು ವೇದ ಮಂತ್ರಗಳನ್ನು ಉಲ್ಲೇಖ ಮಾಡುತ್ತಾರೆ. ಇಲ್ಲಿ “ತದೇತೌ ಶ್ಲೋಕೌ ಭವತಃ” ಎನ್ನುವಲ್ಲಿ ‘ಶ್ಲೋಕ’ ಅಂದರೆ ೩೨ ಅಕ್ಷರ ಎಂದರ್ಥವಲ್ಲ.  ಭಗವಂತನ ಗುಣಗಾನ ಮಾಡುವ ಮಂತ್ರ ಎಂದರ್ಥ.  ಶ್ಲೋಕ ಎಂದರೆ ಕೀರ್ತಿ ಅಥವಾ ಕೀರ್ತನ ಎನ್ನುವ ಅರ್ಥ ಸಂಸ್ಕೃತದಲ್ಲಿದೆ.  ಅ-ಕಾರದ ಉಪಾಸನೆಯಾಗಲಿ, ಓ-ಕಾರದ (ಅ ಮತ್ತು ಉ ಕಾರದ) ಉಪಾಸನೆಯಾಗಲಿ, ಅವು ಮೋಕ್ಷವನ್ನು ಕೊಡುವ ಉಪಾಸನೆಗಳಲ್ಲ. ಆದರೆ ಮೂರು ಅಕ್ಷರಗಳನ್ನು ಜೋಡಿಸಿ, ಓಂಕಾರದಿಂದ ಭಗವಂತನ ಮೂರು ರೂಪಗಳ ಉಪಾಸನೆ ಮಾಡಿದರೆ, [ಮೂರು ರೂಪಗಳು ಎಂದರೆ: ಕೃಷ್ಣ, ರಾಮ, ನರಸಿಂಹ  ಅಥವಾ ವಿಶ್ವ, ತೈಜಸ ಪ್ರಾಜ್ಞ ಅಥವಾ ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧರೂಪ ಇತ್ಯಾದಿ] ಆ ಉಪಾಸನೆಯ ಫಲದಿಂದ ನಾವು ಮೃತ್ಯುವನ್ನು ದಾಟಬಹುದು. ಆದ್ದರಿಂದ ಮೃತ್ಯುವನ್ನು ದಾಟಿಸಿ ಮೋಕ್ಷವನ್ನು ಕೊಡುವ ವಿದ್ಯೆ ಈ ತ್ರಿಮಾತ್ರಾ ಉಪಾಸನೆ.
ಉಪಾಸನೆ ಮಾಡುವಾಗ ಓಂಕಾರವನ್ನು ಉಚ್ಛಾರ ಹೇಗೆ ಮಾಡಬೇಕು ಎನ್ನುವುದನ್ನು ವಿವರಿಸುತ್ತಾ, ಇಲ್ಲಿ “ಅನ-ವಿಪ್ರಯುಕ್ತಾಃ” ಎಂದಿದ್ದಾರೆ. ಅಂದರೆ ಉಚ್ಛಾರ ಮಾಡುವಾಗ ಪ್ರಾಣ ಶಕ್ತಿಯನ್ನು ತುಂಬಿ ಉಚ್ಛಾರ ಮಾಡಬೇಕು. ಆ ಉಚ್ಛಾರದಲ್ಲಿ ಗಾಂಭೀರ್ಯವಿರಬೇಕು. [ಒಂದು ಅಕ್ಷರವನ್ನು ಉಚ್ಛರಿಸುವಾಗ ಎಷ್ಟು ನಿಗಾ ಇರಬೇಕು ಎನ್ನುವುದು ನಮಗೆ ಈ ವಿವರಣೆಯಿಂದ ತಿಳಿಯುತ್ತದೆ. ಹಿಂದಿನ ಕಾಲದಲ್ಲಿ ಜ್ಯೋತಿಷ್ಯ ಮತ್ತು ಆಯುರ್ವೇದಕ್ಕೆ ವ್ಯಕ್ತಿಯ ಬಾಯಿಂದ ಬರುವ ಉಚ್ಛಾರವನ್ನು ಆಧಾರವಾಗಿ ಬಳಸುತ್ತಿದ್ದರು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು].
“ಓಂಕಾರದ ಮೂರು ಅಕ್ಷರಗಳನ್ನು ಒಟ್ಟಿಗೆ ಸೇರಿಸಿ, ಹೊಸ ನಾದವನ್ನು ಸೃಷ್ಟಿಮಾಡಿ, ಬಾಹ್ಯವಾಗಿ, ಮಾನಸಿಕವಾಗಿ, ಅಂತಃಪ್ರಜ್ಞೆಯಿಂದ,  ತನ್ಮಯತೆಯಿಂದ, ಓಂಕಾರದಿಂದ ಭಗವಂತನ ಉಪಾಸನೆ ಮಾಡಿದರೆ, ಭಗವಂತನ ರಕ್ಷೆಯಲ್ಲಿ ನಾವು ಸುರಕ್ಷ” ಎನ್ನುತ್ತದೆ ಈ ವೇದಮಂತ್ರ.
ಋಗ್ವೇದದ ದೇವತೆಗಳ ಸಹಾಯದಿಂದ ಅ-ಕಾರದ ಉಪಾಸನೆ ಮಾಡಿದವರು, ಭೂಲೋಕದಲ್ಲಿ ಭಗವಂತನ ಶ್ರೇಷ್ಠವಾದ ಪ್ರತೀಕದ ಆರಾಧಕರಾಗಿ ಹುಟ್ಟುತ್ತಾರೆ. ಶತಮಾನಗಳಿಂದ ಜ್ಞಾನಿಗಳು ಪೂಜೆಮಾಡಿ, ವಿಶೇಷ ಸನ್ನಿಧಾನ ತುಂಬಿರುವ, ಪುಣ್ಯಸ್ಥಳದಲ್ಲಿನ ಭಗವಂತನ ಪ್ರತಿಮೆಯ ಆರಾಧಕರಾಗಿ, ಇವರು ತಮ್ಮ ಸಾಧನೆಯನ್ನು ಮುಂದುವರಿಸುತ್ತಾರೆ. ಅ-ಕಾರ ಮತ್ತು ಉ-ಕಾರದ ಉಪಾಸನೆ ಮಾಡಿದವರಿಗೆ ಹೃದಯಾಕಾಶದಲ್ಲಿ ಭಗವಂತನ ಪ್ರತೀಕದ ದರ್ಶನವಾಗುತ್ತದೆ. ಮತ್ತು ಅಂತರಿಕ್ಷದಲ್ಲಿನ ಊರ್ಧ್ವಲೋಕ ಪ್ರಾಪ್ತಿಯಾಗುತ್ತದೆ. ಅವರಿಗೆ ಯಜುರ್ವೇದದ ದೇವತೆಗಳು ಇಂತಹ ಭಾಗ್ಯವನ್ನು ಒದಗಿಸಿಕೊಡುತ್ತಾರೆ. ಇನ್ನು ಮೂರೂ ಅಕ್ಷರಳನ್ನು ಸೇರಿಸಿ, ಓಂಕಾರದಿಂದ ಭಗವಂತನ ಉಪಾಸನೆ ಮಾಡಿದರೆ: “ನಮ್ಮ ಹೃತ್ಕಮಲ ಮಧ್ಯದಲ್ಲಿ ಮತ್ತು ಕ್ಷೀರಸಾಗರದಲ್ಲಿ ನೆಲೆಸಿರುವ ಭಗವಂತನ ಸ್ಥಾನವಾದ ಮೋಕ್ಷ ಪ್ರಾಪ್ತಿಯಾಗುತ್ತದೆ.
ಇಲ್ಲಿ ಭಗವಂತನನ್ನು ಶಾಂತಃ, ಅಜರಃ, ಅಮೃತಃ, ಅಭಯಃ ಮತ್ತು ಪರಮ್ ಎಂದು ವಿಶೇಷವಾದ ಹೆಸರಿನಿಂದ ಸಂಬೋಧಿಸಿರುವುದನ್ನು ಕಾಣುತ್ತೇವೆ.   ಇವು ಭಗವಂತನ ಗುಣವಾಚಕ ನಾಮಗಳು. ಶಾಂತಃ ಎನ್ನುವಲ್ಲಿ ‘ಶ’ ಎಂದರೆ ಆನಂದ. ಅಂತಹ ಆನಂದದ ತುತ್ತತುದಿ ಶಾಂತಿ. ಆನಂದದ ಪರಾಕಾಷ್ಠೆಯಲ್ಲಿರುವ ಭಗವಂತ  ‘ಶಾಂತಃ’.  ಸಂಸಾರ ಸಾಗರದಲ್ಲಿರುವ ನಾವು ಒಂದಲ್ಲಾ ಒಂದು ಭಯದಲ್ಲಿ ಬದುಕುತ್ತೇವೆ. ಆದರೆ ದುಃಖದ ಸ್ಪರ್ಶವೇ ಇಲ್ಲದ ಪೂರ್ಣಾನಂದ ಸ್ವರೂಪ ಭಗವಂತ ಅಭಯಃ. ಮುಪ್ಪು ಮತ್ತು ಸಾವಿಗೆ ಒಳಗಾಗದ ಭಗವಂತ ‘ಅಮೃತಃ ಮತ್ತು ಅಜರಃ’. ಎಲ್ಲಕ್ಕಿಂತ ಹಿರಿದಾದ ಮತ್ತು ಪರಿಪೂರ್ಣನಾದ ಭಗವಂತ ‘ಪರಮ್’.   
ವಿ.ಸೂ: ಭಗವಂತನ ಗುಣವಾಚಕ ನಾಮಗಳ ಸುಂದರ ವಿವರಣೆಯನ್ನು ಆಸಕ್ತ ಓದುಗರು ‘ವಿಷ್ಣುಸಹಸ್ರನಾಮ ಅರ್ಥಸಹಿತ’  ಪುಸ್ತಕದಲ್ಲಿ ಕಾಣಬಹುದು. ಅಂತರ್ಜಾಲ ಕೊಂಡಿ: http://kannadavishnusahasranama.blogspot.in/

ಇತಿ ಪ್ರಶ್ನೋಪನಿಷದಿ ಪಂಚಮಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಐದನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

Monday, November 26, 2012

Prashnopanishad in Kannada-Prashna-V (05-06)


ಯಃ ಪುನರೇತಂ ತ್ರಿಮಾತ್ರೇಣೋಮಿತ್ಯೇತೇನೈವಾಕ್ಷರೇಣ ಪರಂ ಪುರುಷಮಭಿಧ್ಯಾಯೀತ ಸ ತೇಜಸಿ ಸೂರ್ಯೇ ಸಂಪನ್ನೋ ಯಥಾ ಪಾದೋದರಸ್ತ್ವಚ ವಿನಿರ್ಮುಚ್ಯತೇ ಏವಂ ಹ ವೈ ಸ ಪಾಪ್ಮನಾ ವಿನಿರ್ಮುಕ್ತಃ ಸ ಸಾಮಭಿರುನ್ನೀಯತೇ ಬ್ರಹ್ಮಲೋಕಮ್ 

ಮೇಲೆ ವಿವರಿಸಿದಂತೆ ತ್ರಿಮಾತ್ರೆ ಉಪಾಸನೆ ಅಂದರೆ ‘ಮ’ ಕಾರದ ಉಪಾಸನೆ; ನಾದ ಅಥವಾ ಸಂಗೀತದಿಂದ ಭಗವಂತನ ಉಪಾಸನೆ; ಸಾಮವೇದದಿಂದ ಭಗವಂತನ ಉಪಾಸನೆ. ಈ ಪ್ರಪಂಚದಲ್ಲಿರುವ ಎಲ್ಲಾ ನಾದಗಳೂ, ಎಲ್ಲಾ  ಭಾಷೆಗಳೂ, ಭಗವಂತನನ್ನೇ ಹೇಳುತ್ತವೆ. ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಲೆಗಳ ಮರ್ಮರ, ಎಲ್ಲಾ ಸಮಸ್ತ ನಾದದಲ್ಲೂ ಭಗವಂತನನ್ನು ಕಂಡು ಉಪಾಸನೆ ಮಾಡುವುದು ತ್ರಿಮಾತ್ರೆಯ ಉಪಾಸನೆ.
ಋಗ್ವೇದದ ಮಂತ್ರಗಳಲ್ಲಿ ಬರುವ ಶಬ್ದಗಳನ್ನು ಒಡೆದು, ಅದರಲ್ಲಿ ನಾದವನ್ನು ತುಂಬಿ, ನಾದದ ಅರ್ಥವನ್ನು ಹುಡುಕತಕ್ಕ ಉಪಾಸನೆ ಸಾಮವೇದದ ಉಪಾಸನೆ. ಉದಾಹರಣೆಗೆ: ಋಗ್ವೇದದಲ್ಲಿ ಅಗ್ನಿಮೀಳೇ... ಎಂದು ಹೇಳಿದರೆ, ಸಾಮವೇದದಲ್ಲಿ ಅಗ್ನಿ ಪದವನ್ನು ಒಡೆದು “ಅಗ್ನಆಯಾಹೀ” ಎಂದು ನಾದ ತುಂಬಿ ಹೇಳುತ್ತಾರೆ.  ಇದು ಸಂಗೀತದ ಉಪಾಸನೆ.
ಒಂದು ಕಡೆ ಯಾಜ್ಞವಲ್ಕ್ಯರು ಹೇಳುತ್ತಾರೆ: “ವೀಣಾವಾದನ ತತ್ತ್ವಜ್ಞಃ ಪರಮ್ ಬ್ರಹ್ಮಾದಿಗಚ್ಛತಿ” ಎಂದು. ಅಂದರೆ “ವೀಣೆ ಬಾರಿಸಲು ಬಂದರೆ ಭಗವಂತನನ್ನು ಕಾಣುವುದು ಸುಲಭ” ಎಂದರ್ಥ!  ಏಕೆಂದರೆ ವೀಣೆ ಬಾರಿಸಲು ನಾದ ಜ್ಞಾನ ಬೇಕು. ಶ್ರುತಿ, ಲಯದ ಜೊತೆಗೆ ತನ್ಮಯತೆ, ಏಕಾಗ್ರತೆ  ಬೇಕು. ಅದು ಬಂದರೆ ಭಗವಂತನನ್ನು ತಿಳಿಯುವುದು ಸುಲಭ. ನಾದದ ಬಗ್ಗೆ ಹಿಂದಿನ ವೈದಿಕ ಪರಂಪರೆಯಲ್ಲಿ ಅಪಾರ ಕಾಳಜಿ ಇತ್ತು. ವೀಣಾವಾದನ ತಿಳಿದವರು ವೇದವನ್ನು ಸ್ಪಷ್ಟವಾಗಿ ಶ್ರುತಿಬದ್ಧವಾಗಿ ಹೇಳಬಲ್ಲರು. ತ್ರಿಮಾತ್ರೆ ಉಪಾಸನೆ ಅಂದರೆ ಮಂತ್ರಗಳನ್ನು, ಪದಗಳನ್ನು, ಅಕ್ಷರಗಳನ್ನು ಮತ್ತು ನಾದವನ್ನೂ ಕೂಡಾ ಭಗವಂತನಪರ ಮಾಡುವಂತಹ ‘ಮ’-ಕಾರ ವಾಚ್ಯ ಭಗವಂತನ ಉಪಾಸನೆ.  ಇದು ನಿದ್ರೆಯಲ್ಲೂ ಕೂಡಾ ಭಗವಂತ ನಮಗೆ ಆನಂದವನ್ನಿತ್ತು  ರಕ್ಷಿಸುತ್ತಾನೆ ಎನ್ನುವ ಉಪಾಸನೆ.
ಈ ಹಿಂದೆ ಹೇಳಿದಂತೆ ಮ-ಕಾರ ನರಸಿಂಹ ರೂಪದಲ್ಲಿ ಪ್ರತಿಪಾದ್ಯನಾದ ಭಗವಂತನನ್ನು ಹೇಳುತ್ತದೆ. ಇದು ದುಷ್ಟರನ್ನು ನಿರ್ನಾಮ ಮಾಡತಕ್ಕ ಮಹಾಶಕ್ತಿ. ನಮ್ಮೆಲ್ಲಾ ದೋಷಗಳನ್ನು ಕಳೆದುಕೊಂಡು, ಪುಟಕ್ಕಿಟ್ಟ ಚಿನ್ನದಂತೆ ಅಪ್ಪಟ ಬಂಗಾರವಾಗುವುದು ‘ಮ’ಕಾರ ಉಪಾಸನೆಯಿಂದ. ಈ ರೀತಿ ಒಳಗೂ ಹೊರಗೂ ಮ-ಕಾರದಿಂದ ಓಂಕಾರ ವಾಚ್ಯನಾದ ಭಗವಂತನನ್ನು ಉಪಾಸನೆ ಮಾಡಿದರೆ, ಸೂರ್ಯಲೋಕವನ್ನು ಸೇರಿ, ಅಲ್ಲಿಂದ ಭಗವಂತನೆಂಬ ಮಹಾಜ್ಯೋತಿಕಡೆಗೆ ನಾವು ಸಾಗಬಹುದು. ಇಲ್ಲಿ ಸೂರ್ಯಲೋಕ ಎಂದರೆ ನಮಗೆ ಕಾಣುವ  ಸೂರ್ಯಗ್ರಹವಲ್ಲ. ಇದು ದೇವತೆಗಳಿರುವ ಸೂಕ್ಷ್ಮಲೋಕ. ಇಲ್ಲಿ ನಾವು ಹಾವು ತನ್ನ ಪೋರೆಯನ್ನು ಕಳಚಿಕೊಂಡಂತೆ ನಮ್ಮೆಲ್ಲಾ ಪಾಪಗಳನ್ನು ಕಳಚಿಕೊಂಡು, ಪರಿಶುದ್ಧರಾಗುತ್ತೇವೆ. ಇಲ್ಲಿಂದ ಸಾಮವೇದದ ಮಂತ್ರಾಭಿಮಾನಿ ದೇವತೆಗಳು ಜೀವನನ್ನು ಸತ್ಯಲೋಕಕ್ಕೆ ಕೊಂಡೊಯ್ಯುತ್ತಾರೆ. ಇದು ಈ ವಿಶ್ವದಲ್ಲಿರುವ ಲೋಕಗಳಲ್ಲೆಲ್ಲಾ ಅತ್ಯುನ್ನತವಾದ ಲೋಕ. ಇಲ್ಲಿಗೆ ತಲುಪಿದ ಜೀವ ಎಂದೂ ಮರಳಿ ಭೂಲೋಕದಲ್ಲಿ ಹುಟ್ಟುವುದಿಲ್ಲ.

ಸ ಏತಸ್ಮಾಜ್ಜೀವಘನಾತ್ ಪರಾತ್ಪರಂ ಪುರಿಶಯಂ ಪುರುಷಮೀಕ್ಷತೇ

ತ್ರಿಮಾತ್ರೆ ಉಪಾಸನೆಯ ಫಲವಾಗಿ ಸತ್ಯಲೋಕವನ್ನು ಸೇರಿದ ಜೀವ, ಸತ್ಯಲೋಕದಲ್ಲಿ, ಜೀವಕಲಾಭಿಮಾನಿಯಾದ  ಚತುರ್ಮುಖನ ಉಪದೇಶ ಪಡೆದು, ತನ್ನ ಲಿಂಗಶರೀರವನ್ನೂ ಕಳಚಿಕೊಂಡು, ಸಾಕ್ಷಾತ್ ಭಗವಂತನನ್ನು ಕಾಣುತ್ತಾನೆ ಮತ್ತು ಚತುರ್ಮುಖನೊಂದಿಗೆ ಮೋಕ್ಷವನ್ನು ಸೇರುತ್ತಾನೆ.  [ಇಲ್ಲಿ ಭಗವಂತನನ್ನು ‘ಪರಿಶಯ’ ಎಂದಿದ್ದಾರೆ. ಪರಿಶಯ ಎಂದರೆ ನಮ್ಮ ಹೃದಯವೆಂಬ ಪುರದಲ್ಲಿರುವ ಭಗವಂತ ಎಂದರ್ಥ].   

Sunday, November 25, 2012

Prashnopanishad in Kannada-Prashna-V (03-04)


ಸ ಯಧ್ಯೇಕಮಾತ್ರಮಭಿಧ್ಯಾಯೀತ ಸ ತೇನೈವ ಸಂವೇದಿತಸ್ತೂರ್ಣಮೇವ ಜಗತ್ಯಾಮಭಿಸಂಪಧ್ಯತೇ   ತಮೃಚೋ ಮನುಷ್ಯಲೋಕಮುಪನಯಂತೇ ಸ ತತ್ರ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂಪನ್ನೋ ಮಹಿ-ಮಾನಮನುಭವತಿ

ಓಂಕಾರದಲ್ಲಿ ಒಂದು ಮಾತ್ರೆಯ ಉಪಾಸನೆ ಮಾಡುವುದರ ಫಲವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಇಲ್ಲಿ ಒಂದು ಮಾತ್ರೆ ಎಂದರೆ ಓಂಕಾರದಲ್ಲಿ ಅ-ಕಾರ ವಾಚ್ಯನಾದ ಭಗವಂತನ ರೂಪದ ಉಪಾಸನೆ. ಒಂದು ಮಾತ್ರೆಯ ಉಪಾಸನೆಯಲ್ಲಿ ಜಪ ಮಾಡುವಾಗ ‘ಓಂ’ ಎಂದು ಜಪ ಮಾಡುವುದೇ ಹೊರತು, ‘ಅ’ ಎಂದಲ್ಲ. ಹಾಗೆ ಓಂಕಾರ ಜಪ ಮಾಡುವಾಗ ಅಲ್ಲಿ ಉಳಿದ ಅರ್ಥದ ಅನುಸಂಧಾನ ಮಾಡದೇ, ಕೇವಲ ಅ-ಕಾರಕ್ಕೆ ಒತ್ತುಕೊಟ್ಟು ಉಪಾಸನೆ ಮಾಡುವುದರಿಂದ, ಇದನ್ನು ಒಂದು ಮಾತ್ರೆಯ ಉಪಾಸನೆ ಎನ್ನುತ್ತಾರೆ. ಈ ರೀತಿ ಉಪಾಸನೆ ಮಾಡಿದವರು, ತಮ್ಮ ಉಪಾಸನೆಯ ಫಲವಾಗಿ, ಮುಂದಿನ ಜನ್ಮದಲ್ಲಿ ಋಗ್ವೇದದ ಮಂತ್ರಾಭಿಮಾನಿದೇವತೆಗಳ ಆಶೀರ್ವಾದದೊಂದಿಗೆ, ಭೂಲೋಕದಲ್ಲಿ,  ಮನನಮಾಡುವ ಜ್ಞಾನಿಗಳ ಸಮುದಾಯದಲ್ಲಿ,  ಬಹಳ ಎತ್ತರದ ವ್ಯಕ್ತಿಯಾಗಿ ಹುಟ್ಟುತ್ತಾರೆ. ಅಂದರೆ ಅತ್ಯಂತ ಶ್ರೇಷ್ಠವಾದ ಭಗವಂತನ ಬಾಹ್ಯ ಪ್ರತೀಕದ ಉಪಾಸನೆ ಮಾಡುವ ಭಾಗ್ಯ ಅ-ಕಾರ ಉಪಾಸಕರಿಗೆ ಸಿಗುತ್ತದೆ.
ಅ-ಕಾರ ಉಪಾಸನೆಯ ಫಲವಾಗಿ, ಭೂಲೋಕದಲ್ಲಿ ಮತ್ತೆ ಹುಟ್ಟಿಬಂದವರು ತಪಸ್ಸು, ಬ್ರಹ್ಮಚರ್ಯ ಮತ್ತು ಶ್ರದ್ದೆ ಎನ್ನುವ ಮಹಾನ್ ಸಂಪತ್ತಿನೊಂದಿಗೆ, ಬಹಳ ಎತ್ತರದ ಸ್ಥಾನದಲ್ಲಿ, ಗೌರವಾನ್ವಿತ ವ್ಯಕ್ತಿಯಾಗಿ ಬದುಕುತ್ತಾರೆ.  [ಉದಾಹರಣೆಗೆ ಉಡುಪಿಯ ಕೃಷ್ಣನನ್ನು ಪೂಜಿಸುವ ಯತಿಗಳು. ಅವರು ತಮ್ಮ ಹಿಂದಿನ ಜನ್ಮದಲ್ಲಿ ಅ-ಕಾರ ದಿಂದ ಭಗವಂತನನ್ನು ಆರಾಧಿಸಿ, ಇಂದು ಅಂತಹ ಪರಮ ಪವಿತ್ರ ಸ್ಥಾನವನ್ನು ಪಡೆದಿದ್ದಾರೆ ಎನ್ನಬಹುದು. ಅ-ಕಾರ ಉಪಾಸನೆಯ ಫಲವನ್ನು ಪೂರ್ಣಪ್ರಮಾಣದಲ್ಲಿ ಆಚರಣೆಗೆ ತರಬೇಕು ಎನ್ನುವ ಸಂಕಲ್ಪದಿಂದ ಆಚಾರ್ಯರು ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪನೆ ಮಾಡಿದರು ಎಂದರೆ ತಪ್ಪಾಗಲಾರದು].
ಇಲ್ಲಿ ತಪಸ್ಸು, ಬ್ರಹ್ಮಚರ್ಯ ಮತ್ತು ಶ್ರದ್ದೆ ಎನ್ನುವ ಸಂಪತ್ತು ಎಂದಿದ್ದಾರೆ. ತಪಸ್ಸು ಎಂದರೆ ಕಾಡಿಗೆ ಹೋಗಿ ಧ್ಯಾನ ಮಾಡುವುದು ಎಂದರ್ಥವಲ್ಲ. ನಿರಂತರ ಶಾಸ್ತ್ರ ಚಿಂತನೆ ಮಾಡಿ, ಶಾಸ್ತ್ರವನ್ನು ತಿಳಿದು, ಪಾಠಪ್ರವಚನದ ಮೂಲಕ, ಜ್ಞಾನವನ್ನು ಇನ್ನೊಬ್ಬರಿಗೆ ಹಂಚುವುದು ತಪಸ್ಸು. ಅದೇ ರೀತಿ ಬ್ರಹ್ಮಚರ್ಯ ಎಂದರೆ: ಇಂದ್ರಿಯ ನಿಗ್ರಹದ ಮೂಲಕ ವೇದಾಧ್ಯಯನ, ಹಾಗೂ ವೇದಾಧ್ಯಯನದ ಮೂಲಕ ಭಗವಂತನ ಜ್ಞಾನ. ತಪಸ್ಸು ಮತ್ತು ಬ್ರಹ್ಮಚರ್ಯದ ಹಿಂದೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ಸಂಪತ್ತು ಶ್ರದ್ಧೆ. ಶ್ರದ್ಧೆ ಇಲ್ಲದೆ ಮಾಡುವ ಕ್ರಿಯೆ ಕೇವಲ ಭೂಟಾಟಿಕೆಯಾಗುತ್ತದೆ. ಶ್ರದ್ಧೆ ಅಂದರೆ  ಆಸ್ತಿಕ್ಯ(ಶ್ರತ್)ದ  ಧಾರಣೆ. ನಾವು ಏನನ್ನು ಹೇಳುತ್ತೇವೆ, ಮೊದಲು ಅದನ್ನು ನಂಬಬೇಕು. ನಂಬಿ ಹೇಳಬೇಕು. ಹೀಗೆ ನಂಬುವ ಮತ್ತು ನಂಬಿಸುವ ಕ್ರಿಯೆ ಶ್ರದ್ಧೆ. ಯಾರಿಗೆ ಶ್ರದ್ಧೆ ಇಲ್ಲವೋ ಅವರು ವೇದಾಂತ ಹೇಳಿದರೆ ಅದು ವ್ಯರ್ಥ!

ಅಥ ಯದಿ ದ್ವಿಮಾತ್ರೇಣ ಮನಸಿ ಸಂಪಧ್ಯತೇ ಸೋಽನ್ತರಿಕ್ಷಂ ಯಜುರ್ಭಿರುನ್ನೀಯತೇ ಸೋಮಲೋಕಂ  ಸ ಸೋಮಲೋಕೇ ವಿಭೂತಿಮನುಭೂಯಪುನರಾವರ್ತತೇ

ಏಕ ಮಾತ್ರೆಯ ನಂತರ ದ್ವಿಮಾತ್ರೆ. ಅ-ಕಾರ ಮತ್ತು ಉ-ಕಾರ ಅಥವಾ ಓ-ಕಾರದಿಂದ ಭಗವಂತನ ಉಪಾಸನೆ. ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪರಿಪೂರ್ಣ ಎನ್ನುವುದು ಅ-ಕಾರದ ಉಪಾಸನೆಯ ಒಂದು ಮುಖ. ಇದು ಎಚ್ಚರಾವಸ್ಥೆಯ ಪ್ರತಿಯೊಂದು ಹಂತದಲ್ಲಿ, ಎಚ್ಚರದ ಅನುಭವ ಕೊಡತಕ್ಕಂತಹ ಭಗವಂತನ ಉಪಾಸನೆ. ಇನ್ನು ಉ-ಕಾರ ಎಂದರೆ ಉತ್ಕರ್ಷ. ಹೊರಗಿನ ಪ್ರಪಂಚದಲ್ಲಿ ಕಂಡ ಅನುಭವವನ್ನು ಒಳಗೆ ಎಳೆದುಕೊಳ್ಳುವುದು. ಅಂದರೆ  ಕನಸಿನ ಅವಸ್ಥೆಯಲ್ಲಿ ನಮ್ಮನ್ನು ನಿಯಮಿಸುವ ಭಗವಂತನ ಉಪಾಸನೆ. ಹೀಗೆ ಅ-ಕಾರ ಮತ್ತು ಉ-ಕಾರ ಎರಡರಿಂದಲೂ ಭಗವಂತನ ಉಪಾಸನೆ ಮಾಡಿದರೆ, ಆಗ ನಮ್ಮ ಮಾನಸಲೋಕದಲ್ಲಿ ಭಗವಂತನ ರೂಪ ಕಾಣಲಾರಂಭಿಸುತ್ತದೆ. ಆದರೆ ಇದು ಮನಸ್ಸೇ ಕಡೆದ ಭಗವಂತನ ಮಾನಸ ಪ್ರತೀಕವೇ ಹೊರತು, ಭಗವಂತನ ಸ್ವರೂಪರೂಪವಲ್ಲ. ಈ ರೀತಿ ದ್ವಿಮಾತ್ರೆಯಿಂದ ಭಗವಂತನ ಉಪಾಸನೆ ಮಾಡುವವರನ್ನು, ಯಜುರ್ವೇದದ ಮಂತ್ರಾಭಿಮಾನಿದೇವತೆಗಳು,  ಸ್ವರ್ಗಲೋಕದಲ್ಲಿ ಅತ್ಯುನ್ನತ ಸ್ಥಾನವಾದ, ಚಂದ್ರಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಚಂದ್ರಲೋಕವನ್ನು ಸೇರಿದ ‘ಜೀವ’ ಅಲ್ಲಿ ಹಲವು ಕಾಲ ದಿವ್ಯ ಸುಖವನ್ನು ಅನುಭವಿಸಿ, ಮರಳಿ ಭೂಮಿಯಲ್ಲಿ ಹುಟ್ಟಿ, ಭೂಲೋಕದಲ್ಲಿ ತನ್ನ ಸಾಧನೆ ಮುಂದುವರಿಸುತ್ತಾನೆ.
ಏಕಮಾತ್ರೆ ಉಪಾಸನೆ ಅಂದರೆ: ಋಗ್ವೇದದಿಂದ ಭಗವಂತನನ್ನು ಕಾಣುವುದು. [“ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ” ಎಂದು ಆರಂಭವಾಗುವ ಋಗ್ವೇದದ ಸಂಕ್ಷಿಪ್ತ ಅಕ್ಷರ(abbreviation) ‘ಅ-ಕಾರ]. ಋಗ್ವೇದದಲ್ಲಿ ಅನೇಕ ಸ್ತುತಿಗಳಿವೆ. ಅವು ಅನೇಕ ದೇವತೆಗಳ ಹೆಸರನ್ನು ಹೇಳುತ್ತವೆ. ಉದಾಹರಣೆಗೆ ಅಗ್ನಿ, ವಾಯು ಇತ್ಯಾದಿ. ಇಲ್ಲಿ ಈ ಶಬ್ದಗಳನ್ನು ಭಗವಂತನ ಪರ ಅರ್ಥಮಾಡಿಕೊಂಡಾಗ, ಇಡೀ ಋಗ್ವೇದ ಭಗವಂತನ ಪರವಾಗಿ ಅರ್ಥವಾಗುತ್ತದೆ. ಅಗ್ನಿ= ಅ+ಗ+ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು-ಅಗ-ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವ. ಆದ್ದರಿಂದ ಆತ ಅಗ್ನಿ. ಹೀಗೆ ಋಗ್ವೇದದಲ್ಲಿ ಬರುವ ಪ್ರತೀ ದೇವತಗಳ ಹೆಸರನ್ನು ಭಗವಂತನ ಪರ ಮಾಡಿ, ಉಪಾಸನೆ ಮಾಡಿದಾಗ, ಅದು ಏಕಮಾತ್ರೆ ಉಪಾಸನೆಯಾಗುತ್ತದೆ.
ದ್ವಿಮಾತ್ರೆ ಉಪಾಸನೆ ಎಂದರೆ ಅದು ಯಜುರ್ವೇದದಿಂದ ಭಗವಂತನನ್ನು ಕಾಣುವುದು. ಇದು ಏಕಮಾತ್ರೆ ಉಪಾಸನೆಗಿಂತ ಕಷ್ಟದ ಉಪಾಸನೆ. ಏಕೆಂದರೆ ಯಜುರ್ವೇದ ಋಗ್ವೆದದಂತೆ ಭಗವಂತನ ಸ್ತುತಿ ಅಲ್ಲ. ಅಲ್ಲಿ ಹೆಚ್ಚಾಗಿ ‘ಕರ್ಮಕಾಂಡ’ವನ್ನು ಕಾಣುತ್ತೇವೆ. ಉದಾಹರಣೆಗೆ:  “ವಸಂತೇ ವಸಂತೇ ಜ್ಯೋತಿಷಾ ಯಜೇತಾ”: ಇದರ ನೇರ ಅರ್ಥ: “ಪ್ರತಿಯೊಂದು ವಸಂತದಲ್ಲೂ ಜ್ಯೋತಿಷ್ಟೋಮಯಾಗ ಮಾಡು” ಎಂದರ್ಥ. ಇದನ್ನು ಭಗವಂತನ ಪರ ಮಾಡುವುದು ಹೇಗೆಂದರೆ: ಇಲ್ಲಿ ಬರುವ ಪ್ರತಿಯೊಂದು ಪದವನ್ನೂ ಭಗವಂತನ ಪರ ಮಾಡಿ ಅರ್ಥ ಮಾಡಬೇಕು. ಹಾಗೆ ಮಾಡಿದಾಗ: ವಸಂತೇ ಅಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎನ್ನುವ ಅರ್ಥವನ್ನು ಕೊಡುತ್ತದೆ. ಅದೇ ರೀತಿ  ‘ಜ್ಯೋತಿಷಾ’. ಇಲ್ಲಿ ಷ-ಕಾರೋ ಪ್ರಾಣೋ ಆತ್ಮಾ. ಅಂದರೆ ಸರ್ವಚೇಷ್ಠಕತ್ವ. ಆದ್ದರಿಂದ ಸ್ವಯಂ ಪ್ರಕಾಶಸ್ವರೂಪನೂ ಸರ್ವಚೇಷ್ಠಕನೂ ಆದವ ಜ್ಯೋತಿಷಾ. ಇನ್ನು ‘ಆಯುಜೇತಾ’ ಎಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಈ ಎಲ್ಲಾ ಅರ್ಥಗಳಿಂದ ನೋಡಿದಾಗ, ಮೇಲಿನ ಮಂತ್ರ ಸಂಪೂರ್ಣ ಭಗವದ್ ಪರ ಅರ್ಥವನ್ನು ಕೊಡುತ್ತದೆ. ಇದು ದ್ವಿಮಾತ್ರೆಯಿಂದ ಭಗವಂತನ ಉಪಾಸನೆ ಮಾಡುವವರು ಯಜುರ್ವೇದದಲ್ಲಿ ಭಗವಂತನನ್ನು ಕಾಣುವ ವಿಧಾನ.    
 ಎಲ್ಲಕ್ಕಿಂತ ಕ್ಲಿಷ್ಟಕರವಾದುದು  ತ್ರಿಮಾತ್ರೆ ಉಪಾಸನೆ. ಇದು ಮ-ಕಾರದ ಉಪಾಸನೆ ಅಥವಾ ಸಾಮವೇದದಿಂದ ಭಗವಂತನನ್ನು ಕಾಣುವ ಉಪಾಸನೆ. ಸಾಮವೇದದಲ್ಲಿ ಯಾವುದೇ ಸ್ವತಂತ್ರವಾದ ವಿಶೇಷ ಮಂತ್ರಗಳಿಲ್ಲ. ಅಲ್ಲಿರುವುದು ಋಗ್ವೇದದ ಮಂತ್ರಗಳು ಮತ್ತು ಕೆಲವು ಯಜುರ್ವೇದದ ಮಂತ್ರಗಳು. ಸಾಮವೇದದ ವಿಶೇಷತೆ ‘ನಾದ’. ಕೇವಲ ಶಬ್ದಗಳಲ್ಲಷ್ಟೇ ಭಗವಂತನನ್ನು ಹೇಳುವುದಲ್ಲ, ಈ ಪ್ರಪಂಚದಲ್ಲಿನ ಎಲ್ಲಾ ನಾದಗಳೂ ಭಗವಂತನನ್ನು ಹೇಳುತ್ತವೆ- ಎಂದು ಉಪಾಸನೆ ಮಾಡುವುದು ತ್ರಿಮಾತ್ರೆ ಉಪಾಸನೆ.  “ಸರ್ವೈಃ ಶಬ್ದ್ಯಃ ಘೋಷ್ಯಸ್ಯ ನೀಯತೇ ಇತಿ ಮಃ”. ಅಂದರೆ ಎಲ್ಲಾ ನಾದಗಳಿಂದ ವಾಚ್ಯನಾದವನು ಮ-ಕಾರ ವಾಚ್ಯ ಭಗವಂತ ಎಂದರ್ಥ. ನಾದದಿಂದ ಭಗವಂತನ ಉಪಾಸನೆ ಬಹಳ ಕಷ್ಟದ ಕೆಲಸ! ಇದನ್ನು ಅರ್ಥ ಮಾಡಿಕೊಳ್ಳಲು ಆಚಾರ್ಯರು ಕೊಟ್ಟ ಒಂದು ಉದಾಹರಣೆಯನ್ನು ನೋಡಿದರೆ, ನಮಗೆ ನಾದದಲ್ಲಿ ಭಗವಂತನನ್ನು ಹೇಗೆ ಕಾಣಬಹುದು ಎನ್ನುವುದು ಕಿಂಚಿತ್ ಅರ್ಥವಾಗಬಹುದು. ನಮಗೆ ತಿಳಿದಂತೆ ಆಗಾಗ ನಮ್ಮ ಮನೆಗಳಲ್ಲಿ ಹಲ್ಲಿ ಲೊಚಗುಟ್ಟುತ್ತಿರುತ್ತದೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಾವೂ ಕೂಡಾ ನಮಗೆ ಬಹಳ ಆಶ್ಚರ್ಯವಾದಾಗ ‘ಅದ್ಭುತ’ ಎನ್ನುವುದನ್ನು ವ್ಯಕ್ತಪಡಿಸಲು ನಮ್ಮ ಬಾಯಿಯಿಂದ  ಹಲ್ಲಿಯಂತೆ ಶಬ್ದ ಮಾಡುತ್ತೇವೆ. ಈ ರೀತಿ ಸಂಬಂಧಕಲ್ಪಿಸಿ ಯೋಚಿಸಿದರೆ:  “ಭಗವಂತ ಅದ್ಭುತ” ಎನ್ನುವುದು ಹಲ್ಲಿಯ ನಾದದ ಅರ್ಥ! ಹೀಗೆ ಭಗವಂತನನ್ನು ಹೇಳದೇ ಇರುವ ಒಂದು ಶಬ್ದ, ಒಂದು ನಾದ ಈ ಪ್ರಪಂಚದಲ್ಲಿಲ್ಲ. ಮೂರು ಮಾತ್ರೆಯ ಉಪಾಸಕರು ನಾದೋಪಾಸನೆಯಿಂದ ತಮ್ಮ ಸ್ವರೂಪದಲ್ಲಿ ಭಗವಂತನನ್ನು ಕಂಡು, ಯಾವ ಫಲವನ್ನು ಪಡೆಯುತ್ತಾರೆ ಎನ್ನುವುದನ್ನು ಮುಂದಿನ ಗದ್ಯ ಭಾಗದಲ್ಲಿ ಪಿಪ್ಪಲಾದರು ವಿವರಿಸುತ್ತಾರೆ. 

Saturday, November 24, 2012

Prashnopanishad in Kannada-Prashna-V (02)


ತಸ್ಮೈ ಸ ಹೋವಾಚ:
ಏತದ್ ವೈ ಸತ್ಯಕಾಮ ಪರಂ ಚಾಪರಂ ಚ ಬ್ರಹ್ಮ ಯದೋಂಕಾರಸ್ತಸ್ಮಾದ್ ವಿದ್ವಾನೇತೇನೈವಾಯನೇನೈ-ಕತರಮನ್ವೇತಿ

ಉಪಾಸನೆಯಲ್ಲೇ ಅತಿಶ್ರೇಷ್ಠ ಉಪಾಸನೆಯಾದ ಓಂಕಾರದ ಉಪಾಸನೆ ಕುರಿತಾದ ಶೈಬ್ಯಃ ಸತ್ಯಕಾಮರ ಪ್ರಶ್ನೆಯನ್ನು ಕೇಳಿ, ಪಿಪ್ಪಲಾದರಿಗೆ ಬಹಳ ಸಂತೋಷವಾಯಿತು. ಓಂಕಾರದ ಉಪಾಸನೆ ದೊಡ್ಡ ಸಾಧಕರಿಗೆ ಮಾತ್ರ ದಕ್ಕುವಂತಹ ಉಪಾಸನೆ. ಸಾಮಾನ್ಯವಾಗಿ ಓಂಕಾರದಿಂದ ಭಗವಂತನ ಉಪಾಸನೆಯನ್ನು ಮಾಡುವವರು ಯತಿಗಳು. ಗ್ರಹಸ್ಥರಾದವರು ಹತ್ತಕ್ಕಿಂತ ಹೆಚ್ಚು ಬಾರಿ ಓಂಕಾರ ಜಪ ಮಾಡುವುದರಿಂದ ಅವರಿಗೆ ಸಂಸಾರಿಕ ಜೀವನದಲ್ಲಿ ಜಿಗುಪ್ಸೆ ಬರಬಹುದು ಎನ್ನುತ್ತಾರೆ. ಆದರೆ ಓಂಕಾರದ ಅರ್ಥಾನುಸಂಧಾನ ಯಾರು ಬೇಕಾದರೂ ಮಾಡಬಹುದು. ಓಂಕಾರದ ಅರ್ಥಚಿಂತನೆ ಮಾಡಿ ಎತ್ತರಕ್ಕೇರಲು ಯಾವುದೇ ಅಡ್ಡಿ ಇಲ್ಲ.  
‘ಓಂ-ಕಾರ’ ಅಂದರೆ ‘ಓಂ’ ಎನ್ನುವ ಅಕ್ಷರದಿಂದ ಕರೆಯಲ್ಪಡುವ ಪರತತ್ತ್ವ. ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ಪರಬ್ರಹ್ಮ ಮತ್ತು ಅಪರಬ್ರಹ್ಮ ಎರಡೂ ಆ ಓಂಕಾರ ವಾಚ್ಯ ಭಗವಂತ” ಎಂದು. ಕಾಲತಃ, ದೇಶತಃ ದೂರವಿರುವ ಭಗವಂತ ‘ಪರ’; ಕಾಲ ಮತ್ತು ದೇಶತಃ ಸಮೀಪವಿರುವ ಭಗವಂತ ‘ಅಪರ’. ಉದಾಹರಣೆಗೆ: ಸ್ವಾಯಂಭುವ ಮನ್ವಂತರದಲ್ಲಿನ ಭಗವಂತನ ಅವತಾರವಾದ: ಕಪಿಲ, ದತ್ತಾತ್ರಯ, ಇತ್ಯಾದಿ ರೂಪಗಳು ಭಗವಂತನ ಬಹಳ ಹಿಂದಿನ ರೂಪವಾದುದರಿಂದ, ಇಂದು ಅದು ನಮಗೆ ಆತನ ‘ಪರ-ರೂಪಗಳು’. ಈ ಮನ್ವಂತರದಲ್ಲಿ ಆದ ‘ರಾಮ, ಕೃಷ್ಣ, ವೇದವ್ಯಾಸ’-ಇವೆಲ್ಲವೂ ಅಪರ ರೂಪಗಳು. ನನ್ನೊಳಗಿರುವ ಭಗವಂತ ನನಗೆ ‘ಅಪರ’, ನಿಮಗೆ ‘ಪರ’; ಅದೇ ರೀತಿ ನಿಮ್ಮೊಳಗಿರುವ ಭಗವಂತ ನನಗೆ ಪರ ಆದರೆ ನಿಮಗೆ ಅಪರ.  ಹೀಗಾಗಿ ಓಂಕಾರ ಹೇಳುವುದು ಒಬ್ಬನೇ ಒಬ್ಬ ಭಗವಂತನನ್ನು. ಅವನೇ ಕಾಲತಃ, ದೇಶತಃ ದೂರದಲ್ಲಿರುವವ; ಅವನೇ ಕಾಲತಃ ದೇಶತಃ ಸಮೀಪವಿರುವ ದೇವರು. ಓಂಕಾರ ಭಗವಂತನ ಯಾವುದೋ ಒಂದು ರೂಪವನ್ನಷ್ಟೇ ಹೇಳುವ ನಾಮವಲ್ಲ. ಇದು ಆತನ ಅನಂತ  ‘ಪರ-ಅಪರ’ ರೂಪಗಳನ್ನು ಹೇಳತಕ್ಕಂತಹ ಏಕಮಾತ್ರ ಬೀಜಾಕ್ಷರ.
ಓಂಕಾರದ ಮೂರು ಅಕ್ಷರಗಳಾದ ಅ-ಕಾರ, ಉ-ಕಾರ ಮತ್ತು ಮ-ಕಾರ ಶಬ್ದದಿಂದ ವಾಚ್ಯನಾದ ಭಗವಂತನ ಗುಣವಿಶೇಷಗಳನ್ನು ತಿಳಿದು, ಉಪಾಸನೆ ಮಾಡುವ ಸಾಧಕ, ಭಗವಂತನ ಮಾರ್ಗದಲ್ಲಿ ನಡೆದು, ಭಗವಂತನನ್ನು ಸೇರುತ್ತಾನೆ.  ‘ಓಂ’ ಎನ್ನುವುದು ಎಲ್ಲಾ ರೂಪಗಳ ಹೆಸರಾದರೂ ಕೂಡ, ಇದರಲ್ಲಿರುವ ಪ್ರತೀ ಅಕ್ಷರವೂ ಕೂಡಾ ವಿಶೇಷವಾಗಿ ಜಯ-ವಿಜಯರು ಧೈತ್ಯರಾಗಿ ಹುಟ್ಟಿದಾಗ ಅವರನ್ನು ಸಂಹಾರ ಮಾಡಿ ಶಾಪ ವಿಮೋಚನೆ ಮಾಡಿದ  ರೂಪಗಳನ್ನು ಹೇಳುತ್ತವೆ. ಅ-ಕಾರ ಶಿಶುಪಾಲ-ದಂತವಕ್ರರನ್ನು ಸಂಹಾರ ಮಾಡಿದ ಕೃಷ್ಣ ರೂಪವನ್ನು ಹೇಳಿದರೆ,  ಉ-ಕಾರ ರಾವಣ-ಕುಂಭಕರ್ಣರನ್ನು ಸಂಹಾರ ಮಾಡಿದ ರಾಮ ರೂಪವನ್ನೂ ಹಾಗೂ ಮ-ಕಾರ ಹಿರಣ್ಯಕಷಿಪುವನ್ನು ಸಂಹಾರ ಮಾಡಿದ ನರಸಿಂಹ ರೂಪವನ್ನೂ ಹೇಳುತ್ತದೆ. ಇದಲ್ಲದೆ, ಓಂಕಾರದಲ್ಲಿರುವ ‘ನಾದ’ ಹಿರಣ್ಯಾಕ್ಷನನ್ನು ಕೊಂದ ಭಗವಂತನ ವರಾಹ ರೂಪವನ್ನು ಹೇಳುತ್ತದೆ.
ಓಂಕಾರದ ಉಪಾಸನೆಯಲ್ಲಿ ಮೂರು ಮುಖ. ಮೊದಲು ಅ-ಕಾರದ ಉಪಾಸನೆ, ನಂತರ ಅ-ಕಾರದ ಜೊತೆಗೆ ಉ-ಕಾರದ ಉಪಾಸನೆ[ಅಂದರೆ ಓ-ಕಾರದ ಉಪಾಸನೆ]. ನಂತರ ಅ-ಉ ಮತ್ತು ಮ-ಕಾರದಿಂದ ಭಗವಂತನ ಉಪಾಸನೆ. ಈ ರೀತಿ ಓಂಕಾರದಿಂದ ಭಗವಂತನನ್ನು ಉಪಾಸನೆ ಮಾಡುವ ಜ್ಞಾನಿ, ಮೇಲೆ ಹೇಳಿದ ಮೂರು ಲೋಕಗಳಲ್ಲಿ ಒಂದು ಲೋಕವನ್ನು ಸೇರುತ್ತಾನೆ ಎನ್ನುತ್ತಾರೆ ಪಿಪ್ಪಲಾದರು. ಅ-ಕಾರದ ಉಪಾಸನೆಯಿಂದ ಹೋಗತಕ್ಕ ಲೋಕ ಭೂ-ಲೋಕ; ಉ-ಕಾರದ ಉಪಾಸನೆಯಿಂದ ಸೇರತಕ್ಕ ಲೋಕ ಸ್ವರ್ಗಲೋಕ ಮತ್ತು ಮ-ಕಾರದ ಉಪಾಸನೆಯಿಂದ ಮೋಕ್ಷಲೋಕ ಸಿದ್ಧಿಯಾಗುತ್ತದೆ.
ಇನ್ನು ಉಪಾಸನೆಯ ದೃಷ್ಟಿಯಲ್ಲಿ ನೋಡಿದರೆ: ಓಂಕಾರ ಉಪಾಸನೆಯಲ್ಲಿ ಕೂಡಾ ಮೂರು ವಿಧ. ಅ-ಕಾರದಿಂದ ಉಪಾಸನೆ ಮಾಡುವವರಿಗೆ ಬಾಹ್ಯ ಪ್ರತಿಮೆಯಲ್ಲಿ ಭಗವಂತನ ಪೂಜೆ; ಉ-ಕಾರದಲ್ಲಿ ಉಪಾಸನೆ ಮಾಡುವವರಿಗೆ ಮನಸ್ಸಿನಲ್ಲಿ ಭಗವಂತನ ಪೂಜೆ; ಮ-ಕಾರದಲ್ಲಿ ಉಪಾಸನೆ ಮಾಡುವವರಿಗೆ ಸ್ವರೂಪದಿಂದ ಭಗವಂತನ ದರ್ಶನ. ಈ ಉಪಾಸನೆಗನುಗುಣವಾಗಿ ಭೂಲೋಕ, ಸ್ವರ್ಗಲೋಕ ಮತ್ತು ಮೋಕ್ಷಲೋಕದಲ್ಲಿ ಅದರ ಫಲ ಸಿಗುತ್ತದೆ. 

[ಓಂಕಾರದ ವಿಶೇಷ ಅರ್ಥ ವಿವರಣೆಯನ್ನು ಸಂಕ್ಷಿಪ್ತವಾಗಿ ಭಗವದ್ಗೀತೆಯ ಏಳನೇ ಅಧ್ಯಾಯದಲ್ಲಿ ನೀಡಲಾಗಿದೆ.  ವಿವರಕ್ಕಾಗಿ ಈ ಕೊಂಡಿಯನ್ನು ಸಂದರ್ಶಿಸಿ: http://bhagavadgitakannada.blogspot.in/

Tuesday, November 20, 2012

Prashnopanishad in Kannada-Prashna-V (01)


ಅಥ ಪಂಚಮಃ ಪ್ರಶ್ನಃ


ಹಿಂದಿನ ನಾಲ್ಕು ಅಧ್ಯಾಯಗಳಲ್ಲಿ, ನಾಲ್ಕು ಪ್ರಶ್ನೆಗಳಿಗೆ ಪಿಪ್ಪಲಾದರು ಕೊಟ್ಟ ಉತ್ತರದಲ್ಲಿ, ಭಗವಂತ ಮತ್ತು ಮುಖ್ಯಪ್ರಾಣದೇವರ ಮಹತ್ವ; ಅವರ ಸೃಷ್ಟಿ ಕ್ರಿಯೆ; ಎಚ್ಚರ ಕನಸು ನಿದ್ದೆ ಎನ್ನುವ ಮೂರು ಅವಸ್ಥೆಗಳಲ್ಲಿ ನಮ್ಮನ್ನು ನಿಯಂತ್ರಿಸುವ ಶಕ್ತಿಗಳ ವಿವರವನ್ನು ತಿಳಿದೆವು. ಈ ಅಧ್ಯಾಯ ಐದನೇ ಋಷಿ  ತನ್ನ ಪ್ರಶ್ನೆಯನ್ನು ಪಿಪ್ಪಲಾದರ ಮುಂದಿಡುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲ್ಲಿ ಮುಖ್ಯವಾಗಿ ಭಗವಂತನ ಉಪಾಸನೆ, ಉಪಾಸನೆಯ ಬೀಜಮಂತ್ರ ಮತ್ತು ಉಪಾಸನೆಯ ಫಲದ ಕುರಿತಾದ ವಿವರಣೆಯನ್ನು ಕಾಣಬಹುದು.

ಅಥ ಹೈನಂ ಶೈಬ್ಯಃ ಸತ್ಯಕಾಮಃ ಪಪ್ರಚ್ಛ   ಸ ಯೋ ಹ ವೈ ತದ್ ಭಗವನ್ ಮನುಷ್ಯೇಷು ಪ್ರಾಯಣಾಂತಮೋಂಕಾರಮಭಿಧ್ಯಾಯೀತ ಕತಮಂ ವಾವ ಸ ತೇನ ಲೋಕಂ ಜಯತೀತಿ  

ಶೈಬ್ಯಃ ಸತ್ಯಕಾಮಃ ಎನ್ನುವ ಋಷಿ ಐದನೇ ಪ್ರಶ್ನೆ ಹಾಗಿದ ಶಿಷ್ಯ. ಇಲ್ಲಿ ‘ಶೈಬ್ಯ’ ಎಂದರೆ ಶಿಬಿಯ ಮಗ ಅಥವಾ ಶಿಬಿಯ ವಂಶಸ್ಥ ಎನ್ನುವ ಅರ್ಥವನ್ನು ಕೊಡುತ್ತದೆ. [ಪ್ರಾಚೀನ ಸಂಸ್ಕೃತ ಪಾಠಗಳಲ್ಲಿ ‘ಶೈವ್ಯ’ ಎನ್ನುವ ಪದ ಬಳಕೆಯಾಗಿರುವುದನ್ನು ಕಾಣುತ್ತವೆ. ಶೈವ್ಯ ಎಂದರೆ ಶಿವಿಯ ಮಗ ಅಥವಾ ಶಿವಿಯ ವಂಶಸ್ಥ  ಎಂದರ್ಥ.] ಇಲ್ಲಿ ಶಿಬಿ(ವಿ) ಪಿಪ್ಪಲಾದರಲ್ಲಿ ಕೇಳಿದ ಪ್ರಶ್ನೆ ಹೀಗಿದೆ: “ಗುರುಗಳೇ,  ಭೂಮಿಯಲ್ಲಿ ಸಾಧನೆ ಮಾಡುವ ಮನನಶೀಲ(ಮನುಷ್ಯ), ಓಂಕಾರವಾಚ್ಯ ಭಗವಂತನನ್ನು, ‘ಓಂ’ ಎನ್ನುವ ಬೀಜಾಕ್ಷರದ ಮೂಲಕ,  ಅಂತರಂಗ ಮತ್ತು ಬಹಿರಂಗ ಭಗವದರ್ಪಣಾ ಭಾವದಿಂದ, ತನ್ನ ಪ್ರತಿಯೊಂದು ಕ್ರಿಯೆಯನ್ನೂ ಭಗವಂತನ ಪೂಜೆ ಎಂದು(ಅಭಿಧ್ಯಾನ), ಸಾಯುವ ತನಕ ಉಪಾಸನೆ ಮಾಡಿದರೆ, ಅಂತಹ ವ್ಯಕ್ತಿ, ಓಂಕಾರವಾಚ್ಯ ಭಗವಂತನ ಅನುಗ್ರಹದಿಂದ, ಭೂಲೋಕ-ಸ್ವರ್ಗಲೋಕ-ವೈಕುಂಠಲೋಕ ಇವುಗಳಲ್ಲಿ ಯಾವ ಲೋಕವನ್ನು ಪಡೆಯುತ್ತಾನೆ?”. 
ಈ ಪ್ರಶ್ನೆ, ನಿರಂತರ ಆಳವಾದ ಚಿಂತನೆ ಮಾಡುವ ಮನುಷ್ಯರ ಸಾಧನೆಯ ಕುರಿತಾಗಿ ಕೇಳಿರುವ ಪ್ರಶ್ನೆ. ಇಲ್ಲಿ ಅಭಿಧ್ಯಾನ ಎಂದರೆ: ಎಲ್ಲಾ ವಿಧದಿಂದಲೂ ಅಥವಾ ಎಲ್ಲಾ ಕ್ರಿಯೆಯನ್ನು ಭಗವಂತನ ಪೂಜೆಯಾಗಿ ಮಾಡುವುದು ಮತ್ತು ಉಭಯತಃ [ಅಭಿತಃ=ಉಭಯತಃ=ಅಂತರಂಗ ಮತ್ತು ಬಹಿರಂಗ.] ಭಗವದರ್ಪಣೆ ಭಾವದಿಂದ ಉಪಾಸನೆ ಮಾಡುವುದು ಎಂದರ್ಥ. ಇನ್ನು ‘ಪ್ರಾಯಾಣ’ ಎಂದರೆ: ಪ್ರ+ಅಯನ;  ಪ್ರಕೃಷ್ಟವನ್ನು ಹೊಂದುವುದು ಅಥವಾ ಎತ್ತರದ ಲೋಕಕ್ಕೆ ಹೋಗುವುದು ಎಂದರ್ಥ. ಎತ್ತರದ ಲೋಕಗಳು ಮೂರು: ಸಾಧನೆ ಮಾಡುವ ಭೂಲೋಕ, ಸ್ವರ್ಗಸುಖವನ್ನು ಅನುಭವಿಸುವ ಸ್ವರ್ಗಲೋಕ ಹಾಗೂ ಕೊನೆಯದಾಗಿ ಮೋಕ್ಷಲೋಕವಾದ ವೈಕುಂಠ. ಓಂಕಾರ ಉಪಾಸನೆಯಿಂದ ಈ ಮೂರು ಲೋಕಗಳಲ್ಲಿ ಯಾವ ಲೋಕ ಪ್ರಾಪ್ತಿಯಾಗುತ್ತದೆ ಎನ್ನುವುದು ಶಿವಿಯ ಪ್ರಶ್ನೆ.
ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಈ ಅಪೂರ್ವವಾದ ಪ್ರಶ್ನೆಗೆ ಪಿಪ್ಪಲಾದರ ಉಪದೇಶವೇ ಈ ಅಧ್ಯಾಯದ ಮುಂದಿನ ಭಾಗ. ಬನ್ನಿ, ಆ ಭಗವಂತನ ಕೃಪೆ ಕೋರಿ, ಮುಖ್ಯಪ್ರಾಣದೇವರಿಗೆ ನಮಿಸಿ, ಅತ್ಯದ್ಭುತವಾದ ಈ ಗುರುಶಿಷ್ಯರ ಸಂಭಾಷಣೆಯನ್ನಾಲಿಸೋಣ.  

Sunday, November 18, 2012

Prashnopanishad in Kannada-Prashna-IV (05-11)


ಅತ್ರೈಷ ದೇವಃ ಸ್ವಪ್ನೇ ಮಹಿಮಾನಮನುಭವತಿ ಯದ್ ದೃಷ್ಟನ್ದೃಷ್ಟಮನುಪಶ್ಯತಿ ಶ್ರುತಂ- ಶ್ರುತಮೇವಾರ್ಥಮನುಶೃಣೋತಿ ದೇಶದಿಗಂತರೈಶ್ಚ ಪ್ರತ್ಯನುಭೂತಂ ಪುನಃ ಪುನಃ ಪ್ರತ್ಯನುಭವತಿ ದೃಷ್ಟಂ ಚಾದೃಷ್ಟಂ ಚ ಶ್ರುತಂ ಚಾಶ್ರುತಂ ಚಾನುಭೂತಂ ಚಾನನುಭೂತಂ ಚ ಸ್ಚ್ಚಾಸಚ್ಚ ಸರ್ವಂ ಪಶ್ಯತಿ ಸರ್ವಃ ಪಶ್ಯತಿ

ಗಾರ್ಗ್ಯರ ಪ್ರಶ್ನೆಯ ಮುಂದಿನ ಭಾಗ “ಕತರ ಏಷ ದೇವಃ ಸ್ವಪ್ನಾನ್ ಪಶ್ಯತಿ” – ಕನಸು ಕಾಣುವವನು ಮತ್ತು ಕಾಣಿಸುವವನು ಯಾರು ಎನ್ನುವುದು. ಈ ಪ್ರಶ್ನೆಗೆ ಪಿಪ್ಪಲಾದರು ಉತ್ತರಿಸುತ್ತಾ ಕನಸಿನ ವಿವಿಧ ಮುಖಗಳನ್ನು ಇಲ್ಲಿ ವಿವರಿಸಿದ್ದಾರೆ. ಹಿಂದೆ ಹೇಳಿದಂತೆ ಕನಸಿನ ಪ್ರಪಂಚ ಅತ್ಯಂತ ವಿಸ್ಮಯ. ಇಂತಹ ಅಂತರಂಗದ ವಿಸ್ಮಯವನ್ನು ಪ್ರಾಣದೇವರು ಭಗವಂತನೊಂದಿಗೆ ನೋಡುತ್ತಾರೆ ಮತ್ತು ಸ್ವಪ್ನದಲ್ಲಿ ನಮಗೆ ತೋರಿಸುತ್ತಾರೆ. ನಾವು ಅನೇಕ ಹಿನ್ನೆಲೆಯಲ್ಲಿ ಕನಸನ್ನು ಕಾಣುತ್ತೇವೆ. ಸಾಮಾನ್ಯವಾಗಿ ನಾವು ಕಂಡಿರುವ ಅಥವಾ ಕೇಳಿರುವ ವಸ್ತು ನಮ್ಮ ಮೇಲೆ ಗಾಢವಾದ ಪರಿಣಾಮ ಬೀರಿದ್ದರೆ ಅದು ರಾತ್ರಿ ಕನಸಾಗ ಕಾಣಬಹುದು. ಹಾಗೆ ಕನಸು ಬಿದ್ದಾಗ ಅಲ್ಲಿ ಯಥಾಸ್ಥಿತಿಗಿಂತ ಭಿನ್ನವಾದುದ್ದನ್ನು ನಾವು ಕಾಣಬಹುದು. ಕೆಲವೊಮ್ಮೆ ದಿಕ್ಕು-ದೇಶಗಳ ಹಂಗಿಲ್ಲದೆ, ಯಾವುದೋ ಒಂದು ದೇಶದಲ್ಲಿ ಯಾವುದೋ ಕಾಲದಲ್ಲಿ ನಡೆದ ಅಥವಾ ನಡೆಯದೇ ಇರುವ ಘಟನ ಕನಸಾಗಿ ಕಾಣಬಹುದು. ಈ ಜನ್ಮದಲ್ಲಿ ನಾವು ಕಾಣದ್ದು ಅಥವಾ ಕೇಳರಿಯದ್ದು ನಮಗೆ ಕನಸಿನಲ್ಲಿ ಕಾಣಬಹುದು. ಯಾವುದು ಎಚ್ಚರದಲ್ಲಿ ಅಸಂಭವವೋ ಅದು ಕನಸಾಗಿ ಕಾಣಬಹುದು. [ಉದಾಹರಣೆಗೆ ಕೊಂಬಿರುವ ಮೊಲ, ಬಿಳಿ ಆನೆ ಇತ್ಯಾದಿ]. ಈ ರೀತಿಯ ಎಲ್ಲಾ ಅದ್ಭುತವನ್ನು ಕನಸಿನಲ್ಲಿ ಕಾಣಬಹುದು. ಏಕೆಂದರೆ ಈ ಕನಸನ್ನು ಕಾಣಿಸುವವ ಎಲ್ಲವನ್ನು ಬಲ್ಲವನು.
ನಮ್ಮಲ್ಲಿ ಕೆಲವರಿಗೆ ಕನಸಿನ ಅನುಭವ ಕಡಿಮೆ, ಇನ್ನು ಕೆಲವರಿಗೆ ಕನಸು ನೆನಪಿರುವುದಿಲ್ಲ, ಮತ್ತ ಕೆಲವರಿಗೆ ರಾತ್ರಿಯಿಂದ ಬೆಳಗಿನ ತನಕ ನಿದ್ದೆಯೇ ಇಲ್ಲದ ಕನಸಿನ ಪ್ರಪಂಚ. ನಾವು ಕಾಣುವ ಕನಸು ಅರ್ಥಪೂರ್ಣವಾಗಿದ್ದು ಅದರಲ್ಲಿ ಯಾವೊದೋ ಒಂದು ಸಂದೇಶವಿರಬಹುದು. ಕನಸಿನ ಪ್ರಪಂಚದಲ್ಲಿನ ಸಂದೇಶವನ್ನು ಅಲ್ಲಿನ ಬಣ್ಣ, ದಿಕ್ಕು, ವಸ್ತುಗಳ ಆಧಾರದಮೇಲೆ ತಿಳಿಯಲಾಗುತ್ತದೆ. ಇದನ್ನು ಕನಸಿನ ಮನಃಶಾಸ್ತ್ರ[dream psychology] ಎನ್ನುತ್ತಾರೆ. ಕನಸಿನಲ್ಲಿ ಬಿಳಿ ಬಣ್ಣ ಬಹಳ ಶುಭಸೂಚಕವಾದರೆ, ಕೆಂಪು ಬಣ್ಣ –ಕೆಲಸ ಕೈಗೂಡದ ಮುನ್ಸೂಚನೆಯಾಗಿರುತ್ತದೆ. ಸೀತೆಯನ್ನು ಲಂಕೆಗೆ ಅಪಹರಿಸಿಕೊಂಡು ಹೋದ ರಾವಣ ಆಕೆಯಲ್ಲಿ ತನ್ನನ್ನು ಮದುವೆಯಾಗು ಎಂದು ಪದೇಪದೇ ಒತ್ತಡ ತರುತ್ತಿರುವ ಸಮಯದಲ್ಲಿ ಅಲ್ಲಿದ್ದ ತ್ರಿಜಟೆ ಎನ್ನುವ ಒಬ್ಬ ರಾಕ್ಷಸ ವೃದ್ಧೆಗೆ  ಒಂದು ಕನಸು ಬೀಳುತ್ತದೆ. ಅಲ್ಲಿ ಆಕೆ ಬಿಳಿ ಬಣ್ಣದ ವಸ್ತ್ರವನ್ನು ತೊಟ್ಟ ರಾಮ-ಲಕ್ಷ್ಮಣರು ಸೀತೆಯನ್ನು ಬಿಳಿಬಣ್ಣದ ಆನೆಯ ಮೇಲೆ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋದಂತೆ, ರಾವಣ ಕೆಂಪು ಬಣ್ಣದ ಬಟ್ಟೆಯನ್ನು ತೊಟ್ಟು, ಮೈತುಂಬಾ ಎಣ್ಣೆಯನ್ನು ಸವರಿಕೊಂಡು, ದಕ್ಷಿಣಾಭಿಮುಖವಾಗಿ ಕತ್ತೆಯಮೇಲೆ ಸವಾರಿ ಮಾಡಿಕೊಂಡು ಹೋದಂತೆ ಕನಸು ಕಾಣುತ್ತಾಳೆ. ತಕ್ಷಣ ಆಕೆ ಹೇಳುತ್ತಾಳೆ: ಸೀತೆಗೆಂದೂ ಅಪಾಯವಿಲ್ಲ, ಅಪಾಯವಿರುವುದು ಲಂಕೆಗೆ ಎಂದು. ಹೀಗೆ ಭಗವಂತ ತೋರಿಸುವ ಕನಸಿನ ಪ್ರಪಂಚ ಬಹಳ ವಿಚಿತ್ರ. ಅಲ್ಲಿ ಬರುವ ಪಾತ್ರಗಳಿಗೆ, ಬಣ್ಣಕ್ಕೆ, ವಸ್ತುವಿಗೆ ವಿಶೇಷ ಅರ್ಥವಿರುತ್ತದೆ. ಆದರೆ ಅದು ನಮಗೆ ತಿಳಿಯಲಾಗದ (ದುಃ)ಸ್ವಪ್ನವೂ ಆಗಿರಬಹುದು!
[ಪದೇಪದೇ ದುಃಸ್ವಪ್ನ ಬಿದ್ದಾರೆ ಆ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಏಕೆಂದರೆ ಇದು ಭಗವಂತ ನಮಗೆ ಕೊಟ್ಟ ಮುನ್ಸೂಚನೆ. ಇಂತಹ ಸಂಧರ್ಭದಲ್ಲಿ ಆ ಭಗವಂತನಲ್ಲಿ ಸಂಪೂರ್ಣ ಶರಣಾದರೆ ಆತ ಖಂಡಿತವಾಗಿ ನಮಗೆ ಪರಿಹಾರವನ್ನು ತೋರಿಸುತ್ತಾನೆ. ಮುಂದೆ ಆಗತಕ್ಕಂತಹ ಅನಿಷ್ಟದಿಂದ ನಮ್ಮನ್ನು ಪಾರು ಮಾಡುತ್ತಾನೆ. ವಿಷ್ಣುಸಹಸ್ರನಾಮದಲ್ಲಿ ಬರುವ ಭಗವಂತನ “ದುಃಸ್ವಪ್ನನಾಶನಃ” ನಾಮವನ್ನು ಶ್ರದ್ಧಾ-ಭಕ್ತಿಯಿಂದ ನಿರಂತರ ಪಾರಾಯಣ ಮಾಡಿದರೆ ದುಃಸ್ವಪ್ನ ಮುಕ್ತಿ ಸಾಧ್ಯ.]

ಸ ಯದಾ ತೇಜಸಾಽಭಿಭೂತೋ ಭವತ್ಯತ್ರೈಷ ದೇವಃ ಸ್ವಪ್ನಾನ್ ನ ಪಶ್ಯತಿ ಅಥ ಯದೇತದಸ್ಮಿನ್ ಶರೀರೇ ಸುಖಂ  ಭವತಿ

ಕನಸಿನ ಪ್ರಪಂಚದಿಂದ ನಿದ್ದೆಯ ಪ್ರಪಂಚಕ್ಕೆ ನಮ್ಮನ್ನು ಕೊಂಡೊಯ್ಯುವವ ಉದಾನ. ಉದಾನನ ತೇಜಸ್ಸಿನೊಂದಿಗೆ ಭಗವಂತನ ತೇಜಸ್ಸು ಸೇರಿದಾಗ ಜೀವ ಭಗವಂತನ ಮಡಿಲಲ್ಲಿ ಆನಂದವನ್ನು ಪಡೆಯುತ್ತಾನೆ. ನಮಗೆ ನಿದ್ದೆಯಲ್ಲಿ ಯಾವ ಎಚ್ಚರವೂ ಇರುವುದಿಲ್ಲವಾದರೂ ಸಹ ಅಲ್ಲಿ ಆನಂದದ ಅರಿವು(Awareness of bliss), ಕಾಲದ ಅರಿವು (Awareness of time), ನಮ್ಮ ಅಜ್ಞಾನದ ಅರಿವು (Awareness of ignorance)  ಮತ್ತು ಆತ್ಮದ ಅರಿವಿರುತ್ತದೆ(Awareness of self). ನಮಗೆ ತಿಳಿದಂತೆ ಜೀವ ಸುಖವನ್ನು ಅನುಭವಿಸಬೇಕಾದರೆ ಅದರ ಶರೀರ, ಇಂದ್ರಿಯ, ಮನಸ್ಸು ಕಾರ್ಯನಿರ್ವಹಿಸುತ್ತಿರಬೇಕು. ಜೀವನಿಗೆ ಬಾಹ್ಯ ವಸ್ತುವಿನ ಸಂಪರ್ಕ ಇಂದ್ರಿಯ ಮತ್ತು ಮನಸ್ಸಿನ ಮೂಲಕವಾಗುತ್ತದೆ. ಉದಾಹರಣೆಗೆ ಒಂದು ಸುಂದರವಾದ ವಸ್ತುವನ್ನು ನೋಡಿದಾಗ, ಒಂದು ಸುಂದರ ನಾದವನ್ನು ಕೇಳಿದಾಗ, ಒಳ್ಳೆಯ ಸುಗಂಧ ಮೂಸಿದಾಗ, ರುಚಿಯಾದ ಆಹಾರವನ್ನು ಸೇವಿಸಿದಾಗ, ಕೋಮಲವಾದ ವಸ್ತುವನ್ನು ಮುಟ್ಟಿದಾಗ ಸುಖದ ಅನುಭವವಾಗುತ್ತದೆ. ಇಂದ್ರಿಯಗಳಿಂದ ಬಂದ ಸಂದೇಶವನ್ನು ಮನಸ್ಸು ಸ್ವೀಕರಿಸಿ ಒಳಗಿರುವ ಆತ್ಮಕ್ಕೆ ತಲುಪಿಸಿದಾಗ ಜೀವಕ್ಕೆ ಆನಂದದ ಅನುಭವವಾಗುತ್ತದೆ. ಇದು ಜೀವಕ್ಕೆ ಆನಂದದ ಅನುಭವವಾಗುವ ಸಹಜ  ವಿಧಾನ.
ಕನಸಿನಲ್ಲಿ ನಮ್ಮ ಯಾವ ಇಂದ್ರಿಯಗಳೂ ಕೆಲಸ ಮಾಡುವುದಿಲ್ಲ. ಆದರೆ ಕೇವಲ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಅದು ತಾನು ಹಿಂದೆ ಕಂಡಿರುವ, ಕೇಳಿರುವ ವಿಷಯಗಳ ಸಂಸ್ಕಾರದಿಂದ ತನಗೆ ಬೇಕಾಗಿರುವ ಚಿತ್ರ ಬಿಡಿಸಿ  ಆ ಚಿತ್ರವನ್ನು ಆತ್ಮ ನೋಡುವಂತೆ ಮಾಡುತ್ತದೆ.  ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಮನಸ್ಸು ಕಾರ್ಯ ನಿರ್ವಹಿಸುವುದರಿಂದ ನಮಗೆ ಎಚ್ಚರ ಮತ್ತು ಕನಸಿನಲ್ಲಿ ಆನಂದದ ಅನುಭವವಾಗುತ್ತದೆ. ಆದರೆ ನಾವು ನಿದ್ದೆ(Deep Sleep) ಮಾಡಿದಾಗ ನಮ್ಮ ಯಾವ ಇಂದ್ರಿಯಗಳೂ ಕೆಲಸ ಮಾಡುವುದಿಲ್ಲ; ಮನಸ್ಸೂ ಕೆಲಸ ಮಾಡುವುದಿಲ್ಲ. ಹಾಗಿರುವಾಗ  ದುಃಖ ಸ್ಪರ್ಶವಿಲ್ಲದ ಆನಂದವನ್ನು ಜೀವ ಹೇಗೆ ಪಡೆಯುತ್ತಾನೆ ಎನ್ನುವುದು ಇಲ್ಲಿರುವ ಪ್ರಶ್ನೆ.[ಕಸ್ಯ ಏತತ್   ಸುಖಂ ಭವತಿ].
ಪಿಪ್ಪಲಾದರು ಹೇಳುತ್ತಾರೆ: “ಅಥ ಏತದ್ ತಸ್ಮಿನ್ ಶರೀರೇ ಸುಖಂ  ಭವತಿ” ಎಂದು. ಅಂದರೆ ಸುಖ ಆಗುವುದು ಶರೀರದ ಮೂಲಕ ಎಂದು. ಇಲ್ಲಿ ನಾವು ಪಿಪ್ಪಲಾದರು ಹೇಳಿರುವ ‘ಶರೀರ’ ಯಾವುದು ಎನ್ನುವುದನ್ನು ತಿಳಿಯಬೇಕು. ಮನಸ್ಸು ಇಂದ್ರಿಯಗಳು ನಿದ್ರಿಸುವಾಗ ಈ ಸ್ಥೂಲವಾದ ಶರೀರ ಕೂಡಾ ನಿದ್ರಿಸುತ್ತಿರುತ್ತದೆ. ಆದರೆ ನಿದ್ರಿಸದೇ ಸುಖದ ಅನುಭವವನ್ನು ಪಡೆಯುವ ಶರೀರ ಯಾವುದು? ನಮಗೆ ತಿಳಿದಂತೆ ಜೀವನಿಗೆ ಒಟ್ಟು ನಾಲ್ಕು ಶರೀರ. ಒಂದು ಬಾಹ್ಯವಾಗಿ ಕಾಣುವ ಸ್ಥೂಲಶರೀರ. ಇದು ವ್ಯಕ್ತಿ ಸತ್ತಾಗ ಬಿದ್ದು ಹೋಗುವ ಶರೀರ. ಸ್ಥೂಲಶರೀರದ ಒಳಗೆ  ಸ್ವರ್ಗಾದಿ ಸೂಕ್ಷ್ಮಲೋಕದ ಅನುಭವವನ್ನು ಪಡೆಯುವ ಸೂಕ್ಷ್ಮಶರೀರವಿದೆ. ಇದು ಪ್ರಳಯ ಕಾಲದಲ್ಲಿ ಬಿದ್ದು ಹೋಗುವ ಶರೀರ. ಸೂಕ್ಷ್ಮಶರೀರದ  ಒಳಗೆ ಅನಾದಿ ಕಾಲದಿಂದಲೂ ಪಡೆದು ಬಂದಿರುವ ಲಿಂಗಶರೀರವಿದೆ. ಇದು ಮುಕ್ತಿ ಪ್ರಾಪ್ತಿಯಾದಾಗ ಬಿದ್ದು ಹೋಗುವ ಶರೀರ. ಈ ಲಿಂಗ ಶರೀರದ ಒಳಗೆ ಪ್ರಾಣ-ನಾರಾಯಣರಿಗೆ ಶರೀರ ಸ್ಥಾನೀಯವಾಗಿರುವ ಸ್ವರೂಪಭೂತ ಶರೀರವಿದೆ. ಈ ಶರೀರದಿಂದ ಸ್ವರೂಪಭೂತನಾದ ಭಗವಂತನನ್ನು ಕಾಣಲು ಮತ್ತು ಸೇರಲು ಸಾಧ್ಯ. ಈ ಸ್ವರೂಪಭೂತವಾದ ಶರೀರ ನಿದ್ದೆಯಲ್ಲಿ ಸ್ವರೂಪಭೂತನಾದ ಭಗವಂತನಿಂದ ಆನಂದದ ಅನುಭವವನ್ನು ಪಡೆಯುತ್ತದೆ.
ಮೋಕ್ಷದಲ್ಲಿ ಮತ್ತು ನಿದ್ದೆಯಲ್ಲಿ ಭಗವಂತನನ್ನು ಕಾಣುವುದರಲ್ಲಿ ಇರುವ ವ್ಯತ್ಯಾಸವೇನೆಂದರೆ ಮೋಕ್ಷದಲ್ಲಿ ಜೀವನಿಗೆ ಭಗವಂತನೊಂದಿಗಿದ್ದೇನೆ ಎನ್ನುವ ಎಚ್ಚರವಿರುತ್ತದೆ, ಆದರೆ ನಿದ್ದೆಯಲ್ಲಿ ಆ ಎಚ್ಚರ ಇರುವುದಿಲ್ಲ.
ವೇದ ಉಪನಿಷತ್ತುಗಳಲ್ಲಿ ಬಂದಿರುವ ಈ ವಿವರಣೆ ಇಂದಿನ ವಿಜ್ಞಾನಕ್ಕೆ ತಿಳಿಯದ ವಿಚಾರ. ಇಂದಿನ ವಿಜ್ಞಾನ ಅಂದರೆ ಅದು ನಿರಂತರ ಸಂಶೋಧನೆ. ವಿಜ್ಞಾನಿಗಳು ಇಂದು ನಿಜವೆಂದು ನಾವು ಭಾವಿಸಿರುವುದನ್ನು ನಾಳೆ ತಪ್ಪು ಎಂದು ಹೊಸ ಸಂಶೋಧನೆಯಿಂದ ತಿದ್ದಬಹುದು. ಆದರೆ ಉಪನಿಷತ್ತಿನಲ್ಲಿ ಹೇಳಿರುವ ವಿಷಯಗಳಿಗೆ ಎಂದೂ ಯಾವುದೇ ತಿದ್ದುಪಡಿ ಇಲ್ಲ. ಅದು ಸತ್ಯವನ್ನು[ಭಗವತನನ್ನು] ಸಾಕ್ಷಾತ್ಕರಿಸಿಕೊಂಡ ಋಷಿಗಳು ಕಂಡ ಸತ್ಯ. ನಿದ್ದೆಯ ಈ ವಿಸ್ಮಯ ಮತ್ತು ಸಮಾಧಿಸ್ಥಿತಿ(ತುರಿಯಾವಸ್ಥೆ ಅಥವಾ ಉನ್ಮನೀಭಾವ)ಯಲ್ಲಿನ ಆನಂದಕ್ಕೆ ಕಾರಣ ಏನೆಂಬುದನ್ನು  ಇಂದಿನ ವಿಜ್ಞಾನ ವಿವರಿಸುವುದಿಲ್ಲ.
ನಿದ್ದೆಯಲ್ಲಿ ನಮ್ಮ ದೇಹದಲ್ಲಿರುವ  ಪಂಚಭೂತಗಳು, ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಯಾವುದೂ  ಕೆಲಸ ಮಾಡುವುದಿಲ್ಲ; ಕೇವಲ ಪಂಚಪ್ರಾಣರು ಮತ್ತು ಪಂಚರೂಪಿ ಭಗವಂತ[ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ನಾರಾಯಣ] ಸದಾ ಎಚ್ಚರವಾಗಿದ್ದು, ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹೀಗಿರುವಾಗ ನಿದ್ದೆಯ ಸಮಯದಲ್ಲಿ ದೇಹದಲ್ಲಿರುವ ಉಳಿದ ತತ್ತ್ವಾಭಿಮಾನಿ ದೇವತೆಗಳು ಎಲ್ಲಿ ಹೋಗುತ್ತಾರೆ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. [“ಕಸ್ಮಿನ್ನು ಸರ್ವೇ ಸಂಪ್ರತಿಷ್ಠಿತಾ ಭವಂತಿ”]. ಬನ್ನಿ, ಈ ಪ್ರಶ್ನೆಗೆ ಉತ್ತರ ರೂಪವಾಗಿರುವ ಪಿಪ್ಪಲಾದರ ಉಪದೇಶವನ್ನಾಲಿಸೋಣ.

ಸ ಯಥಾ ಸೋಮ್ಯ ವಯಾಂಸಿ ವಾಸೋವೃಕ್ಷಂ ಸಂಪ್ರತಿಷ್ಠಂತೇ   ಏವಂ ಹ ವೈ ತತ್ ಸರ್ವಂ ಪರ ಆತ್ಮನಿ ಸಂಪ್ರತಿಷ್ಠತೇ

ಇಲ್ಲಿ ಪಿಪ್ಪಲಾದರು ತನ್ನ ಶಿಷ್ಯನನ್ನು ‘ಸೋಮ್ಯ’ ಎಂದು ಸಂಬೋಧಿಸಿದ್ದಾರೆ. ಈ ಪದ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಸೋಮ್ಯ ಎನ್ನುವುದಕ್ಕೆ ಎರಡು ಅರ್ಥವಿದೆ. ಸೋಮಯಾಗ ಮಾಡಿ, ವೇದದಲ್ಲಿ ಹೇಳಿರುವ ಎಲ್ಲಾ ಕರ್ಮಾನುಷ್ಠಾನದಲ್ಲಿ ಪರಿಣತನಾಗಿ, ಆ ಕರ್ಮದ ಆಚೆಗಿರುವ ಜ್ಞಾನದ ಮುಖವನ್ನು ತಿಳಿಯ ಬಂದವ ಸೋಮ್ಯ; ಭಕ್ತಿಯಿಂದ ಭಗವದ್ ಉಪಾಸನೆ ಮಾಡಿದವ ಸೋಮ್ಯ.
ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ಹೇಗೆ ಪಕ್ಷಿಗಳು ಸಂಜೆ ಹೊತ್ತು ತಮ್ಮ ವಾಸಸ್ಥಾನವಾದ ವೃಕ್ಷಕ್ಕೆ ಬಂದು ಸೇರುತ್ತವೋ, ಹಾಗೇ ಜೀವ ನಿದ್ರಿಸಿದಾಗ ಎಲ್ಲಾ ತತ್ತ್ವಾಭಿಮಾನಿ ದೇವತೆಗಳು ತಮ್ಮ  ವಾಸದ ನೆಲೆವೀಡಾದ ಪ್ರಾಣಾಂತರ್ಗತ ಭಗವಂತನನ್ನು ಹೋಗಿ ಸೇರುತ್ತಾರೆ” ಎಂದು. ಇಲ್ಲಿ ಪಿಪ್ಪಲಾದರು ಬಳಸಿರುವ ದೃಷ್ಟಾಂತ ಅದೆಷ್ಟು ಸುಂದರವಾಗಿದೆ. ಈ ರೀತಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವ ಹಾಗೆ  ಸರಳ ದೃಷ್ಟಾಂತವನ್ನು ಬಳಸಿ ಜ್ಞಾನ ಧಾರೆಯನ್ನು ಹರಿಸಿರುವ ಪಿಪ್ಪಲಾದರಿಗೆ ನಾವು ಚಿರಋಣಿಗಳು.

ಪೃಥಿವೀ ಚ ಪೃಥಿವೀಮಾತ್ರಾ ಚಾSಪಶ್ಚಾSಪೋಮಾತ್ರಾ ಚ ತೇಜಶ್ಚ ತೇಜೋಮಾತ್ರಾ ಚ ವಾಯುಶ್ಚ ವಾಯುಮಾತ್ರಾ ಚಾSಕಾಶಶ್ಚಾSಕಾಶಮಾತ್ರಾ ಚ ಚಕ್ಷುಶ್ಚ ದ್ರಷ್ಟವ್ಯಂ ಚ ಶ್ರೋತ್ರಂ ಚ ಶ್ರೋತವ್ಯಂ ಚ ಗ್ರಾಣಂ ಚ ಘ್ರಾತವ್ಯಂ ಚ ರಸಶ್ಚ ರಸಯಿತವ್ಯಂ ಚ ತ್ವಕ್ ಚ ಸ್ಪರ್ಶಯಿತವ್ಯಂ ಚ ವಾಕ್ ಚ ವಕ್ತವ್ಯಂ ಚ ಹಸ್ತೌ ಚಾSದಾತವ್ಯಂ ಚ ಪಾದೌ ಚ ಗಂತವ್ಯಂ ಚ  ಪಾಯುಶ್ಚ ವಿಸರ್ಜಯಿತವ್ಯಂ ಚೋಪಸ್ಥಶ್ಚಾSನಂದಯಿತವ್ಯಂ  ಮನಶ್ಚ ಮಂತವ್ಯಂ ಚ ಬುದ್ಧಿಶ್ಚ ಬೋದ್ಧಿವ್ಯಂ ಚಾಹಂಕಾರಶ್ಚಾಹಂಕರ್ತವ್ಯಂ ಚ ಚಿತ್ತಂ ಚ ಚೇತಯಿತವ್ಯಂ ಚ ತೇಜಶ್ಚ ವಿದ್ಯೋತಯಿತವ್ಯಂ ಚ ಪ್ರಾಣಶ್ಚ ವಿಧಾರಯಿತವ್ಯಂ ಚ

ಯಾವ ಯಾವ ದೇವತೆಗಳು ಭಗವಂತನೆಂಬ ಗೂಡನ್ನು ಸೇರುತ್ತಾರೆ ಎನ್ನುವುದನ್ನು ಈ ಗದ್ಯದಲ್ಲಿ ವಿವರಿಸಲಾಗಿದೆ. ಈ ಪಿಂಡಾಂಡದಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುವ ತತ್ತ್ವಗಳ[ತತ್ತ್ವಾಭಿಮಾನಿ ದೇವತೆಗಳ] ಒಂದು ಪಟ್ಟಿಯನ್ನು ಇಲ್ಲಿ  ನೀಡಲಾಗಿದೆ. ಮೊದಲು ಇಲ್ಲಿ ಪಂಚಭೂತಗಳಿಂದಾದ ಅನ್ನಮಯ ಮತ್ತು ಪ್ರಾಣಮಯ ಕೋಶದ ವಿವರವನ್ನು ಹೇಳುತ್ತಾ ಪಿಪ್ಪಲಾದರು ಹೇಳುತ್ತಾರೆ: “ಪೃಥಿವೀ ಚ ಪೃಥಿವೀಮಾತ್ರಾ ಚ; ಆಪಶ್ಚ ಆಪೋಮಾತ್ರಾ ಚ” ಎಂದು. ನಮಗೆ ಕಾಣುವ ಸ್ಥೂಲಶರೀರ ಅನ್ನಮಯಕೋಶ. ಅದು ಮಣ್ಣು ಮತ್ತು ನೀರಿನಿಂದಾಗಿದೆ. ಇಲ್ಲಿ ಪೃಥಿವಿ ಮತ್ತು ಪೃಥಿವೀಮಾತ್ರೆ ಎಂದಿದ್ದಾರೆ. ‘ಪೃಥಿವಿ’ ಎಂದರೆ ಮಣ್ಣು, ‘ಪೃಥಿವೀಮಾತ್ರೆ’ ಎಂದರೆ ಮಣ್ಣಿನ ಅತ್ಯಂತ ಸೂಕ್ಷ್ಮಾವಸ್ಥೆ. ಮಣ್ಣಿನ ಅತ್ಯಂತ ಸೂಕ್ಷ್ಮಾವಸ್ಥೆ ಎಂದರೆ ಅದು ಪರಮಾಣು. ಅದು ಕೇವಲ ಗಂಧ. ನಂತರ ನೀರು ಮತ್ತು ನೀರಿನ ಮೂಲದ್ರವ್ಯವಾದ ಜಲಪರಮಾಣು(ರಸ). ಒಟ್ಟಿನಲ್ಲಿ ಮಣ್ಣು ಮತ್ತು ನೀರು ಸೇರಿ ಕಾಣುವ ಅನ್ನಮಯಕೋಶ ನಿರ್ಮಾಣವಾಯಿತು.
ಅನ್ನಮಯಕೋಶದ ನಂತರ ಅನ್ನಮಯಕೋಶದ ಒಳಗಿರುವ ಪ್ರಾಣಮಯಕೋಶ. ಅದು ಬೆಂಕಿ, ಗಾಳಿ ಮತ್ತು ಆಕಾಶದಿಂದಾಗಿದೆ. ದೇಹದಲ್ಲಿ ಪ್ರಾಣಾಗ್ನಿ ಇರುವುದರಿಂದ ಅಲ್ಲಿ ಉಷ್ಣತೆ ಇದೆ. ಗಾಳಿ ಇರುವುದರಿಂದ ಉಸಿರಾಟವಿದೆ, ಉಸಿರಾಟಕ್ಕೆ ಬೇಕಾದ ಅವಕಾಶವಾಗಿ ಆಕಾಶವಿರುವುದರಿಂದ ಈ ದೇಹದ ಒಳಗೆ ಗಾಳಿ ಸಂಚಾರವಾಗುತ್ತದೆ. ಹಾಗಾಗಿ  ಪಂಚಭೂತಗಳಿಂದ ಅನ್ನಮಯ ಮತ್ತು ಪ್ರಾಣಮಯಕೋಶ ನಿರ್ಮಾಣವಾಗಿದೆ.
ಪಂಚಭೂತಕ್ಕೆ ಸಂಬಂಧಿಸಿದ ತನ್ಮಾತ್ರೆಗಳು ಐದು. ಮಣ್ಣಿನ ತನ್ಮಾತ್ರೆ ಗಂಧ, ನೀರಿನ ತನ್ಮಾತ್ರೆ ರಸ, ಬೆಂಕಿಯ ತನ್ಮಾತ್ರೆ ರೂಪ, ಗಾಳಿಯ ತನ್ಮಾತ್ರೆ ಸ್ಪರ್ಶ ಮತ್ತು ಆಕಾಶದ ತನ್ಮಾತ್ರೆ ಶಬ್ದ. ಈ ಪಂಚ ತನ್ಮಾತ್ರೆಗಳನ್ನು ಗ್ರಹಣ ಮಾಡುವ ಇಂದ್ರಿಯಗಳು ಐದು. ಚಕ್ಷುಶ್ಚ ದ್ರಷ್ಟವ್ಯಂ ಚ -ಕಣ್ಣು ಮತ್ತು ಕಣ್ಣಿನ ಮುಂದಿರುವ ರೂಪ; ಶ್ರೋತ್ರಂ ಚ ಶ್ರೋತವ್ಯಂ ಚ - ಕಿವಿ ಮತ್ತು ಶಬ್ದ; ಗ್ರಾಣಂ ಚ ಘ್ರಾತವ್ಯಂ ಚ - ಮೂಗು ಮತ್ತು ಕಂಪು; ರಸಶ್ಚ ರಸಯಿತವ್ಯಂ ಚ - ನಾಲಿಗೆ ಮತ್ತು ರುಚಿ; ತ್ವಕ್ಚ ಸ್ಪರ್ಶಯಿತವ್ಯಂ ಚ - ತ್ವಗೇಂದ್ರಿಯ ಮತ್ತು ಅದರ ಗುಣವಾದ ಸ್ಪರ್ಶ. ಇವಿಷ್ಟು ಪಂಚಜ್ಞಾನೇಂದ್ರಿಯಗಳು ಮತ್ತು ಅವುಗಳ ಮುಖೇನ ಆಗುವ ಕ್ರಿಯೆಗಳು. ನಂತರ ಪಂಚ ಕರ್ಮೇಂದ್ರಿಯಗಳು: ವಾಕ್ಚ ವಕ್ತವ್ಯಂ ಚ- ಬಾಯಿ ಮತ್ತು ಮಾತು; ಹಸ್ತೌ ಚಾದಾತವ್ಯಂಚ - ಕೈ ಮತ್ತು ಸ್ವೀಕರಿಸುವ ಕ್ರಿಯೆ; ಯಾದೌ ಚ ಗಂತವ್ಯಂಚ - ಕಾಲು ಹಾಗೂ ನಡೆಯುವ ಕ್ರಿಯೆ. ಈ ಮೂರು ಕರ್ಮೇಂದ್ರಿಯಗಳು ಮುಖ್ಯವಾಗಿ ಮನುಷ್ಯನಲ್ಲಿ ಜ್ಞಾನ ಸಾಧನಗಳಾಗಿವೆ. ಬಾಯಿ ಇರುವುದು ನಮ್ಮ ಜ್ಞಾನದ ಅರಿವನ್ನು ಇನ್ನೊಬ್ಬರಿಗೆ ಮುಟ್ಟಿಸಲು; ಕಾಲು ಪುಣ್ಯಕ್ಷೇತ್ರಗಳಿಗೆ ಹೋಗಲು ಅಥವಾ ಎಲ್ಲಿ ಜ್ಞಾನವಿದೆ ಅಲ್ಲಿಗೆ ಹೋಗಲು; ಕೈ- ಜ್ಞಾನ ಸಾಧನವಾದ ಕುಸುರಿ ಕೆಲಸ, ಶಿಲ್ಪಕಲೆ,  ಇತ್ಯಾದಿಯೊಂದಿಗೆ ಮುಖ್ಯವಾಗಿ ಸ್ವೀಕರಿಸುವ ಕ್ರಿಯೆಗೆ.  ಹೀಗೆ ಈ ಮೂರು ಕರ್ಮೇಂದ್ರಿಯಗಳು ಮನುಷ್ಯನ ಜ್ಞಾನ ಸಾಧನಗಳಾಗಿವೆ. ಇದಲ್ಲದೆ ಆರೋಗ್ಯ ಸಾಧನವಾಗಿ ಪಾಯು ಮತ್ತು ಉಪಸ್ಥಗಳಿವೆ. ಇಲ್ಲಿ ಪಾಯು ವಿಸರ್ಜನ ಕ್ರಿಯೆಗಾಗಿ ಎಂದು ಹೇಳಿದರೆ, “ಉಪಸ್ಥಚ ಆನಂದಯಿತವ್ಯಂ ಚ” ಎಂದು ಹೇಳಿದ್ದಾರೆ. ಏಕೆಂದರೆ ಉಪಸ್ಥದ[ಜನನೇಂದ್ರಿಯದ] ಪ್ರಧಾನ ಕ್ರಿಯೆ ಸ್ತ್ರೀ-ಪುರುಷ ಸಮಾಗಮದಿಂದ ಆನಂದವನ್ನನುಭವಿಸುವುದು. ಹೀಗೆ ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು ಹಾಗೂ ಪಂಚಕರ್ಮೇಂದ್ರಿಯದ ವಿವರಣೆ ನೀಡಿದ ನಂತರ ಇಲ್ಲಿ ಮುಂದೆ ಪಂಚವಿಧ ಅಂತಃಕರಣದ ಪಟ್ಟಿ ಮಾಡಿರುವುದನ್ನು ಕಾಣುತ್ತೇವೆ.
ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಮತ್ತು ಚೇತನ ಇವು  ಐದು ವಿಧದ ಅಂತಃಕರಣಗಳು. ನಾವು ಒಂದು ವಸ್ತುವನ್ನು ನೋಡಿದ ತಕ್ಷಣ ಅದು ಬೇಕು ಅನಿಸುವುದು ನಮ್ಮ ಮನ್ಸಸ್ಸಿನಿಂದ. ಆದರೆ ಅದು ಬೇಕೋ ಬೇಡವೋ ಅನ್ನುವ ತೀರ್ಮಾನ ಮಾಡುವುದು ಬುದ್ಧಿ. ಹೊರಗಿನ ಪ್ರಪಂಚಕ್ಕೂ ತನಗೂ ಸಂಬಂಧವನ್ನು ಕಲ್ಪಿಸುವ ಅಂತರಂಗ ಪ್ರಪಂಚ ‘ಅಹಂಕಾರ’. [ಇಲ್ಲಿ ಅಹಂಕಾರ ಎಂದರೆ ಹೆಮ್ಮೆ(Ego), ಭೂಟಾಟಿಕೆ  ಅಲ್ಲ, ಬದಲಿಗೆ ‘ನಾನು ಎನ್ನುವ ಅರಿವು’ (Awareness of self)]. ನೋಡಿದ್ದನ್ನು ಕೇಳಿದ್ದನ್ನು ನೆನಪಿಟ್ಟುಕೊಳ್ಳುವುದು ನಮ್ಮ ಚಿತ್ತ. ಚಿತ್ತವಿಲ್ಲದೆ ನಮಗೆ ಬದುಕೇ ಇಲ್ಲ. ಚಿತ್ತ ವಿಸ್ತಾರವಾದರೆ ಅದು ತೇಜಸ್ಸು. ಅದು  ನಮಗೆ ಜನ್ಮಾಂತರದ ನೆನಪು ಕೊಡುವ ಬೆಳಕು.  ಭೂತ ಮತ್ತು ಭವಿಷ್ಯತ್ಕಾಲ  ವರ್ತಮಾನವಾಗಿ ಕಾಣುವುದು ‘ಚೇತನ’ದಿಂದ.
ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ ಮತ್ತು ಪಂಚವಿಧ ಅಂತಃಕರಣ ಈ ಇಪ್ಪತ್ತೈದು ತತ್ತ್ವಗಳನ್ನು[ಅದರ ಅಭಿಮಾನಿ ದೇವತಗಳನ್ನು] ಇಲ್ಲಿ ಭಗವಂತನೆಂಬ ಗೂಡು ಸೇರುವ ಹಕ್ಕಿಗಳು ಎಂದು ಕರೆದಿದ್ದಾರೆ. ಈ ಎಲ್ಲವನ್ನೂ ಧಾರಣೆ ಮಾಡಿರುವ ಶಕ್ತಿ ಪ್ರಾಣದೇವರು. ಈ ಶಕ್ತಿಯನ್ನೇ ನಾವು ‘ಮುಖ್ಯಪ್ರಾಣ’ ಎಂದು ಉಪಾಸನೆ ಮಾಡುತ್ತೇವೆ.
ಭಗವಂತ ತಾಯಿಯಂತೆ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ನಿದ್ದೆಯ ಕಾಲದಲ್ಲಿ ತನ್ನೊಳಗೆ ಹುದುಗಿಸಿಕೊಂಡು ಮತ್ತೆ ಎಚ್ಚರವಾದಾಗ ಮರಳಿ ಅವರವರ ಕರ್ತವ್ಯಕ್ಕೆ ಕಳುಹಿಸಿ ಕೊಡುತ್ತಾನೆ.  ಪಿಂಡಾಂಡ ಬ್ರಹ್ಮಾಂಡವನ್ನು ಧಾರಣೆ ಮಾಡಿ ಅಹೋರಾತ್ರಿ ಕಾರ್ಯನಿರ್ವಹಿಸುವ ಪ್ರಾಣದೇವರೂ ಸಹ ಭಗವಂತನ ಮಡಿಲಲ್ಲಿ ಪುಟ್ಟ ಮಗುವಿದ್ದಂತೆ. ನಮಗೆ ಇಡೀ ಪ್ರಪಂಚವನ್ನು ಧಾರಣೆ ಮಾಡಿರುವ ಪ್ರಾಣಶಕ್ತಿಯೇ ಒಂದು ಅದ್ಭುತ. ಹಾಗಿರುವಾಗ ಈ ಪ್ರಾಣಶಕ್ತಿಯನ್ನೂ ಧಾರಣೆ ಮಾಡಿರುವ ಆ ಭಗವಂತನನ್ನು ನಾವು ಕಲ್ಪಿಸುವುದೂ ಅಸಾಧ್ಯ!
ಮೇಲೆ ಹೇಳಿದಂತೆ ಇಲ್ಲಿ ಹೇಳಿರುವುದು ಕೇವಲ ತತ್ತ್ವವನ್ನಷ್ಟೇ ಅಲ್ಲ ತತ್ತ್ವಾಭಿಮಾನಿ ದೇವತೆಗಳನ್ನೂ ಕೂಡಾ ಹೌದು. ಈ ಹಿನ್ನೆಲೆಯಲ್ಲಿ ನಾವು ತತ್ತ್ವಾಭಿಮಾನಿ ದೇವತೆಗಳು ಯಾರು ಮತ್ತು ಅವರು ಯಾವ ಕಕ್ಷೆಯಲ್ಲಿದ್ದರೆ  ಎನ್ನುವುದನ್ನು ಅರಿತು ಮುಂದುವರಿಯೋಣ.
ಮೊದಲನೆಯದಾಗಿ ಮಣ್ಣಿನ ದೇವತೆ. ಇಪ್ಪತ್ನಾಲ್ಕನೇ ಕಕ್ಷೆಯಲ್ಲಿರುವ ‘ಶನಿ’ ನೇರವಾಗಿ ಮಣ್ಣಿನ ಅಭಿಮಾನಿ ದೇವತೆ. ಶನಿಯ ನಂತರ ಶನಿಗಿಂತ ಎತ್ತರದಲ್ಲಿ  ಹದಿನೆಂಟನೇ ಕಕ್ಷೆಯಲ್ಲಿರುವ ಪ್ರಥಿವೀ ಮಾತೆ, ಹತ್ತನೇ ಕಕ್ಷೆಯಲ್ಲಿರುವ ಅನಿರುದ್ಧ ಕೂಡಾ ಮಣ್ಣಿನ ಅಭಿಮಾನಿ ದೇವತೆಗಳು. ಎಲ್ಲಕ್ಕಿಂತ ಎತ್ತರದಲ್ಲಿ ಎರಡನೇ ಕಕ್ಷೆಯಲ್ಲಿರುವ ಸಾಕ್ಷಾತ್ ಶ್ರೀಲಕ್ಷ್ಮಿಯ ಭೂ ನಾಮಕ ರೂಪವೂ ಕೂಡಾ ಮಣ್ಣಿನ ದೇವತೆ.
ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧದ ಅಭಿಮಾನಿ ದೇವತೆಗಳು ಹದಿನೆಂಟನೇ ಕಕ್ಷೆಯಲ್ಲಿರುವ ಪ್ರಾಣದೇವರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ. ಹೇಗೆ ಪ್ರಥಿವಿಯ ದೇವತೆ ಶ್ರೀಲಕ್ಷ್ಮಿಯೋ ಹಾಗೇ ಗಂಧದ ಅಭಿಮಾನಿ ದೇವತೆ ಏಳನೇ ಕಕ್ಷೆಯಲ್ಲಿರುವ ಪಾರ್ವತಿ. ನೀರಿನ ಅಭಿಮಾನಿ ದೇವತೆ ನೇರವಾಗಿ ಇಪ್ಪತ್ತೆರಡನೇ ಮೆಟ್ಟಿಲಲ್ಲಿರುವ ಬುಧ. ಇದಕ್ಕೂ ಮೇಲಕ್ಕೆ ಹದಿಮೂರನೇ ಮೆಟ್ಟಿಲಲ್ಲಿರುವ ವರುಣ ಮತ್ತು ಒಂಬತ್ತನೇ ಮೆಟ್ಟಿಲಲ್ಲಿರುವ ಅಹಂಕಾರಿಕ ಪ್ರಾಣ ಕೂಡಾ ನೀರಿನ ಅಭಿಮಾನಿ ದೇವತೆಯರು. ರಸದ ದೇವತೆ ಏಳನೇ ಮೆಟ್ಟಿಲಲ್ಲಿರುವ ಶೇಷ ಪತ್ನಿ ವಾರುಣಿ. ಸ್ಥೂಲವಾಗಿ ತೇಜಸ್ಸಿನ ಅಭಿಮಾನಿ ದೇವತೆ ಹತ್ತೊಂಬತ್ತನೇ ಕಕ್ಷೆಯಲ್ಲಿರುವ ಅಗ್ನಿಯ ಜೇಷ್ಠಪುತ್ರ ಪಾವಕ. ಇದಕ್ಕೂ ಎತ್ತರದಲ್ಲಿ ಹದಿನೈದನೇ ಕಕ್ಷೆಯಲ್ಲಿರುವ ಅಗ್ನಿ ಮತ್ತು ಎಂಟನೇ ಕಕ್ಷೆಯಲ್ಲಿರುವ ಇಂದ್ರ ತೇಜಸ್ಸಿನ ಅಭಿಮಾನಿ ದೇವತೆ. ಏಳನೇ ಕಕ್ಷೆಯಲ್ಲಿರುವ ಶೇಷ ಪತ್ನಿ ವಾರುಣಿ ರೂಪ ರಸಗಳ ಅಭಿಮಾನಿ ದೇವತೆ. ಹತ್ತೊಂಬತ್ತನೇ ಮೆಟ್ಟಿಲಲ್ಲಿರುವ ವಾಯು ಪುತ್ರ ಮರೀಚಿ ಮತ್ತು ಹನ್ನೊಂದನೇ ಮೆಟ್ಟಿಲಲ್ಲಿರುವ ಪ್ರವಹವಾಯು ಗಾಳಿಯ ಅಭಿಮಾನಿ ದೇವತೆಯರು. ಎಲ್ಲಕ್ಕೂ ಮುಖ್ಯವಾಗಿ ಮೂರನೇ ಮೆಟ್ಟಿಲಲ್ಲಿರುವ ಮುಖ್ಯಪ್ರಾಣ ವಾಯುವಿನ ಪ್ರಧಾನ ಅಭಿಮಾನಿ ದೇವತೆ. ಏಳನೇ ಕಕ್ಷೆಯಲ್ಲಿರುವ ಗರುಡಪತ್ನಿ ಸುಪರ್ಣಿ ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ. ಹದಿನೆಂಟನೇ ಕಕ್ಷೆಯಲ್ಲಿರುವ ವಿನಾಯಕ ನೇರವಾಗಿ ಆಕಾಶದ ಅಭಿಮಾನಿ ದೇವತೆಯಾದರೆ, ಆತನಿಗಿಂತ ಎತ್ತರದಲ್ಲಿರುವ ಐದನೇ ಕಕ್ಷೆಯಲ್ಲಿರುವ ಶಿವ, ಮೂರನೇ ಕಕ್ಷೆಯಲ್ಲಿರುವ ಮುಖ್ಯಪ್ರಾಣ ಹಾಗೂ ಎರಡನೇ ಕಕ್ಷೆಯಲ್ಲಿರುವ ಶ್ರೀಲಕ್ಷ್ಮಿ ಕೂಡಾ ಆಕಾಶದ ಅಭಿಮಾನಿ ದೇವತೆಯರು. ಕಣ್ಣಿನ ಅಭಿಮಾನಿ ದೇವತೆ ಹನ್ನೆರಡನೇ ಕಕ್ಷೆಯಲ್ಲಿರುವ ಸೂರ್ಯ. ಕಿವಿಯ ಅಭಿಮಾನಿ ದೇವತೆ ಮುಖ್ಯವಾಗಿ ಹನ್ನೆರಡನೇ ಕಕ್ಷೆಯಲ್ಲಿರುವ ಚಂದ್ರ. ಇದಲ್ಲದೆ ಹದಿನೆಂಟನೇ ಕಕ್ಷೆಯಲ್ಲಿರುವ ಕುಬೇರ, ಹದಿನೇಳನೇ ಕಕ್ಷೆಯಲ್ಲಿರುವ ಮಿತ್ರ, ಹದಿಮೂರನೇ ಕಕ್ಷೆಯಲ್ಲಿರುವ ವರುಣ ಹಾಗೂ ಹನ್ನೆರಡನೇ ಕಕ್ಷೆಯಲ್ಲಿರುವ ಯಮ ಕೂಡಾ ಕಿವಿಯ ಅಭಿಮಾನಿ ದೇವತೆಯರು. ಇವರು ದಿಗ್ದೇವತೆಯರು ಕೂಡಾ ಹೌದು. ಹದಿನೆಂಟನೇ ಕಕ್ಷೆಯಲ್ಲಿರುವ ಅಶ್ವಿನೀ ದೇವತೆಗಳು ಮೂಗಿನ ಅಭಿಮಾನಿ ದೇವತೆಯರು. ಹದಿಮೂರನೇ ಕಕ್ಷೆಯಲ್ಲಿರುವ ವರುಣ ನಾಲಿಗೆಯ ಅಭಿಮಾನಿಯಾದರೆ ಹದಿನೆಂಟನೇ ಕಕ್ಷೆಯಲ್ಲಿರುವ ಕುಬೇರ ಮತ್ತು ಹನ್ನೊಂದನೇ ಕಕ್ಷೆಯಲ್ಲಿರುವ ಪ್ರವಹವಾಯು ತ್ವಗೀಂದ್ರಿಯದ ಅಭಿಮಾನಿ ದೇವತೆಗಳು. ವಾಗೇಂದ್ರಿಯ ದೇವತೆ ಹದಿನೈದನೇ ಕಕ್ಷೆಯಲ್ಲಿರುವ ಅಗ್ನಿ. ಮಾತನಾಡುವ ಕ್ರಿಯೆಯ ಅಭಿಮಾನಿ ದೇವತೆ ಏಳನೇ ಕಕ್ಷೆಯಲ್ಲಿರುವ ಗರುಡಪತ್ನಿ ಸುಪರ್ಣಿ. ಕೈಯ ಅಭಿಮಾನಿ ದೇವತೆ ಎಂಟನೇ ಕಕ್ಷೆಯಲ್ಲಿರುವ ಇಂದ್ರ ಹಾಗೂ ಅವಾಂತರ ದೇವತೆಯಾಗಿ ಹತ್ತನೇ ಕಕ್ಷೆಯಲ್ಲಿರುವ ದಕ್ಷಪ್ರಜಾಪತಿ. ಕೈಯಿಂದ ನಡೆಯುವ ಕ್ರಿಯೆಯ ಅಭಿಮಾನಿ ದೇವತೆ ಗರುಡಪತ್ನಿ ಸುಪರ್ಣಿ. ಹತ್ತೊಂಬತ್ತನೇ ಮೆಟ್ಟಿಲಲ್ಲಿರುವ ಇಂದ್ರಪುತ್ರ ಜಯಂತ ಕಾಲಿನ ಅಭಿಮಾನಿ ದೇವತೆ. ಗಮನಕ್ರಿಯೆಯ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ. ವಿಸರ್ಜನಾಂಗ ಪಾಯುವಿನ ಅಭಿಮಾನಿ ದೇವತೆ ಮಿತ್ರ(೧೭ನೇ ಕಕ್ಷೆ), ಯಮ(೧೨ನೇ ಕಕ್ಷೆ) ಮತ್ತು ನಿರ್ಋತಿ(೧೭ನೇ ಕಕ್ಷೆ). ವಿಸರ್ಜನ ಕ್ರಿಯೆಯ ದೇವತೆ ವಾರುಣಿ. ಹತ್ತನೇ ಕಕ್ಷೆಯಲ್ಲಿರುವ ಧಕ್ಷಪ್ರಜಾಪತಿ ಮತ್ತು ಸ್ವಾಯಂಭುವ ಮನು ಉಪಸ್ಥದ ದೇವತೆಗಳಾದರೆ ಸಂತಾನಕ್ರಿಯೆಯ ಅಭಿಮಾನಿ ದೇವತೆ ಶಿವ ಪತ್ನಿ ಪಾರ್ವತಿ(೭). ಮನಸ್ಸು-ಬುದ್ಧಿ ಮತ್ತು ಅಹಂಕಾರದ ದೇವತೆಗಳು ಎಂಟನೇ ಕಕ್ಷೆಯಲ್ಲಿರುವ ಇಂದ್ರ-ಕಾಮರಾದರೂ ಕೂಡಾ, ಮೂಲಭೂತವಾಗಿ ಅಭಿಮಾನಿ ದೇವತೆಗಳು ಐದನೇ ಕಕ್ಷೆಯಲ್ಲಿರುವ ಗರುಡ-ಶೇಷ-ರುದ್ರರು. ಬುದ್ಧಿಯ ಅಭಿಮಾನಿ ದೇವತೆಯರು ಸರಸ್ವತಿ ಮತ್ತು ಭಾರತಿಯರು. ಇವರು  ನಾಲ್ಕನೇ ಕಕ್ಷೆಯಲ್ಲಿನ ದೇವತೆಗಳು. ಚಿತ್ತದ ದೇವತೆ ಮೂರನೇ ಕಕ್ಷೆಯಲ್ಲಿರುವ ಬ್ರಹ್ಮ-ವಾಯು. ಕರ್ಮದ ದೇವತೆ ಇಪ್ಪತ್ತೈದನೇ ಕಕ್ಷೆಯಲ್ಲಿರುವ ಪುಷ್ಕರ. ತೇಜಸ್ಸಿನ ಅಥವಾ ಚೇತನದ ದೇವತೆ ಎರಡನೇ ಕಕ್ಷೆಯಲ್ಲಿರುವ ಶ್ರೀಲಕ್ಷ್ಮಿ. ಹೀಗೆ ಎರಡನೇ ಕಕ್ಷೆಯಲ್ಲಿರುವ ಶ್ರಿಲಕ್ಷ್ಮಿಯಿಂದ ಇಪ್ಪತೈದನೇ ಕಕ್ಷೆಯಲ್ಲಿರುವ ಪುಷ್ಕರನ ತನಕ ಎಲ್ಲಾ ದೇವತೆಗಳು, ಮೊತ್ತಮೊದಲಿಗನಾಗಿ ಮೊದಲ ಕಕ್ಷೆಯಲ್ಲಿರುವ ಭಗವಂತನ ಅಧೀನವಾಗಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಹಕ್ಕಿಗಳು ಗೂಡು ಸೇರುವಂತೆ ಭಗವಂತನೆಂಬ ಗೂಡನ್ನು ಸೇರಿ ವಿಶ್ರಮಿಸುತ್ತಾರೆ.

ಏಷ ಹಿ ದ್ರಷ್ಟ ಸ್ಪ್ರಷ್ಟಾ ಶ್ರೋತಾ ಘ್ರಾತಾ ರಸಯಿತಾ ಮಂತಾ ಬೋದ್ಧಾ ಕರ್ತಾ ವಿಜ್ಞಾನಾತ್ಮಾ ಪುರುಷಃ

ಭಗವಂತ ವಿಶ್ವದಲ್ಲಿ ಎಲ್ಲವನ್ನೂ ಸಾಕ್ಷಾತ್ ನೋಡಬಲ್ಲ, ಕೇಳಬಲ್ಲ. ಅಂತರ್ಯಾಮಿಯಾಗಿದ್ದು, ಸರ್ವಗತನಾಗಿದ್ದು ಸಾಕ್ಷಾತ್ ಎಲ್ಲವನ್ನೂ ಮುಟ್ಟಬಲ್ಲ. ಆತ ಎಲ್ಲವನ್ನೂ ಆಘ್ರಾಣಿಸಬಲ್ಲ; ಎಲ್ಲಾ ಜೀವರೊಳಗಿರುವ ಭಗವಂತ ಸಾಕ್ಷಾತ್ ಎಲ್ಲಾ ರುಚಿಯನ್ನೂ ಸವಿಯಬಲ್ಲ. ಎಲ್ಲವನ್ನೂ ಮನನಮಾಡಬಲ್ಲ. ಎಲ್ಲವನ್ನೂ ತಿಳಿಯಬಲ್ಲವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಸೃಷ್ಟಿಸಿದ ಸೃಷ್ಟಾರ. ಎಲ್ಲಾ ಜ್ಞಾನಗಳಿಗಿಂತಲೂ ವಿಶಿಷ್ಠ ಜ್ಞಾನ ಉಳ್ಳವ ಆ ‘ಪುರುಷಃ’ ನಾಮಕ ಭಗವಂತ. [ಎಲ್ಲಾ ಪುರ(ದೇಹ)ದೊಳಗಿದ್ದು ಎಲ್ಲಾ ಕ್ರಿಯೆಗಳನ್ನು ನಿಯಂತಿಸುವವ  ಪುರುಷಃ]. ಎಲ್ಲಾ ದೇಹದೊಳಗಿದ್ದು ಎಲ್ಲಾ ಇಂದ್ರಿಯಗಳ ವ್ಯಾಪಾರವನ್ನು ಆಸ್ವಾದಿಸಿ, ಇಡೀ ವಿಶ್ವವನ್ನು ವ್ಯಾಪಿಸಿರುವ ಶಕ್ತಿ ಆ ಭಗವಂತ-‘ಆತ್ಮಃ’. ಎಲ್ಲರಿಗೂ ಆಶ್ರಯನಾಗಿರುವ ಭಗವಂತನನ್ನು ಇಲ್ಲಿ ಹತ್ತು ಶಬ್ದಗಳಲ್ಲಿ ವಿವರಿಸಿರುವುದನ್ನು ನಾವು ಗಮನಿಸಬೇಕು[ದ್ರಷ್ಟ, ಸ್ಪ್ರಷ್ಟಾ, ಶ್ರೋತಾ, ಘ್ರಾತಾ, ರಸಯಿತಾ, ಮಂತಾ, ಬೋದ್ಧಾ ,ಕರ್ತಾ, ವಿಜ್ಞಾನಾತ್ಮಾ ಮತ್ತು  ಪುರುಷಃ]. ಇವು ಹತ್ತು ರೂಪದ ಭಗವಂತನನ್ನು ವರ್ಣಿಸುವ ಹತ್ತು ಶಬ್ದಗಳು. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಹಿಂದೆ ಜ್ಞಾನೇಂದ್ರಿಯದ ವಿವರಣೆ ಬಂದಿದೆ ಹಾಗೂ ಕರ್ಮೇಂದ್ರಿಯದ ವಿವರಣೆಯೂ ಬಂದಿದೆ. ನಂತರ ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಮನಸ್ಸು, ಅಂತಃಕರಣದ ಅಭಿಮಾನಿ ದೇವತೆಗಳೆಲ್ಲರೂ ಭಗವಂತನಲ್ಲಿ ಹೋಗಿ ಸೇರುತ್ತಾರೆ ಎಂದೂ ಹೇಳಿದ್ದರು. ಈಗ ಇಲ್ಲಿ ಭಗವಂತನ ಕುರಿತು ಹೇಳುವಾಗ ಮೊದಲು ಐದು ಜ್ಞಾನೇಂದ್ರಿಯದ ಕುರಿತು [ದ್ರಷ್ಟ, ಸ್ಪ್ರಷ್ಟಾ, ಶ್ರೋತಾ, ಘ್ರಾತಾ ಮತ್ತು ರಸಯಿತಾ] ಹೇಳುವುದನ್ನು ಕಾಣುತ್ತೇವೆ. ಇದೇ ವಿವರಣೆ ಗೀತೆಯಲ್ಲಿ ಕೂಡಾ ಬಂದಿದೆ: ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ। ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ॥ಭಗವದ್ಗೀತಾ-ಅ-೧೫-೯॥. ಎರಡೂ ಕಡೆ ಕೇವಲ ಜ್ಞಾನೇಂದ್ರಿಯವನ್ನು ಹೇಳಿದ್ದಾರೆ ಹೊರತು ಕರ್ಮೇಂದ್ರಿಯವನ್ನು ಹೇಳಿಲ್ಲ. ಇದರರ್ಥ ಭಗವಂತ ಕೇವಲ ಜ್ಞಾನೇಂದ್ರಿಯದಲ್ಲಿದ್ದು ಆನಂದ ಪಾನ ಮಾಡುತ್ತಾನೆ ಆದರೆ ಕರ್ಮೆಂದ್ರಿಯದಿಂದ ಮಾಡುವುದಿಲ್ಲ ಎಂದಲ್ಲ. ಜ್ಞಾನಸ್ವರೂಪನಾದ ಭಗವಂತನಿಗೆ ಎಲ್ಲಾ ಇಂದ್ರಿಯಗಳೂ ಜ್ಞಾನೇಂದ್ರಿಯಗಳೇ. ಆದ್ದರಿಂದ ಇಲ್ಲಿ ಕರ್ಮೇಂದ್ರಿಯವನ್ನು ಪ್ರತ್ಯೇಕವಾಗಿ ಹೇಳಿಲ್ಲ ಅಷ್ಟೇ.  ನಂತರ ‘ಬಯಕೆ’ ಮತ್ತು ‘ನಿಶ್ಚಯ’ ಎರಡನ್ನೂ ಮಂತಾ ಮತ್ತು  ಬೋದ್ಧಾ ಎಂದು ಇಲ್ಲಿ ಹೇಳಿದ್ದಾರೆ [ಗೀತೆಯಲ್ಲಿ ಅಧಿಷ್ಠಾಯ ಮನಶ್ಚಾಯ ಎಂದಿದ್ದಾರೆ]. ಭಗವಂತ ಬಯಕೆ ಮತ್ತು ನಿಶ್ಚಯ ಈ ಎರಡು ಮುಖದಿಂದ ಕಾರ್ಯ ನಿರ್ವಹಿಸುತ್ತಾನೆ. [ಉದಾಹರಣೆಗೆ: ಭಗವಂತ ಸೃಷ್ಟಿ ನಿರ್ಮಾಣ ಮಾಡಬೇಕೆಂದು ಬಯಸಿದ ಮತ್ತು ಸೃಷ್ಟಿ ಮಾಡಿದ].  ಹಿಂದೆ ದೇವತೆಗಳನ್ನು ಹೇಳುವಾಗ ಅಹಂಕರ್ತಾ ಎಂದು ಹೇಳಿದ್ದರೆ ಇಲ್ಲಿ ಭಗವಂತನನ್ನು ಹೇಳುವಾಗ ಕೇವಲ ‘ಕರ್ತಾ’ ಎಂದಿದ್ದಾರೆ. ಕಾರಣ ಏನೆಂದರೆ ಭಗವಂತನಿಗೆ ನಾನು ನನ್ನದು ಎನ್ನುವ ಅಹಂಕಾರವಿಲ್ಲ. ಆತ ಯಾವುದರ ಅಭಿಮಾನಿಯೂ ಅಲ್ಲ.
ಸಮಸ್ತ ವಿಶ್ವದ ಸಮಸ್ತ ಕ್ರಿಯೆಯನ್ನು ನಿರ್ವಹಿಸುವ, ಸಮಸ್ತ ಪದಾರ್ಥವನ್ನು ನಿರ್ಮಾಣ ಮಾಡಿದ ಭಗವಂತನನ್ನು ಇಲ್ಲಿ  ‘ವಿಜ್ಞಾನಾತ್ಮಾ’ ಎಂದು ಸಂಬೋಧಿಸಿದ್ದಾರೆ. ಒಂದು ದೃಷ್ಟಿಯಿಂದ ವಿಜ್ಞಾನಾತ್ಮಾ ಎನ್ನುವುದು ವಿಷ್ಣುಃ ಶಬ್ದದ ವ್ಯಾಖ್ಯಾನ. ವಿಷ್ಣುಃ ಎನ್ನುವುದಕ್ಕೆ ಸಂಸ್ಕೃತದಲ್ಲಿ ಒಂದು ವಿಶಿಷ್ಠ ಅರ್ಥವಿದೆ. ವಿಷ್ಣು ಎನ್ನುವ ಶಬ್ದದಲ್ಲಿ ಒಟ್ಟು ನಾಲ್ಕು ಅಕ್ಷರಗಳಿವೆ. ಅವುಗಳೆಂದರೆ ವಿ, ಶ, ಣ ಮತ್ತು ಉ. ಇಲ್ಲಿ ‘ವಿ’-ಎಲ್ಲಕ್ಕಿಂತ ವಿಶಿಷ್ಠ ಮತ್ತು ವಿಲಕ್ಷಣವಾದ ಶಕ್ತಿ ಎನ್ನುವ ಅರ್ಥವನ್ನು ಕೊಡುತ್ತದೆ. ‘ಉ’ ಸಹಜ ಸ್ವಭಾವವಾಗಿ ಉಳ್ಳವನು ಅಥವಾ ಸ್ವರೂಪ ಎನ್ನುವ ಅರ್ಥವನ್ನು ಕೊಡುತ್ತದೆ. [ಉದಾಹರಣೆಗೆ:ದಯಾಳು: ದಯೆಯೇ ಸಹಜ ಸ್ವಭಾವವಾಗಿ ಉಳ್ಳವನು-ದಯಾಳು].  ಐತರೆಯ ಉಪನಿಷತ್ತಿನಲ್ಲಿ ಹೇಳುವಂತೆ: ಣ-ಕಾರೋ ಬಲಂ ಶ-ಕಾರಃ ಪ್ರಾಣೋ ಆತ್ಮಾ.  ಆದ್ದರಿಂದ ‘ಣ’ ಎಂದರೆ ಬಲ ಸ್ವರೂಪ. ‘ಶ’ ಎಂದರೆ ಸರ್ವಚಾಲಕ ಶಕ್ತಿ. ಇದನ್ನು ‘ಚೇಷ್ಟೆ’ ಅಥವಾ ‘ಕ್ರಿಯೆ’ ಎನ್ನಬಹುದು. ಸತ್ಯಸಂಕಲ್ಪನಾದ ಭಗವಂತನ ಕ್ರಿಯೆ ಇರುವುದು ಕೇವಲ ಜ್ಞಾನ ಮತ್ತು ಆನಂದದಲ್ಲಿ. ಆದ್ದರಿಂದ ವಿಷ್ಣುಃ ಎಂದರೆ ‘ವಿಶಿಷ್ಟವಾದ ಜ್ಞಾನಾನಂದ ಬಲ ಸ್ವರೂಪನಾದ ಭಗವಂತ’ ಎಂದರ್ಥ. ಇಂತಹ ಭಗವಂತ ಎಲ್ಲರ ಇಂದ್ರಿಯದಲ್ಲಿದ್ದು, ಎಲ್ಲ ಪುರದಲ್ಲಿದ್ದು, ದುಃಖ ಮತ್ತು ಅಜ್ಞಾನದ ಸ್ಪರ್ಶವೇ ಇಲ್ಲದ ಕೇವಲ ಜ್ಞಾನಾನಂದವನ್ನು ಅನುಭವಿಸುವ ‘ಪುರುಷಃ’.    

ಸಯೋ ಹ ವೈ ತದಚ್ಛಾಯಮಶರೀರಮ್ಲೋಹಿತಂ ಶುಭ್ರಮಕ್ಷರಂ ವೇದಯತೇ ಯಸ್ತು ಸೋಮ್ಯ   ಸ ಸರ್ವಜ್ಞಃ ಸರ್ವೋ ಭವತಿ  ೧೦

ಭಗವಂತ ನೆರಳಿಲ್ಲದ ಪುರುಷಃ. ಅಂದರೆ ಬೆಳಕಿನ ಪುಂಜವಾದ  ಭಗವಂತನಿಗೆ ನೆರಳಿನ ಸ್ಪರ್ಶವಿಲ್ಲ ಎನ್ನುವುದು ಒಂದು ಅರ್ಥವಾದರೆ,  ಭಗವಂತ ಜ್ಞಾನಾನಂದ ಸ್ವರೂಪ; ತಮಸ್ಸಿನ(ಕತ್ತಲೆಯ) ಮತ್ತು ಅಜ್ಞಾನದ ಸ್ಪರ್ಶ ಆತನಿಗಿಲ್ಲ ಎನ್ನುವುದು ಇದರ ಇನ್ನೊಂದು ಅರ್ಥ.  ಇದನ್ನೇ ಗಾಯತ್ತ್ರಿಯಲ್ಲಿ ‘ಭರ್ಗ’ ಎಂದಿದ್ದಾರೆ. ಭ+ರ+ಗ=ಭರ್ಗ. ಇಲ್ಲಿ ಭ=ಬೆಳಕು; ರ=ಆನಂದ; ಗ=ಜ್ಞಾನ. ಭಗವಂತ ಕತ್ತಲಿನ ಅಥವಾ ಅಜ್ಞಾನದ ಛಾಯೆ ಇಲ್ಲದ, ಶುದ್ಧ ಜ್ಞಾನದ  ಬೆಳಕಿನ ಸ್ವರೂಪ.
ಭಗವಂತ ಅಶರೀರ. ಅಂದರೆ ಅವನಿಗೆ ನಮ್ಮಂತೆ ಪಾಂಚಭೌತಿಕವಾದ, ಒಂದುದಿನ ಬಿದ್ದುಹೋಗುವ, ವೃದ್ಧಿ-ಕ್ಷಯಗಳಿಗೆ ಒಳಪಡುವ ಸ್ಥೂಲ/ಸೂಕ್ಷ್ಮ/ಲಿಂಗ ಶರೀರವಿಲ್ಲ. ಆದರೆ ಭಗವಂತ ಅಹಃ-ಶರೀರ. ಅಂದರೆ ಆತನ ಶರೀರ ಜ್ಞಾನಾನಂದಮಯಸ್ವರೂಪವಾದುದು. ಇಲ್ಲಿ ಭಗವಂತನ ಶರೀರ ‘ಅಲೋಹಿತಂ’ ಎಂದಿದ್ದಾರೆ. ಲೋಹಿತಂ ಅಂದರೆ ನೆತ್ತರು. ನೆತ್ತರು ನಮ್ಮ ದೇಹದಲ್ಲಿನ ಸಪ್ತಧಾತುಗಳಲ್ಲಿ ಒಂದು. ನೆತ್ತರಿನಿಂದ ಕೂಡಿದ ಶರೀರ ಭಗವಂತನಿಗಿಲ್ಲ. ಅವತಾರ ರೂಪದಲ್ಲಿ ಕೂಡಾ ಭಗವಂತನ ದೇಹ ಜ್ಞಾನಾನಂದಸ್ವರೂಪವಾಗಿಯೇ ಇರುತ್ತದೆ. ಆದರೆ ನಮಗೆ ಸ್ವರೂಪಭೂತವಾದ ಭಗವಂತನ ಶರೀರವನ್ನು ನಮ್ಮ ಭೌತಿಕವಾದ ಕಣ್ಣಿಂದ ಕಾಣಲು ಸಾಧ್ಯವಿಲ್ಲವಾದ್ದರಿಂದ ಆತ ನಮಗೆ ಪಾಂಚಭೌತಿಕ ಶರೀರಿಯಾಗಿ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಮಹಾಭಾರತದಲ್ಲಿ ತನ್ನ ಅಜ್ಜ ಭೀಷ್ಮಾಚಾರ್ಯರ ಜೊತೆಗೆ ಯುದ್ಧ ಮಾಡುವಾಗ ಅರ್ಜುನ ಸಂಕೋಚದಿಂದ ತುಂಬಾ ನಿಧಾನವಾಗಿ ಯುದ್ಧ ಮಾಡುತ್ತಾನೆ. ಇದನ್ನು ಗಮನಿಸಿದ ಭೀಷ್ಮಾಚಾರ್ಯರು ಅರ್ಜುನನನ್ನು ಕೆಣಕಲು ಒಂದು ತಂತ್ರವನ್ನು ಮಾಡುತ್ತಾರೆ. ಅವರು ಅರ್ಜುನನ ಸಾರಥಿಯಾಗಿರುವ ಕೃಷ್ಣನ ಮೇಲೆ ಬಾಣ ಪ್ರಯೋಗ ಮಾಡುತ್ತಾರೆ. ಆ ಬಾಣ ಪ್ರಯೋಗದಿಂದ ಕೃಷ್ಣನ ಕವಚ ತುಂಡಾಗಿ ಕೃಷ್ಣನ ದೇಹದಿಂದ ರಕ್ತ ಧಾರಾಕಾರವಾಗಿ ಹರಿಯಿತು ಎನ್ನುವ ವರ್ಣನೆ ಭಾರತ ಮತ್ತು ಭಾಗವತ ಎರಡರಲ್ಲೂ ಬಂದಿರುವುದನ್ನು ಕಾಣಬಹುದು. ಈ ವರ್ಣನೆಗೆ ಉತ್ತರ ರೂಪವಾಗಿ ಇಲ್ಲಿ ‘ಅಲೋಹಿತಂ’ ಎಂದಿದ್ದಾರೆ. ಅಂದರೆ ಭಗವಂತನಿಗೆ ಪಾಂಚಭೌತಿಕವಾದ, ನೆತ್ತರಿನಿಂದ ಕೂಡಿದ, ತ್ರಿಗುಣಾತ್ಮಕವಾದ  ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ಆ ರೀತಿ ತನ್ನ ಲೀಲೆಯನ್ನು ತೋರುತ್ತಾನೆ ಅಷ್ಟೇ. ಭಗವಂತ ಸ್ವಚ್ಛವಾದ ಬೆಳಕು. ಪರಿಶುದ್ಧವಾದ ಜ್ಞಾನಾನಂದಮಾಯವಾದ ರೂಪ ಆತನದು. ಭಗವಂತ ಅ-ಕ್ಷರ. ಅಂದರೆ ಎಂದೂ ನಾಶವಿಲ್ಲದ ಶರೀರ ಉಳ್ಳವನು. ಅಕ್ಷ(ಇಂದ್ರಿಯ)ಗಳಲ್ಲಿದ್ದು ರಮಿಸುವ, ಸ್ವತಂತ್ರವಾಗಿ ಎಲ್ಲಾ ದೇಶ ಕಾಲದಲ್ಲೂ ವ್ಯಾಪಿಸಿರುವ ಇಂತಹ ಓಂಕಾರ ವಾಚ್ಯ ಭಗವಂತನನ್ನು ಯಾರು ತಿಳಿದು, ಕರ್ಮಾನುಷ್ಠಾನ ಮಾಡಿ, ಕರ್ಮದಿಂದ ಜ್ಞಾನವನ್ನು ಪಡೆದು  ಉಪಾಸನೆ ಮಾಡುತ್ತಾರೋ, ಅವರು ಭಗವಂತನನ್ನು ಕಾಣಬಲ್ಲರು ಎಂದಿದ್ದಾರೆ ಪಿಪ್ಪಲಾದರು.
ಇಲ್ಲಿ ಸರ್ವಜ್ಞಃ ಎಂದರೆ ಎಲ್ಲವನ್ನೂ ತಿಳಿದವನಲ್ಲ. ಸರ್ವಂ ಪರಿಪೂರ್ಣಂ ಭಗವಂತಂ ಜ್ಞಾನಾತೀತಿ ಸರ್ವಜ್ಞಃ. ಮೂಲತಃ ಪರಿಪೂರ್ಣನಾದ, ಸರ್ವಶಕ್ತ ಭಗವಂತನನ್ನು ತಿಳಿದವನು ಎಂದರ್ಥ. ಎಲ್ಲವನ್ನೂ ತಿಳಿದವನು ಕೇವಲ ಭಗವಂತ ಮಾತ್ರ. ಅಪರೋಕ್ಷಜ್ಞಾನಿಗೂ ಕೂಡಾ ಕೇವಲ ಭಗವಂತನ ದರ್ಶನ ಸಾಧ್ಯವೇ ಹೊರತು, ಆತನಿಗೆ ಎಲ್ಲಾ ಕಾಲದಲ್ಲಿ ಎಲ್ಲವನ್ನೂ ತಿಳಿದಿರಲು ಸಾಧ್ಯವಿಲ್ಲ.
ಈ ರೀತಿ ಭಗವಂತನ ಅನುಗ್ರಹಕ್ಕೆ ಪಾತ್ರರಾದವರು ಬಯಸಿದ್ದನ್ನು ಪಡೆಯಬಲ್ಲರು ಹಾಗೂ  ಎಲ್ಲವುದಕ್ಕೂ ಮುಖ್ಯವಾಗಿ ಸರ್ವಶಕ್ತಿ ಭಗವಂತನನ್ನು ಸೇರಬಲ್ಲರು. ಇಷ್ಟು ವಿವರಣೆ ಕೊಟ್ಟ ಪಿಪ್ಪಲಾದರು ಈ ಇಡೀ ಪೂರ್ವಪಕ್ಷಕ್ಕೆ ಉತ್ತರರೂಪವಾಗಿ, ತಾನು ಕೊಟ್ಟ ವಿವರಣೆಗೆ ಸಂವಾದಿಯಾಗಿ ಒಂದು ವೇದ ಮಂತ್ರವನ್ನು  ಇಲ್ಲಿ ಉಲ್ಲೇಖಿಸುತ್ತಾರೆ. ಆ ಶ್ಲೋಕ ಹೀಗಿದೆ:

ತದೇಷ ಶ್ಲೋಕಃ
ವಿಜ್ಞಾನಾತ್ಮಾ ಸಹ ದೇವೈಶ್ಚ ಸರ್ವೈಃ ಪ್ರಾಣಾ ಭೂತಾನಿ ಸಂಪ್ರತಿಷ್ಠಂತಿ ಯತ್ರ
ತದಕ್ಷರಂ ವೇದಯತೇ ಯಸ್ತು ಸೋಮ್ಯ ಸ ಸರ್ವಜ್ಞಃ ಸರ್ವಮೇವಾSವಿವೇಶೇತಿ ೧೧

ಪಿಪ್ಪಲಾದರು ಯಾವ ಅನುಭವವನ್ನು ಸೌರ್ಯಾಯಣಿ ಗಾರ್ಗ್ಯರಿಗೆ ಹೇಳಿದರೋ ಅದೇ ಅನುಭವವನ್ನು ಈ ಮಂತ್ರ ಹೇಳುತ್ತದೆ. ಇಲ್ಲಿ ‘ವಿಜ್ಞಾನಾತ್ಮಾ’ ಎಂದರೆ ಜ್ಞಾನಾನಂದಸ್ವರೂಪನಾದ ಪರಮಾತ್ಮ. ಇಲ್ಲಿ ಬಳಕೆಯಾದ ‘ಸಹ’ ಶಬ್ದ ಬಹಳ ವಿಶೇಷ ಅರ್ಥವನ್ನು ಕೊಡುತ್ತದೆ. ಇದು ಎಲ್ಲಾ ದೇವತಗಳೊಂದಿಗೆ ಎನ್ನುವ ಅರ್ಥದೊಂದಿಗೆ ದೋಷರಹಿತ ಮತ್ತು ಗುಣಸ್ವರೂಪ ಭಗವಂತ ಎನ್ನುವ ಅರ್ಥವನ್ನೂ ಕೊಡುತ್ತದೆ. [ಎಲ್ಲಾ ಗುಣಗಳ ಸಾರ ಸ್ವರೂಪನಾದ ಭಾಗವತ ಸ-ಕಾರ ವಾಚ್ಯ; ಎಲ್ಲಾ ದೋಷಗಳ ಹಾನ ಹ-ಕಾರ ವಾಚ್ಯ]
ಈ ಹಿಂದೆ ಹೇಳಿದ ತತ್ತ್ವಗಳು ಮತ್ತು ತತ್ತ್ವಾಭಿಮಾನಿ ದೇವತೆಗಳು ಯಾವ ಭಗವಂತನಲ್ಲಿ  ಆಶ್ರಿತವಾಗಿರುತ್ತವೋ, ಅವನು ಎಲ್ಲಾ ಕಾಲ ದೇಶದಲ್ಲಿ ತುಂಬಿರುವವನು. ಆತ ಸರ್ವಗುಣಪೂರ್ಣ; ಎಲ್ಲವನ್ನೂ ಸೃಷ್ಟಿ ಮಾಡುವವನು ಆತ; ಸರ್ವಾಭೀಷ್ಟವನ್ನು ಕೊಡುವವನು ಆ ಭಗವಂತ. ಅಂತಹ  ಸರ್ವಶಬ್ದವಾಚ್ಯನಾದ ಭಗವಂತನ ಅರಿವು ಪಡೆದು(ಸೋಮ್ಯ) ಯಾರು ಪ್ರತ್ಯಕ್ಷ ಅನುಭವಿಸುತ್ತಾರೋ ಅವರು ಸರ್ವಶಕ್ತನಾದ ಭಗವಂತನನ್ನು ತಿಳಿಯುತ್ತಾರೆ ಮತ್ತು ಸರ್ವಶಕ್ತನಾದ ಭಗವಂತನನ್ನು ಮೋಕ್ಷದಲ್ಲಿ ಹೋಗಿ ಸೇರುತ್ತಾರೆ.

ಇತಿ ಪ್ರಶ್ನೋಪನಿಷದಿ ಚತುರ್ಥಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ನಾಲ್ಕನೇ ಪ್ರಶ್ನೆ/ಅಧ್ಯಾಯ ಮುಗಿಯಿತು.
*******